Home / ಲೇಖನ / ವ್ಯಕ್ತಿ / ಸಾಂಸ್ಕೃತಿಕ ಕಲಾಕೇಂದ್ರ

ಸಾಂಸ್ಕೃತಿಕ ಕಲಾಕೇಂದ್ರ

ಕನ್ನಡ ರಂಗಭೂಮಿಯ ಸಾಹಸಿ ‘ಅಭಿನೇತ್ರಿ’ ಚಿಂದೋಡಿ ಲೀಲಾ ರಂಗಭೂಮಿಯ ಕಿತ್ತೂರ ಚೆನ್ನಮ್ಮ.

ವೃತ್ತಿ ರಂಗಭೂಮಿಯಲ್ಲಿ ‘ಚಿಂದೋಡಿ’ ಮನೆತನಕ್ಕೆ ಮಹತ್ವದ ಸ್ಥಾನವಿದೆ. ಗಾನಗಂಧರ್ವ ಬಿರುದಾಂಕಿತ ಅಭಿಜಾತ ವೃತ್ತಿರಂಗಭೂಮಿ ಪ್ರತಿಭಾವಂತ ಕಲಾವಿದ ಚಿಂದೋಡಿ ವೀರಪ್ಪ, ತಾಯಿ ಶಾಂತಮ್ಮರವರ ಮಗಳಾಗಿ ಹುಟ್ಟಿದ ಲೀಲಾಳ ವೃತ್ತಿ ರಂಗಭೂಮಿಯೊಂದಿಗೆ ಇರುವ ನಂಟು, ಬದುಕು ವೀರೋಚಿತ, ಅಷ್ಟೇ ರೋಚಕ.

ಒಬ್ಬ ಮಹಿಳೆಯಾಗಿ ಯಾವದೇ ಧೀಮಂತ ಗಂಡಸನಿಗಿಂತ ನಾನೇನು ಕಡಿಮೆ ಎಂಬಂತೆ ರಂಗಬದುಕಿನ ಸಾಹಸಿ ಮತ್ತು ಕಲಾವಿದರೊಂದಿಗನ ಕರುಳುಬಳ್ಳಿಯ ಒಡನಾಟದೊಂದಿಗೆ ತಲೆ ಎತ್ತಿ ನಿಲ್ಲಬಲ್ಲಳು, ಎಂಬುದಕ್ಕೆ ಅವರ ಸುದೀರ್ಘ ಬಣದ ಬದುಕಿನ ರಂಗಜೀವನದ ಯಶಸ್ವಿ ಯಾತ್ರೆಯೇ ಸಾಕ್ಷಿ.

ತಮ್ಮ ಬಣ್ಣದ ಬದುಕಿನ ದೀರ್ಘಮಯ ಹಾದಿಯಲ್ಲಿ ‘ಹಳ್ಳಿ ಹುಡುಗಿ’, ‘ಗುಣಸಾಗರಿ’, ‘ಚಿತ್ರಾಂಗದೆ’, ‘ಹೇಮರೆಡ್ಡಿ ಮಲ್ಲಮ್ಮ’, ‘ಲಂಕಾದಹನ’, ‘ಶಾಕುಂತಲಾ’, ‘ಸಂಪೂರ್ಣ ರಾಮಾಯಣ’ ನಾಟಕಗಳೊಂದಿಗೆ ಸಾಮಾಜಿಕ ನಾಟಕಗಳಾದ ‘ಬಸ್ ಕಂಡಕ್ಟರ್’, ‘ನೀನು ಸಾಹುಕಾರನಾಗು’, ‘ಕನ್ಯಾದಾನ’, ‘ಧರ್ಮದ ದೌರ್ಜನ್ಯ’, ‘ದೇಸಾಯಿ ದರ್ಬಾರ್’, ‘ಸಿಡಿದೆದ್ದ ಬಡವ’ ಹಾಗೂ ‘ಅಗ್ನಿಪರೀಕ್ಷೆ’, ‘ಮುದುಕನ ಮದುವೆ’, ‘ಪೋಲಿಸನ ಮಗಳು’ ಹೀಗೇ ಸಾಲು ಸಾಲು ಸಾಮಾಜಿಕ ನಾಟಕಗಳ ನಾಯಕಿಯಾಗಿ ತಮ್ಮ ಅದ್ಭುತ ಜಾದುಮಯ ಅಭಿನಯದಿಂದ ಸಮಗ್ರ ಕನ್ನಡ ಅಭಿಮಾನಿಗಳ, ನಾಟಕಾಸಕ್ತರ ಮನಗೆದ್ದು, ಅಭಿಜಾತೆ ಅಭಿನೇತ್ರಿಯಾಗಿ ಕನ್ನಡ ವೃತ್ತಿ ರಂಗಭೂಮಿಯ ಅದ್ಭುತ ಕಲಾವಿದೆಯಾಗಿ ರಂಗ ದಾಖಲೆಯನ್ನು ಸ್ಥಾಪಿಸಿದ ರಂಗ ವ್ಯಕ್ತಿತ್ವ ಇವರದು.

