Home / ಕವನ / ಕವಿತೆ / ಮುಂಬಯಿ ಬದುಕು

ಮುಂಬಯಿ ಬದುಕು

ಹಾಳು ಬೀದಿ ಬಸದಿಯಲಿ
ಗೋಳು ಕ್ಷಯ ಹಿಡಿದ
ಬಾಳಿಗೆ ದೊಂಗಾಲು ಬಿದ್ದು
ಕ್ರಿಮಿಗಳೋಪಾದಿ ಕೊಳೆವ
ನರ ನಾರಾಯಣರ ಬಾಳು
ಬಾಳೆ? ನೋಡಿರೈ ಅವರ

ಜೀವಂತ ಮರಣ
ಗುರಿರಹಿತ ಪಯಣ
ಉದಾಸೀನ ನಯನ, ನಿಶ್ಯಕ್ತ ಹರಣ
ಜೀವನದ ಅಲೆದಾಟ
ರೇಗಾಟ, ಕೂಗಾಟ, ನಿಜವನ್ನೆ ಸುಳಿವಾಟ

ಹರಕಲು ಗೇಹ
ಬಡಕಲು ದೇಹ
ನರಕ ಅದು, ಅಲ್ಲಿಲ್ಲ ನೇಹ!

ಹದಿಬದೆಯ ವ್ಯಾಪಾರ
ಅದರೊಳಗು ತಕರಾರ
ಕುಲ ಲಜ್ಜೆಗಳ ಮಾರಿ ತಾಯ್ತನದ ವ್ಯಭಿಚಾರ –
ಒಣದಾದ ತುಟಿಯಲ್ಲಿ
ಹಿರಿದಾದ ಮೇಲುನಗೆ
ತೆಳ್ಳನೆಯ ಉಸಿರು
ಬಡತನದ ಹೊಗೆ-ಧಗೆ
ಕಣ್ಣು ಕಾಂತಿ ಹೀನ
ಬಯಕೆಗಳ ಬಹುಬಗೆ –
ಗಿರಿಣಿಗಳ ಎಡೆಯಲ್ಲಿ
ಜಜ್ಜಿರುವ ನರರು
ಮೈರುಧಿರ ಬೆವರೆಂದು
ಸುರಿಸುವರು ಅವರು
ಅವರ ಸುಖ-ಅಳು
ಅದಕ್ಕೆಲ್ಲ ಹೆರರು –

ದಣಿದ ದೇಹಕೆ ಸುಖದ ಮೋಹ
ಉಸ್ಸೆನಲು ಓಡುವುದು ಗುಡಿಯೆಡೆಗೆ
ಬಹುದೂರ ಮನೆ
ಉದ್ದ ದಾರಿ ಅದಕಿಲ್ಲ ಕೊನೆ
ಮನದ ಕಿರುಕುಳ-ತಾಪ
ಮನೆಯಲ್ಲ ಅದು ಒಂದು ಕೂಪ

ಬರಿಹೊಟ್ಟೆ ಅರೆನಗ್ನ
ಅರೆಜೀವ ಕೂಸು
ನೂರು ಬಣ್ಣವ ಬಳಿಯೆ
ಕೈಲಿಲ್ಲ ಕಾಸು

ಕಂದಿ ಕಮರಿದ ಎಳೆ ಜೀವಗಳ
ಮೇಲೆ ನಾಡು ಕಟ್ಟಿಹದು ಕನಸು!
ವಯೋವೃದ್ದ ಹೆಗಲಲ್ಲಿ
ಬಡತನದ ಭಾರ
ನೆರೆಬಿದ್ದ ಹಣೆಯಲ್ಲಿ
ವಿವಶತೆಯ ಸಾರ
ನಿಡಿದುಸಿರ ಎಡೆಯಲ್ಲಿ
ಸಾವೆಷ್ಟು ದೂರ!
ಬರೆ ಎಳೆದ ಕಾಯ
ನರ-ನಾಡಿ ಗಾಯ
ತಿಕ್ಕಾಟ ಮನದಲ್ಲಿ
ಕದಡಿರುವ ಧ್ಯೇಯ
ಜಗವಲ್ಲ, ಇದು ಒಂದು
ವಿಧಿ ಬಗೆದ ಹೇಯ!

ಯೌವನಕೆ ಬೆಲೆಯಿಲ್ಲ
ಬರಿದೆ ಹೋಹುದು ತಡವರಿಸಿ
ಬವಣೆಯಲಿ ಬದುಕೆಲ್ಲ
ಬೆಳಕು-ಇದೆ ಸತ್ಯ-ಇದೆ
ಪುಲಿಯ ಬಳಿಯಲಿ ಹಸುವಂತೆ
ಶೌರ್‍ಯ ಸಹನೆಯ ಬಲವಿಲ್ಲ

ಬಲಹೀನ ಕೈಯಿಂದ
ಕಾತರದ ಕಣ್ಣಿಂದ
ಛಲಹೀನ ಒಲವನ್ನು
ಆತುರದ ಸೆಳವಿಂದ
ಬಯಸುತಿದೆ ಹಸುಗೂಸು
ದಯಾದಾನಿವರರಿಂದ…..

ಅರೆ! ದೂರಿದ್ದವರೆ,
ಬಳಿ ಬಂದು ನೋಡಿ
ನಿರ್ಜಿವ ನರರಿಂಗೆ
ಜೀವದಾನವ ಮಾಡಿ
ಉಳಿಸೋಣ ನಾಡನ್ನು
ನಾವೆಲ್ಲ ಕೂಡಿ…..!
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...