Home / ಲೇಖನ / ಇತರೆ / ನಾ ಮಾಡಿದ ಕರ್‍ಮ ಬಲವಂತವಾದರೆ

ನಾ ಮಾಡಿದ ಕರ್‍ಮ ಬಲವಂತವಾದರೆ

‘ಹಿರಿದು ಕರ್‍ಮವ ಮಾಡಿ ಹರಿವ ನೀರೊಳು ಮುಳುಗೆ; ಕರಗುವುದೇ ಪಾಪ? ತಾ ಮುನ್ನ ಮಾಡಿದ್ದು ಎರೆಯ ಕಲ್ಲೆಂಟೆ ಸರ್ವಜ್ಞ’

ಮಾಡಿದ ಕರ್ಮಫಲ ಏನು ಮಾಡಿದರೂ ಬಿಟ್ಟು ಹೋಗುವುದಿಲ್ಲ. ಕಟ್ಟಿಟ್ಟ ಬುತ್ತಿಯಂತೆ ನಮ್ಮ ಜೊತೆಗೇ ಬರುತ್ತದೆ ಎನ್ನುವ ಸರ್ವಜ್ಞನ ಮಾತಿನಂತೆ ಮಾಡಿದ ಕರ್ಮಫಲವನ್ನು ಅನುಭವಿಸಿಯೇ ತೀರಬೇಕು. ಮಾಡಿದುಣ್ಣೋ ಮಹಾರಾಯ ಎನ್ನುವ ಗಾದೆ ಮಾತೂ ಈ ಸಿದ್ಧಾಂತದಿಂದಲೇ ಹುಟ್ಟಿರಬೇಕು. ಮಾಡಿದ ಕರ್ಮ ಬಲವಂತವಾದರೆ ಈ ಜನ್ಮದಲ್ಲಿ ಅದರ ಫಲ ಅನುಭವಿಸಲಾಗದಿದ್ದರೆ ಮುಂದಿನ ಜನ್ಮಕ್ಕೂ ಅದು ಬೆನ್ನಟ್ಟಿಕೊಂಡು ಬರುತ್ತದೆ ಎನ್ನುವುದಕ್ಕೆ ಸತ್ಯ ಹರಿಶ್ಚಂದ್ರ ನಳ ಮಹಾರಾಜನಿಗಿಂತ ಬೇರೆ ಉದಾಹರಣೆ ಬೇಕೇ? ಸೀತೆ ಯಾವ ತಪ್ಪು ಮಾಡಿದ್ದಳೆಂದು ಅವಳಿಗೆ ಅಷ್ಟೊಂದು ಕಷ್ಟಗಳು ಎದುರಾದದ್ದು? ಇವತ್ತೂ ಎಷ್ಟೋ ಒಳ್ಳೆಯ ವ್ಯಕ್ತಿಗಳು ಕಷ್ಟಗಳ ಸರಮಾಲೆಗಳಿಗೆ ಸಿಕ್ಕಿ ಒದ್ದಾಡುವುದನ್ನು ನೋಡುವಾಗ ಏಳುವ ಯಾಕೆ ಹೀಗೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಬಸವಣ್ಣನವರೂ ಕರ್ಮಸ್ಥಿತಿ ಯಾವತ್ತೂ ಬೆನ್ನು ಬಿಡದು ಎಂದು ಹೇಳಿದ್ದಾರೆ. ಡಿವಿಜಿಯವರೂ ಕರ್ಮದ ಬಗ್ಗೆ ಸಾಕಷ್ಟು ಜಿಜ್ಞಾಸೆ ನಡೆಸಿ ಕರ್ಮ ನಮ್ಮ ಮುಂದೆ ಒಂದು ಮೋಹಕ ರೂಪದಲ್ಲಿ ನಿಂತು ಕಾಡುತ್ತದೆ. ಆಕರ್ಷಿಸಿ ತಬ್ಬಿಕೊಂಡು ಮತ್ತೆ ಬೆಂಕಿಯಿಡುತ್ತದೆ, ‘ಪ್ರಾರಬ್ಧ ಕರ್‍ಮಮುಂ ದೈವಿಕ ಲೀಲೆಯುಂ’ ಎಂದಿದ್ದಾರೆ. ಮಾಡಿದ ಕರ್‍ಮ ಬಲವಂತವಾದರೆ ಅದರ ಫಲವನ್ನು ಅನುಭವಿಸದೆ ಬೇರೆ ದಾರಿಯಿಲ್ಲ.

