Home / ಕಥೆ / ಕಾದಂಬರಿ / ರಾವಣಾಂತರಂಗ – ೧೦

ರಾವಣಾಂತರಂಗ – ೧೦

ಸುಖದ ಸುಪ್ಪತಿಗೆಯಲ್ಲಿ

ದಶರಥನಿಗಾದರೋ ತನ್ನ ಸುಖಸಾಮ್ರಾಜ್ಯವನ್ನು ಕಂಡು ಒಂದು ರೀತಿಯ ಆನಂದ ಇನ್ನೊಂದು ಕಡೆ ಭಯ. ತನ್ನ ಸುಖ ಸಂಸಾರಕ್ಕೆ ಯಾರ ಕಣ್ಣು ತಾಗುವುದೋ ಎಂದು. ಮಕ್ಕಳನ್ನು ನೋಡಿದೆ, ಮುದ್ದಾಡಿದೆ. ದೊಡ್ಡವರನ್ನಾಗಿ ಮಾಡಿದೆ. ಸೊಸೆಯರನ್ನು ಕಂಡೆ. ಇನ್ನು ಮೊಮ್ಮಕ್ಕಳನ್ನು ಎತ್ತಿ ಮುದ್ದಾಡಬೇಕು. ಮಾನವನ ಆಸೆಗೆ ಮಿತಿಯೆಂಬುದೇ ಇಲ್ಲ. ಸಾಯುವ ಕೊನೆ ಕ್ಷಣದಲ್ಲೂ ನಾನು ಬದುಕಬೇಕೆಂದು ಜೀವ ತುಡಿಯುತ್ತಿರುತ್ತದೆ. ಅಷ್ಟು ಬೇಕೆಂಬವನಿಗೆ ಇನ್ನಷ್ಟು ಬೇಕೆಂಬಾಸೆ; ಮತ್ತಷ್ಟು ಪಡೆಯುವಾಶೆ, ಆದರೆ ಎಲ್ಲವೂ ಮಾನವನಂತೆ ನಡೆಯುವುದಾದರೆ ದೇವರಿಗೆಲ್ಲಿದೆ ಬೆಲೆ? ಅವನನ್ನು ಹಿಡಿಯುವವರಾರು? ಆದರೆ ವಿಧಿ ಹಂಚಿಕೆಯೇ ಬೇರೆ ಇರುತ್ತದಲ್ಲ ಎಲ್ಲರ ಸೂತ್ರಗಳನ್ನು ಹಿಡಿದು ಆಟ ಆಡಿಸುವ ಪರಮಾತ್ಮನಿಗಷ್ಟೇ ಗೊತ್ತು. ಮುಂದೆ ಯಾರ ಯಾರ ಬದುಕಿನಲ್ಲಿ ಏನೇನಾಗುತ್ತದೆ ಎಂದು ಮೇಲಿರುವ ಸೂತ್ರಧಾರ ಆಡಿಸಿದಂತೆ ಆಡಬೇಕು. ಕುಣಿಸಿದಂತೆ ಕುಣಿಯಬೇಕು. ದಶರಥನಿಗಾದರೋ ಉಜ್ವಲವಾದ ಬಯಕೆಗಳಿದ್ದವು. ಕನಸುಗಳ ಗೋಪುರವೇ ಎದುರಿಗಿತ್ತು. ನನಗೆ ಮುಪ್ಪಿನ ಕಾಲ ಬಂತು ನಾನೀಗ ಗೃಹಾಸ್ತಾಶ್ರಮ ತ್ಯಜಿಸಿ ವಾನಪ್ರಸ್ತಾಶ್ರಮ ಸೇರಬೇಕು. ಇನ್ನು ನನ್ನಿಂದ ರಾಜ್ಯಭಾರ ನಿರ್ವಹಿಸಲು ಆಗುವುದಿಲ್ಲ. ನನ್ನ ಪ್ರೀತಿಯ ಪತ್ರ ರಾಜ್ಯದ ಕಣ್ಮಣಿ ರಾಮನಿಗೆ ಯುವರಾಜ್ಯಾಭಿಷೇಕ ಮಾಡಬೇಕು. ರಾಮನೆಂದರೆ ಎಲ್ಲರಿಗೂ ಇಷ್ಟ. ಈತನಿಂದ ನನ್ನ ವಂಶದ ಹೆಸರು ಬೆಳಗುತ್ತದೆ. ಪ್ರಜೆಗಳ ಕಲ್ಯಾಣವೇ ತಮ್ಮ ಕಲ್ಯಾಣವೆಂದು ಸದಾ ಬಯಸುವ ಶ್ರೀರಾಮನೇ ಈ ರಾಜ್ಯಕ್ಕೆ ರಾಜನಾಗಲು ತಕ್ಕವನು” ಎಂದು ಯೋಚಿಸಿ “ಶುಭಸ್ಯಂ ಶೀಘ್ರಂ” ಎಂದು ನಿಶ್ಚಯಿಸಿ ಗುರು ವರಿಷ್ಠರು, ಮಂತ್ರಿಸುಮಂತ್ರ, ಸೇನಾಧಿಪತಿಗಳು, ಜೋಯಿಸರು, ವಿದ್ವಾಂಸರು, ಪಂಡಿತರು, ಎಲ್ಲರನ್ನು ಕರೆಸಿ, ಚರ್ಚಿಸಿದನು. ವೈಶಾಖ ಶುಕ್ಲಪಕ್ಷದ ಪಂಚಮಿ ದಿನ ಅಭಿಜಿನ್ ಮೂಹೂರ್ತದಲ್ಲಿ ಪಟ್ಟಗಟ್ಟಬೇಕೆಂದು ನಿರ್ಣಯವಾಯಿತು. ಈ ವಿಚಾರವನ್ನು ಮೊದಲು ತನ್ನ ಆಪ್ತಸಖಿ ಪ್ರಿಯಪತ್ನಿ ಕೈಕೇಯಿಗೆ ತಿಳಿಸಿದರೆ ಸಂತೋಷದಿಂದ ಕುಣಿದಾಡುತ್ತಾಳೆಂದು ಕನಸುಗಾಣುತ್ತಾ ಕೈಕ ಮಂದಿರಕ್ಕೆ ನಡೆದನು.

