Home / ಲೇಖನ / ಇತರೆ / ದುರ್ಗಗಳೇ!

ದುರ್ಗಗಳೇ!

ನಿಮ್ಮನ್ನು ನೋಡಿ ಕನಿಕರ ಬರುತ್ತದೆ. ಮುನ್ನೂರು ವರ್ಷಗಳಾಚೆಗೆ ಯಾರಾದರೂ ಬಂದು ಮುಂದೆ ನಿಮ್ಮ ಅವಸ್ಥೆ ಹೀಗಾಗುವದೆಂದು ಹೇಳಿದ್ದರೆ ನೀವು ನಂಬುತ್ತಿದ್ದಿರೋ? ನೀವೇ ಏಕೆ ಈ ಭವಿಷ್ಯವನ್ನು ಆ ಕಾಲದ ಮಹಾ ಮಹಾ ಮೇಧಾವಿಗಳು ಸಹ ನಂಬುತ್ತಿದ್ದಿಲ್ಲ.

ನಿಮ್ಮ ಸುತ್ತಲಿನ ಯಾವ ಕೊಳ್ಳಗಳಲ್ಲಿ ಜೀವದ ಪರಿವೆಯಿಲ್ಲದೆ ಹೋರಾಡುವ ವೀರರ ರಣಘೋಷವು ಒಂದು ಕಾಲಕ್ಕೆ ತುಂಬುತ್ತಿತ್ತೋ ಅದೇ ಕೊಳ್ಳಗಳಲ್ಲಿ ವನ್ಯಪಶುಗಳ ಚೀರಾಟದ ಹೊರ್ತು ಮತ್ತೇನೂ ಕೇಳಿಸುವದಿಲ್ಲ. ಯಾವ ಹಾದಿಗಳಲ್ಲಿ ಕುದುರೆ ಆನೆ ಪಲ್ಲಕ್ಕಿಗಳ ಸಾಲು ಹತ್ತುತ್ತಿತ್ತೋ ಆ ಹಾದಿಗಳ ಮೇಲೆ ಈಗ ಹುಲ್ಲು ಬೆಳೆದು ಅವು ನಾಮಶೇಷ ಆಗಿರುವವು. ಗುಡ್ಡದೋರೆಯಲ್ಲಿಯ ಹಳ್ಳಿಗಳಂತೂ ನೋಡಲಿಕ್ಕೇ ಬೇಡ. ಯಾವ ಹಳ್ಳಿಗಳಲ್ಲಿಯ ಪ್ರತಿಯೊಬ್ಬ ತರುಣನು ತಾನು ಸೂರ್ಯಾಜೀ ತಾನಾಜೀ ಅಥವಾ ಪ್ರತ್ಯಕ್ಷ ಶಿವಾಜಿಯಂತೆ ಶೂರನಾಗಿ ಮೆರೆಯಬಹುದೆಂದು ಆಕಾಂಕ್ಷೆ ಪಡುತ್ತಿದ್ದನೋ ಆದೇ ಹಳ್ಳಿಗಳಲ್ಲಿ ಹ್ಯಾಗಾದರೂ ದಿವಸ ಹಾಕುತ್ತ ಮರಣದ ಮಾರ್ಗ ಪ್ರತೀಕ್ಷೆ ಮಾಡುವ ಒಕ್ಕಲಿಗರನ್ನು ಕಾಣಬಹುದು.

ಗೋಡೆಗಳು; ಇವುಗಳಿಗೆ ಕೋಟೆಯ ಗೋಡೆಗಳೆಂದು ಯಾರನ್ನಬೇಕು ಸಿಕ್ಕ ಸಿಕ್ಕ ಗಿಡಗಳು ಹತ್ತಿ ಅವುಗಳ ಬೇರು ಮತ್ತು ಶಾಖೆಗಳು ಮುದಿಕೆಯ ಮೈ ಮೇಲಿನ ನರಗಳಂತೆ ಎಲ್ಲ ಕಡೆಗೂ ಹಬ್ಬಿದ್ದರಿಂದ ಗೋಡೆಗಳ ಅಂದವು ಕೆಟ್ಟು ಹೋಗಿದೆ. ಹಲವು ಸ್ಥಳಗಳಲ್ಲಿ ಗೋಡೆ ಬಿದ್ದದ್ದರಿಂದ ಆ ನಿಟ್ಟಿಗೆ ಹಲ್ಲು ಬಿದ್ದ ಬಾಯಿಯ ವಿಕೃತ ಸ್ವರೂಪ ಬಂದಿರುವದು. ಯಾವ ಗೋಡೆಗಳ ಮೇಲೆ ಎಲ್ಲ್ಯಾದರೊಂದು ಹುಲ್ಲಿನ ಕಡ್ಡಿ ಕಂಡರೆ ದುರ್ಗರಕ್ಷಕರು ಕಠಿಣ ಶಿಕ್ಷೆಗೆ ಗುರಿಯಾಗುತ್ತಿದ್ದರೋ ಅವೇ ಗೋಡೆಗಳ ಮೇಲೆ ಹಬ್ಬಿದೆ ಗಿಡಗಂಟಿಗಳಲ್ಲಿ ನಿಶ್ಯಂಕವಾಗಿ ಓಡಾಡುವವು.

