Home / ಕವನ / ಕವಿತೆ / ಶ್ರೀಕೃಷ್ಣನ ಕೊಳಲಿಗೆ

ಶ್ರೀಕೃಷ್ಣನ ಕೊಳಲಿಗೆ

ಏನು ಮುನ್ನಿನ ಜನ್ಮದಲಿ ಪುಣ್ಯಗೈದಿರುವೆ
ಇಂಚರದ ಕೊಳಲೆ ನೀನು ?
ಗಾನಲೋಲನ ಕೈಯ ಸೇರಿ ಕುಣಿದಾಡಿಸಿದೆ
ಕಮಲೋದ್ಧವಾಂಡವನ್ನು!
ಆರೋಹಣ ಸ್ವರದಿ ಸುಪ್ತಿಯಲ್ಲಿಹ ಜಗವ
ಜಾಗೃತಿಯನೊಂದಿಸಿದೆಯೊ !
ಅವರೋಹಣ ಸ್ವರದಿ ಎಚ್ಚತ್ತ ಜಗದ ಬಗೆ-
ಯನ್ನು ನಿನ್ನೆಡೆಗೆಳೆದೆಯೊ!
ನಂದನಂದನನ ನನ್ನಿಯ ಹಾಡನೊಡಗೊಂಡ
ಚೆಂದವಹ ನಿನ್ನ ದನಿಯು-
ಕಂದರನು ಒಳುದಾರಿಯಲ್ಲಿ ನಡೆಯಿಸುವ ಹೆ-
ತ್ತಮ್ಮನಿನಿದಾದ ನುಡಿಯು!
ಗೋಪಾಲಬಾಲಕರು ತಾಪಕೊಳಗಾಗದೊಲು
ಶ್ರೀಕೃಷ್ಣನೇನು ಗೈದ?
ನೀ ಪೇಳು, ನಿನ್ನ ಮಧುರವದಿಂದಲವನಾವ
ಮೋಹಮಂತ್ರವನೂದಿದ?
ನಲ್ಲೆಯರ ಮುಂದೆ ಗೋವಿಂದನಾಜ್ಞೆಯಲಿ ನೀ-
ನಾವ ಪದ ಪಳ್ದೆ ? ಎಂತು ?
ಗೊಲ್ಲಹೆಂಗಳೆಯರಿಗೆ ಸಂಸಾರದನುಭವವು
ಬೆಲ್ಲದಂತಾದುದೆಂತು ?
ಸತ್ಯಕ್ಕೆ ಸಹಕಾರಿ ಮಿಥ್ಯಕ್ಕೆ ಕಡುವೈರಿ
ಸಜ್ಜನರ ದುಃಖಹಾರಿ-
ಮತ್ತೆ ನಿನ್ನಾ ಗಾನವಾಗಿದ್ದಿತೈ ಕುಜನ-
ವಂಶಕ್ಕೆ ಹಿರಿಯ ಮಾರಿ!
ಸಂತಸದ ಸಿರಿಮನೆಯು ಸಂತೃಪ್ತಿಯರಮನೆಯು
ಜ್ಞಾನಪೀಯೂಷಝರಿಯು,
ಶಾಂತಿಯಾಗರವು ನಿಶ್ಚಿಂತೆಯಾ ತವರೂರು
ನಿನ್ನ ಮಂಜುಲಲಹರಿಯು!
ನಿನ್ನ ಸ್ವರ ಕೇಳದಿರೆ ಚೆನ್ನ ಕಿಟ್ಟನ ಮರೆತು
ಬನ್ನಗೊಂಡಿಹುದು ಬುವಿಯು;
ಧನ್ಯ ವೇಣುವೆ, ನಮಗೆ ಕೇಳದಿಹುದೇಕೀಗ.
ನಿನ್ನ ಮಾಧುರ ಮುರಲಿಯು?
ದ್ವಾಪರದಿ ನುಡಿಸಿದಾ ಗೋಪಾಲ ನಿನ್ನನ್ನ-
ದೇಕೀಗ ನುಡಿಸದಿಹನು?
ತಾಪ ಕೂಪದೊಳುರುಳಿರುವ ಜಗದ ಜನರನ್ನು
ತಣಿಸದೇತಕೆ ತಡೆದನು?

ಇದೇ ಭಾವಸಮಾಧಿಯೊಳಿರುವಂದು, ಒಳಗಿವಿಯಲೊಂದು

ಕೊಳಲುಲಿಯ ಇನಿದನಿ ಮಿಡಿದು ಎದೆಯನರಳಿಸಿತು:

ನುಡಿಸದೇಕಿಹ? ದೇವ ಜಗದಾದಿಯಿಂದೆ ಎಡೆ-
ಬಿಡದೆ ನುಡಿಸುತಲಿರುವನು;

ನುಡಿಸುವನು ಜಗವು ಮುಗಿವಾ ವರೆಗೆ ಮುಂದೆಯೂ
ಎಂದಿನಂದದಲಾತನು.

ಭೋಗಮಲದಲಿ ಮುಚ್ಚಿ ಹೋಗಿರುವ ನಿನ್ನ ಕಿವಿ-
ಗಳಿಗೆ ಕೇಳಿಸದಿರುವುದೋ!
ತ್ಯಾಗದಿಂದಾ ಮಲವ ನೀಗಿದರೆ ನಿನಗೆ ನಿಜ-
ವಾಗಿಯಾ ದನಿ ಕೇಳ್ವುದೋ!
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...