Home / ಕವನ / ಕವಿತೆ / ನೌಕಾಯಂತ್ರ

ನೌಕಾಯಂತ್ರ

ಹಡಗದ ಹಗೆಯಲ್ಲಿಳಿದಿಳೆದು ಗವಿಯನೊಳವೊಕ್ಕು ಸಾಗಿದೆವು ದೂರ, ಸುದೂರ,-
ನೀರೊಳಕೆ ಹಾಯ್ದ ಹಡಗದ ತಳದ ಗರ್ಭದೊಳು ನೂಕಿ.
ಇದೇನು ತಿಮಿಂಗಿಲ ತಿಮಿರ! ನಿಶಾಚರರ ದಿಶೆಯೇನಿದು! ಜಲಚರಗಳ ಜಗವು!
ಇಟ್ಟ ಕಾಲೆಳೆಯುತಿದೆ ಜಾರಿ ಯಮಲೋಕಕ್ಕೆ!
ಹರಿಯುತಿದೆ ನೋಡಲ್ಲಿ ಕೊಳಚಿ ನೀರು,-ರವರವ ನರಕದಲ್ಲಿ!
ಮೇಲೆ ತಲೆತಿರುಗಿ ಕಣ್ಣೆತ್ತಲು, ಕಾಣುವ ಕಪ್ತಾನನ ಕೋಣೆಯೇ ಮುಗಿಲಿಲ್ಲಿ!
ಇಲ್ಲಿಯ ಯಮರಾಜನವನು,-ಇಂದ್ರಚಂದ್ರನೀ ಲೋಕಕೆ:
ಅವ ಸನ್ನೆಗೆಯ್ದಂತೆ ವರ್ತಿಸುವವಿಲ್ಲರುವ ಪ್ರಾಣಿಗಳು.

ತೀರ ಕೆಳಗೆ ಸಮುದ್ರ,-ಅದರ ಮೇಲಿಹುದು ಸಿಹಿನೀರ ಕೆರೆ
ಕಬ್ಬಿಣದ ಹೊದಿಕೆಯಲಿ,-ಅದರ ಮೇಲಿಂತಿಹುದು ಯಮಲೋಕವಿದು.
ಹೀಗೆ ಬಾ, ಇತ್ತ ಬಾ, ಹಿಡಿದು ಸಾಗೀ ಕಬ್ಬಿಣದ ಕಂಬಿಯನು:
ಇಲ್ಲದಿರೆ ಪುಡಿಪುಡಿ ಮೂಡಿ ಚೆಲ್ಲೀತು ಸುತ್ತುತಿಹ ಚಕ್ರವದು:
ಇಲ್ಲಿಹುದು ನೋಡು ಚಕ್ರವ್ಯೂಹ: ಗರ್ರನೆ ತಿರುಗುತಿವೆ ಗಾಲಿಗಳು
ಯಮನ ಕಣ್ಣಾಲಿಗಳಂತೆ; ಅಣಿಗೊಳಿಸಲೆಂದು ನಿಂತಿಹರು ದೂತರಿವರು:
ಅವರಿಗುಸಿರೆಂಥ ಮರಣವು ನಿನ್ನದಿರಲೆಂದು. ಹಾ! ಬಾಗಿಲ್ಲಿ!
ಜಂತಿಭಿಂತಿಯ ಮೇಲೆ ಕೈಮೆಯ್ಯ ತಳಕಿಕ್ಕಿ
ಹೊಟ್ಟೆ ಸರಿದುಬ್ಬಿ ಬರುತಿವೆ ನೋಡು ಹೆಬ್ಬಾವು: ಏ ಗುಬ್ಬಿಮಾನವ!
ಏಳು! ಹಾರಿಲ್ಲಂದ! ಇಲ್ಲದಿರೆ ಮಡಿದೆಯೆಂದು ತಿಳಿ!
ಇದು ನೋಡು,-ವಾಯುವಿನ ನುಂಗಿ ನೀರ್‍ಕುಡಿದ ಘಟಸರ್ಪ;
ಬಾಯ್ದೆರೆದು ಗಾಳಿ ಬಿಡುತಿದೆ: ಇಲ್ಲಿಯದರ ವಿಷದುಸಿರು ಸಹ
ತಂಪಮೃತದಂತೆ: ಮತ್ತಿದು ಕಾಳಸರ್ಪ: ಉಗಿಯನೊಯ್ದು ಯಂತ್ರಕೆ ಮಂತ್ರಿಸಿ
ಹುಟ್ಟು ಕಡಿಸುವ ಮಹಾತಂತ್ರ!