ದುರ್ಗದ ಒಳಭಾಗದಲ್ಲಿ ಎಲ್ಲಿ ನೋಡಿದರೂ ಬಿದ್ದಮನೆಗಳ, ಹಾಳು ದಿಬ್ಬಗಳ ಹೊರ್ತಾಗಿ ಏನೂ ಕಾಣುವದಿಲ್ಲ. ಯಾವ ಪ್ರಾಸಾದದಲ್ಲಿ ಭೂತ ಕಾಲದ ಇತಿಹಾಸ ಬರೆಯಲ್ಪಟ್ಟಿತ್ತೊ ಯಾವ ಅರಮನೆಗಳಲ್ಲಿ ನಡೆದ ಕಾರಸ್ಥಾನಗಳಿಂದ ದೊಡ್ಡ ದೊಡ್ಡ ಸಾಮ್ರಾಜ್ಯಗಳು ಹುಟ್ಟಿದವೋ ಮತ್ತು ನಾಶ ಹೊಂದಿದವೋ ಆ ಪ್ರಸಾದದ ಕುರುಹು ಈಗ ಒಂದು ದೊಡ್ಡ ದಿಬ್ಬದ ರೂಪ ದಿಂದ ಮಾತ್ರ ಕಾಣುವದು. ತಮ್ಮ ಖುರಪುಟದ ಖಡಖಡಾಟದಿಂದ ಎಲ್ಲ ದೇಶವನ್ನು ಗದಗಮಿಸಿದ ಜಾತಿಯ ಕುದುರೆಗಳ ಲಾಯದ ಮೇಲೆ ಈಗಿನ ಕಾಲಕ್ಕೆ ಡಬಗಳ್ಳಿಯು ಬೆಳೆದಿರುತ್ತದೆ. ಗುಪ್ತ ಮಾರ್ಗಗಳೂ ಮದ್ದಿನ ಮನೆಗಳೂ ಶಸ್ತ್ರಾಗಾರಗವೂ ಕೋಶಾಗಾರವೂ ಮುಂತಾದವು ಹೇಳಹೆಸರಿಲ್ಲದೆ ಮಾಯವಾಗಿರುವವು.

ಹೆಬ್ಬಾಗಿಲಗಳ ಗತಿಯಂತೂ ಕೇಳಲಿಕ್ಕೆ ಬೇಡ. ಆನೆಗಳಿಗೆ ಸಹ ಜೋರಿನಿಂದ ಹಾಯ್ದು ಕೆಡವಲಿಕ್ಕೆ ಬರಬಾರದೆಂದು ಮಳೆಗಳಿಂದ ತುಂಬಿದ ಬಾಗಿಲಗಳನ್ನು ಒಡೆದು ಅವುಗಳ ಕಟ್ಟಿಗೆಯಿಂದ ಕೈ ಕಾಯ್ಸಿ ಕೊಂಬ ಪುಣ್ಯಾತ್ಮರಿಗೇನು ಕಡಿಮೆ? ಯಾವ ದಾರಿಗಳು ನೂರಾರು ಯುದ್ಧದ ಸಮರಾಂಗಣ ಆಗಿರಬಹುದೋ, ಎಲ್ಲಿಯ ಹಾಸುಗಲ್ಲುಗಳು ಅಸಂಖ್ಯ ಸಲ ವೀರರ ಮಾಂಸ ರಕ್ತಗಳಿಂದ ಮುಚ್ಚಿರಬಹುದು ಅವೆಲ್ಲವುಗಳು ಈಗ ಸ್ಮಶಾನ ಶಾಂತತೆಗೆ ಎಡೆಯಾಗಿರುವವು. ಒಟ್ಟಾರೆ ಈ ದುರ್ಗಗಳನ್ನು ನೋಡಿ ಚಮತ್ಕಾರ ನಿಕೇತ (Museum)ದಲ್ಲಿಯ ತಿಮಿಂಗಲ ಮೀನದ ಎಲವಿನ ಹಂದರವು ನೆನಪಾಗುವದು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...