Home / ಕವನ / ಕೋಲಾಟ / ಅಕ್ಕ ಮಹಾದೇವಿಯ ಹಾಡು

ಅಕ್ಕ ಮಹಾದೇವಿಯ ಹಾಡು

ಅಂಕ ಬಂಕಽದೆವನ| ಟೊಂಕಿನ ಮ್ಯಾಲ ಕೈಽಯಿಟ್ಟು |
ಡೊಂಕಽ ನಿಂತಾನ ಇವನ್ಯಾರ| ಕೋಲೆಣ್ಣ ಕೋಲ ||೧||

ಅವ ನನ್ನ ಅಽಣ್ಣನ| ಅವ ನನ್ನ ತಽಮ್ಮನ|
ಅವ ನನ್ನ ಊರ ಒಡಿಯಽನ| ಕೋ ||೨||

ಅವಽ ನನ್ನ ಊರ| ಒಡಿಯಽನ ನನ್ನ ಮಗಳ|
ಅವನಿಽಗಿ ನಿನಗ ಕೊಡತೀನ| ಕೋ ||೩||

ನೀವು ಜಯಽನರು| ನಾವು ನಿಗೊಂಽತರು|
ಕೊಟ್ಟರೊಲ್ಲೆೊಽನ ಜಯನರಿಗಿ| ಕೋ ||೪||

ಶಾಂವಿಽಗಿನಾಽಗತಾವ| ಸೈದಾನನಾಽಗತಾವ|
ಇಂದ್ಯಾನ ಇವರ ಮನಿಯಾಗ| ಕೋ ||೫||

ಇಂದ ಯಾನಽ ಇವರ| ಮನಿಯಾಗ ಹಡದವ್|
ಅವ್ವನೌವ್ಸತ್ತ ದಿನಗಳ| ಕೋ ||೬||

ಹೆಪ್ಪಽಳನಾಽಗತಾವ| ಶೆಂಡಿಽಗಿನಾಽಗತಾವ|
ಇಂದ್ಯಾನ ಇವರ ಮನಿಯಾಗ| ಕೋ ||೭||

ಇಂದ ಯಾನಽ ಇವರ| ಮನಿಯಾಗ ಹಡದವ್ನ|
ಅಪ್ಪನಪ ಸತ್ತ ದಿನಗೋಳ| ಕೋ ||೮||
* * *

ನನ್ನೂರ ಹಾಽದೀಲಿ| ನಿಬ್ಬಽಣ ಬರತಽದ|
ನೀ ಏರಿ ನೋಡ ನನ ಮಗಳ | ಕೋ ||೯||

ನಾ ಏರಿ ನೋಡಲಕ| ನನ್ನ ತವಽರಲ್ಲ|
ನೀ ಏರಿ ನೋಡ ಹಡದವ್ವಾ| ಕೋ ||೧೦||

ಎಣ್ಣಿಽಯ ಕೊಡೆಗೋಳು| ಬಣ್ಣದಲಿ ಬರೂತಾವ|
ಮಣ್ಣಗ ಬಿದ್ದು ಒಡಿಯಽಲಿ| ಕೋ ||೧೧||

ಮಣ್ಣಿನೊಳಽಗ ಬಿದ್ದು| ಒಡಿಯಽಲಿ ಈ ಊರ
ಹೆಣ್ಣ ಖೋಡೆಂದು ತಿರುಗಲೆ| ಕೋ ||೧೨||

ತುಪ್ಪಽದ ಕೊಡಗಽಳೂ| ಒಪ್ಪದಲಿ ಬರೂತಾವ|
ತಿಪ್ಸ್ಯಾಗ ಬಿದ್ದು ಒಡಿಯಲಿ। ಕೋ ||೧೩||

ತಿಪ್ಪಿಯಾಗಽ ಬಿದ್ದು| ಒಡಿಯಽಲಿ ಈ ಊರ|
ಮಿತ್ರಿ ಖೋಡೆಂದು ತಿರುಗಲೆ| ಕೋ ||೧೪||

ಛೆಜ್ಜಿಽಯ ಹೊಲದಾಗಽ| ಛೆಲ್ಲ್ಯಾಡೊ ನಿಽಬ್ಬಣ|
ಫಿಲ್ಲ್ಯಾ ಇಡಬರ ನನ ಮಗಳ| ಕೋ ||೧೫||

ಆ ಫಿಲ್ಲ್ಯಾ ನಾಽ ಒಲ್ಲ| ಈ ಫಿಲ್ಲ್ಯಾ ನಾಽ ಒಲ್ಲ!
ಕೊಟ್ಟರೊಲ್ಲೆಽನ ಜಯನರಿಗಿ| ಕೋ ||೧೬||

ಹೆತ್ತೀಯ ಹೊಲದಾಗ| ಒತ್ತ್ಯಾಡೊ ನಿಽಬ್ಬಣ|
