Home / ಕಥೆ / ಕಾದಂಬರಿ / ಮಲ್ಲಿ – ೪೮

ಮಲ್ಲಿ – ೪೮

ಬರೆದವರು: Thomas Hardy / Tess of the d’Urbervilles

ನಾಯಕನು ಮಲ್ಲಿಯನ್ನು ಒಂದು ಕ್ಷಣ ಬಿಟ್ಟಿರಲಾರ. ಅವನಿಗೆ ಈಗ ಲೋಕದಲ್ಲಿ ಯಾರೂ ಬೇಡ. ಮಲ್ಲಿಯೂ ಒಂದು ತೂಕ: ಲೋಕವೆಲ್ಲ ಇನ್ನೊಂದು ತೂಕ. ಊಟದಲ್ಲಿ ಮಲ್ಲಿಯ ಜೊತೆ: ಕುಳಿತಿದ್ದರೆ ಮಲ್ಲಿಯೊಡನೆ. ಓದಿದರೆ ಅವಳ ಮಗ್ಗುಲಲ್ಲಿ. ಬೆಳಗಿಂದ ಬೆಳಗಿನವರೆಗೂ ಎಲ್ಲೋ ಒಂದೆರಡು ಗಂಟೆ ಆಗಾಗ ಅವಳನ್ನು ಬಿಟ್ಟಿ ದ್ದರೆ ಅದೇ ಹೆಚ್ಚು.

ಮಲ್ಲಿ ಆ ಮಗುವನ್ನು ಒಂದು ಗಳಿಗೆ ಬಿಟ್ಟರುವುದಿಲ್ಲ; ರಾಣಿಯು ಯಾವಾಗಲಾದರೂ ಮಗುವಿನ ಕಡೆ ನೋಡಿದರೆ, “ತೆಂಗಿನ ಸೊಸಿ ಬೆಳೆಸಿದಂಗೆ ಬೆಳೆಸಿಕೊಡ್ತೀನಿ ಬುದ್ಧಿ” ಎನ್ನುತ್ತಾಳೆ. ತಾನು ಚಿಕ್ಕ ತಾಯಿಯ ಹಾಗೆ ಅವನ್ನ ನೋಡುತ್ತಿಲ್ಲ. ಅವನಿಗಾಗಿ ಗೊತ್ತಾಗಿರುವ ದಾದಿಯಂತೆ ಆ ಮಗುವಿಗೆ ಉಪಚಾರಮಾಡುತ್ತಾಳೆ. ರಾತ್ರಿಯಲ್ಲಿ ಅವನು ಎದ್ದರೆ, ರಾಣಿಗೆ ಎಚ್ಚರವಾಗುವುದಕ್ಕಿಂತ ಮುಂಚೆ ಅವಳಿಗೆ ಎಚ್ಚರವಾಗುತ್ತದೆ. ಆ ಮಗುವಿಗೆ ಸ್ನಾನ ಉಡುಪು ಊಟ, ನಿದ್ದೆ, ಎಲ್ಲದಕ್ಕೂ ಅವನ ಭಾಗ್ಯದೇವತೆಗಿಂತ. ಹೆಚ್ಚಾಗಿ ಗಮನ ಕೊಟ್ಟು ಕಾಪಾಡುತ್ತಿದ್ದಾಳೆ.

