Home / ಕವನ / ಕವಿತೆ / ಮೇಘಮಯೂರ

ಮೇಘಮಯೂರ

ಕುಣಿಯ ತೊಡಗಿತು ಮೇಘಮಯೂರ
ಭವ್ಯಭೀಕರಾ ಬೃಹದಾಕಾರ
ರುದ್ರವಾದರೂ ಶುಭಶ್ರೀಕಾರ
ಕುಣಿಯ ತೊಡಗಿತು ಮೇಘಮಯೂರ |

ಗಗನರಂಗವನು ತುಂಬಿ ಬೆಳೆಯಿತು
ಚಿಕ್ಕೆಗಣ್ಣಿನಾ ಪಿಚ್ಛ ಹರಡಿತು
ಸಿಡಿಲು ಮಾಲೆಯಲಿ ಮುಡಿಯ ಕಟ್ಟಿತು
ಥಕಥೋಂ ಥಕಥೈ ಕಾಲು ಹಾಕಿತು |

ಹೆಜ್ಜೆ ಹೆಜ್ಜೆಯಲಿ ಗೆಜ್ಜೆ ನುಡಿಯಿತು
ಮೃದಂಗ ಬಾನೊಳು ಗುಡುಗು ಮೊಳಗಿತು
ಪದ ಘಟ್ಟನೆಯಲಿ ಭುವನ ನಡುಗಿತು
ಕುಣಿದ ಭಾವದಲಿ ಮಿಂಚು ಮೆರೆಯಿತು |

ಬುವಿಯ ದೇಗುಲದ ಬಾಗಿಲೆದುರಿನಲಿ
ಚಿಕ್ಕೆ ಚಿಗಿತ ಅಂಗಳದ ರಂಗದಲಿ
ದೇವದಾಸಿ ಕುಣಿದಂತೆ ಕುಣಿಯಿತು
ದೇವಲೋಕವೇ ನಿಂತು ನೋಡಿತು |

ಹಾಲು ಜೇನು ಜಲಕುಂಭವೆತ್ತಿತು
ನೀಲಕಂಠನಭಿಷೇಕ ನಡೆಯಿತು
ಜಗ ಮೂಕವಾಗಿ ತಲೆವಾಗಿ ನಿಂತಿತು
ಇಂದ್ರಲೋಕವತಿ ಚಿಕಿತವಾಯಿತು |

ಮುರಿಯ ಬಂದಿತೆನುವಂತೆ ಕುಣಿಯಿತು
ಪ್ರಮತ್ತ ಪ್ರಳಯಾವೇಶ ಬೆಳೆಯಿತು
ಸುಪ್ತ ಸಮೀರಣ ರೊಚ್ಚಿಗೆದ್ದಿತು
ಸಪ್ತ ಸಮುದ್ರದಿ ಹುಚ್ಚು ಕುಣಿಯಿತು |

ಬೆಂದ ನೆಲವು ಎದೆ ತೆರೆದು ಬೇಡಿತು
ಕಮರಿ ಹೋದ ಕಾಡೆಲ್ಲ ಕೆದರಿತು
ಕಣ್ಣು ಹಿಗ್ಗಿಸುತ ಗುಡ್ಡ ನೋಡಿತು
ವಿಶ್ವವೆಲ್ಲ ಹಾತೊರೆದು ನಿಂತಿತು |

ಮರಣ ಬಂದರೂ ಹರಣ ಸೊಕ್ಕಿತು
ಚರಣ ಚರಣದಲಿ ಜೀವ ಚಿಗುರಿತು
ಹಚ್ಚ ಹಸಿರು ಹುಚ್ಚೆದ್ದು ಚಿಮ್ಮಿತು
ಬಣ್ಣ ಬಣ್ಣಗಳ ಬಾಳು ಬೆಳೆಯಿತು |

ಮಣ್ಣನೆತ್ತಿ ಅರಮನೆಯ ಕಟ್ಟಿತು
ಇಂದ್ರ ಚಾಪಗಳ ಚೆಲುವ ತೋರಿತು
ಬೆಂದ ಬಾಳಿನಲಿ ತಂಪನೆರೆಯಿತು
ಬಂದುದೆಲ್ಲ ಬಹು ಚಂದವಾಯಿತು |

ತೊಳೆದು ಹೋಯಿತೆಲೆ ಜಗದ ಮೈಲಿಗೆ
ಇಟ್ಟಿತೆಲ್ಲೆಡೆಗೆ ಧೂಪ ದೀವಿಗೆ
ಮನದಿ ಅರಳಿಸಿತು ಜಾಜಿ ಮಲ್ಲಿಗೆ
ಭಾವ ಭಕುತಿಯಲಿ ದೇವ ಪೂಜೆಗೆ |

ಕುಣಿಯ ತೊಡಗಿತು ಮೇಘಮಯೂರ
ಭವ್ಯ ಭೀಕರ ಬೃಹದಾಕಾರ
ರುದ್ರವಾದರೂ ಶುಭ ಶ್ರೀಕಾರ
ಕುಣಿಯತೊಡಗಿತು ಮೇಘಮಯೂರ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...