ಚಿಂದೋಡಿ ಲೀಲಾ ತಮ್ಮದೇ ಸ್ವಂತ ಶ್ರೀಗುರು ಕೆ.ಬಿ.ಆರ್‌. ಡ್ರಾಮಾ ಕಂಪನಿ ಗಡಿನಾಡಾದ ಬೆಳಗಾವಿಯಲ್ಲಿ ಕ್ಯಾಂಪ್ ಮಾಡಿದಾಗ, ಲೀಲಮ್ಮನವರಿಗೆ ಆದ ಅನುಭವಗಳು, ಕಲಾವಿದೆಯಾಗಿ, ಹೋರಾಟಗಾರ್ತಿಯಾಗಿ ರೂಪಗೊಳ್ಳಲು ವೇದಿಕೆಯಾಯಿತು.

ಬೆಳಗಾವಿ ಮಹಾನಗರ ಪಾಲಿಕೆಯಿಂದ ನಾಟಕ ಪ್ರದರ್ಶಿಸಲು ಜಾಗ ಭೂಬಾಡಿಗೆ ಪಡೆದು, ಐತಿಹಾಸಿಕ ದಾಖಲೆಯೊಂದಿಗೆ ಕನ್ನಡ ನಾಟಕಗಳನ್ನು ನಗರದಲ್ಲಿ ಪ್ರದರ್ಶಿಸಿದ್ದು ಮಹಾನ್ ಸಾಹಸವೇ ಸರಿ. ಕಲೆಯನ್ನು ಸ್ವಾದಿಸದ ಕೆಲವರಿಂದ ಎದುರಾದ ಅಡೆ-ತಡೆ, ಮಾನಸಿಕ ಹಿಂಸೆ, ಲೆಕ್ಕಿಸದೆ, ದಿಟ್ಟತನದಿಂದ ನಾಟಕ ಪ್ರದರ್ಶನ ನಡೆಸಿದ್ದು ಕೆ.ಬಿ.ಆರ್‌. ಕಂಪನಿಯನ್ನು ಜೀವಂತಿಕೆಯಿಂದ ಇಟ್ಟಿದ್ದು, ದಿಟ್ಟಗಾರ್ತಿ ಚಿಂದೋಡಿ ಲೀಲಾ ಅವರಿಂದ ಮಾತ್ರಾ ಸಾಧ್ಯವೆಂಬುದು ಬೆಳಗಾವಿ ‘ರಂಗಾಸಕ್ತರು’ ಇಂದಿಗೂ ಬರೆಯಲಾರರು.

‘ಛತ್ರಪತಿ ಶಿವಾಜಿ’ ನಾಟಕ ಪ್ರದರ್ಶಿಸಿ ಮರಾಠಿಗರ ಮನಸ್ಸನ್ನು ಗೆದ್ದ ಚಿಂದೋಡಿ ಲೀಲಾ ಮುಂದೆ ಬೆಳಗಾವಿಯ ಮಹಾನಗರ ಸಭೆಯ ಸದಸ್ಯೆಯಾಗಿ ಆಯ್ಕೆಗೊಂಡು ಗೌರವ ಪಡೆದದ್ದು ರೋಚಕ ಕತೆ. ‘ಕಿತ್ತೂರ ಚೆನ್ನಮ್ಮ’ ಬಿರುದು ಪಡೆದುದಕ್ಕೆ ಸಾರ್ಥಕವೆಂಬಂತೆ, ನಿರಂತರವಾಗಿ ಹತ್ತು ವರ್ಷವರೆಗೆ ಭಾಷಾ ವಿರೋಧ ಕಡೆಗಣಿಸಿ, ಕನ್ನಡದ ರಂಗ ಕಹಳೆಯನ್ನು ಮೊಳಗಿಸಿದುದಲ್ಲದೆ, ಗೋಕಾಕ ಚಳುವಳಿಯಲ್ಲು ಚಿಂದೋಡಿ ಲೀಲಾ ತೋರಿದ ಕನ್ನಡ ಕೆಚ್ಚು ಅನನ್ಯ.