ಅಲ್ಲಿ ಬೇಡ! ಹುಟ್ಟುತಿಹುದಲ್ಲಿ ಸಹಿಸಲಸಾಧ್ಯವಾದ ಬೆಳಕು,-
ವಿದ್ಯುತ್ತು; ಮಿಂಚಿನ ಹೊಂಚಿನಲಿ ಹಂಚಿನಂತೆ ನೀ ಹುರಪಳಿಸಬಹುದು.
ಉಗಿಯೆಲ್ಲ ಮಿಂಚಾಗುವದಿಲ್ಲಿ, ಇಲ್ಲಿಗೊ! ಸದ್ದಿಲ್ಲದೆ ತಮ್ಮ ಮೈಸುತ್ತ ಸುಳುಸುಳು ತಿರುಗುತ್ತ
ಬಿದ್ದುಕೊಂಡಿವೆ ಮೀನದಂಥ ಪ್ರಾಣಿಗಳು: ತಡವಬೇಡಿವುಗಳ ಹಸಿವನು,
ಉಗಿಮಾಡಿ ನುಗಿಸಬಹುದು ನಿನ್ನನು. ಮತ್ತಿಲ್ಲಿ! ಎಚ್ಚರಿಕೆ!
ಸುಧನ್ವನ ಕಾಸಿದಂಥ ಕೊಪ್ಪರಿಗೆಗಳಲಿ ಗಪ್ಪಾಗಬಹುದು ನೀನು!
ಮುಟ್ಟಬೇಡ ಆ ಹುಟ್ಟನು; ತರುವದು ನಿನ್ನ ಸಾವನದು ನಿಮಿಷದಲಿ.

ಧಗಧಗಿಸುವ ಸೆಕೆಯಲ್ಲಿ ಬೂದಿಯಾಗಿ ಬಿದ್ದೀ ನೀನು
ನಿಂತರೆ ಟರ್ಬ್ಬೆನಿನ ಹತ್ತಿರ!
ಹಲ್ಲುಗಟಕರಿಸಿ ಸೆಟೆದು ಮ೦ಜುಗಲ್ಲಾಗಿ ನಿಂತೀ ನೀನು
ಹೋದರೆ ಮಂಜಿನಾಗಾರಕೆ!
ಟಕಮಕನೆ ತಿರುಗಿ ಟಕ್‌ ಟಕ್‌ ಎಂದು ಶಕುನದ ಹಕ್ಕಿಯಂತೆ ಕಟಿಯುತಿದೆ ನೋಡು
ತಿರುಗುಮುರುಗಳೆಯುವ ತಿರುಪೊಂದು,
ಲೊಚ್‌ ಲೊಚ್‌ ಎಂದು ಹಿರಿಹಲ್ಲಿಯಂತೆ ಲೊಚಗುಡುತಿದೆ ನೋಡು
ಬೇರೊಂದು ಬಗೆಯ ಮಾಪೊಂದು!
ಹಸಿರು ಕೆಂಪು ಮಾಟದ ಗೊಂಬಿಗಳು ಮೂಡಿ ಮತ್ತೆ ಮಾಯವಾಗುತಿಹವಿಲ್ಲಿ
ಆಹುತಿಗಾಗಿ ಹಾತೊರೆದ ಮರುಳ್ಗಳ ಕುಣಿತ ನಡೆದಿಹುದಿಲ್ಲಿ!
ಅಯ್ಯೋ! ದೇವನಿಂದ ಜೀವಗುವರನನೆಳೆತಂದು
ನೀರುನೆಲದ ಮಮತೆಯ ಒಡಿಸಿ ಕೊಲ್ಲಲು ಹಾಕಿದ ಹೊಂಚಿದು ಕಾಣಿರೊ!
ಯಾವ ಮಾಂತ್ರಿಕನ ಮೋಸವಿದು? ಯಾವ ಯಾಂತ್ರಿಕನ ಕೃತಿಯಿದು?
ಹೇಗೆ ಬಂದೆನಿಲ್ಲಿ? ದಾರಿ ಯಾವುದು ಹೊರಗೆ? ಏನಿದು? ಏಕಿದು?
ಕಾಗೆಗಳ ಹಿಂಡಿನಲಿ ಸಿಕ್ಕ ಪರಪುಟ್ಟನಂತೆ ವಿಲಿವಿಲಿ ಒದ್ದಾಡಿದೆ,
ಅತ್ತುಕರೆದೆ, ಚೀರಿದೆ, ಹೆಬ್ಬಾವು ಬಂದು ಸುತ್ತಿದವು,
ಮೀನು ಬಂದು ಮುತ್ತಿದವು, ಗಾಲಿ ಬಂದು ಎತ್ತಿದವು,-
ನಿಲ್ಲಲು ನೆಲವಿಲ್ಲದಾಯ್ಕು, ಮರೆಹೊಗಲು ಮರುಕವಿಲ್ಲದಾಯ್ತು, ಕಣ್ಗೆ-ಕತ್ತಲೆಯಾಯ್ಕು-
ಅಯ್ಯೋ! ಸತ್ತೆ! ಸತ್ತೆ! ಸತ್ತೆ!!