ನತ್ತ ಇಡೆಬಾರ ನನ ಮಗಳ| ಕೋ ||೧೭||

ಆ ನತ್ತ ನಾಽ ಒಲ್ಲ| ಈ ನತ್ತ ನಾಽ ಒಲ್ಲ|
ಕೊಟ್ಟರೊಲ್ಲೆಽನ ಜಯನರಿಗಿ| ಕೋ ||೧೮||
* * *

ಊದೆಸ್ತ ಬಾರಸ್ತ| ಸೋಬಾನ ಹಾಡುಽತ|
ಬಂದನ ಮುದಮಗ ಅಗಸಿಽಗಿ| ಕೋ ||೧೯||

ಆಗಸಿಽಯ ತೆರಿಽ ನನ್ನ| ಬಗಸುಳ್ಳ ತಳಽವಾರಾ|
ಬೊಗಸಿ ತುಂಬಡಕಿ ಬಿಳಿ ಎಲಿಯ| ಕೋ ||೨೦||

ಊದಸ್ತ ಬಾಽರಸ್ತ| ಸೋಬಾನ ಹಾಽಡುತ
ಬಂದನ ಮದುಮಽಗ ಬಾಗಿಲಿಗಿ| ಕೋ ||೨೧||

ಬಾಗಿಲದಾಗಿಽನ ಕುದುರಿ| ಕಾಲಮ್ಯಾಲಾಽಗಲಿ|
ಮದುಮಗ ಕಾಳಿಂಗ ಮಡಿಯಽಲಿ| ಕೋ ||೨೨||
* * *

ನಮ್ಮೌವ್ವಾ ಕಟ್ಟ್ಯಾಳ| ಎಳ್ಳ ಹೆಚ್ಚಿಽದ ರೊಟ್ಟಿ|
ಕೂಡುಂಬುನು ಬಾರ ನನ ಮಗಳ| ಕೋ ||೨೩||

ನೀವು ಜೈಯಽನರು| ನಾವು ನಿಂಗೊಂಽತಽರು|
ನಿಮ್ಮಲ್ಲಿ ನಾವು ಉಣಬರದ| ಕೋ ||೨೪||

ಪಟ್ಟೋಳಿ ಸೀಽರ್ಹೆರಿದು| ಬುತ್ತಿಽಯ ಕಽಟ್ಟಿದ|
ನೀರ ಕಂಡಲ್ಲಿ ಇಳಿದುಣ್ಣ| ಕೋ ||೨೫||

ಇವೂ ಬುತ್ತಿಽಗಳು| ನೀವು ಮುಟ್ಟಿರತೀರಿ|
ನಾ ಉಣುದಿಲ್ಲ ಹೆಡೆದವ್ವ| ಕೋ ||೨೬||

ಹಿಟ್ಟ ಅಕ್ಕೀಯ ತಗೋ| ಬ್ಯಾಳಿ ಬೆಲ್ಲಽವ ತಗೋ|
ಮಾಡಿಕೊಂಡುಣ್ಣ ನಿನ್ನಡಿಗಿ| ಕೋ ||೨೭||

ಹಿಟ್ಟಕ್ಕಿ ತಗೊಂಽಡಾಳ ಬ್ಯಾಳಿ ಬೆಲ್ಲ ತಗೊಂಡಾಳ|
ಹ್ವಾದಾಳ ಸಂಗಯನ ಗುಡಿಯಾಗ| ಕೋ ||೨೮||

ಎಡಕಾದರ ಸುಳಽವಿಲ್| ಬಲಕಾದರ ಸುಳಽವಿಲ್ಲ|
ಎಲ್ಲ್ಯಾದರಕಿಯ ಸುಳವಿಲ್| ಲಕೋ ||೨೯ ||
*****

ಹೆಣ್ಣುಮಕ್ಕಳು ಈ ಹಾಡಿಗೆ `ಜೈನರ ಹಾಡು’ ಎಂದು ಎನ್ನುತ್ತಾರೆ. ಆದರೆ ಇದರ ಕಥೆಯು ಆಕ್ಕಮಹಾದೇವಿಯ ಕಥೆಯೊಡನೆ ಬಹಳವಾಗಿ ಹೋಲುತ್ತಿರುವುದರಿಂದ ನಾವು ಇದಕ್ಕೆ ಮೇಲ್ಕಂಡ ಹೆಸರನ್ನು ಕೊಟ್ಟಿದ್ದೇವೆ. ನಮ್ಮ ಊಹೆಯು ಬಹಳ ಮಟ್ಟಿಗೆ ಸರಿಯಾಗಿದೆಯೆಂದು ತೋರುತ್ತದೆ. ಹಾಗಿದ್ದುದಾದರೆ ಈ ಹಾಡಿಗೆ ಐತಿಹಾಸಿಕ ಮಹತ್ವವು ಅತಿಶಯವಾಗಿ ಉಂಟು.

