Home / ಕವನ / ಕವಿತೆ / ಕನಸುಗಳೇ ಹೀಗೆ

ಕನಸುಗಳೇ ಹೀಗೆ

ನೂರೆಂಟು ಕನಸುಗಳ ಚಿತ್ತಾರ ರಾತ್ರಿಯೆಲ್ಲಾ
ನನ್ನ ಪಕ್ಕದಲಿ ನೀನು ಕುಳಿತಂತೆ
ಹೇಗೆ ಮೋಹಗೊಂಡೆನೋ ಏನೋ, ರಾತ್ರಿ
ಬಾಗಿಲು ತಟ್ಟಿದ ಸಪ್ಪಳಕೆ ಬಿಚ್ಚಿದೆ
ತೆರೆದೆ ಬಾಗಿಲನು, ಸುಳಿಗಾಳಿ ಮೈ ಸೋಕಿದಾಗ
ಮನದಲ್ಲಿ ಹಾವು ಹರಿದಾಡಿದಂತಾಗಿ
ಹಾಸಿಗೆಯಲಿ ಪುನಃ ಒರಗಿದೆ, ದುಗುಡತೆಯಿಂದಲಿ
ನೀನಿಲ್ಲದ ಈ ಮನ ಹಾಳಾದ ಬೋರು
ಈ ಜೀವಕೆ ಪ್ರಾಣವಾಯು ನೀನು
ಕತ್ತಲಲಿ ಕುಳಿತು ಹುಡುಕಾಡಿದೆ ನಿನ್ನಾಬಿಂಬ
ನೀನಿಲ್ಲದೆ ಎನ್ನ ಹೃದಯ ಕಡು
ಬೇಸಿಗೆಯ ನದಿಯಂತೆ
ಇಷ್ಟೇ ಸಾಕೆನೆಗೆ
ಸಿಡಿಲು ಬಡಿದ ಮರದಂತಾಗಲು

ನಿನ್ನಾ ಹೆಸರ್‍ಹೇಳಿದರಷ್ಟೇ
ಎನಗೆ ಮಾನ ಸಮ್ಮಾನ ಸ್ವರ್ಗದಲಿ
ನೀ ಬಂದರೆ ವಿವಷವಾದ ಮನಕೆ, ಸಂಭ್ರಮದ
ಸಂತಸದ ಮಹಾದಾನಂದದ ಹೊನಲು
ಅತ್ತಿತ್ತ ಹೊರಳಾಡಿದರೆ ಬರುವುದೇ ನಿದ್ದೆ
ನೀನು ನನ್ನ ಪಕ್ಕದಲ್ಲಿದ್ದಂತೆ
ನಿನ್ನಾ ಹೆಜ್ಜೆಯ ಗೆಜ್ಜೆ ನಾದಕೆ
ಅಡುಗೆ ಮನೆಯ ಬಳೆಯ ಸದ್ದಿಗೆ
ಬಂದು ನೋಡಿದರೆ
ಕನಸೇ

ಹೂವು ಮುಡಿಸಿದಂತೆ
ಕೆನ್ನೆ ಸವರಿದಂತೆ
ನೀನಿಲ್ಲದಿದ್ದರೆ ಮನದ ಜ್ಯೋತಿ ಏಕೆ?
ದೀವಟಿಗೆಯು ಕೂಡ ಹೊತ್ತಲೊಲ್ಲದು
ಬಾ ಬೇಗ, ಪ್ರೀತಿಯ ತುಂತುರಿನ ಸಿಂಚನ ನೀಡು
ಸ್ನಾನಕ್ಕಿಟ್ಟು ಬಕೆಟ್ ನೀರಿನಲ್ಲಿ ನಿನ್ನ ಕಾಣುವೆ
ರಾತ್ರಿಯೆಲ್ಲಾ ಹೀಗೆ ಕನಸು ನಿಲ್ಲಲಾರವು
ಜೊಂಪು ಹತ್ತುವುದು, ಪುನಃ ಎಚ್ಚರವಾಗುವುದು
ನಡುವೆ ಒಂದೊಂದೇ ಕನಸು.
ರಾಜ ರಾಣಿಯರ ಕನಸಿನ ಸೊಗಸುಗಾರಿಕೆ
ಆನೆ ಅಂಬಾರಿಯಲಿ ನಿನ್ನಾಪಕ್ಕದಲ್ಲಿ ನನ್ನ ಕಂಡದ್ದು
ಅಂತಃಪುರದ ಪಲ್ಲಂಗದಲಿ ಆಕೆಯ ಕಂಡರೆ
ಕನಸೇ

ಸಾವೇ ಇಲ್ಲದ ಕನಸುಗಳು
ಓ, ಕನಸುಗಳೇ ಬನ್ನಿ!
ಜೀವ ಕೊಡಿ ಈ ಶಿಲ್ಪಕೆ
ಚೆಂದುಳ್ಳ ಕನಸುಗಳೇ
ನಿಮ್ಮ ಜೊತೆಗೆ ಚದುರಂಗದಾಟವೇ
ಹಣೆ ಕಪೋಲದ ಮೇಲೆ ಸುಳಿದಾಡಿ
ಮನವ ಅಲ್ಲೋಲ ಕಲ್ಲೋಲ ಮಾಡಿ
ಕದ್ದು ಮಾಯವಾಗುವ ಕನಸುಗಳೇ
ಆ ಕನಸುಗಳಲಿ ಕಾಂತೆಯ ಕಂಡು
ಬೆಚ್ಚಿಬಿದ್ದು ಮುಖವೆತ್ತಿ ನೋಡಿದರೆ
ಕನಸೇ

ಏನೂ ಕಾಣದಿದ್ದರೂ ಮನದಲ್ಲೇನೋ ಸಂತಸ
ಸ್ವಪ್ನಗಳೇ ಹೀಗೆ
ಮುಗಿಯಲೊಲ್ಲವು
ಕಾಡುವುದನು ಬಿಡಲೊಲ್ಲವು
ಕಣ್ಣು ತೆರೆದು ಕುಳಿತರೆ ಬೇರೊಂದು ಕನಸು
ಅಂಬಾರಿಯಿಲ್ಲ, ಸಂಭ್ರಮವಿಲ್ಲ
ಯಾರ ಬಿಂಬವೂ ಇಲ್ಲ, ಹೆಜ್ಜೆಯ ಗೆಜ್ಜೆನಾದವಿಲ್ಲ,
ಬಳೆ ಸಪ್ಪಳವಿಲ್ಲ, ಮುಖದಲಿ
ಸಂತಸ, ನಗು ಮೊದಲಿಲ್ಲ,
ಬಸ್ಸು, ಕಾರು, ಓಡಿದ ಸಪ್ಪಳ
ಜನಗಳ ಮಾತು, ಗದ್ದಲದ ನಡುವೆ
ಪಕ್ಕದ ಮನೆಯ ರೇಡಿಯೋ ಹಾಡಿಗೆ
ಹೋಯಿತು ಮನ
ಜಾರಿದವು ಕನಸುಗಳು
ಜಾರಿದವು ಕನಸುಗಳು.
*****
೧೯೯೮ ರ ಕರ್ಮವೀರ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...