Home / ಕವನ / ಕವಿತೆ / ಪಾಲುಮಾರಿಕೆ

ಪಾಲುಮಾರಿಕೆ

ಯಾವಳೊಬ್ಬ ಹಾಲುಗಿತ್ತಿ
ಹಾಲ ಕೊಡವ ತಲೆಯೊಳೆತ್ತಿ
ಹೊಳೆಯಾಚೆಗೆ ಕಡೆಯಲೊತ್ತಿ
ಕಡಕೆ ಬಂದಳು ೪

ತಡವಿನಿಸಿರೆ ಕಡವ ತೆರೆಯೆ,
ಕೊಡವನಿಳಿಸಿ ನೀರನೆರೆಯೆ,
ಹಾಲಿನರಕೆ ನೆರೆದು ನೊರೆಯೆ
ತುಂಬಿತಾ ಕೊಡಂ ೮

ಅವಸರದಿಂ ದೋಣಿ ಹತ್ತಿ
ಕುಳಿತಳಾಕೆ ೧ಬಾಣಿಗೊತ್ತಿ;
ತಿರುಗಲಂಬಿ ಹಗಲು ಮುತ್ತಿ
ತಾಕೆಯ ಮೊಗದಿ. ೧೨

ಮುಂಬಿಸಿಲಲಿ ಬೆಮರು ತುರುಗೆ,
ಸೂಸಿತು ಕಿರುನಗೆಯ ನಿರಿಗೆ-
ಜಾಲಾಕ್ಷದಿ ನುಸುಳಿ ಹೊರಗೆ
ಸುಳಿವ ಗಾಳಿಯೊ? ೧೬

ಅನಿಬರ ಗಂಡಸರ ಮುಂತು
ಮೊಗವ ತೊಳೆಯದಿರುವಳೆಂತು?
ಸೆರಗ ಸರಿಸಿ ನಿರಿಯೊಳಾಂತು
ತೊರೆಗೆ ಬಗ್ಗಲು, ೨೦

ಸಡಲಿದ ತಿರುಗಣೆಯ ತಿಳಿಯ
ದವಳ ಬಲದ ಕಿವಿಯ ಗಿಳಿಯ
ವಾಲೆ ಜಗುಳುವೊಡನೆ ಹೊಳೆಯ
ಗುಳುಗುಳೊರೆದುದು. ೨೪

ಕಿವಿಯ ಮುಟ್ಟಲೋಲೆಯಿಲ್ಲ!
ಕಿವಿಯೆ ಕುಸಿದು ಕೆಡೆದುದಲ್ಲ!
ಕಣ್ಣಿಗುಕ್ಕುವೆದೆಯ ಗುಲ್ಲ
ನಿಂತು ಹುಯ್ದಳು- ೨೮

‘ಇದ್ದುದೆಲ್ಲ ಪೋದುದಲ್ಲ!
ಮನದ ನೆಲುಹು ಹರಿದುದಲ್ಲ!
ದೇವರೆ, ಕೆಯ್ಬಿಟ್ಟೆಯಲ್ಲ
ನಟ್ಟನೀರಲಿ! ೩೨

‘ಪೋದುದೆ ಕಟ ಕಣ್ಣಮುಂದೆ?
ನೀರೆ ನನ್ನನದ್ದಿ ಕೊಂದೆ!
ಗಳಿಸಿದೆನೇನ್ನೀರಿಗೆಂದೆ
ವಾಲೆಯಿದನ್ನ? ೩೬

‘ಅಮ್ಮನೆನಗೆ ಕೊಟ್ಟುದಲ್ಲ,
ಗಂಡನಿದಂ ಕೊಂಡುದಲ್ಲ,
ಅಕಟ ನಾನೆ ದುಡಿದೆನಲ್ಲ
ಮೆಯ್ಯ ಮುರಿತದಿಂ? ೪೦

‘ಗೊಲ್ಲರೆಮ್ಮ ಪಾಳ್ಯದಲ್ಲಿ
ನನ್ನೊಬ್ಬಳ ಕಿವಿಗಳಲ್ಲಿ
ಅಲ್ಲದೆ ಮತ್ತಾರಿಗಲ್ಲಿ
ಇಂತಹ ವಾಲೆ? ೪೪

‘ಇದರ ಚಿನ್ನದೇನು ಬಣ್ಣ ?
ಕೆತ್ತನೆಯಿದರಾರ ಕಣ್ಣ
ಕುಕ್ಕದು? ಪದೆದೆದೆಯ ಹುಣ್ಣ
ಬೆಲೆಯ ತೆತ್ತೆನೆ? ೪೮