ಶ್ರೀಮತಿ ಇಂದಿರಾಗಾಂಧಿಯವರಿಗೆ ‘ದಕ್ಷಿಣದ ನರ್ಗಿಸ್’ ಎಂದೇ ಪರಿಚಿತರಾಗಿದ್ದ ಲೀಲಾ ಚಿಂದೋಡಿ ಅವರಿಗೆ ಬೆಳಗಾವಿಯಲ್ಲಿದ್ದಾಗಲೆ ‘ಪದ್ಮಶ್ರೀ’ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಪದವಿ ದೊರೆತದ್ದು ಅವರ ಅವಿರತ ರಂಗಸೇವೆ, ಬಣ್ಣದ ಬದುಕಿನ ಸಾಧನೆಗೆ ದೊರೆತ ಗೌರವ-ಹಿಡಿದ ಕನ್ನಡಿ.

ವಿವಿಧ ವೈವಿಧ್ಯಮಯ ರಂಗಾಭಿವೃದ್ಧಿ ಯೋಜನೆ-ಕಾರ್ಯಕ್ರಮಗಳ ಮೂಲಕ ನಾಟಕ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಆಯಾಮ ತಂದುಕೊಟ್ಟ ಹೆಗ್ಗಳಿಕೆಯೊಂದಿಗೆ, ತಮ್ಮ ಅವಧಿಯಲ್ಲಿ ಡಾ. ರಾಜಕುಮಾರ್ ಅವರಿಗೆ ‘ಕಲಾ ಕೌಸ್ತುಭ’ ಪ್ರಶಸ್ತಿ ಪ್ರದಾನ ಮಾಡಿದ್ದು ಮತ್ತೊಂದು ವಿಶೇಷ.

