Home / ಕವನ / ಕವಿತೆ / ಕಲ್ಪನಾ ವಿಲಾಸ

ಕಲ್ಪನಾ ವಿಲಾಸ

ವಿಶ್ವಜನ್ಮ ಪೂರ್ವದಲ್ಲಿ
ಅನಾದಿ ಕಾಲದಾದಿಯಲ್ಲಿ
ಬ್ರಹ್ಮನಿರಲು ತಪಸಿನಲ್ಲಿ
ಕುಣಿದೆಯವನ ಎದುರಿನಲ್ಲಿ
ಕೊನರಿತೆನಲು ಮಿಂಚುಬಳ್ಳಿ
ಹೇ ಸುಂದರಕಲ್ಪನೆ
ಚಿರ ಜೆಲುವಿನ ಚೇತನೆ!

ಸುರಪ್ರಜ್ಞೆಯು ಉನ್ಮೇಷಿತ
ಲೀಲಾತುರ ಮನಸ್ಫೂರ್ತಿತ
ಈ ವಿಶ್ವವು ಉಲ್ಲೇಖಿತ-
ವಾಯ್ತು ಕಾಲಪಟದಲಿ
ನಿನ್ನ ಭವ್ಯ ಕಲೆಯಲಿ!

ನೀ ಬ್ರಹ್ಮನ ಕಮಲಾಸನ
ವಿಶ್ವ ಕವಿಯ ನವಿಲಾಸನ
ಕ್ಷಣ ಕ್ಷಣಗಳ ಪದ ಬಂಧನ
ಓಂಕಾರದ ಸ್ವರ ಸ್ಯಂದನ
ರಚಿತ ಕಾವ್ಯನಂದನ
ಚೆಲುವು ನೀ ಚಿರಂತನ!

ನೆಲಜಲಗಳ ಈ ಪರಿಸರ
ಜ್ಯೋತಿರ್ಮಯ ನೀಲಾಂಬರ
ದಿಗ್ದಂತಿಯ ತಟ ಸುಂದರ.
ತುಂಬಿ ಹರಿಯೆ ಸುಖ ಸಮೀರ
ಈ ಜೀವನವೇ ನಿರಂತರ
ದೇವ ನಾಟ್ಯಚಾಲಕ
‘ನಟಿ’ಯು ನೀನು ಕಲ್ಪಕ!

ಏಕಂ ಸತ್‌ ಹಲವಾಯಿತು
ಬಣ್ಣದ ಬಗೆ ಚೆಲುವಾಯಿತು
ಇಳೆನೇಸರ ಸುತ್ತರಿಯಿತು
ಹಗಲಿರುಳಿನ ಬೆಂಬತ್ತಿತು
ಋತುಋತುಗಳ ಕಳೆಯರಳಿತು
ಸೊಗದುಟಿಯಲಿ ಕಹಿಯಿಳಿಯಿತು
ಮುನ್ನಡೆಯಿತು ನಾಟಕ
ನವರಸಗಳ ಪೋಷಕ!

ನೀ ಚೆಲುವಿನ ಮೂಲ ಕಿರಣ
ಮನದಾಸೆಯ ಮಿಂಚಿನ ಕಣ
ಎದೆಯೊಲವಿಗೆ ಪ್ರಾಣಪವನ
ನೀನದಮ್ಯ ಚೇತನೆ
ಭಾವಸ್ಫುರಣ ಕಾರಣೆ!

ಅಳಿದು ಹೋದ ಜಗದೋರುವೆ
ನಾಳೆ ಬರುವ ಯುಗ ತೆರಿಯುವೆ
ಇಂದಿಗು ಚೆಲುವಿತ್ತು ಮೆರೆವೆ
ಲೋಕಕೆ ಸವಿದೋರುವೆ
ಮೋಹದಿ ಜನ ಬಿಗಿಯುವೆ!

ಹೇ ಕಲ್ಪನೆ ನೀನು ಮಮತೆ
ಸಾನುಭೂತಿ ಜಲದ ಒರತೆ
ಜನದೆದೆಯಲಿ ಕೊರೆವ ಕೊರತೆ
ನೀನು ತುಂಬಿ ತುಳುಕುವೆ
ಹಣೆಗೊಲವನು ಸವರುವೆ!

