Home / ಲೇಖನ / ಇತರೆ / ಕೌಟುಂಬಿಕ ನೆಮ್ಮದಿ

ಕೌಟುಂಬಿಕ ನೆಮ್ಮದಿ

ಒಂದು ಸಮಾಜದ ಕೇಂದ್ರ ಬಿಂದು ಕುಟುಂಬ. ಹಲವಾರು ಕುಟುಂಬಗಳು ಒಂದಕ್ಕೊಂದು ಬೆಸೆಯುತ್ತಾ ಸಮಾಜವಾಗುತ್ತದೆ. ಕೌಟುಂಬಿಕ ನೆಮ್ಮದಿ ಸಾಮಾಜಿಕ ನೆಮ್ಮದಿಗೆ ಪೂರಕ. ಕುಟುಂಬಗಳಲ್ಲಿ ನೆಮ್ಮದಿಯಿದ್ದರೆ ಸಮಾಜದಲ್ಲಿ ನೆಮ್ಮದಿ ಇರುತ್ತದೆ.

ಕೂಡುಕುಟುಂಬಗಳು ಒಡೆದು ನ್ಯೂಕ್ಲಿಯರ್ ಕುಟುಂಬ ಎನ್ನುವ ಹೊಸ ವ್ಯವಸ್ಥೆ ರೂಪ ತಳೆದಾಗಲೇ ಕೌಟುಂಬಿಕ ನೆಮ್ಮದಿಗೆ ಧಕ್ಕೆಯಾಯಿತು. ಪತಿ-ಪತ್ನಿ, ಒಂದೋ, ಎರಡೋ ಮಕ್ಕಳು ಎನ್ನುವ ಸುಮಾರು ನಿರ್ಬಂಧನೆಯಿಂದ ಆಚೆಯಿಂದ ಹಿರಿಯರ ಜೀವನ ಬರಡಾಯಿತು. ಈಚೆಯಿಂದ ಕುಟುಂಬದ ನೆಮ್ಮದಿಗೆ ಪೂರಕವಾಗುವ ಹಿರಿಯರ ಸಹಾಯಹಸ್ತ ದೂರವಾಯಿತು. ಪತಿ-ಪತ್ನಿ ಇಬ್ಬರೂ ಸಮಾನ ವಿದ್ಯಾವಂತರಾಗಿ ದುಡಿಮೆಗೆ ಇಳಿದುದರಿಂದ ಅಂಗೀಕೃತ ಕೌಟುಂಬಿಕ ಮೌಲ್ಯಗಳು ಬದಲಾಗುತ್ತಾ ಅಹಂಗಳ ಘರ್‍ಷಣೆ ಹೆಚ್ಚಿತು. ಇವತ್ತು ಮಕ್ಕಳಿಂದ ದೂರವಾಗಿ ಒಂಟಿತನವನ್ನು ಅನುಭವಿಸುತ್ತಾ ಜೀವಿಸುವ ಹಿರಿಯರು ನೆಮ್ಮದಿಯಿಂದಿಲ್ಲ. ಹಿರಿಯರ ಸಹಾಯವಿಲ್ಲದೆ ಕೌಟುಂಬಿಕ ಒತ್ತಡಗಳನ್ನು ನಿರ್ವಹಿಸಲಾಗದೆ ಒದ್ದಾಡುವ ಮಕ್ಕಳು ನೆಮ್ಮದಿಯಿಂದಿಲ್ಲ. ಈ ಎಲ್ಲಾ ಒತ್ತಡಗಳಿಗೆ ಬಲಿಯಾಗುತ್ತಾ ಬೆಳೆಯುತ್ತಿರುವ ಮೊಮ್ಮಕ್ಕಳಿಗೆ ನೆಮ್ಮದಿಯ ಜೀವನವಿಲ್ಲ.