ಸೀತೆ ಸೊಸೆಯಾಗಿ ಬಂದ ಮೇಲೆ ಕೌಸಲ್ಯೆಗೆ ಯೌವ್ವನ ಮರುಕಳಿಸಿತ್ತು. ಸೊಸೆಗೆಷ್ಟು ಶೃಂಗಾರ ಮಾಡಿದರೂ ಸಾಲದು ಎಷ್ಟು ಉಪಚಾರ ಮಾಡಿದರೂ ತಣಿಯದು. ಮಗ ಸೊಸೆ ಜೋಡಿಯನ್ನು ಕಣ್ತುಂಬಾ ತುಂಬಿಕೊಂಡು ಆನಂದ ಭಾಷ್ಪ ಸುರಿಸುವುದು; ಮುಂದೆ ಸೊಸೆ ಗರ್ಭಿಣಿಯಾಗುತ್ತಾಳೆ. ಅವಳ ಸೀಮಂತ ಮಾಡಬೇಕು. ಮೊಮ್ಮಕ್ಕಳನ್ನು ತೂಗಬೇಕು, ಲಾಲಿಹಾಡಬೇಕು, ಅವರ ನಾಮಕರಣ ವಿದ್ಯಾಭ್ಯಾಸ ಒಂದೇ ಎರಡೇ ನೂರಾರು ಕನಸುಗಳನ್ನು ಕಟ್ಟಿ ಸುಖದ ಉಯ್ಯಾಲೆಯಲ್ಲಿ ಜೀಕುತ್ತಿದ್ದಳು. ಮೊನ್ನೆ ಮೊನ್ನೆಯಷ್ಟೇ ರಾಮನನ್ನು ಎತ್ತಿ ಮುದ್ದಾಡಿದ್ದು ಚಂದಿರನನ್ನು ತೋರಿಸಿ ಊಟಮಾಡಿಸಿದ್ದು ನಾಲ್ವರು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆದಾಡಿದ್ದು ನಂತರ, ಅವರ ವಿದ್ಯಾಭ್ಯಾಸ ಮದುವೆ ಎಲ್ಲವೂ ಕಣ್ಮುಚ್ಚಿ ಬಿಡುವಷ್ಟರಲ್ಲಿ ನಡೆದೇ ಹೋಯಿತು. ವರುಷಗಳು ಕಳೆದು ಈಗ ರಾಮನ ಮಕ್ಕಳನ್ನು ಎತ್ತಿ ಮುದ್ದಾಡುವ ಸುಯೋಗ! ಓಹ್! ನಾನೆಷ್ಟು ಭಾಗ್ಯವಂತೆ, ಪುಣ್ಯವಂತೆ ಬೇರಾರು ಇರಲಿಕ್ಕಿಲ್ಲ. ಇನ್ನು ಲಕ್ಷ್ಮಣನ ತಾಯಿ ಸುಮಿತ್ರ ಅಕ್ಕನ ನೆರಳು ನೆರಳಾದರೂ ಒಂದು ಗಳಿಗೆ ಮಾಯವಾಗುತ್ತದೆ. ಆದರೆ, ಸುಮಿತ್ರ ಅಕ್ಕನ ಕಷ್ಟಸುಖ, ನೋವು ನಲಿವುಗಳಲ್ಲಿ ಸಮಭಾಗಿ. ಅವಳ ಗುಣವೇ ಲಕ್ಷ್ಮಣನಿಗೆ ಬಂದಿದ್ದು, ಅಣ್ಣನಿಗಾಗಿ ಪ್ರಾಣವನ್ನೇ ಕೊಡುವ ಪರಮ ವೀರಾಗ್ರಣಿ, ಅಕ್ಕನ ಕನಸುಗಳನ್ನೇ ತನ್ನದಾಗಿಸಿಕೊಂಡು ಅವಳ ಬಯಕೆಗಳು ಆದಷ್ಟು ಬೇಗ ನೆರವೇರಲಿ ಎಂದು ಪ್ರಾರ್ಥಿಸುತ್ತಾಳೆ. ಸೊಸೆ ಊರ್ಮಿಳೆ ಯೊಂದಿಗೆ ಮಕ್ಕಳ ಕಲ್ಯಾಣ ಗುಣಗಳನ್ನು ಕೌಸಲ್ಯಯ ಮೇರೆ ಮೀರಿದ ಪ್ರೀತಿಯನ್ನು ಬಣ್ಣಿಸುವುದಕ್ಕೆ ಹೊತ್ತೇ ಸಾಕಾಗುವುದಿಲ್ಲ. ಹೀಗೆ ಎಲ್ಲರೂ ಅವರವರ ಸುಖದ ಸುಪ್ಪತ್ತಿಗೆಯಲ್ಲಿ ಹೊರಳಾಡುತ್ತಿರುವಾಗ ಮಿಡಿ ನಾಗರವೊಂದು ಕಚ್ಚಲು ಹೆಡೆ ಎತ್ತಿತು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...