Home / ಕವನ / ಕವಿತೆ / ಗಿಳಿವಿಂಡು

ಗಿಳಿವಿಂಡು

ಒಂದರಳೆ ಮರದಲ್ಲಿ
ಸಂಜೆಯಾಗಿರುವಲ್ಲಿ
ಒಂದೊಂದೆ ಮರಳುವವು ಸಾಲುಗೊಂಡು :
ಒಂದೊಂದೆ ಮರಳುವವು
ಗಿಳಿಯೆಲ್ಲ ತೆರಳುವವು
ಗೂಡುಗೊಂಡಿಹ ಮರವನಿದಿರುಗೊಂಡು.

ಸಂಧ್ಯೆಯಿಂದೀಚೆಗೆನೆ
ಸ್ಮರನೆಚ್ಚ ಶರಗಳೆನೆ
ತಾಗುತಿದೆ ಗಿಳಿಹಿಂಡು ಬಂದು ಮರಕೆ.
ಕೊಂಬೆಮೇಲೆಳೆಮರಿಯು
ನಂಬಿ ತಾಯಿಯನರಿಯು-
ತಿರೆ ಮಿಡಿಯಿತೆನ್ನೆದೆಯು ದೀನ ಸ್ವರಕೆ.

ಮರ, ಸ್ಮರನ ಬೀಡೆಂದು-
ಗಿಳಿಗಾವಲಿಹುದೆಂದು-
ಗಳಹುತಿದ್ದನು ಹಳೆಯ ದಿನದ ಕವಿಯು :
ಅಂದಿನಾ ಬಾಳಿನಾ
ಇಂದಿನಾ ಹಾಳಿನಾ
ಗತಿ ಬೇರೆ ಶ್ರುತಿ ಬೇರೆ,-ಕಹಿಯು ಸವಿಯು,

ನೂರಾರು ಗಿಳಿಯ ಮನೆ-
ಯೊಳಗೊಂಡ ಮರದ ಕೊನೆ-
ಯೆಲೆಗಳಲಿ ತೂರಾಡಿ ಚೀರಾಡುತ
ಒಂದು ಗಿಳಿಯಿನ್ನೊಂದ-
ನಲ್ಲಿ ಭೀ ಥೂ ಎಂದು,
ತನ್ನದಿದು ತನಗೆಂದು ಹೋರಾಡುತ

ಬರೆ, ಕೇಳಿ ಚೀರ್‍ದನಿಯ,
ನೋಡಿಲ್ಲಿ! ಹೂಗಣೆಯ
ಹಬ್ಬ ವಿಹುದೆನಬಹುದೆ ಕಣ್ಣು ಮುಚ್ಚಿ?
ಒಂದು ಗಿಳಿಯಿನ್ನೊಂದ-
ನೆದುರಿಸಲು ಕಡುನೊಂದು
ಕದನವೆಸಗುತ ಕೂಕ್ಕೆ ಚುಚ್ಚಿ ಚುಚ್ಚಿ?

ಒಂದೊಂದು ಗಿಳಿಗೊಂದು
ಮನೆಯಿಹುದು ಇದ್ದರೂ
ಗಿಳಿಯ ಗೊಂದಣನಿಂತು ಹಾರ್‍ವುದೇಕೆ?
ಬೇರೊಂದು ಗಿಳಿಯ ಮನೆ-
ಯನ್ನು ಸೇರುತ ಕಲಹ-
ವೆಸಗಿ ತಿಳಿವಿಲ್ಲದಲೆ ಸಾರ್‍ವುದೇಕೆ?

ಎಲ್ಲರಿಗೆ ಸವಿಗನಸು,
ಎಲ್ಲರಿಗೆ ಸವಿತಿನಸು,
ಎಲ್ಲರಿಗದೆಲ್ಲವನು ಕೊಡುವಳಿಳೆಯು.
ಕಲ್ಲೆದೆಯವರು ಕೆಲರು
ಮೆಲ್ಲುವರದೆಲ್ಲವನು
ಇಲ್ಲಿಹುದು ನೋಡು ಅನ್ಯಾಯದೆಳೆಯು!

ಬಳಿಗೆ ಸುಳಿವಳು ರಾತ್ರಿ
ಇವಳೆ ಎಲ್ಲರ ಧಾತ್ರಿ!
ತಲೆಗೊಂದು ಮಂಚವನು ಮಲಗಲಿತ್ತು
ಹಗಲೆಲ್ಲ ಹಿರಿ ವಯಣ,
ಮುಗಿಲುದ್ದ ಕುಡ್ಯಾಣ-
ಕಣಿಗೊಳಿಸುವಳು ಗಿಳಿಯ, ಕ್ರಾಂತಿವೆತ್ತು.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...