Home / ಕವನ / ಕವಿತೆ / ನರಗುಂದ

ನರಗುಂದ

ಹೆಸರೀಗೆ ನರಗುಂದ, ಮೊಸರೀಗೆ ನೀರಿಲ್ಲ
ಕುಸುರದ ಸಿಂಬಿ ಬರಿಗೊಡ | ಇಟಗೊಂಡು
ಉಸರಂತ ಬಾವಿ ಇಳಿದಾರೊ ೧

ನರಗುಂದ ಕಾಳವನ, ಮರಿಗುದರಿ ಸಾಯಽಲಿ
ಚದರಂಗ ಮಾಲ ಮುರಿಯಽಲಿ | ಸೊರಟೂರ
ಸದರೀಗೆ ಸುದ್ದಿ ಹರಿಯಽಲಿ ೨

ನರಗುಂದವೆಂಬೂದು, ಅರಗಿಣಿ ಪಟ್ಟಣ
ಕೆರೆ ಕಡಿಸಿ ನೀರ ಕುಡಿಲಿಲ್ಲ | ಬಾಬಣ್ಣ
ತಿರುಗಿ ನರಗುಂದ ಹೊಗಲಿಲ್ಲ ೩

ಕೆಂಪು ಮಾರಿಯ ದಂಡು, ಗುಂಪಾಗಿ ಮುತ್ತ್ಯಾರೊ
ಕಂಪಿಸಿಹೋತೊ ನರಗುಂದೊ | ಬಾಬಸಾಬ
ಹಂಪಿಹೊಳಿ ಮುಂದ ತಡವ್ಯಾನೊ ೪

ಹಂಡಬಂಡದ ಕುದುರಿ, ಗೊಂಡೆ ಲಾಗಾಮನ್ಹಾಕಿ
ದಂಡು ಇಳದೀತೊ ನರಗುಂದೊ | ಬಾಬಾಸಾಬ
ಗುಂಡಿಲಿಕ್ಕ್ಯಾನೊ ಗುಡಿಯಾಗೊ ೫

ವಿಣ್ಣ್ಯಾ ತಾಂಡದ ಬಂಟ, ಕಣ್ಣಿಟ್ಟ ಸಿರಕೊಯ್ದು
ಮಣ್ಣ ಪಾಲಾದ ಮೆಣಸನ್ನ | ನರಗುಂದ
ಅಣ್ಣ ಕೂಗ್ಯಾನೊ ಕಾಳಗೊ ೬

ಮುಂಡರಗಿ ಭೀಮಣ್ಣ, ಬಂಡಾಯ ಎಬ್ಬಿಸಿದ
ದಂಡ ಕೂಡ್ಯಾನೊ ನರಗುಂದ | ಬಾಬಣ್ಣ
ಕೆಂಡ ಕಾರ್ಯಾನೊ ಕುಂವಣಿಗೊ ೭

ಮಾಲಕಮಸಾಹೇಬ, ಕೇಳಿ ಮೆಣಸನ ಸಾವ
ಗಾಳಿ ಬಂದ್ಹಾಂಗ ಮುತ್ತ್ಯಾನೊ | ನರಗುಂದ
ತಾಳ ಬಾಸ್ವಾತೊ ಚಣದಾಗೊ ೮

ಬಾಪು ವಂತರ ಸಂಚು, ಘಾತ ನರಗುಂದಾತೊ
ಹೋತೊ ಹಾಳಾಗಿ ನಿಪ್ಪತಗಿ| ನರಗುಂದ
ಖ್ಯಾತಿ ಜನದಾಗ ಕಡೆತನಕ ೯

ಹಾರೂರು ಹಾವಾಗಿ ಕೋರ್ಯಾರೊ ಒಳಸಂಚು
ಗಾರಗಾರಾತೊ ನರಗುಂದೊ | ಬಾಬಾಸಾಬ
ಕಾರ ಮಳಿಯಾಗ ಮನಿಬಿಟ್ಟ ೧೦

ಕಾಡೆಲ್ಲ ಕತ್ತರಿಸಿ, ನಾಡೆಲ್ಲ ತತ್ತರಿಸಿ
ಬಾಡುಗಳ್ಳರು ಹಾರೂರ | ತಾ ನಂಬಿ
ಕಾಡಿಗೀಡಾದ ಬಾಬಣ್ಣ ೧೧

ಮಡದಿ ಮಕ್ಕಳ ಬಿಟ್ಟ, ಹಡದ ತಾಯಿಯ ಬಿಟ್ಟ
ಕಡೆಗಾತ ಬಿಟ್ಟ ನಾಡಾಸೆ | ಬಾಬಾಸಾಬ
ಕೇಡಿಗೆ ಬಿಟ್ಟ ನರಗುಂದ ೧೨

ದೇಶಽವ ಕಡೆಮಾಡಿ, ಆಶೆಽಗೆ ಈಡಾಗಿ
ಕಾಸು ಕವಡಿಽಗೆ ಕಡೆಯಾಗಿ | ಹಾರೂರು
ಹಾಸಿ ಬೆಂಕ್ಯಾಗ ಬೂದ್ಯಾಗಿ ೧೩

ನರಗುಂದ ಅರಸನಿಗೆ, ವನವಾಸ ಬಂದೀತೊ
ತಿರುಗ್ಯಾನೊ ಕಾಡ ಪಾಲಾಗಿ | ಸೂಟರಗ
ತೊರಗಲ ಸಿಮ್ಯಾಗ ಕೈಸಿಕ್ಕೊ ೧೪

ಮಾಳಿಮ್ಯಾಗಿನ ಹುಲ್ಲ, ಗಾಳಿಗ್ಹಾರಿದರೇನು
ಗಾಲ ಮೇಲಾತೊ ನರಗುಂದೊ | ಬಾಬಾಸಾಬ
ಗಾಳೀಗಿ ಬಾಯ ಬಿಡತಾನೊ ೧೫

ಹೂಲಿ ಸಾಮಿಯು ಕೊಟ್ಟ, ಕೊಲ ಮಿಂಚಿನ ಸಾಪ
ಗಾಲ ಮೇಲಾತೊ ನರಗುಂದೊ | ಮರುವರುಷ
ಕೂಲಿ ಕುಂಬಳಿಗೆ ಎರುವಾತೊ ೧೬
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...