ಅಲ್ಲ! ನರಕವಲ್ಲವಿದು: ಮಾನವನು ನಿರ್ಮಿಸಿದ ಯಂತ್ರಶಾಲೆ,-
ನಿಯಮಗಳನು ಪಾಲಿಸುವದಿದು : ಕಿವಿಯಲುಸುರಿದಂತೆ ಆಲಿಸುವದು.
ಮುಗಿಲೊಳಗಿಂದ ಕಪ್ತಾನನೆಳೆದ ಗೆರೆಯನು ದಾಟಿಲಾರದಿದು.
ಮತ್ತಿಲ್ಲಿ ನೋಡು : ದುಡಿಯುವರು ನಿನ್ನಂಥ ಮಾನವರಿಲ್ಲಿ ಸಂಬಳಕಾಗಿ.
ಈ ಮಹಾಯಂತ್ರದಿಂದ ಮುನ್ನಡೆಯುವದು ಹಡಗ,-
ಇಡಿಯ ಪಟ್ಟಣವೊಂದು ತೇಲುವದು ನೀರ ಮೇಲೆ!
ಇದು ನರಕವೆನ್ನುವದು ಕುರುಡುತನ, ಅಜ್ಞಾನ.
ಅಲ್ಲಿ ಮೇಲಿನ ಮಹಲಿನಲಿ ಕುಳಿತಿಹನು ನೋಡು ಕಪ್ತಾನನು,-
ಈ ಸೃಷ್ಟಿಯ ವಿಷ್ಣುವೀ ಜ್ಞಾನದ ಮಹರ್‍ಷಿ!
ಅವನ ಕೋಣೆಯಲ್ಲಿ ಸಂಚಿತವಹುದೀ ಯಂತ್ರದ ಮೂಲಮಂತ್ರ-
ವೀ ರಾಜ್ಯದ ಸೂತ್ರಗಳು, ರಾಕ್ಷಸೀ ವ್ಯಾಪಾರವಿದನು-
ಮತ್ತೀ ನಾವಿಗರ ಕ್ಷಾತ್ರ ತೇಜವನು-
ಅಂಕಿತದಲಿಡಬಹುದು ಅವನ ಬ್ರಹ್ಮಜ್ಞಾನ!
ಕಂಡಿರುವರಾರದನು? ಹಿತಕಾಗಿ ವ್ಯಯವಾಗುವೀ ತಾಮಸೀ ಶಕ್ತಿ
ರುದ್ರ ಭಯಂಕರವಾಗಬಹುದು, ಮುಂದೆ ಬೆಂಕಿಯ ಮಳೆಗರೆಯಬಹುದು.
ಇಂದು ಹೊಳೆದ ಚಮತ್ಕೃತಿಯೆ ಮುಳುವಾಗಬಹುದು ಮಾನವಗೆ ನಾಳೆ!
ತನ್ನ ತಂದೆಯನೆ ಮೆಟ್ಟಿ ತುಳಿಯಬಹುದದು ಬಬ್ರುವಾಹನನಂತೆ:
ಮುಳುಗಿಸಿಹುದಿಂದು ಮಾನವ ಜಾತಿಯನು ದಾಸ್ಯವೃತ್ತಿಯಲ್ಲಿ,
ಯುದ್ಧಗಳ ಪುನರಾವೃತ್ತಿಯಲ್ಲಿ, ನಾಳೆ ಸಂಹರಿಸಲದನು ಸಂಪೂರ್ಣ,-
ಆಗ ಮನುವಂಶವನು ಮತ್ತೆ ಬದುಕಿಸಬಲ್ಲ ಕೃಷ್ಣನಾರು?