ಪತಿ-ಪತ್ನಿಯರಲ್ಲಿ ಹೊಂದಾಣಿಕೆ ಇಲ್ಲದಿರುವುದೇ ಇವತ್ತಿನ ಕೌಟುಂಬಿಕ ವಿಘಟಣೆಗಳಿಗೆ ಮುಖ್ಯ ಕಾರಣ. ಕೌಟುಂಬಿಕ ನೆಮ್ಮದಿಗೆ ಅಗತ್ಯವಾಗಿ ಬೇಕಾಗಿರುವ ಹೊಂದಿಕೊಂಡು ಬಾಳುವ ತಾಳ್ಮೆ, ವಿವೇಚನೆ ಎರಡೂ ಇವತ್ತು ಮಾಯವಾಗುತ್ತಿದೆ. ಏನಾದರೂ ಒಂದು ಚಿಕ್ಕ ಕಾರಣ ಸಿಕ್ಕಿದರೆ ಸಾಕು ತಾವು ಒಟ್ಟಿಗಿರಲು ಸಾಧ್ಯವೇ ಇಲ್ಲ ಎನ್ನುವ ನಿರ್‍ಧಾರಕ್ಕೆ ಪತಿ-ಪತ್ನಿಯರು ಬರುವುದು ಹೆಚ್ಚುತ್ತಿದೆ. ಹೆಣ್ಣು ಮಕ್ಕಳಿಗೆ ಆರ್ಥಿಕ ಸ್ವಾವಲಂಬನೆ ಇರುವುದು ದಿಢೀರ್ ನಿರ್ಧಾರಕ್ಕೆ ಕಾರಣವಾಗುತ್ತಿದೆ ಎನ್ನುವುದರಲ್ಲಿ ಉತ್ಪ್ರೇಕ್ಷೆ ಇಲ್ಲ. ತಂದೆ-ತಾಯಿ ದೂರವಾದಾಗ ಮಕ್ಕಳ ಮೇಲಾಗುವ ದುಷ್ಪರಿಣಾಮದ ಗೊಡವೆಯೂ ಅವರಿಗೆ ಇರುವುದಿಲ್ಲ ಎನ್ನುವುದು ಬಹಳ ನೋವು ಕೊಡುವ ಸಂಗತಿ. ತಂದೆಯಾಗಲೀ, ತಾಯಿಯಾಗಲೀ ಒಂಟಿಯಾಗಿ ಮಕ್ಕಳನ್ನು ಸಾಕುವುದು ಸುಲಭದ ಸಂಗತಿಯಲ್ಲ. ಇತ್ತೀಚೆಗೆ ಪೇಪರಿನಲ್ಲಿ ಒಂದು ಸಮೀಕ್ಷೆಯ ಬಗ್ಗೆ ಓದಿದ್ದೆ. ಅಲ್ಲಿ ಈಗ ತಾಯಿಗಿಂತ ತಂದೆಗೇ ಮಕ್ಕಳು ಬೇಕಾಗಿರೋದು. ವಿಚ್ಛೇದನ ಆದಾಗ ಮಕ್ಕಳು ತನಗೆ ಬೇಕೆಂದು ಕೇಳುವುದು ತಂದೆಯೇ ಎನ್ನುವ ವರದಿ ಓದಿದಾಗ ‘ತಾಯಿ’ ಎನ್ನುವ ಮಹತ್ವದ ನಂಬಿಕೆಯೇ ಕುಸಿಯುತ್ತಿದೆ, ತಾಯಿ ಎನ್ನುವ ಪದದ ಡೆಫಿನಿಶನ್ ಬದಲಾಗುತ್ತಿರುವ ಕಾಲಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ ಎಂದು ಅನಿಸುತ್ತದೆ.

