Home / ಕವನ / ಕವಿತೆ / ಗರತಿ ಗಂಗವ್ವ

ಗರತಿ ಗಂಗವ್ವ

ಸೋಬಾನವ ||ಪ||

ಅಂಗೈಯಟ ಮುಗಲಾಗ ಲಿಂಗದಟ ಮಾಡಾಗಿ
ಜಂಗಿ ಮಳೆರಾಯ ಸುರದಾನ | ಸೋ | ಭೂತಾಯಿ
ತೊಯ್ದ ಹೊತ್ತಾಳ ಜಲಬಿಂದು || ಸೋ || ೧

ಮಲ್ಲಾಡಕ ಮಳೆಯಾಗಿ ಒಡ್ಲೊಡೆದು ಹಳ್ಹರಿದು
ನಮ್ಮೂರ ಮುಂದ ಹೊರಸೂಸಿ | ಸೋ | ಮಲಪಾರಿ
ಹೊರಚೆಲ್ಲಿ ಊರ ಹೊಕ್ಕಾಳ | ಸೋ || ೨

ಗಂಗ್ಯಳದ ಗರತಿಗೆ ಏಳು ಕೊಪ್ಪರಿಗ್ಹೊನ್ನ
ಆನಿ ಅಂಬಾರಿ ವಾಲಗ | ಸೋ | ದಾರೂತಿ
ಊರ ಓಣ್ಯಾಗ ಸಡಗರ || ಸೋ || ೩

ಊರ ಹಿರಿಯರ ಕೂಡ ಗೌಡ ಸಾರುತ ಬಂದ
ಗರತಿಯಿದ್ದಾಕಿ ಹೊರಬೀಳ | ಸೋ |ಹಡದವ್ವ
ಹೊಳೆಯಳೆದು ಊರ ಉಳಿಸೆಂದ || ಸೋ || ೪

ಓಣಿ ಓಣಿಯ ತಿರುಗಿ ಊರ ಅಗಸಿಗೆ ಬಂದ
ಅಗಸಿ ಮುಂದಾಡು ಬಾಲಯ್ಯ | ಸೋ | ತಾ ಕೇಳಿ
ಗರತಿ ನಮ್ಮವ್ವ ಮನೆಯಾಗೊ || ಸೋ || ೫

ಓಡುತೋಡುತ ಬಾಲ ನಡುಮನೆಗೆ ಬಂದಾನ
ಹಡದಪ್ಪ ಗರತಿ ಜನಬಂದ | ಸೋ | ಕರೆದಾರ
ಗರತಿ ಗಂಗವ್ವ ಹೊರಬೀಳ || ಸೋ || ೬

ನಮ್ಮೂರ ಹೊಳಿ ಬಂದು ಊರ ಹೊಕ್ಕಳ ತಾಯಿ
ಗರತಿ ಗಂಗವ್ವ ಹೊಳಿ ಅಳಿಯ | ಸೋ | ನಮ್ಮೂರ
ಮುತ್ತೋದಿ ಕಳಸ ಹೊರಬೀಳ || ಸೋ || ೭

ಅಡಗೀಯ ಮನಿಯಾಗ ಗರತಿ ಬಡವನ ಮಡದಿ
ಅರತೀಲಿ ಕೇಳ ಒಡನುಡಿಯ | ಸೋ | ಹಡದವ್ವ
ಬಾಗೀಣ ಹೊತ್ತು ಹೊರಟಾಳ || ಸೋ || ೮

ರಂಗ ಪಡಸಾಲ್ಯಾಗ ದಿಂಬದ್ಹಾಸಿಗಿಮ್ಯಾಲೆ
ಇಂಬಿಲೊರಗೀರು ಮಾವಯ್ಯ | ಸೋ | ನಿಮ್ಮ ಸೊಸಿ
ಗಂಗಿಯಳಿಯಾಕ ಹರಸಯ್ಯ || ಸೋ || ೯

ಪಗಡಿ ಪಡಸಾಲ್ಯಾಗ ದಗದ ಮಾಡಿಸುವತ್ತಿ
ಮಕ್ಕಳಿಬ್ಬಾರ ಬಲು ಜೋಕೆ | ಸೋ | ಹಡದವ್ವ
ಗಂಗಿಯಳಿಯಾಕ ಹರಸಯ್ಯ || ಸೋ || ೧೦

ನಡುಮನೆಯ ನಡುಗೀಲ ಒಳಗಿರುವ ನಾದುನಿಯೆ
ಕುಲವಂತಿ ಜೋಕೆ ಒಗತಾನ | ಸೋ | ಗೌರವ್ವ
ಗಂಗಿಯಳಿಯಾಕ ಹರಸವ್ವ || ಸೋ || ೧೧

