Home / ಕವನ / ಕವಿತೆ / ಇತಿಹಾಸದ ದಾರಿ

ಇತಿಹಾಸದ ದಾರಿ

ಇತಿಹಾಸದ ದಾರಿ ನೇರವಾಗಿತ್ತೆ ಎಂದಾದರೂ
ಎಡವಿಕೊಂಡೇ ಬಂದಿತೆ ಅದು ಇಲ್ಲೀವರೆಗೆ
ಇಲ್ಲಿಂದ ಇನ್ನೆಲ್ಲಿಗೆ ಕೋ ವಾಡಿಸ್ ಎನ್ನುತ್ತ ಪ್ರತಿಯೊಂದು ಬಾರಿ?
ದಾರಿ ಇದ್ದಿದ್ದರೆ ತಾನೆ ಅದಕ್ಕೆ ದಾರಿ ಕೇಳುವುದಕ್ಕು? ದಾರಿಯಿಲ್ಲದಲ್ಲಿ
ಸಾಗುವುದು ಇತಿಹಾಸ
ನನಗಿಷ್ಟೆ ಗೊತ್ತು

ಸಹಸ್ರಾರು ಗಾಯಗಳು ಗಾಯದ ಮೇಲೆ ಬರೆಗಳು
ಕೆಲವು ಮಾಯ್ದಿವೆ ಕಾಲಾಂತರದಲ್ಲಿ ಕಾಣಿಸದಾಗಿವೆ
ಕೆಲವು ವ್ರಣಗಳಿನ್ನೂ ಸೋರುತ್ತಿವೆ

ಇತಿಹಾಸದ ಬೃಹತ್ತು ತಾಳುವಂಥದು ನಮಗೆ
ಗೊತ್ತಾಗುವುದಿಲ್ಲ
ಇತಿಹಾಸದ ಸುಸ್ತೆನ್ನುವುದಿದೆ ಹೆಬ್ಬಂಡೆಗಳ ಮೇಲೆ ಕುಳಿತು
ದಣಿವಾರಿಸಿಕೊಳ್ಳುವುದು ದೈತ್ಯ ಇಗುವಾನ ಕುಳಿತ ಹಾಗೆ
ಸತ್ತಂತೆ ಸತ್ತಿತೆಂದರೆ ತಲೆಯಾಡಿಸುವುದು
ಅದರ ಹಿನ್ನೋಟ ಅಂಥ ಕಾಲದಲಿ

ಭೀಕರ ಚಂಡಮಾರುತಕ್ಕೆ ಅಪ್ಪಳಿಸುವ ಮರ
ಅಲ್ಲಲ್ಲಿ ಗೂಡುಕಟ್ಟಿರುವ ಇರುವೆಗಳು
ಕೆಲವು ಬಿದ್ದು ಸಾಯುತ್ತವೆ ನೆಲದಲ್ಲಿ
ಇನ್ನುಳಿದವು ಹಾಗೇ ನೋಡುತ್ತವೆ ಬೆಪ್ಪಾಗಿ

ಎಲ್ಲಿ ಅಡಗಿರುತ್ತದೆ ಇತಿಹಾಸದ ಕ್ರತುಶಕ್ತಿ
ಎಂದು ಕೇಳುತ್ತೇನೆ
ರಾಜನಲ್ಲಿ ಅಥವ ವಿದೂಷಕನಲ್ಲಿ?

ಆಟದ ಗೆಲುವು ಎಲ್ಲಿರುತ್ತದೆ ಇದೊಂದು
ಆಟವೆ ಆಗಿದ್ದಲ್ಲಿ
ಆಡಿದವನ ಕೈಯಲ್ಲಿ ಅಥವ ಕಾಯಿಯ ವಕ್ರತೆಯಲ್ಲಿ?

ನದಿ ಮತ್ತು ಸೇತು ಗಿರಿ ಮತ್ತು ಸುರಂಗ
ಹಡಗವೂ ತುಫಾನವೂ ಯಾವುದು
ಯಾವುದು?

ಇಷ್ಟು ದೂರಕ್ಕೆ ವಕ್ರತೆಯೆನ್ನುವುದೇ ಇಲ್ಲ
ಎಲ್ಲ ವಕ್ರತೆಗಳೂ ಸರಳ ರೇಖೆಗಳೆ ಯಾಕೆಂದರೆ ನಾವು ಅನಂತತೆಯ
ಅಂಚಿನಲ್ಲಿದ್ದೇವೆ ಇಣುಕುತ್ತ
ಚಂದ್ರನ ಆಳಗಳೂ ದೃಷ್ಟಿ ಬೊಟ್ಟುಗಳೆ

ಸರಿ ತಪ್ಪು ನ್ಯಾಯಾನ್ಯಾಯಗಳು ಮೆನೆಖಿಯನ್ ವಿಂಗಡನೆ
ಇಂದು ಕಾರಣ ನೀಡಿದಷ್ಟೂ ದ್ವಂದ್ವಗಳು ನಾಶ
ಇತಿಹಾಸವೊಂದು ಕಂಟಿನ್ಯೂವಂ
ಅಥವ ತರಂಗಾಂತರಂಗ?

ಕತ್ತಲಿಲ್ಲದ ಬೆಳಕಿಲ್ಲದ ಮಬ್ಬಿನ ಪ್ರದೇಶ
ಯಾರು ಸಂಜ್ಞಾದೇವಿ ಯಾರು ಛಾಯಾದೇವಿ
ಪುರಾಣಗಳ ನಾಶಪಡಿಸಿದ ಇತಿಹಾಸ ಬೇರ್ಪಡಿಸುವಂತಿಲ್ಲ
ಕಾಯದಿಂದ ಛಾಯೆಯ

ಅದು ಹಿಂದೆ ನೋಡಿದಾಗ ತನ್ನ ಕಣ್ಣನ್ನೆ ಕಂಡ ಹಾಗೆ
ಮುಂದೆ ನೋಡಿದಾಗ ಅದಕ್ಕೆ ಕಣ್ಣುಗಳೆ ಇಲ್ಲ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...