Home / ಕವನ / ಕವಿತೆ / ಸಾವಲ್ಲದ ಸಾವು!

ಸಾವಲ್ಲದ ಸಾವು!


ಇದ್ದರೂ ಸತ್ತಂತ ಇರುವವರೆ ಬಹುಜನರು,
ಇದ್ದವರಿಗೆಲ್ಲ ಸಾವಾಗಿ ಇರುವರು ಕೆಲರು,
ಮೊದ್ದುತನದಲಿ ಸಾವಿಗಂಜಿ, ಬದುಕನೆ ಸಾವು-
ಮಾಡಿಕೊಂಡವರು ಹಲರು!

ಇದ್ದಾಗ ನಿನ್ನಂತೆ ಇದ್ದವರು ಯಾರಿಹರು?
ಬಿದ್ದವರ ಬಾಳಲ್ಲಿ ಜೀವಕಳೆಯನ್ನೂದಿ
ಸಿದ್ದಿ ತುಂಬಿದರಾರು, ನಿನ್ನವೊಲು ಗಾಂಧೀಜಿ
ಸಾವಿರದ ಶೂರರಾರು?


ನೀನು ಮಾನವನೇನು? ಮರುಳಿದು
ಮಾನವನು ನೀನೆಂಬುದು ;
ಮಾನವತಯಾದರ್ಶವೇ ಮೈ-
ಗೊಳುತ ಬಂದಿಲ್ಲಿರ್ದ್ದುದು

ಕುದಿವ ಮಾನವಲೋಕವನು ಕಂ-
ಡದನು ತಣಿಸಲು ಪ್ರಕೃತಿಯು,
ಹದದಿ ನಿನ್ನನು ರೂಪಿಸುತ ಕಳು-
ಹಿದುದು ನಮ್ಮಯ ಸುಕೃತಿಯು!

ಪಂಚಭೂತಶರೀರಿಯೇ ನೀ
ಪಂಚಭಾವಶರೀರ!
ಕರುಣೆ ಮೈತ್ರಿಯು ಹರುಷ ನಿರ್ಭಯ
ಶಾಂತಿಗಳ ಸಾಕಾರ!


ಹೂವಿನರಳುವ ಗುಣವೆ ನಿನ್ನ ನಗೆಯಾಯ್ತೊ,
ಜೇನ ಸವಿ ನಿನಗೆ ಮೆಲುಮಾತನೊದವಿಸಿತೊ!
ಆಗಸದ ಕೇಂದ್ರವೇ ಎದೆಯು ನಿನಗಾಯ್ತೊ,
ಸಾಗರದ ಆಳ ಗಾಂಭೀರ್ಯ ಹವಣಿಸಿತೋ!


ನಿನ್ನ ಕಣ್ಗೆ ರವಿಯ ಪ್ರಭೆಯು ಹಿಂಗದ ಬೆಳಕೂಡಿತೊ!
ನಿನ್ನ ಭಾವಗಳಲಿ ಅಮರಗಣವು ಅಮೃತ ನೀಡಿತೊ!
ನೀನು ನುಡಿದುದೆಲ್ಲ ಋಷಿಯ ದಿವ್ಯಕಾವ್ಯವಾಯಿತೊ,
ನೀನು ನಡೆದುದೆಲ್ಲ ಜನಕೆ ಬಾಳ ತಿರುಳ ತಿಳುಹಿತೊ!


ನೂರಾರು ವರ್ಷಗಳ ಪಾರತಂತ್ರದಿ ಸಿಲುಕಿ-
ಭಾರತೀಯರು ಬಾಯಿ ಬಾಯಿ ಬಿಡುತಿರುವಾಗ
ಪಾರುಗಾಣಿಸಲೆಂದು ಹೋರಾಡಿದರು ಹಲರು !
ದೊರೆಯಲಿಲ್ಲಾರಿಗಾ ಕೀರ್ತಿ;

ನಿಜವು ನೀ ನಿಜ ಯಶೋಮೂರ್ತಿ !
ದಾರಿಯರಿತವ ನೀನು ತೋರಿ ಅವರಿಗೆ ಯುಕ್ತಿ
ಹೂಡಿದೆಯೊ ಗೆಲುವ ಶಕ್ತಿ…
ಮಾಡಿದೆಯೊ ಬಂಧಮುಕ್ತಿ!