ಒಡೆಯುತ್ತಿರುವ ಸಂಬಂಧಗಳು, ಕ್ಷುಲ್ಲಕ ಕಾರಣಗಳಿಗೆ ಬೇರೆ ಬೇರೆಯಾಗುತ್ತಿರುವ ಪತಿ-ಪತ್ನಿಯರು, ಹೀಗೆ ಒಡೆದು ಹೋದ ಸಂಸಾರಗಳಲ್ಲಿ ಅಪ್ಪ-ಅಮ್ಮನ ಪ್ರೀತಿಯಿಂದ ವಂಚಿತರಾಗಿ ಬೆಳೆಯುತ್ತಿರುವ ಮಕ್ಕಳು ಆರೋಗ್ಯಕರ ಸಮಾಜ ನಿರ್‍ಮಾಣಕ್ಕೆ ಎಷ್ಟು ಬದ್ಧರಾಗಬಹುದು? ಈ ರೀತಿಯ ಕೌಟುಂಬಿಕ ವಿಘಟನೆಗಳಿಂದ ಯಾರಿಗಾದರೂ ನೆಮ್ಮದಿ ಇದೆಯೇ? ವಿಪ್ಲವಕ್ಕೆ ಒಳಗಾದ ಮಕ್ಕಳಿಗೆ ಇದರಿಂದ ಸುಖವಿದೆಯೇ? ಅವರು ಸಮಾಜಕ್ಕೊಂದು ಸಮಸ್ಯೆಯಾಗುತ್ತಿರುವುದನ್ನು ಸುತ್ತಲೂ ಕಾಣುತ್ತೇವೆ. ಮಕ್ಕಳ ಜೀವನ ವಿಪ್ಲವಕ್ಕೆ ಸಾಕ್ಷಿಯಾಗುತ್ತಾ ಇರುವ ಹಿರಿಯರಿಗೆ ನೆಮ್ಮದಿಯ ವೃದ್ಧಾಪ್ಯ ಜೀವನವಿದೆಯೇ? ಕೌಟುಂಬಿಕ ಕಲಹಗಳು, ವಿಫಲಗೊಂಡ ಹೊಂದಾಣಿಕೆಗಳು, ಹೆಚ್ಚುತ್ತಿರುವ ಕೌಟುಂಬಿಕ ಕ್ರೌರ್‍ಯಗಳು, ಸಮಾಜವನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತವೆ ಎನ್ನುವುದನ್ನು ನೋಡುವ ಎದೆಗಾರಿಕೆ ಯಾವ ಹಿರಿಯರಲ್ಲೂ ಇಲ್ಲ. ಅದರಿಂದಾಗುವ ಒತ್ತಡಗಳು ಸಾಯುವ ಕಾಲಕ್ಕೂ ಅವರನ್ನು ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ಕೌಟುಂಬಿಕ ನೆಮ್ಮದಿ ಕೆಡುತ್ತಿರುವುದರಿಂದ ಹಿರಿಯ ಕಿರಿಯರೆಲ್ಲರನ್ನು ಕಾಡುತ್ತಿರುವ ಮಾನಸಿಕ ಒತ್ತಡಗಳು ಇವತ್ತಿನ ಬಹಳ ದೊಡ್ಡ ಸಮಸ್ಯೆಯಾಗುತ್ತಿದೆ.

ಹೆಣ್ಣು ಕುಟುಂಬದ ಕಣ್ಣು ಎನ್ನುತ್ತಾರೆ. ಕೌಟುಂಬಿಕ ನೆಮ್ಮದಿ ಉಳಿಯಬೇಕಾದರೆ ಗಂಡು ಹೆಣ್ಣು ಇಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎನ್ನುವುದು ಸತ್ಯವಾದರೂ ಕೌಟುಂಬಿಕ ನೆಮ್ಮದಿ ಉಳಿಯಲು ಮುಖ್ಯವಾಗಿ ಬೇಕಾಗಿರುವುದು ಹೆಣ್ಣಿನ ತಾಳ್ಮೆ ಮತ್ತು ವಿವೇಚನೆ. ಯಾವುದೇ ಕುಟುಂಬ ಉಳಿಯುವುದೂ ಅಳಿಯುವುದೂ ಹೆಣ್ಣಿನಿಂದ. ಹೆಣ್ಣಿಗೂ ಸ್ವಾತಂತ್ರವಿದೆ, ಸಮಾನತೆ ಇದೆ ಎನ್ನುವುದನ್ನು ಒಪ್ಪಿಕೊಳ್ಳುವುದು ಅವಶ್ಯವಾದರೂ ಆಕೆ ಸ್ವಾತಂತ್ರ್ಯವನ್ನು ಸಮಾನತೆಯನ್ನು ಸ್ವಲ್ಪ ವಿವೇಚನೆಯಿಂದ, ಕುಟುಂಬ ಉಳಿಯಬೇಕು, ಮಕ್ಕಳ ಮಾನಸಿಕ ಆರೋಗ್ಯ ಸರಿಯಾಗಿರಬೇಕು, ಸಾಮಾಜಿಕ ಸ್ವಾಸ್ಥ್ಯ ಉಳಿಯಬೇಕು ಎನ್ನುವ ಕಾಳಜಿಯನ್ನು ಇಟ್ಟುಕೊಂಡು ಉಪಯೋಗಿಸಿದರೆ ಕೌಟುಂಬಿಕ ನೆಮ್ಮದಿಯನ್ನು ಕಾದುಕೊಳ್ಳಬಹುದು. ಬದಲಾಗುತ್ತಿರುವ ಸಮಾಜದಲ್ಲಿ ಆಗುತ್ತಿರುವ ಎಲ್ಲ ಅನಾಹುತಗಳಿಗೂ ಪರಿಹಾರ ಸಿಗಬಹುದು. ಇದರಿಂದ ಬದಲಾಗುತ್ತಿರುವ ಸಮಾಜದಲ್ಲಿ ಆಗುತ್ತಿರುವ ಎಲ್ಲ ರೀತಿಯ
ಅನಾಹುತಗಳಿಗೂ ಪರಿಹಾರ ಸಿಗಬಹುದು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...