ಈ ರೀತಿಯಾಗಿ ವೃತ್ತಿ ರಂಗಭೂಮಿಯ ಸುದೀರ್ಘ ಯಾತ್ರೆಯಲ್ಲಿ ಹಲವು ಕಷ್ಟ-ನಷ್ಟಗಳನ್ನು ಎದುರಿಸಿ ಗೆದ್ದು, ತಮ್ಮ ಬಣ್ಣದ ಬದುಕಿಗೆ ನಿಜವಾದ ಸಾರ್ಥಕತೆ, ಯಶಸ್ಸು, ಗೌರವ, ಪ್ರಶಸ್ತಿಗಳ ತಾಣವಾದ, ತವರೂರಾದ ಈ ಕನ್ನಡಿಗರ ಹೆಮ್ಮೆಯ ಬಹುಸಂಸ್ಕೃತಿಯ ಕಲಾನಗರ ಬೆಳಗಾವಿಯ ಋಣ ತೀರಿಸಬೇಕೆಂಬ ಛಲ ತೊಟ್ಟು ಧೀಮಂತ ಛಲಗಾರ್ತಿ ನಗರದಲ್ಲಿ ಒಂದು ಶಾಶ್ವತ ರಂಗಮಂದಿರ ಸ್ಥಾಪಿಸುವಲ್ಲಿ ಎಷ್ಟೆ ಎಡರು ತೊಡರು, ಸಂಕಷ್ಟ, ಭಾಷಾ ದ್ವೇಷಿಗಳಿಂದಾದ ಮಾನಸಿಕ ಹಿಂಸೆ, ಎಲ್ಲವುಗಳನ್ನು ಮೆಟ್ಟಿ ನಿಂತು, ನಿಜವಾಗಿ ಕಿತ್ತೂರ ಚೆನಮ್ಮಳಾಗಿ, ತಮಗಾದ ಮಾನಸಿಕ ಹಾಗೂ ಆರ್ಥಿಕವಾಗಿ ಉಂಟಾದ ನೋವನ್ನು ಮರೆತು ‘ಬೆಳಗಾವಿ ನನಗೇನು ಮಾಡಿತು? ಎನ್ನುವುದಕ್ಕಿಂತ ಬೆಳಗಾವಿಗಾಗಿ ನಾನು ಏನು ಮಾಡಿದೆ” ಎನ್ನುವದು ಬಹು ಮುಖ್ಯ ಎನ್ನುವ ಮಂತ್ರ ಪಠಿಸಿ “ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವದು” ಎನ್ನುವ ಹಿರಿಯರ ಅನುಭವ ವಾಣಿಯಂತೆ ಧೃತಿಗೆಡದೆ, ಬೆಳಗಾವಿ ನಗರದ ಅತಿ ದುಬಾರಿ, ಬೆಲೆ ಬಾಳುವ ನಗರದ ಕೇಂದ್ರ ಸ್ಥಳದಲ್ಲಿರುವ ಸ್ವಂತ ಜಾಗವನ್ನು, ವಾಣಿಜ್ಯ ಉದೇಶಗಳಿಗಾಗಿ ಅಥವಾ ವಾಣಿಜ್ಯ ಸಂಕೀರ್ಣ, ಅಥವಾ ವಸತಿ ಸಂಕೀರ್ಣ ಮಾಡಿ ಲಕ್ಷಾಂತರ ರೂಪಾಯಿ ಆದಾಯದ ಮೂಲವಾಗಿಸಿಕೊಳ್ಳುವಂತೆ ನೀಡಿದ ಹಿಟೈಷಿಗಳ ಬಂದು ಬಳಗದ ಸಲಹೆಯನ್ನು ತಿರಸ್ಕರಿಸಿ, ತಮ್ಮ ಸ್ವಂತ ಜಾಗದಲ್ಲಿ ತಮ್ಮದೇ ಸ್ವಂತ ಉಸ್ತುವಾರಿಯಡಿ ಬೆಳಗಾವಿ ನಗರದಲ್ಲಿ ನಿರಂತರವಾಗಿ ಕನ್ನಡ ನಾಡು, ನುಡಿ ಸಾಂಸ್ಕೃತಿಕ, ರಂಗ ಚಟುವಟಿಕೆಗಳಿಗೆ ಸ್ಫೂರ್ತಿಯ ಕೇಂದ್ರ ಸ್ಥಾನವಾಗಲಿ ಎಂಬ ಕನ್ನಡ ಕಳಕಳಿಯ ಹೆಬ್ಬಯಕೆಯೊಂದಿಗೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ನಗರ ಆಸ್ತಿಯನ್ನು ಲಕ್ಷಗಟ್ಟಲೆ ರುಪಾಯಿ ಖರ್ಚು ಮಾಡಿ, ಬೆಳಗಾವಿ ನಗರದಲ್ಲಿ ಸುಸಜ್ಜಿತ, ಸಾಂಸ್ಕೃತಿಕ ಚಟುವಟಿಕೆಗಳಿಗೆ, ಅದರಲ್ಲೂ ರಂಗಚಟುವಟಿಕೆಗಳಿಗೆ, ಬೆಳಗಾವಿ ಸದಾಶಿವ ನಗರದಲ್ಲಿ ಕೆ.ಬಿ.ಆರ್‌. ಕನ್ನಡ ಸಂಸ್ಕೃತಿ ಕಲಾ ಕೇಂದ್ರವನ್ನು ತಮ್ಮ ಅಭಿನಯ ಮಾಂತ್ರಿಕತೆಯ ಕಲಾ ತಪಸ್ಸಿನ ಶಕ್ತಿಯನ್ನೆಲ್ಲಾ ಧಾರೆ ಎರೆದು ನಿರ್ಮಿಸಿದ್ದಾರೆ. ಕೆ.ಬಿ.ಆರ್ ಕಂಪನಿಗೆ ೭೫ರ ಸಡಗರದ ಸಂಭ್ರಮದಲ್ಲಿ ಕರ್ನಾಟಕ ಸರ್ಕಾರವು ಪ್ರತಿಷ್ಟಿತ ‘ಗುಬ್ಬಿ ವೀರಣ್ಣ ಪ್ರಶಸ್ತಿ’ ನೀಡಿ ಪುರಸ್ಕರಿಸಿರುವದು ನಿಜಕ್ಕೂ ಅಭಿನಂದನೀಯ. “ಕಲಾದೇವತೆಯ” ಕನ್ನಡ ಸಂಸ್ಕೃತಿ ಕಲಾಕೇಂದ್ರದಲ್ಲಿ ಇತ್ತೀಚೆಗೆ ಡಾ. ಚಂದ್ರಶೇಖರ ಕಂಬಾರರವರ ೩ ದಿನಗಳವರೆಗೆ ನಡೆದ ನಾಟಕೋತ್ಸವ ಮತ್ತು ಕರ್ನಾಟಕ ನಾಟಕ ಅಕಾಡೆಮಿಯ “ವೃತ್ತಿ ರಂಗಭೂಮಿ ನಾಟಕೋತ್ಸವಕ್ಕೆ ನಗರದ ರಂಗಾಸಕ್ತರು ತೋರಿಸಿದ ಪ್ರೋತ್ಸಾಹ, ಕಿಕ್ಕಿರಿದು ತುಂಬಿದ ರಂಗಮಂದಿರ ನೋಡಿದಾಗ, ಬೆಳಗಾವಿಯ ನಾಟಕ ಪ್ರಿಯರಿಗೆಲ್ಲಾ ಚಿಂದೋಡಿ ಲೀಲಾ ಬರಿ ಕಲಾವಿದೆಯಾಗಿರದೆ, ಬೆಳಗಾವಿಯ ಕನ್ನಡ ಸಂಸ್ಕೃತಿ ಕಲಾಕೇಂದ್ರದ ಕಲಾನಿಧಿ ಆಗಿರುವದು ಎಲ್ಲರ ಗಮನಕ್ಕೆ ಬಂದಿತು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...