ನಿನ್ನ ಮಾತೇ ಮಾತು ತುಂಬಿದೆ
ದಿಕ್ಕು-ದಿಕ್ಕುಗಳಲ್ಲಿ….
ನಿನ್ನ ರೂಪವೆ ನೆಲಸಿ ನಿಂತಿದೆ
ಜಗದ ಜನಮನದಲ್ಲಿ !

ನಿನ್ನ ಉನ್ನತ ಭಾವ ಹರಡಿದೆ
ಗಾಳಿಯಲೆಯಲೆಯಲ್ಲಿ….
ನಿನ್ನ ಕೀರ್ತಿಯ ಕಳಸ ಸಾರಿದೆ
ಬಾನತುತ್ತುದಿಯಲ್ಲಿ !

ಎಲ್ಲೆಡೆಯು ಗಾಂಧೀಜಿಯಾಗಿರೆ
ನಿನಗೆ ಕೊನೆಯಿನ್ನೆಲ್ಲಿ ?
ನಿನ್ನ ನೊಯ್ಯುವ ಬಲವು ಎಲ್ಲಿದೆ
ಮೃತ್ಯುವಿನ ಮೈಯಲ್ಲಿ ?


ಶಕ್ತಿಯಿಲ್ಲದ ಮೃತ್ಯು ಯುಕ್ತಿಯೇನನೊ ಹೂಡಿ,
ತನ್ನ ಬಲೆಯೊಳು ಬಿಗಿದು ನಿನ್ನ ಕಟ್ಟಿಹೆನೆಂದು
ಹುಸಿಬಿಂಕದಲ್ಲಿಹುದು,
ಹುರುಪಿನಲ್ಲಿಹುದು….
ಹುಸಿಬಿಂಕದಲ್ಲಿಹುದು, ಹುರುಪಿನಲ್ಲಿಹುದು-
ವ್ಯಕ್ತಿಗಿರುವುದು ಸಾವು, ಶಕ್ತಿಗೆಲ್ಲಿಹುದು ?
ಗಾಂಧೀಜಿಯನು ಕೊಂದೆನೆಂದು ಸಾರುವ ಸಾವು,
ಲೌಕಿಕರ ಹೃದಯದಲಿ ಕೆರಳಿಸಿದ ನೋವು!


ವ್ಯಕ್ತಿಯೇನೊ ಸಾಯಬಹುದು
ಶಕ್ತಿಗೆಲ್ಲಿ ಸಾವು ?
ಗರುಡನನ್ನು ಕೆಣಕಿ ಮಾಡ-
ಬಲ್ಲದೇನು ಹಾವು ?

ಗಾಂಧಿಯವರ ಮರೆಮಾಡಿದ
ಸಾವಲ್ಲದ ಸಾವು….
ಮೃತ್ಯುವಿಗಿತ್ತಿಹುದು ಟೊಳ್ಳು
ಅಮರತ್ವದ ಠಾವು!


ಇದ್ದರೂ ಸತ್ತಂತೆ ಇರುವವರೆ ಬಹುಜನರು,
ಇದ್ದವರಿಗೆಲ್ಲ ಸಾವಾಗಿ ಇರುವರು ಕೆಲರು,
ಮೊದ್ದುತನದಲಿ ಸಾವಿಗಂಜಿ, ಬದುಕನೆ ಸಾವ
ಮಾಡಿಕೊಂಡವರು ಹಲರು.

ಇದ್ದಾಗ ನಿನ್ನಂತೆ ಇದ್ದವರು ಯಾರಿಹರು?
ಬಿದ್ದವರ ಬಾಳಲ್ಲಿ ಜೀವಕಳೆಯನ್ನೂದಿ
ತಿದ್ದಿ ನಡೆಸಿದರಾರು ನಿನ್ನವೊಲು ಬಾಪೂಜಿ,
ಸಾವಿರದ ಶೂರರಾರು?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್