Home / ಕವನ / ಕವಿತೆ / ಅವರು

ಅವರು

ಇಲ್ಲಿ ಅವನು ಅಲ್ಲಿ ಅವಳು
ಹೊಸಿಲ ಕುದುರೆಯೇರಿ ಹಸುಳೆ ಆಡುತಿರುವನು.
ಅದರ ಲಲ್ಲೆಯಲ್ಲಿ ನಲವಿ-
ನೆಲ್ಲೆಯನ್ನು ಕಾಣುತವನು ಲಲ್ಲೆಗರೆವನು.

ಬಿಸಿಲ ಹೊಳಪನೊಳಗೆ ಚೆಲ್ಲಿ
ನೋಟದಿಂದ ಆಸೆಸರಳನವಳಿಗೆಸೆಯುತ
ನಡೆವನೊಬ್ಬ ಗುಡಿಯ ಕಡೆಗೆ,
ಮನದ ಗೂಡ, ನೆನಪುದುಂಬಿಯೇಳೆ, ಕೆದಕುತ.

ಎಲೆಗೆ ಕಡ್ಡಿ ಹಚ್ಚಿ ಮುರಿವ
ತಾಳಕೊಂದಿ ನಡೆವುದವಳ ಭವದ ಭಾವನೆ
ಇವನೊಳಿಲ್ಲ ಅವನೊಳಿಲ್ಲ
ಎಳೆಯನಲ್ಲಿ ಮಾತ್ರ ಅರ್ಧ ಅವಳ ಕಾಮನೆ.

ಹತ್ತು ವರ್ಷ ಒಟ್ಟಿಗಿದ್ದೂ
ಮನವ ಮನವ ಒಲುಮೆಕಾವು ಬೆಸೆಯಲಿಲ್ಲವು.
ನಗೆಯ ಜಾಣ ಸಿಡುಕ ಕಾಣ
ಆಕೆಯೆಂದರವಗೆ ಪ್ರಾಣ-ಅವಳೆ ಎಲ್ಲವು.

ಮಂದ್ರದಲ್ಲಿ ಇವನ ಮಿಡಿತ
ತಾರದಲ್ಲಿ ಅವಳ ನುಡಿತ-ಶ್ರುತಿಯೆ ಸೇರದು
ಅವಳಾಸೆಯನೀತನೆಟುಕ
ಆಕೆಗಿವನೊಳಾಯ್ತು, ಮರುಕ-ಭಾವವೇರದು.

ಹಸುಳೆ ಅವನದಲ್ಲ-ಎಲ್ಲ
ಜನಕು ಅವರ ಕನಸ ತೋರ್ವ ಗುಡಿಯ ಗುಟ್ಟಿದು.
ಪ್ರಕೃತಿಯ ಹಿಮ್ಮೇಳವಾಗಿ
ಕಾಮನಂದು ಬಾಜಿಸಿದ್ದ ಹಾಡ ಮಟ್ಟಿದು.

ಒಲವನರಿಯದಾಸೆಪುರುಕ
ಇದರ ತಂದೆ; ಕೆಂಡಕಣ್ಣಿನಾಡುದಾಡಿಯ
ಋಷಿಜನಂಗಳಿದರ ಹಿಂದೆ
ತೋರಿ ಮಿಡಿವರಿವಳ ಮನದ ಧರ್ಮನಾಡಿಯ.

ಮರುಳು ಗಂಡ ನೆರೆಯ ಹೊರೆಯ
ಚುಚ್ಚು ಮಾತನರಿಯಲಾರ-ಪ್ರೇಮಬಧಿರನು;
ನೇಹದಿಂದ ಅವಳ ಪೊರೆದು
ಉತ್ಸವದೊಳೆ ಭವಕೆ ತಂದನಾಸೆಕದಿರನು.

ಅಜ್ಞನಲ್ಲ ಪ್ರಾಜ್ಞನಲ್ಲ
ಅನಸೂಯನು ಸಹನಶೀಲ ಸ್ನೇಹಪೂ‌ರ್ಣನು;
ಉನ್ನತಮತಿ ಸತ್ಯಕಾಮೆ
ಆದೊಡಸತಿ-ಎಂತು ಬಾಳ್ವಳೆರಡು ಬಾಳನು?

ಒಮ್ಮೆ ನಲಿವಳೊಮ್ಮೆ ಮುನಿವ-
ಳೊಮ್ಮೆ ಅಂಜುತೆದೆಗೆ ಹಸುಳೆಯವಿಚಿಕೊಳುವಳು.
ನಗಲು ನಗುವಳತ್ತು ಕಾಡೆ
ವಿಟನ ಬಗೆಯ ಕಂಡು ಹೇಸುವಂತೆ ಹೊಡೆವಳು.

ಎಳೆಯಗೊಲಿಯೆ ತನಗೆ ಒಲಿವ-
ಳೆನುತ, ಮುಳಿಯೆ ತನಗೆ ಮುಳಿವಳೆನ್ನುತೀತನು
ಹಸುಳೆ ನೋಯೆ ತನಗೆ ನೊಂದ-
ನೆಂದು ನೊಂದು ಮುದ್ದಿನಿಂದ ಮುದ್ದುಗೈವನು.

ನೇಹವೊಂದನರಿತ ಮುಗ್ಧ
ಸಲಿಗೆ ತೋರದೊಲಿಯಬಲ್ಲ ಸರಳನೀ ಪತಿ.
ತನ್ನರಲ್ಲ- ತಾನೆ ಇವರಿ-
ಗೆಂಬ ರೀತಿ ಪ್ರೀತಿಯಿಡಲು ಬಲ್ಲನೀ ಪತಿ.

ಇಂಥ ಶುದ್ಧ ಸತ್ತ್ವನಿಂದ
ಆಕೆಗಾಯ್ತು ಅವಳೆ ನಾಚುವಂಥ ಬಾಳುವೆ.
ಬಾಳ ದಡವ ಮೀರಿ ಹರಿದ
ಕಾಮದೆಡರ ದಾಟಲಾದನಿವನೆ ಸೇತುವೆ.

ಕಾಮಿಯ ಕೆಡುನೋಟ ಸೋಕಿ
ಮನ ಮೈಲಿಗೆಯಾದ ಪರಿಯೊಳಾಕೆ ಈ ದಿನ
ಶುದ್ಧಿ ಗೆಳಸಿ ದಿಟ್ಟಿಸುವಳು
ಸುತನ ಜತೆಗೆ ಲಲ್ಲೆಯಾಡುತಿರುವ ಗಂಡನ.

ಪೊಲ್ಲಾಸೆಯ ನೂರು ಬಲಿಯ
ನೆನೆದು ನೋಳ್ಪಳಿವನ-ತಣ್ಣನೊಲುಮೆಯವನನು,
ತನ್ನ ವಿಷವನೆಲ್ಲ ಕುಡಿದ
ಇಂದುಧರನೆ ಈತನೆಂಬ ಬೆರಗೊಳಿವನನು.

ಅನ್ಯಳಿಂದು ತನ್ನಳಾದ-
ಳೇನೊ ಎನುವ ತೆರದೊಳಾಕೆಯಾರ್ದ್ರ ದೃಷ್ಟಿಗೆ
ಮರುದಿಟ್ಟಿಯನಿಡುವನೀತ
ಹಸುಳೆ ಎಸೆವ ತೊದಲುನುಡಿಯ ಪುಷ್ಪವೃಷ್ಟಿಗೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...