ಒಂದು ದಿನ ಆನಂದಮ್ಮನು ಬಂದು ಕುಳಿತಿದ್ದಾಳೆ, ಮಲ್ಲಿಯು ಮಗುವನ್ನು ಎತ್ತಿಕೊಂಡು ಬಂದಳು. ಆನಂದಮ್ಮನು ಕರೆದಳು: ಮಗು ಬರಲಿಲ್ಲ. ಮಲ್ಲಿಯು ನಗುನಗುತ್ತಾ “ನಮ್ಮ ಪುಟ್ಟ ಬುದ್ಧಿ ಶುದ್ಧ ಕಳ್ಳ, ಅಮ್ಮಾ ! ದೊಡ್ಡಮ್ಮನೋರು ಕರೆದರೂ ಹೋಗೋದಿಲ್ಲ.” ಎಂದು, ಮಗುವನ್ನು ಕೆಳಗೆ ಇಳಿಸಿ “ಪುಟ್ಟ ಬುದ್ದೀನ ನೋಡಿಕೊಳ್ಳಿ ಬುದ್ಧಿ, ನಾನು ಹೋಗುತ್ತೇನೆ” ಎಂದು ಹೊಗಿ ಮರದ ತೆರೆಯ ಮರೆ ಯಲ್ಲಿ ನಿಂತುಕೊಂಡಳು.

ಪುಟ್ಟಬುದ್ದಿಯು ಅತ್ತಕಡೆ ಇತ್ತಕಡೆ ನೋಡಿ ಮಲ್ಲಿಯು ಕಣ್ಣಿಗೆ ಬೀಳದಿರಲು ಅಳುವುದಕ್ಕೆ ಆರಂಭಿಸಿತು. ಅದನ್ನು ಕೇಳಿ ರಾಣಿಯು ಎಲ್ಲಿದ್ದಳೋ ಓಡಿ ಬಂದಳು. ಮರೆಯಲ್ಲಿದ್ದ ಮಲ್ಲಿಯನ್ನು ಕಾಣದೆ ತಾನೇ ಹೋಗಿ ಎತ್ತಿಕೊಳ್ಳುವುದಕ್ಕೆ ಕೈ ನೀಡಿದಳು. ಮಗುವು ಬರಲಿಲ್ಲ. “ನೋಡಿದಿರಾ ತಾಯಿ, ಈ ಮಲ್ಲೀ ಮಾಟಾನಾ! ನಾನು ಹೆತ್ತವಳು. ನಮ್ಮ ಪುಟ್ಟಬುದ್ದೀಗೆ ನಾನು ಬೇಡ. ಅವಳು ಬೇಕು. ಅವಳು ಪಾಪ! ಎಲ್ಲಿ ಹೋಗಿದ್ದಾಳೋ! ಅವಳು ಅತ್ತ ಇತ್ತ ಹೋಗಕೂಡದು. ಈ ಕಳ್ಳನ ಮುಂದೆಯೇ” ಕೂತಿರಬೇಕೇನೋ? ಎಂದು ಸಣ್ಣಗೆ ಮೂತಿ ಹಾಗೆಂದಳು.

ಮಗು ಇನ್ನೂ ಬಲವಾಗಿ ಅತ್ತಿತು.

ಕೂಡಲೇ ಮರೆಯಿಂದ ಮಲ್ಲಿಯು ಓಡಿಬಂದಳು: ಎತ್ತಿ ಕೊಂಡಳು. ಮಗುವು ಸುಮ್ಮನಾಯಿತು.

ರಾಣಿಯು “ಓಹೋ! ತಾಯಿ ಮಕ್ಕಳ ಕಣ್ಣುಮುಚ್ಚಾಲೆಯೋ ಇದು? ನಾನು ಅರೀದೇ ಮಾಡುತ್ತಿದ್ದ ಕೆಲಸ ಬಿಟ್ಟು ಬಂದೆ” ಎಂದು ಹೊರಟಳು.

ಆನಂದಮ್ಮನು ನಕ್ಕಳು.

