Home / ಕವನ / ಕವಿತೆ / ಕನ್ನಡದ ವಿಶ್ವರೂಪ

ಕನ್ನಡದ ವಿಶ್ವರೂಪ


ಕನ್ನಡದ ಹೊಸದನಿಯು
ವಿಶ್ವದಾ ವಿವಿಧ ವಿಧ
ವಾಙ್ಮಯಕ್ಕೆಣೆಯಾಗಿ
ಕಾಣದೇನು?
ನವ ನವೋನ್ನತ ಭಾವ-
ವೈಖರಿಯು, ಕಲ್ಪನೆಯು
ಹೊಸ ವೃತ್ತಗಳ ನೃತ್ಯ,
ಈ ಸರ್ವ ಸಾಮಸ್ತೃ-
ದಿಂದೇಕ ಮೂರ್ತಿಯಹ
ಕನ್ನಡದ ನಲ್ಬರೆಹ
ಹೊಸ ಹುಟ್ಟಿನೊಂದುತ್ತ
ಹೊಸ ಹಾದಿವಿಡಿಯುತ್ತ,
ಹೋಗದೇನು?
ಸುವ್ಯವಸ್ಥಿತ ರೀತಿ
ಯಿಂದ, ನಿರ್ಭೀತಿಯಲಿ
ನೀತಿಯಲಿ, ಪ್ರೀತಿಯಲಿ
ನಡೆಯದೇನು?
‘ಕನ್ನಡ ಮನೋಹಾರಿ!
ಮನ್ನಣೆಯ ಕಸ್ತೂರಿ!’
ಎನ್ನುವಾ ಮಾತನ್ನು
ನುಡಿಸದೇನು?


ಕನ್ನಡದ ಹೊಸ ದನಿಯು
ಮೂಢ ರೂಢಿಯನೊಡೆದು,
ಚ್ಛೆತನ್ಯವನು ಪಡೆದು,
ರಸಋಷಿಯ ಮಡಿಲಿನಲಿ,
ಶಾಂತಿಮಯ ಕಾಂತಿಯಲಿ,
ಹಾಸ್ಯ ಲಾಸ್ಯವನೆಸಗಿ,
ವೀರ ತಾಂಡವ ನಾಟ್ಯ
ನಲಿಯದೇನು?
ಮ೦ಜುಳ ಮನೋಹಾರಿ-
ಯಾಗದೇನು?
ರಸಿಕ ಜನ ಮಾನಸವ
ಸಂತೋಷ ಸಾಗರದಿ
ತೇಲಿಸುತ, ನಲವಿನಲಿ
ನಿಲಿಸದೇನು?
ನಲ್ಗನ್ನಡವ ಮುಂದೆ
ತಾರದೇನು?


ವಿಶ್ವ ಸಾಹಿತ್ಯದಲಿ:-
ಗ್ರಂಥಗಳ ಸರಣಿಯಲಿ.-
ಕಾವ್ಯಗಳ ಮಾಲೆಯಲಿ,
ಕವಿತೆಗಳ ಕು೦ಜದಲಿ,
ಗೀತಗಳ ಗುಚ್ಛದಲಿ,
ಕೀರ್‍ತನ ವಿತಾನದಲಿ,
ಗರತಿಯರ ಗೀತಿಯಲಿ,
ಜಾನಪದ ಪದಗಳಲಿ,
ಲಾವಣಿಯ ಲಾಸ್ಯದಲಿ,
ಹಾಡುಗಳ ಹಿ೦ಡಿನಲಿ,
ಆ ಯಕ್ಷಗಾನದಲಿ,
ಹೃದ್ಯವಹ ಗದ್ಯದಲಿ,
ವಚನ ಸಾಹಿತ್ಯದಲಿ,
ಕತೆಗಳ ಕಲಾಪದಲಿ,
ಕಾದ೦ಬರೀ ಪಥದಿ,
ಹಾಸ-ಪರಿಹಾಸದಲಿ,
ಹರಟೆ-ಹುಚ್ಚಾಟದಲಿ,
ಘರ್ಷಣ ವಿಮರ್ಶೆಯಲಿ,
ವಿವಿಧ ವಿಧ ರೂಪಕದಿ,
ಪದ್ಯ ಮಯ ನಾಟಕದಿ,
ಏಕಾಂಕ ದೃಶ್ಯದಲಿ,
ಚಿತ್ರದ ವಿಚಿತ್ರದಲಿ,
ಪತ್ರಿಕೆಯ ಸೂತ್ರದಲಿ,
ಸುದ್ದಿಗಳ ಸ೦ಗ್ರಹದಿ,
ಭಾವಗಳ ಮೇಳದಲ್ಲಿ,
ಕಲ್ಪನೆಯ ವಿವಿಧದಲಿ,
ಕಲೆಗಳ ವಿಲಾಸದಲಿ,
ಕನ್ನಡವು ಮೇಲ್ಮೆಯನು
ಮುಟ್ಟದೇನು?
ಕರ್ಣ ಕಮನೀಯತೆಯ
ಕರೆಯದೇನು?
ಕೀರ್ತಿಯು ದಿಗಂತವನು
ಹಬ್ಬದೇನು?
ಇನ್ನಿತರ ಭಾಷೆಗಳ
ಮುಂಭಾಗದೆಡೆಯಲ್ಲಿ
ಮನ್ನಣೆಯ ಸನ್ನುತಿಯ
ಪಡೆಯದೇನು?
ತಲೆಯೆತ್ತಿ, ಮುಂದೊತ್ತಿ,
ನಿಲ್ಲದೇನು?
ವಿಶ್ವರೂಪವನಾ೦ತು
ಮೆರೆಯದೇನು?
ಕಳೆಯೇರಿ, ನಲವೇರಿ,
ನಲಿಯದೇನು?


ಕನ್ನಡದ ಭಕ್ತರಿಗೆ
ನಲ್ಗನ್ನಡಾಂಬಿಕೆಯು,
ಸಾಹಿತ್ಯ ಶಾರದೆಯು,
ವಾಙ್ಮಯ ಬ್ರಹ್ಮನಾ
ರಸ ಸಮಾಧಿ ಸ್ಥಿತಿಯ
ಭಾವೈಕ್ಯದಾನಂದ-
ರೂಪ ಸುಖ ಸಾಮ್ರಾಜ್ಯ-
ವರವನ್ನು ಕರುಣೆಯಿ೦-
ದೀಯಳೇನು?
ಸಗ್ಗದಾ ಸಿರಿಯನ್ನು
ತೋರಳೇನು?
*****
೧೯೪೦

Tagged:

Leave a Reply

Your email address will not be published. Required fields are marked *

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...