‘ಯಾವ ಕೆಟ್ಟ ಶನಿಯೊ ಕಣ್ಣ
ಕಟ್ಟುತ ತನಿಸುಖದ ಗಿಣ್ಣ
ಮುಕ್ಕುವೆನ್ನ ಬಾಯ್ಗೆ ಮಣ್ಣ
ನಕಟ ಹೆಟ್ಟಿತು? ೫೨

‘ನಾದಿನಿ ಇದನೆರೆಯಲೊಂದು
ದಿನಕಿತ್ತೆನೆ ಅವಳಿಗಿಂದು?
೨ನತ್ತೆ ಕರಿಯ ಕೊತ್ತಿಗೆಂದು
ಮನದಿ ನಕ್ಕೆನೆ? ೫೬

‘ಹರಿದೆನಾರ ವಾಲೆಯನ್ನ
ಮುನ್ನ ಹುಟ್ಟೊಳಲ್ಲಡೆನ್ನ
ಹಾಲೆ ಹರಿವ ಹರಕೆಯನ್ನ
ಹೊಳೆಗೆ ಹೊತ್ತೆನೆ? ೬೦

‘ಯಾರ ಸೊಟ್ಟ ಮೋರೆಯನ್ನ
ಕಂಡೆನೊ ಹೊತ್ತಾರೆಯನ್ನ?
ಜೀವಕೆ ಗಂಟಿಕ್ಕಿದೆನ್ನ
ತೊಡವೆ ಪೋದುದೆ? ೬೪

‘ಕಳೆದು ಹೋದ ವಾಲೆಗಳಲೊ?
ಅಣಕುವ ನೆರೆಯವರಿಗಳಲೊ?
ತವರಂ ತಿವಿವತ್ತೆಗಳಲೊ?
ನನಗಾನಳಲೊ? ೬೮

‘ಇನ್ನೆನಗಿದು ಬರುವುದುಂಟೆ?
ಬರಿದಿನ್ನೇಕಿದರ ತಂಟೆ?’
ತಿರುಪತಿಯಲಿ ಹಣದ

ಮನಸಿನ ೩ತನೆ ಕರಗಲಿಂತೆ
ಯಾರ ಮನಂ ಕೊರಗದಂತೆ?-
ಹಾಲುನಗೆಗೆ ಹನಿಯೆ ಚಿಂತೆ
ಹೆಪ್ಪುಗೊಳಿಸದೆ? ೭೬

ಮೊಳಕಾಲಲಿ ಮೊಗವಸೂರಿ
ಕುಳಿತಳಾಕೆ ತರಿಯ ಗೀರಿ,
ದಿನಮುಖದೆಲಿವನಿಯೊ? ಸೋರಿ
ತಾಕೆಯಂಬಕಂ. ೮೦

ದೋಣಿಯೆಲ್ಲ ಮರುಗಿತಲ್ಲಿ-
ನುಡಿಗಳ ಬಾಯ್ಮರುಕವೆಲ್ಲಿ?
೪ಜಲ್ಲೆ ತಗಲದಾಳವೆಲ್ಲಿ?
ಓಡವೋಡಿತು. ೮೪

ತೊರೆಯನೊಬ್ಬ ರಸಿಕನಂತೆ,
ನಗುತ ನುಡಿದನವಳಿಗಿಂತೆ-
ಹೆರರ ಚಿಂತೆ ನಗೆಯ ಸಂತೆ
ಯಾರಿಗೊಲ್ಲದು? ೮೮

‘ಏತಕಮ್ಮ ಬರಿದೆ ಚಿಂತೆ?
ಹೂವೆಯನಿತೆ ನನೆಯಿನಿಂತೆ,
ದುಡಿದಂತೆಯೆ ದುಡಿವೆಯಂತೆ
ಹರೆಯವಿಲ್ಲವೆ? ೯೨

‘ಊರೊಳಿರಲು ನೀರಿನೊರತೆ
ಚಿನ್ನಕೆ ನಿನಗೇನು ಕೊರತೆ?
ಹಾಲಿಗೈಸೆ ನೀರ ಬೆರತೆ
ಎಣ್ಣೆ ತುಪ್ಪಕೇಂ? ೯೬

‘ನೀರಿಗಾಯ್ತು ನೀರ ಪಾಲು,
ಉಳಿದುದಿನ್ನು ಹಾಲ ಪಾಲು;
ಗೆಯ್ದ ಗೆಯ್ಮೆ ತನ್ನ ಪಾಲು
ಕೊಳ್ಳದಿರುವುದೆ? ೧೦೦
*****
೧ ದೋಣಿಯ ಒಂದು ಭಾಗ
೨ ನತ್ತು = ಮೂಗಿನದೊಂದು ಆಭರಣ
೩ ಆಕಳ ಗಬ್ಬ
೪ ಜಲ್ಲು=ದೋಣಿಯನ್ನು ನಡಸುವ ಗಳ

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...