ಎಡಮನೆಯ ಬಾಗಿಲದ ಒಡತಿ ನೀ ನೇಗೆಣ್ಣಿ
ಬಡಿವಾರ ಬ್ಯಾಡ ಮನೆ ಜೋಕೆ | ಸೋ | ಹಡದವ್ವ
ಗಂಗಿಯಳಿಯಾಕ ಹರಸವ್ವ || ಸೋ || ೧೨

ಭಾವ ಮೈದುನರಯ್ಯ ನಡು ಹೊಲದ ರೈತಾರ
ಬಿಡುದಿನ ಬ್ಯಾಡ ದರುಮಕ | ಸೋ | ಮನಿಸೊಸಿಗೆ
ಗಂಗಿಯಳಿಯಾಕ ಹರಸರಿ || ಸೋ || ೧೩

ಕಡಗೋಲ ಕಂಬದ ನಡುಮನಿಯ ಪಡಿಯಾಗ
ಪಡಿಹೊನ್ನು ಉಂಟು ಎನ್ನರಸ | ಸೋ | ನಾ ಮರಳಿ
ಬರದಿರಕ ನಿಮಗ ಬಾಸಿಂಗ || ಸೋ || ೧೪

ಚಂದ್ರ ಪಡಸಾಲ್ಯಾಗ ಚಂದ್ರ ಮಂಚದ ಮ್ಯಾಲೆ
ಚಂದ್ರ ನನ ದೊರೆಯೆ ನನ ಮಾತ | ಸೋ | ನಡೆಸರಿ
ಗಂಗಿಯಳಿಯಾಕ ಹರಸರಿ || ಸೋ || ೧೫

ಅತ್ತಿ ಮಾವಗ ಶರಣು ಭಾವ ಮೈದುನ ಶರಣು
ಸುತ್ತಿರುವ ಬಳಗ ನನ ತರಣ | ಸೋ | ನಮ್ಮೂರ
ಗಂಗಿಯಳಿಯಾಕ ಹರಸರಿ || ಸೋ || ೧೬

ಲಿಂಗವಂತರ ಗೆಳತಿ ಶಿವಶರಣಿ ನಾಗಮ್ಮ
ಲಿಂಗದ ಬೆಳಕ ನೀನೀಡ | ಸೋ | ಹಡದವ್ವ
ಗಂಗಿಯಳಿಯಾಕ ಹರಸವ್ವ || ಸೋ || ೧೭

ಹಾದೀಯ ಗೆಳತೇರ ಬೀದೀಯ ಕೆಳದೇರ
ಜಾದಮಲ್ಲೀಗೆ ಮುಡಿಯೂವ | ಸೋ | ಐದೇರ
ಗಂಗಿಯಳಿಯಾಕ ಹರಸರಿ || ಸೋ || ೧೮

ಭೂತನಾಥಗ ಶರಣು ಪಂಚಲಿಂಗಗ ಶರಣು
ದೈವ ದೇವರಿಗೆ ನನ ಶರಣು | ಸೋ | ನಮ್ಮೂರ
ಗಂಗಿಯಳಿಯಾಕ ಹರಸರಿ || ಸೋ || ೧೯

ಊರ ದೈವದ ಕೂಡ ಊರ ಗೌಡನ ಕೂಡ
ಗರತಿ ಗಂಗವ್ವ ನಡೆದಾಳ | ಸೋ | ಹೊಳೆದಂಡೆ
ಮಲಪಾರಿ ಚೆಲ್ಲಿ ಹರಿಯೂಳ || ಸೋ || ೨೦

ಹೊಳೆ ತಾಯಿ ಗಂಗವ್ವ ಕಿರಿಯಾಗಿ ಹರಿಯವ್ವ
ಮುತ್ತೋದಿ ಬಾಗೀಣ ನಿನಗೀವೆ | ಸೋ | ಮಲಪಾರಿ
ನನ್ನೂರ ಸಲುಹ ಸಿರಿಯಾಳ || ಸೋ || ೨೧

ಅಂಗದ ಮೇಲಿರುವ ಲಿಂಗಯ್ಯನ ನೆನೆದು
ಗಂಗಿಯಳೆಯೂವೆ ಐಮೋರ | ಸೋ | ಹೊಳೆಗಂಗಾ
ಸಂಗ ಬಗೆಸೀನೆ ಕಡೆತನಕ ||ಸೋ|| ೨೨

ಊರ್ಹೊಕ್ಕ ಹೊಳೆಗಂಗಾ ಗರತೀಯ ಕೊಚಗೊಂಡು
ಒಡ್ಡಲನಬಿದ್ದು ಹರಿದಾಳ | ಸೋ | ದೇಶಕ
ಗರತಿ ಗಂಗವ್ನ ಹೆಸರಾತ || ಸೋ || ೨೩
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...