ಗೀತೆಯಲ್ಲಿ ಶ್ರೀಕೃಷ್ಣನೂ ಹೇಳುವುದು ಇದನ್ನೇ. ಫಲಾಫಲಗಳ ಯೋಚನೆ ಬಿಟ್ಟು ನೀನು ಮಾಡಬೇಕಾದ ಕರ್‍ಮಗಳನ್ನು ಮಾಡು. ಮಾಡುವ ಕೆಲಸ ಕೆಟ್ಟದ್ದೋ ಒಳ್ಳೆಯದ್ದೋ ಅದು ದೈವ ನಿರ್‍ಧಾರ. ಆ ಕರ್‍ಮಗಳನ್ನು ಮಾಡಲು ನೀನು ನಿಮಿತ್ತ ಮಾತ್ರ. ದುಃಖಗಳು ಬಂದಾಗ ತಳಮಳಗೊಳ್ಳದೆ ಸುಖಗಳು ಬಂದಾಗ ಹೆಚ್ಚು ಸಂತಸಗೊಳ್ಳದೆ ಹೆದರಿಕೆ, ಸಿಟ್ಟು ಇಲ್ಲದವನಾಗಿ ಕರ್ಮಫಲಗಳನ್ನು ಅನುಭವಿಸುವವನೇ ಜ್ಞಾನಿ.

ಜೀವನ ಒಂದು ಯುದ್ಧದಂತೆ ಬಹಳ ರೋಚಕವಾದದ್ದು. ಕೊನೆ ಮೊದಲಿಲ್ಲದ ಆಟದಂತೆಯೂ ಹೌದು. ಇಲ್ಲಿ ಸೋಲು, ಗೆಲುವು ಗೌಣ. ಆಡುವುದೊಂದೆ ಮುಖ್ಯ. ಜೀವನದಲ್ಲಿ ಕಷ್ಟ, ಸೋಲುಗಳು ಅತಿ ಸಹಜವಾದ ಆಗುಹೋಗುಗಳು. ಇದರಿಂದ ನಾವು ಸಾಕಷ್ಟು ಪಾಠ ಕಲಿಯುತ್ತೇವೆ. ಮಾಡಿದ ಕರ್ಮಫಲಕ್ಕೆ ಅನುಗುಣವಾಗಿ ಕಷ್ಟ ಸುಖಗಳು, ನೋವು-ನಲಿವುಗಳು, ಸೋಲು-ಗೆಲುವುಗಳು ಹಾಸುಹೊಕ್ಕಾಗಿರುವ ಜೀವನವನ್ನು ಎದುರಿಸಲು ಸಾಕಷ್ಟು ಧೈರ್ಯ, ಆತ್ಮವಿಶ್ವಾಸ ಬೇಕಾಗುತ್ತದೆ. ಅದನ್ನು ನಾವು ಮೈಗೂಡಿಸಿಕೊಳ್ಳಬೇಕು.

ಸುಖ, ಸಂತೋಷಗಳನ್ನು ಈ ಜನ್ಮದಲ್ಲೋ ಹಿಂದಿನ ಜನ್ಮದಲ್ಲೋ ಮಾಡಿದ ಕರ್ಮಫಲಗಳಿಗೆ ತಾಳೆ ಹಾಕದಿದ್ದರೂ ಕಷ್ಟಗಳು ವಿಪರೀತ ವಾದಾಗ ಇದು ನಾವು ಮಾಡಿದ ಕರ್ಮಫಲ ಎನ್ನುವ ಭಾವ ಬಲವಾಗುತ್ತದೆ. ಈ ಜನ್ಮದಲ್ಲಿ ಮಾಡಿದ ಪಾಪ-ಪುಣ್ಯಗಳ ಲೆಕ್ಕ ನಮಗೆ ಗೊತ್ತಿರುತ್ತದೆ. ಹಿಂದಿನ ಜನ್ಮದ ಲೆಕ್ಕ ಹಿಂದಿನ ಜನ್ಮದ ಕಡತ ಬರೆದಿಡುವವನಿಗೇ ಗೊತ್ತು. ಯಾವ ಕರ್ಮಕ್ಕೆ ಈ ಶಿಕ್ಷೆ ಎಂದು ಅರ್ಥವಾಗದೆ ಈ ಜನ್ಮದಲ್ಲಿ ಶಿಕ್ಷೆ ಅನುಭವಿಸುವುದರಲ್ಲಿ ಯಾವ ನ್ಯಾಯ ಇದೆ ಎನ್ನುವುದು ನಿಗೂಢ ರಹಸ್ಯ. ಯಾರಿಗೂ ಅರ್ಥವಾಗುವಂತದ್ದಲ್ಲ. ನಾನು ಯಾವತ್ತೂ ಈ ಕರ್ಮ ಸಿದ್ಧಾಂತದ ಬಗ್ಗೆ ತಲೆ ಕೆಡಿಸಿಕೊಂಡಿದ್ದವಳಲ್ಲ. ಈ ಜನ್ಮದಲ್ಲಿ ಮಾಡಿರುವ ಒಳಿತು-ಕೆಡುಕುಗಳೇ ನಮ್ಮ ಜೀವನದ ಕಷ್ಟ-ಸುಖಗಳನ್ನು ನಿರ್ಧರಿಸುತ್ತವೆ ಎನ್ನುವುದನ್ನು ಬಲವಾಗಿ ನಂಬಿದ್ದವಳು. ಆದರೆ, ನನ್ನ ನಂಬುಗೆಯನ್ನು ಮೀರಿ ಆಘಾತಗಳು ಎದುರಾದಾಗ ಇದು ನಾ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಫಲವೇ ಇರಬೇಕು ಎಂದು ಅನಿಸಲು ಶುರುವಾಗಿರುವುದಂತೂ ನಿಜ.