ಮಲ್ಲಿಯು “ಯಾಕೆ ಗೊತ್ತಾ ಅಮ್ಮ! ನನ್ನ ಹೊಟ್ಟೇಲಿ ಹುಟ್ಟಿ ತ್ತಲ್ಲಾ ಅದೇ ನಮ್ಮ ದೊಡ ಬುದ್ಧಿಯೋರ ಹೊಟ್ಟೇಲಿ ಗಂಡಾಗಿ ಹುಟ್ಟಿದೆ. ಅದಕ್ಕೇ ನನ್ನ ಮೇಲೆ ಇಷ್ಟು ಅಭಿಮಾನ ಲೋ ಪುಟ್ಟ ಬುದ್ಧೀ ನಿಂಗೆ ಬುದ್ಧಿಯಿಲ್ಲ. ಇನ್ನೊಂದು ವರ್ಷ, ನಾನು ನಿಮ್ಮನ್ನೆಲ್ಲ ಬಿಟ್ಟು ಓಡಿ ಹೋಗೋಳು ಕಣಪ್ಪ. ಅತ್ತತಿರುಗಿಕೋ” ಎಂದು ಅದನ್ನು ಮುದ್ದಿಸಿದಳು.

ರಾಣಿಯು “ನೋಡಿ ತಾಯಿ, ನೋಡಿ. ಆ ಮಗೂನ ಕೈಲೂ ಇದೇ ಮಾತಾ? ಛೇ, ಬುಡ್ತು ಅನ್ನು” ಎಂದು ಹುಸಿಕೋಪದಿಂದ ಗದರಿಕೊಂಡಳು.

“ಸದಾಶಿವನಿಗೆ ಅದೇ ಜ್ಞಾನ ಬುದ್ದಿ. ನದಿ ಕಟ್ಟೆ ದಾಟದಿದ್ದರೆ ಸಮುದ್ರ ಸೇರೀತಾ? ಅದಕ್ಕೆ ತನ್ಕ ಅಭಿಮಾನದ ಕಟ್ಟೆದಾಟಿ ನಾನು ಹೊರಡುತೀನಿ” ಎಂದು ಮಲ್ಲಿಯು ಅನ್ಯಮನಸ್ಕಳಾಗಿ ನುಡಿದಳು.

ಆನಂದಮ್ಮನಿಗೆ ಬಾಯಿ ಕೊನೆಯವರೆಗೂ ಬಂತು: “ಮಲ್ಲೀ ನೀನು ನನ್ನ ಮಗಳು. ಇದುವರೆಗೆ ನಾನು ನಿನಗೆ ಹೇಳಿರಲಿಲ್ಲ. ನಾನು ನಿನ್ನನ್ನು ಬೇಡವೆಂದು ಒತ್ತರಿಸಿದೆ. ದೈವ ಮತ್ತೆ ನಿನ್ನನ್ನು ಕೊಟ್ಟಿದೆ. ನನಗೆ ಕೊನೆಗಾಲ, ಕೊನೆಗಾಲದಲ್ಲಿ ನನ್ನ ಬಾಯಿಗೆ ಅಷ್ಟು ನೀರು ಬಿಟ್ಟು ಹೋಗುವೆಯಂತೆ. ಇರು” ಎನ್ನಬೇಕು ಎನ್ನಿಸಿತು.

ಎದೆ ಡವದಡ ಎಂದಿತು. ಕಣ್ಣಿನಲ್ಲಿ ನೀರು ತುಂಬಿತು: ಅವಳ ಬಾಯಲ್ಲಿ ಆ ಮಾತು ಬರಲಿಲ್ಲ. “ಅವಳು ನುಂಗಿದ ಬಾಯಿನೀರಿ ನೊಡನೆ ಆ ಮಾತು ಹೊಟ್ಟೆಯೊಳಕ್ಕೆ ಹೊರಟು ಹೋಯಿತು.

ಅದೆಲ್ಲ ಶಂಭುರಾಮಯ್ಯನಿಗೂ ತಿಳಿಯಿತು. ಅವನೂ ನಗು ನಗುತ್ತ ತನಗೆ ಬೇಕಾದುದನ್ನು ತಪ್ಪದೆ, ಎಳ್ಳಷ್ಟೂ ಲೋಪವಿಲ್ಲದೆ ಸಾಧಿಸುವ ಮಲ್ಲಿಯ ವಿಚಕ್ಷಣತೆಯನ್ನು ಬಲ್ಲನಾಗಿ ಅವನು ಏನೂ ಹೇಳಲಿಲ್ಲ.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...