Home / ಕವನ / ಕವಿತೆ / ಇತಿಹಾಸದ ದಾರಿ

ಇತಿಹಾಸದ ದಾರಿ

ಇತಿಹಾಸದ ದಾರಿ ನೇರವಾಗಿತ್ತೆ ಎಂದಾದರೂ
ಎಡವಿಕೊಂಡೇ ಬಂದಿತೆ ಅದು ಇಲ್ಲೀವರೆಗೆ
ಇಲ್ಲಿಂದ ಇನ್ನೆಲ್ಲಿಗೆ ಕೋ ವಾಡಿಸ್ ಎನ್ನುತ್ತ ಪ್ರತಿಯೊಂದು ಬಾರಿ?
ದಾರಿ ಇದ್ದಿದ್ದರೆ ತಾನೆ ಅದಕ್ಕೆ ದಾರಿ ಕೇಳುವುದಕ್ಕು? ದಾರಿಯಿಲ್ಲದಲ್ಲಿ
ಸಾಗುವುದು ಇತಿಹಾಸ
ನನಗಿಷ್ಟೆ ಗೊತ್ತು

ಸಹಸ್ರಾರು ಗಾಯಗಳು ಗಾಯದ ಮೇಲೆ ಬರೆಗಳು
ಕೆಲವು ಮಾಯ್ದಿವೆ ಕಾಲಾಂತರದಲ್ಲಿ ಕಾಣಿಸದಾಗಿವೆ
ಕೆಲವು ವ್ರಣಗಳಿನ್ನೂ ಸೋರುತ್ತಿವೆ

ಇತಿಹಾಸದ ಬೃಹತ್ತು ತಾಳುವಂಥದು ನಮಗೆ
ಗೊತ್ತಾಗುವುದಿಲ್ಲ
ಇತಿಹಾಸದ ಸುಸ್ತೆನ್ನುವುದಿದೆ ಹೆಬ್ಬಂಡೆಗಳ ಮೇಲೆ ಕುಳಿತು
ದಣಿವಾರಿಸಿಕೊಳ್ಳುವುದು ದೈತ್ಯ ಇಗುವಾನ ಕುಳಿತ ಹಾಗೆ
ಸತ್ತಂತೆ ಸತ್ತಿತೆಂದರೆ ತಲೆಯಾಡಿಸುವುದು
ಅದರ ಹಿನ್ನೋಟ ಅಂಥ ಕಾಲದಲಿ

ಭೀಕರ ಚಂಡಮಾರುತಕ್ಕೆ ಅಪ್ಪಳಿಸುವ ಮರ
ಅಲ್ಲಲ್ಲಿ ಗೂಡುಕಟ್ಟಿರುವ ಇರುವೆಗಳು
ಕೆಲವು ಬಿದ್ದು ಸಾಯುತ್ತವೆ ನೆಲದಲ್ಲಿ
ಇನ್ನುಳಿದವು ಹಾಗೇ ನೋಡುತ್ತವೆ ಬೆಪ್ಪಾಗಿ

ಎಲ್ಲಿ ಅಡಗಿರುತ್ತದೆ ಇತಿಹಾಸದ ಕ್ರತುಶಕ್ತಿ
ಎಂದು ಕೇಳುತ್ತೇನೆ
ರಾಜನಲ್ಲಿ ಅಥವ ವಿದೂಷಕನಲ್ಲಿ?

ಆಟದ ಗೆಲುವು ಎಲ್ಲಿರುತ್ತದೆ ಇದೊಂದು
ಆಟವೆ ಆಗಿದ್ದಲ್ಲಿ
ಆಡಿದವನ ಕೈಯಲ್ಲಿ ಅಥವ ಕಾಯಿಯ ವಕ್ರತೆಯಲ್ಲಿ?

ನದಿ ಮತ್ತು ಸೇತು ಗಿರಿ ಮತ್ತು ಸುರಂಗ
ಹಡಗವೂ ತುಫಾನವೂ ಯಾವುದು
ಯಾವುದು?

ಇಷ್ಟು ದೂರಕ್ಕೆ ವಕ್ರತೆಯೆನ್ನುವುದೇ ಇಲ್ಲ
ಎಲ್ಲ ವಕ್ರತೆಗಳೂ ಸರಳ ರೇಖೆಗಳೆ ಯಾಕೆಂದರೆ ನಾವು ಅನಂತತೆಯ
ಅಂಚಿನಲ್ಲಿದ್ದೇವೆ ಇಣುಕುತ್ತ
ಚಂದ್ರನ ಆಳಗಳೂ ದೃಷ್ಟಿ ಬೊಟ್ಟುಗಳೆ

ಸರಿ ತಪ್ಪು ನ್ಯಾಯಾನ್ಯಾಯಗಳು ಮೆನೆಖಿಯನ್ ವಿಂಗಡನೆ
ಇಂದು ಕಾರಣ ನೀಡಿದಷ್ಟೂ ದ್ವಂದ್ವಗಳು ನಾಶ
ಇತಿಹಾಸವೊಂದು ಕಂಟಿನ್ಯೂವಂ
ಅಥವ ತರಂಗಾಂತರಂಗ?

ಕತ್ತಲಿಲ್ಲದ ಬೆಳಕಿಲ್ಲದ ಮಬ್ಬಿನ ಪ್ರದೇಶ
ಯಾರು ಸಂಜ್ಞಾದೇವಿ ಯಾರು ಛಾಯಾದೇವಿ
ಪುರಾಣಗಳ ನಾಶಪಡಿಸಿದ ಇತಿಹಾಸ ಬೇರ್ಪಡಿಸುವಂತಿಲ್ಲ
ಕಾಯದಿಂದ ಛಾಯೆಯ

ಅದು ಹಿಂದೆ ನೋಡಿದಾಗ ತನ್ನ ಕಣ್ಣನ್ನೆ ಕಂಡ ಹಾಗೆ
ಮುಂದೆ ನೋಡಿದಾಗ ಅದಕ್ಕೆ ಕಣ್ಣುಗಳೆ ಇಲ್ಲ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...