ಮಗಳು ಮತ್ತು ತಾಯಿ ಇವರಿಬ್ಬರ ಸಂವಾದವಿದು. ತಾಯಿಯ ತವರವರು ಜೈನರು. ಕೊಟ್ಟ ಮನೆ ಲಿಂಗವಂತರದು. ತಾಯಿಯು ತನ್ನ ಸೋದರನಿಗೆ ಮಗಳನ್ನು ಕೊಡಲೆಳಸುತ್ತಾಳೆ. ಆದಕ್ಕೆ ಅವಳು ಒಪ್ಪುವುದಿಲ್ಲ. ತಾಯಿಯ ಸೋದರನು ತನ್ನೂರ ಒಡೆಯನೆಂದು ಹೇಳಲಾಗಿದೆ (೧-೪). ಮಗಳ ಒಪ್ಪಿಗೆ ಇಲ್ಲದಿದ್ದರೂ ಮನೆಯಲ್ಲಿ ಲಗ್ನದ ಸಾಹಿತ್ಯಕ್ಕೆ ಆರಂಭವಾಗುತ್ತದೆ. ಅದನ್ನೆಲ್ಲ ಅವಳು ತಿರಸ್ಕರಿಸುತ್ತಲೇ ಇರುತ್ತಾಳೆ(೫-೮). ಲಗ್ನದ ಸಂಭ್ರಮಕ್ಕೆಂದು ವರನ ಊರಿನಿಂದ ನಿಬ್ಬಣವು ಹೊರಡುತ್ತದೆ. ಇತ್ತ ತಾಯಿಯು ಉಬ್ಬಿನಿಂದ ಮಗಳನ್ನು ಶೃಂಗರಿಸಲೆಳಸುತ್ತಾಳೆ. ಅದಕ್ಕೆ ಅವಳೊಪ್ಪುವುದಿಲ್ಲ(೯-೧೮). ಕೊನೆಗೆ ವರನು ವೈಭವದಿಂದ ಮನೆಯ ಬಾಗಿಲಿಗೆ ಬಂದಾಗ ಕನ್ನೆಯು ಶಪಿಸುತ್ತಾಳೆ (೧೯-೨೨). ಅಂತೂ ಒತ್ತಾಯದಿಂದ ಅವಳ ಮದುವೆ ಮುಗಿಯವುದೆಂದು ತೋರುತ್ತದೆ. ಹಾಡಿನಲ್ಲಿ ಈ ಮಾತಿನ ಬಗೆಗೆ ಏನೂ ಉಲ್ಲೇಖವಿಲ್ಲ. ನಂತರ ತಾಯಿಯ ತವರುಮನೆಯಿಂದ ಬಂದ ಬುತ್ತಿಯ ಊಟದ ಸಲುವಾಗಿ ತಾಯಿಮಕ್ಕಳಲ್ಲಿ ವಾಗ್ವಾದವಾಗುತ್ತದೆ. ಮಗಳನ್ನು ಗಂಡನ ಮನೆಗೆ ಕಳಿಸುವಾಗ ಬುತ್ತಿಗೆ ಬದಲು ಹಿಟ್ಟು, ಅಕ್ಕಿ ಮುಂತಾದ ಒಣ ಜೀನನುಗಳನ್ನು ಕಟ್ಟಿಕೊಡುತ್ತಾರೆ. ಕನ್ನೆಯು ಆ ಸಾಹಿತ್ಯ ವನ್ನೆಲ್ಲ ತೆಗೆದುಕೊಂಡು ಒಂದು ದೇವಾಲಯದಲ್ಲಿ ಹೋದವಳು ಅಲ್ಲಿಯೇ ಮಟ್ಟಮರೆಯಾಗಿಬಿಡುತ್ತಾಳೆ. ಇದೆರ ಮುಂದೆ ಅವಳ ಸಮಾಚಾರವೇ ಯಾರಿಗೂ ಗೊತ್ತಾಗುವುದಿಲ್ಲ (೨೩-೨೯).

ಛಂದಸ್ಸು:- ತ್ರಿಪದಿಗೆ ಸಮೀಪವಾಗಿದೆ.

ಶಬ್ದ ಪ್ರಯೋಗಗಳು:- ಅಂಕಬಂಕ=ಸೊಟ್ಟ ಪಟ್ಟ. ಡೊಂಕ=ವಕ್ರ. ಸೈದಾನ=ಸವಿಜೀನಸು. ಸತ್ತದಿನ=ಉತ್ತರಕ್ರಿಯೆ. ನಿಬ್ಬಣ=ಲಗ್ನಕ್ಕೆ ಬಂದ ಬೀಗರ ಗುಂಪು. ಬಣ್ಣದಲ್ಲಿ=ಒಪ್ಪಿನಿಂದ. ಖೋಡಿ=ಕೆಟ್ಟ (ಅವಲಕ್ಷಣ). ಛೆಜ್ಜಿ=ಸಜ್ಜೆಯ ಬೆಳೆ. ಛೆಲ್ಯಾಡು=ಹೊರಚೆಲ್ಲು. ಒತ್ತಾಡು=ತಾಕಲಾಡು. ಸೋಬಾನ=ಶೋಭನ. ಬಗಸುಳ್ಳ=ಬಲವುಳ್ಳ (ಗಟ್ಟಿಗನಾದ). ತಳವಾರ=ಅಗಸೆಯ ಕಾವಲುಗಾರ. ಕಾಲಮ್ಯಾಲಾಗಲಿ=ಸಾಯಲಿ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...