Home / ಕವನ / ಕವಿತೆ / ಹುಲಿ ಮತ್ತು ಹುಲ್ಲೆ

ಹುಲಿ ಮತ್ತು ಹುಲ್ಲೆ

ಮಿಂಚಿ ಚಕಮಕ, ಬಾಗಿ ತೂಗುತ ಮಣಿದು ಬಳಕುತ ತಡೆದಿದೆ
ಕಾಮಬೆಟ್ಟದ ಪಚ್ಚೆ ಹೃದಯದಿ ಏನು ನುಸುಳುತ ನಡೆದಿದೆ
ನಯನ ನಿಗಿನಿಗಿ ಎದೆಯ ದೃಢಪಡೆ ಏನೊ ನಾತವ ಹಿಡಿದಿದೆ
ಕಳ್ಳಹೆಜ್ಜೆಯ ಮೆಲ್ಲನಡಿಗೆಯ ಘಾತಸಂಭ್ರಮ ಪಡೆದಿದೆ
ಎಲೆಯ ಸಂದಿಗಳಿಂದ ಜಳಕನೆ ಹರಿದ ಮರ್ಮರ ಗಾಳಿಯೆ
ಮೊದಲೆ ನಿರ್ದಯವಾದ ಅದ್ಭುತ ಮತ್ತೆ ಕೆರಳಿದರೆಂತೆನೆ
ಉಸಿರನಡಗಿಸಿ ಭಯದಿ ನಡುಗುತ ಕಾಣ ಕಾಣುತ ಜಾರಿದೆ
ಮಹಾಮೃಗವಗೊ ಹೇಗೆ ಸಾಗಿದೆ ಬಾಗಿ ನಯಭಯಮಯದಲಿ
ಸೌಮ್ಯ ಸೌಂದರ್ಯವನ್ನು ನಶಿಸಲು ರೌದ್ರ ಸುಂದರ ನಯದಲಿ.

ಮುಗ್ಧ ಮೃಗವಧು ತನ್ನ ಕಾಲಿಲೆ ಮರಣವಿದ್ದೆಡೆ ಸಾಗಿದೆ
ಬನದ ತಣ್ನೆಳಲಲ್ಲಿ ತಿಳಿಗೊಳದಲ್ಲಿ ನಿರ್ಭಯ ಬಾಗಿದೆ
ಪಾಪ, ಸಂಶಯವೆಂಬುದೇ ಗೊತ್ತಿಲ್ಲ ನಂಬುಗೆ-ಜೀವಕೆ
ಆಚೆ-ಈಚೆಗೆ ನೋಡದೇ ನಾಲಗೆಯ ಚಾಚಿರೆ ತೇವಕೆ
ಹಾರಿ ಜಿಗಿದಿತು ಮೇಲೆ ಒಗೆದಿತು ಹುಲಿಯು ಹುಲ್ಲೆಯ ಹೀರಿತು
ಅಯ್ಯೋ ಬಿದ್ದಿತು, ಭಕ್ಷವಾಯಿತು, ಆಯಿತೋ ಬಾಳಾಯಿತು,
ಗಹನ ಗುಹೆಯಲ್ಲಿ ಒಂಟಿ ಇಹ ಸಖನನ್ನೆ ನೆನೆಯುತ ತೀರಿತು
ಅದೇ ಸುಖದಲಿ ಮೃತ್ಯುಮುಖದಲಿ ಹುಲ್ಲೆ ಓ ಹಾಳಾಯಿತು
ಹಾರಿ ಜಪ್ಪಿಸಿ ಕೊಲುವ ಕೌಶಲವಿರಲಿ ಆರ್ಭಟಿ ಇಂದಿನ
ಆದರೂ ಬಂದೀತು ಎಂದೋ ಹುಲಿಯ ಲಯವಾದೊಂದಿನ.

ನೆಲವ ಲಟಲಟ ಮುರಿಯೆ ಮೆಟ್ಟಿದ ಪೆಡಂಭೂತಗಳೆಲ್ಲಿವೆ?
ನೆರಳ ತಂಗೊಳ ಜಲವ ಕುಡಿದುಳಿದಾವು ಹರಿಣಗಳಿಲ್ಲಿಯೇ!
ಪ್ರಬಲ ಬಲಿಯೇ ತನ್ನ ಬಲಭರಭಾರದಲ್ಲಿಯೆ ಮಡಿವನು
ಬದುಕಿನೊಡೆಯನು ಸತ್ತನೆನಿಸಿದ ಸತ್ಯಸಂತತಿ ಜೀವನು
ಕೊಲ್ಲಬಲ್ಲವ ಮೆಲ್ಲಮೆಲ್ಲನೆ ಮೃತ್ಯು ಪಂಥವ ಹಿಡಿವನು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...