Home / ಕವನ / ಕವಿತೆ / ಯಾಜ್ಞವಲ್ಕ್ಯನೂ ಮೃತ್ರೇಯಿಯೂ

ಯಾಜ್ಞವಲ್ಕ್ಯನೂ ಮೃತ್ರೇಯಿಯೂ

ಯಾಜ್ಞವಲ್ಕ್ಯ ಹೇಳಿದ, ಮೈತ್ರೇಯಿಯ ಕರೆದು :
“ಕಾತ್ಯಾಯಿನಿಯೆಂದರೆ ಕಣ್ಣು ಮೂಗು ಮೊಲೆ
ತಲೆಯೆಂದರೆ ನಿನ್ನದೆ ! ಆದ್ದರಿಂದ
ಆತ್ಮವಿದ್ಯೆ ನಿನಗೇ
ಕಲಿಸುವೆ ನಾನು ಪ್ರತ್ಯಕ್ಷ.”

ನಗಾರಿಯೊಂದ ತರಿಸಿದ.
ಅದಕ್ಕೆ ಸರೀ ಬಾರಿಸಿದ.
ಅದರ ಸದ್ದು ಸುತ್ತಲೂ
ಗಿರಿಕಂದರ ವ್ಯಾಪಿಸಿತು.
ಹಕ್ಕಿಗಳೂ ಹಾರಿದುವು
ಕೋತಿಗಳೂ ಓಡಿದವು.
“ನೋಡಿದಿಯಾ!” ಎಂದ ಯಾಜ್ಞವಲ್ಕ್ಯ:
“ಎಲ್ಲಿಂದ ಹೊರಟಿತು, ಎಲ್ಲಿಗೆ ಹೋಯ್ತು ?
ಹಿಡಿವಂತಿಲ್ಲ ಕೈಯಲ್ಲಿ
ಕರೆವಂತಿಲ್ಲ ವಾಪಸು
ಆದರೂ-
ನಗಾರಿ ನಮ್ಮ ಕೈಯೊಳಗೆ !”
**

ಬೆಂಕಿಯೊಂದ ಮಾಡಿದ-ಅದಕ್ಕೆ
ಹಸೀ ಉರುವಲು ಹಾಕಿದ.
ಹೊಗೆ!

ಕಪ್ಪು, ಕಂದು, ನೀಲಿ
ಎಲ್ಲಾ ಕಡೆ ಹೊರಳಿ
“ನೋಡಿದಿಯಾ!” ಎಂದ ಯಾಜ್ಞವಲ್ಕ್ಯ:

“ಹೇಗೆ ಹಸೀ ಸೌದೆಯಿಂದ
ಹುಟ್ಟುತ್ತದೆ ಹೊಗೆ-ಹಾಗೆ
ಆತ್ಮದಿಂದ ಎಲ್ಲವೂ !”
**

ದೋಣಿಯೊಂದ ತರಿಸಿದ-ತಳಕ್ಕೆ
ಎರಡು ತೂತು ಕೊರೆಸಿದ.
ನೀರು ಒಳಕ್ಕೆ ಧಾವಿಸಿತು
ಮೊಗೆದಷ್ಟೂ ಮುಗಿಯದೆ.
ಈಜಿ ದಡ ಸೇರಿದರು.
“ನೋಡಿದಿಯಾ !” ಎಂದ ಯಾಜ್ಞವಲ್ಕ್ಯ
“ದೇಹವೆಂದವರೆ ಒಡಕು ದೋಣಿ
ನಂಬಿದವಗೆ ಗತಿಯಿಲ್ಲ–
ಆತ್ಮಜ್ಞಾನವೆಂದರೆ
ಅದು ಈಜಿನ ಹಾಗೆ !”
**

ಆರಗಿಣಿಯೊಂದ ತರಿಸಿದ
ಪಂಚವರ್ಣದ ಗಿಣಿ, ಸಣ್ಣ ಕಣ್ಣಿನ ಗಿಣಿ
ನೋಡಿದರೆ ಇನ್ನೂ
ನೋಡವೇಕೆಂಬ ಗಿಣಿ
ಹಾಡುವುದಕ್ಕೆ ಕಲಿಯಿತು
ವೇದಗಳ ಪಠಿಸಿತು
“ನೋಡಿದೆಯಾ!” ಎಂದ ಯಾಜ್ಞವಲ್ಕ್ಯ:
“ಹಾಡುತ್ತದೆ, ನುಡಿಯುತ್ತದೆ
ಮಾತ್ರ-
ಯಾಕೆ ಏನು ತಿಳಿಯದು.
ಆತ್ಮಜ್ಞಾನ ಇರದ ಹೊರತು
ಏನು ಹೇಳಿ ಏನು !”
**

ಹೇಂಟೆಯೊಂದ ತರಿಸಿದ
ಪ್ರತಿದಿನವೂ ತಿನಿಸಿದ.
ಬೆಳಗಿಂಜಾಮ ಕೂಗುತಿತ್ತು
ಎಲ್ಲರ ಎಬ್ಬಿಸುತಿತ್ತು
ಮಾತ್ರ-ಎಷ್ಟೇ ದಿನ ಕಳೆದರೂ
ಇಡಲಿಲ್ಲ ತತ್ತಿ
“ನೋಡಿದೆಯಾ!” ಎಂದ ಯಾಜ್ಞವಲ್ಕ್ಯ:
“ಆತ್ಮಕ್ಕೆ ಬೇಕು ಪರಮಾತ್ಮ
ಇಲ್ಲದೇ-
ದಕ್ಕಲಾರದು ಬ್ರಹ್ಮಾಂಡ !
**

ಮುಗಿಯಿತೇ ಎಂದಳು ಮೈತ್ರೇಯಿ
ಹೂಂ ಎಂದ ಯಾಜ್ಞವಲ್ಕ್ಯ.
ಒಂದು ಮಾತ್ರ ಮರೆತಿರೆಂದು
ಸೀರೆ ರವಿಕೆ ಬಿಚ್ಚಿದಳು
ಲಂಗ ಒದ್ದು ಜಾಡಿಸಿದಳು.
“ನೋಡಿದಿರಾ!” ಎಂದಳು ಮೈತ್ರೇಯಿ :
“ಸೀರೆಯೆಂದರಹಂಕಾರ
ರವಿಕೆ ತಪ್ಪು ಗ್ರಹಿಕೆ
ಬಾಡಿಯೆಂದರೆ ಕಿಲಾಡಿ
ಲಂಗ ಆಶಾಭಂಗ-ಇನ್ನು
ನೂರಕ್ಕೆ ನೂರು ಸಾಚಾ
ಆಗಬೇಕೆಂದರೆ ಇದೋ !” ಎಂದು
ಕಿತ್ಕೆಸೆದಳು ಕಾಚ !
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...