ಏನಿಹುದೊ ದೈವದ ಮಡಿಲಲ್ಲಿ, ಇದ್ದಲ್ಲಿಯೇ ಮಡಗಿರಲಿ!
ಕಾಲ ಬರುವ ಮುನ್ನ ಕೀಳಬೇಡದನು ಸೋಜಿಗಕಾಗಿ.
ಕಾವ್ಯವನು ಬಗೆ,-ಅದರ ಪರಿಣಾಮ ಎಷ್ಟುಪಕಾರಿ,
ಎಷ್ಟುಪಕಾರಿಯೆಂಬುದನು ಹೇಳಬಲ್ಲವರಾರು?
ಎಲ್ಲದರ ದೈವದಂತಿಹುದೀ ವಿಜ್ಞಾನಚಮತ್ಕೃತಿಯ ದೈವ.
ಎಲ್ಲ ದೈವಾಧೀನ. ಫಲಜ್ಯೋತಿಷದ ಹಾದಿಯನೆ ಬಿಟ್ಟು
ಆಗು-ಹೋಗುವದರ ಸಾಮುದ್ರಿಕವನೆ ತೊರೆದು
ನೋಡು ಸಮುದ್ರವ ಕೊರೆದು ನಡೆದೀ ಮಹಾಯಂತ್ರವನು!
ಅನುಭವಿಸದರ ರುದ್ರಭಯಂಕರ ಸೌಂದರ್ಯವನು,
ಭವ್ಯ ವಿಭವವನು, ಕ್ರಮವನು, ಸಿಸ್ತನು!
ಯಂತ್ರಾಗಾರವಹುದಿದು ಕಬ್ಬಿಣದಿ ವಿಜ್ಞಾನ-ಕವಿಯೊರೆದ ಮಹಾಕಾವ್ಯ!
‘ಕಬ್ಬಿಗರ ಕಾವ’ವ ತಿಳಿದವನೆ! ತಿಳಿಯೀ ಕಬ್ಬಿಣದ ಕಾವ!
ಪದವಿಲಾಸವನರಿತವನೆ! ಕುರಿಯೀ ಧಾತುವಿನ ಹದವ!
ಇಲ್ಲಿದೆ ಜಕ್ಕಣಾರ್ಯರ ವಾಸ್ತುಶಿಲ್ಪ, ರವೀಂದ್ರರ ಚಿತ್ರಕಲೆ,
‘ಲೇಒಕೂಒನ್‌’ದಲ್ಲಿಯ ಮೂರ್ತಿಶಿಲ್ಪ, ತಾಂಡವನೃತ್ಯದ ನೆಲೆ,
ಪಂಪನ ಕಾವ್ಯರಚನೆಯ ಮಹಾದ್ಭುತ! ಕಲ್ಲು ಮಣ್ಣಿನಲ್ಲಿ,
ಬಣ್ಣದಲ್ಲಿ, ವರ್ಣಾಕ್ಷರದಲ್ಲಿ, ಮೆಯ್ಯ ವಿಧವಿಧದ ನಿಲುವಿನಲ್ಲಿ,-
ತನ್ನಲಿಹ ಬುದ್ಧಿ ವೈಭವವನರಳಿಸಲು ಬಾರದೆ
ಕಟ್ಟಿದನು ವಿಜ್ಞಾನಮಹರ್ಷಿ ಕಬ್ಬಿಣದಲೀ ಕಟ್ಟು ಕಥೆಯ!
ಅತಿ ಸರಸವಾಗಿ ಮಿಡಿದೀ ವೀಣೆಯನು-
ಗುರುತಿಸಿ ಸ್ವರಗಳನು ಕೈಯ್ಯಾಡಿಸೀ ಪಿಯಾನಿನ ಮೇಲೆ-
ಕಂಡದರ ಹ್ರಸ್ವದೀರ್‍ಘವನು, ಏರಿಳಿತವನೆಲ್ಲ-
ಸರಿ-ಗಮ ಸರಿ-ಗಮ ಎಂದೊರೆವ ಭೂಪನಿವ ಕಪ್ತಾನ,-
ಸಮುದ್ರಸಂಗೀತದ ಶಾಸ್ತ್ರವನೆಲ್ಲ ಬಲ್ಲ ರಸಿಕ!
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...