ಕರ್ಮಫಲ ಬಲವಂತವಾಗಿರಬಹುದು. ಅದರಿಂದ ಸಾಕಷ್ಟು ಕಷ್ಟ ನಷ್ಟಗಳನ್ನೂ ಎದುರಿಸಬೇಕಾಗಬಹುದು. ಪದೇ ಪದೇ ಎದುರಾಗುವ ಆಘಾತಗಳು ತಂದೊಡ್ಡುವ ನೋವುಗಳು ಆತ್ಮವಿಶ್ವಾಸಕ್ಕೆ ಡಿಕ್ಕಿ ಕೊಡುವಾಗ ಸೋತು ಕುಸಿಯಲೂ ಬಹುದು. ಇನ್ನು ಏಳುವುದೇ ಅಸಾಧ್ಯ ಎಂದೂ ಅನಿಸಬಹುದು. ಆದರೆ, ಏನೇ ಆದರೂ ಈಸಬೇಕು ಇದ್ದು ಜೈಸಬೇಕು ಎನ್ನುವುದನ್ನು ತಿಳಿದುಕೊಂಡರೆ ಜೀವನದ ಮಹಾ ಯುದ್ಧದಲ್ಲಿ ಕೊನೆಗಾದರೂ ಗೆಲ್ಲಬಹುದು. ಏನೇ ಆಗಲಿ ಎಲ್ಲವನ್ನೂ ಎದುರಿಸಿಯೇ ಎದುರಿಸುತ್ತೇನೆ ಎನ್ನುವ ಛಲವಿದ್ದರೆ ಯಾವುದೇ ಕರ್ಮಫಲವನ್ನಾದರೂ ಛಾತಿಯಿಂದ ಎದುರಿಸಬಹುದು ಎನ್ನುವುದು ನಾನು ಕಂಡುಕೊಂಡಿರುವ ಸತ್ಯ.

ಬದುಕು ನಮ್ಮ ಕೈಯಲ್ಲಿ ಇಲ್ಲ. ಅದನ್ನು ನಡೆಸುವವನು ನಮ್ಮ ಕಣ್ಣಿಗೆ ಕಾಣದ ಸಾರಥಿ. ಅವನ ಮೇಲೆ ನಂಬುಗೆಯಿಟ್ಟು ಅವನು ಕರೆದುಕೊಂಡು ಹೋದ ಕಡೆಗೆ ಹೋದರೆ ಜೀವನದಲ್ಲಿ ಎದುರಿಸಬೇಕಾದ ಹೋರಾಟ ಸುಲಭವಾದೀತು.

ಬದುಕೊಂದು ಕದನವೆಂದಂಜಿ ಬಿಟ್ಟೋಡುವವನು ಬಿದಿಯ ಬಾಯಿಗೆ ಕವಳವಾಗದುಳಿವನೇ?

ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು ನೀನೆದುರು ನಿಲೆ ಬಿದಿಯೊಲಿವ ಮಂಕುತಿಮ್ಮ.

ಕರ್ಮಫಲಗಳಿಗಂಜಿ ಬದುಕನ್ನು ಬಿಟ್ಟೋಡುವ ಹೇಡಿತನವನ್ನು ಯಾರೂ ತೋರಬಾರದು. ಬದುಕು ಇರುವುದು ಬದುಕಿ ತೋರಿಸಲಿಕ್ಕೆ ಅಲ್ಲದೆ ಸೋತು, ಕುಸಿಯುವುದಕ್ಕೆ ಅಲ್ಲ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...