Home / ಕವನ / ಕವಿತೆ / ಅವರು

ಅವರು

ಇಲ್ಲಿ ಅವನು ಅಲ್ಲಿ ಅವಳು
ಹೊಸಿಲ ಕುದುರೆಯೇರಿ ಹಸುಳೆ ಆಡುತಿರುವನು.
ಅದರ ಲಲ್ಲೆಯಲ್ಲಿ ನಲವಿ-
ನೆಲ್ಲೆಯನ್ನು ಕಾಣುತವನು ಲಲ್ಲೆಗರೆವನು.

ಬಿಸಿಲ ಹೊಳಪನೊಳಗೆ ಚೆಲ್ಲಿ
ನೋಟದಿಂದ ಆಸೆಸರಳನವಳಿಗೆಸೆಯುತ
ನಡೆವನೊಬ್ಬ ಗುಡಿಯ ಕಡೆಗೆ,
ಮನದ ಗೂಡ, ನೆನಪುದುಂಬಿಯೇಳೆ, ಕೆದಕುತ.

ಎಲೆಗೆ ಕಡ್ಡಿ ಹಚ್ಚಿ ಮುರಿವ
ತಾಳಕೊಂದಿ ನಡೆವುದವಳ ಭವದ ಭಾವನೆ
ಇವನೊಳಿಲ್ಲ ಅವನೊಳಿಲ್ಲ
ಎಳೆಯನಲ್ಲಿ ಮಾತ್ರ ಅರ್ಧ ಅವಳ ಕಾಮನೆ.

ಹತ್ತು ವರ್ಷ ಒಟ್ಟಿಗಿದ್ದೂ
ಮನವ ಮನವ ಒಲುಮೆಕಾವು ಬೆಸೆಯಲಿಲ್ಲವು.
ನಗೆಯ ಜಾಣ ಸಿಡುಕ ಕಾಣ
ಆಕೆಯೆಂದರವಗೆ ಪ್ರಾಣ-ಅವಳೆ ಎಲ್ಲವು.

ಮಂದ್ರದಲ್ಲಿ ಇವನ ಮಿಡಿತ
ತಾರದಲ್ಲಿ ಅವಳ ನುಡಿತ-ಶ್ರುತಿಯೆ ಸೇರದು
ಅವಳಾಸೆಯನೀತನೆಟುಕ
ಆಕೆಗಿವನೊಳಾಯ್ತು, ಮರುಕ-ಭಾವವೇರದು.

ಹಸುಳೆ ಅವನದಲ್ಲ-ಎಲ್ಲ
ಜನಕು ಅವರ ಕನಸ ತೋರ್ವ ಗುಡಿಯ ಗುಟ್ಟಿದು.
ಪ್ರಕೃತಿಯ ಹಿಮ್ಮೇಳವಾಗಿ
ಕಾಮನಂದು ಬಾಜಿಸಿದ್ದ ಹಾಡ ಮಟ್ಟಿದು.

ಒಲವನರಿಯದಾಸೆಪುರುಕ
ಇದರ ತಂದೆ; ಕೆಂಡಕಣ್ಣಿನಾಡುದಾಡಿಯ
ಋಷಿಜನಂಗಳಿದರ ಹಿಂದೆ
ತೋರಿ ಮಿಡಿವರಿವಳ ಮನದ ಧರ್ಮನಾಡಿಯ.

ಮರುಳು ಗಂಡ ನೆರೆಯ ಹೊರೆಯ
ಚುಚ್ಚು ಮಾತನರಿಯಲಾರ-ಪ್ರೇಮಬಧಿರನು;
ನೇಹದಿಂದ ಅವಳ ಪೊರೆದು
ಉತ್ಸವದೊಳೆ ಭವಕೆ ತಂದನಾಸೆಕದಿರನು.

ಅಜ್ಞನಲ್ಲ ಪ್ರಾಜ್ಞನಲ್ಲ
ಅನಸೂಯನು ಸಹನಶೀಲ ಸ್ನೇಹಪೂ‌ರ್ಣನು;
ಉನ್ನತಮತಿ ಸತ್ಯಕಾಮೆ
ಆದೊಡಸತಿ-ಎಂತು ಬಾಳ್ವಳೆರಡು ಬಾಳನು?

ಒಮ್ಮೆ ನಲಿವಳೊಮ್ಮೆ ಮುನಿವ-
ಳೊಮ್ಮೆ ಅಂಜುತೆದೆಗೆ ಹಸುಳೆಯವಿಚಿಕೊಳುವಳು.
ನಗಲು ನಗುವಳತ್ತು ಕಾಡೆ
ವಿಟನ ಬಗೆಯ ಕಂಡು ಹೇಸುವಂತೆ ಹೊಡೆವಳು.

ಎಳೆಯಗೊಲಿಯೆ ತನಗೆ ಒಲಿವ-
ಳೆನುತ, ಮುಳಿಯೆ ತನಗೆ ಮುಳಿವಳೆನ್ನುತೀತನು
ಹಸುಳೆ ನೋಯೆ ತನಗೆ ನೊಂದ-
ನೆಂದು ನೊಂದು ಮುದ್ದಿನಿಂದ ಮುದ್ದುಗೈವನು.

ನೇಹವೊಂದನರಿತ ಮುಗ್ಧ
ಸಲಿಗೆ ತೋರದೊಲಿಯಬಲ್ಲ ಸರಳನೀ ಪತಿ.
ತನ್ನರಲ್ಲ- ತಾನೆ ಇವರಿ-
ಗೆಂಬ ರೀತಿ ಪ್ರೀತಿಯಿಡಲು ಬಲ್ಲನೀ ಪತಿ.

ಇಂಥ ಶುದ್ಧ ಸತ್ತ್ವನಿಂದ
ಆಕೆಗಾಯ್ತು ಅವಳೆ ನಾಚುವಂಥ ಬಾಳುವೆ.
ಬಾಳ ದಡವ ಮೀರಿ ಹರಿದ
ಕಾಮದೆಡರ ದಾಟಲಾದನಿವನೆ ಸೇತುವೆ.

ಕಾಮಿಯ ಕೆಡುನೋಟ ಸೋಕಿ
ಮನ ಮೈಲಿಗೆಯಾದ ಪರಿಯೊಳಾಕೆ ಈ ದಿನ
ಶುದ್ಧಿ ಗೆಳಸಿ ದಿಟ್ಟಿಸುವಳು
ಸುತನ ಜತೆಗೆ ಲಲ್ಲೆಯಾಡುತಿರುವ ಗಂಡನ.

ಪೊಲ್ಲಾಸೆಯ ನೂರು ಬಲಿಯ
ನೆನೆದು ನೋಳ್ಪಳಿವನ-ತಣ್ಣನೊಲುಮೆಯವನನು,
ತನ್ನ ವಿಷವನೆಲ್ಲ ಕುಡಿದ
ಇಂದುಧರನೆ ಈತನೆಂಬ ಬೆರಗೊಳಿವನನು.

ಅನ್ಯಳಿಂದು ತನ್ನಳಾದ-
ಳೇನೊ ಎನುವ ತೆರದೊಳಾಕೆಯಾರ್ದ್ರ ದೃಷ್ಟಿಗೆ
ಮರುದಿಟ್ಟಿಯನಿಡುವನೀತ
ಹಸುಳೆ ಎಸೆವ ತೊದಲುನುಡಿಯ ಪುಷ್ಪವೃಷ್ಟಿಗೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...