ಇದು ಮರಣದ ಘೋರ ಶಯ್ಯೆ
ಅಲ್ಲಿ ನಿಲಲು ನಿನ್ನ ಛಾಯೆ
ಯಮನೆಸಿಪನು ಮೋಹ ಮಾಯೆ
ನಮೋ ನಿನಗೆ ಕಾವ ತಾಯೆ!
ನಿಲ್ಲು ನಮ್ಮ ಹೃದಯದಿ
ಭಾವಸರಸ್ತೀರದಿ!

ನೀ ಕೆತ್ತಿದೆ ದೇವ ಮೂರ್ತಿ
ಮನದಿ ಬಿತ್ತಿ ಭಾವ ಭಕ್ತಿ
ದೇವನೊಲಿಪ ಸುಧಾಸೂಕ್ತಿ
ತೆರೆದು ತೋರೆ ಕೊನೆಯ ಮುಕ್ತಿ
ವೇದವೆಲ್ಲಿ ‘ನೇತಿ, ನೇತಿ’
ಅಲ್ಲಿ ಮಾರ್ಗದರ್ಶಿನಿ
ಮಂತ್ರ ಮುಗ್ಧ ಹಾಸಿನಿ!

ಜನವಾಗಿದೆ ಹಾಳು ಹೋಳು
ಕಹಿಯಾಗಿದೆ ಜಗದ ಬಾಳು
ಬರಡಾಗಿದೆ ಕೊರಡು ಕರುಳು
ತೆರೆ ನಿನ್ನಯ ತಾಯ ತೋಳು
ಒಲವಿನ ಸಿರಿ ತುಳುಕಲಿ
ಕೆಳೆಯ ಚೆಲುವು ಅರಳಲಿ!

ಎರಡಾಗಿರೆ ಹೆಣ್ಣು ಗಂಡು
ಜಗದಿರವಿನ ಕುಟಿಲ ಕಂಡು
ತೆರೆಯೆ ತಾಯೆ ಸ್ನೇಹಸದನ
ಎದೆ ಬೆರೆಯುವ ಬಂಧನ
ದೇವಿ ನಿನಗೆ ವಂದನ
ದೇವಲೋಕ ನಂದನ!

ನಾ ವಿರಹಿತ ದೈವಹೀನ
ಶೋಕ ವಿದ್ಧ ವಿಕಲ ದೀನ
ಬಾ ಕಲ್ಪನೆ, ಭಾಗ್ಯಕಿರಣ
ಪದ್ಮರಾಗ ನಿನ್ನ ಚರಣ
ನನ್ನೆದೆಯಲಿ ನಿಲ್ಲಲಿ
ಭಾವ ಭಕುತಿ ಬೆಳೆಯಲಿ!

ಬಾಳೆಂಬುದು ಮುಳ್ಳ ಕಂಟಿ
ಬೆಳೆಯಿತೆನ್ನ ರಕ್ತವೀಂಟಿ
ಬಾ ಕಲ್ಪನೆ, ಸ್ವರ್ಗ ದಾಂಟಿ
ನನ್ನೆದುರಲಿ ನಿಂದಿರೆ
ಹೇ ದೇವನ ಇಂದಿರೆ!

ಈ ಅಲುಗಿನ ಬಾಳಿನಲ್ಲಿ
ಮೊನೆ ಮುರಿಯುವ ಚೆಲುವ ಚೆಲ್ಲಿ
ಸಪ್ತ ವರ್ಣ ನೃತ್ಯ ಕೆರಳಿ
ಕಂಪು ತಂಪು ಹೊಮ್ಮಿ ಬರಲಿ
ಒಲವಿನ ಹೂ ಹರುಷ ನಿಲಲಿ
ಜ್ವಲದ್ದೀಪ ಮಲ್ಲಿಕೆ
ಬಾರೆ ಹೃದಯ ತಲ್ಪಕೆ!

ನಿನ್ನ ಒಲವು ನಿನ್ನ ಚೆಲುವು
ಸ್ವಪ್ನಲೋಕದಮಿತ ನಲಿವು
ನಮ್ಮ ಬಾಳಿಗಿದೇ ಬಲವು
ನಿನ್ನೆಡೆಯಲಿ ಜಗದ ಇರವು
ಬಾ ನಿಂದಿರು ಕಲ್ಪನೆ
ಇದೆಯೊಂದೇ ಪ್ರಾರ್ಥನೆ!
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್