Home / ಕವನ / ಕವಿತೆ / ಶ್ರೇಷ್ಠ ಕನಿಷ್ಠ ಪ್ರಶ್ನೆಯೇ… ಅಸಂಗತ

ಶ್ರೇಷ್ಠ ಕನಿಷ್ಠ ಪ್ರಶ್ನೆಯೇ… ಅಸಂಗತ

ಕ್ಯಾತೆ ತೆಗೆದಿತ್ತು
ಜೀವನ ಸಾವ ಜೊತೆಗೆ
ಶ್ರೇಷ್ಠರಾರು ? ಪ್ರಶ್ನೆಯೆತ್ತಿಕೊಂಡು
ತುಸು ಗಂಭೀರವಾಗಿಯೇ !

ಜೀವನ, ನಾನು ಮೊದಲು !
ಜೀವ-ಜೀವಕ್ಕೆ, ಜಡ-ಜಡಕ್ಕೆ, ಕಾಲ-ಕಾಲಕ್ಕೆ
ಭಿನ್ನ! ಭಿನ್ನ! ರಂಗು! ರಂಗು!
ಬೆಳಕು; ಸಂತಸ.

ಕರುಣಿಸುವೆನು
ಅಂಗಳದಿ ಸೋಲು, ಗೆಲುವು, ಸಮಾಧಾನ;
ತಮ್ಮ, ತಮ್ಮ ಗುಣಾವಗುಣ,
ಅಭಿರುಚಿ, ಅನುಕೂಲ, ಶಕ್ತಿ, ದೌರ್ಬಲ್ಯಗಳಿಗೆ ತಕ್ಕಂತೆ.

ತುಡಿಸುವೆನು
ನನ್ನ ಪಂದ್ಯದಲಿರಲು
ಎಲ್ಲವನು ಎಲ್ಲರನು ಸದಾ!
ಜೀವಂತಿಕೆಯೇ ನನ್ನ ಹೂರಣ.

ಮಾಡುವೆನು ಅದಲು, ಬದಲು
ನಿಧಾನವಾಗಿ, ವೇಗವಾಗಿ, ಬೇಕಾದ ಹಾಗೆ!
ನೆಚ್ಚದಂತೆ.
ನಿಲ್ಲಿಸೆನು ಯಾವುದನೂ ಒಂದೇ ಸ್ತರದಲಿ
ಕೆಲ, ಕೆಲವರನು ಬಿಟ್ಟು,

ನಾನು ವಿಕ್ಷಿಪ್ತನಲ್ಲ!
ಹುಟ್ಟಿ ಬರುವ ಎಲ್ಲಕ್ಕೂ ಎಲ್ಲರಿಗೂ ಸಲ್ಲುವೆನು
ನನ್ನಲ್ಲಿ ಅರಳಿ ಬೆಳೆದವರು ಸಾವ ಗೆಲುವರು
ಉಳಿಯುವರು; ಬೆಳಗುವರು
ಚರಿತ್ರೆಯಲಿ ಚಿರಕಾಲ.

ನಾನು ಸಾವು,
ಭಯ! ನೋವು! ಕತ್ತಲು! ಮೌನ!
ಸತ್ಯ! ಸಾರ್ವತ್ರಿಕ! ಬಿಡುಗಡೆ!!

ನನಗೆ ಸ್ವಾಗತವಿಲ್ಲ; ಆರಾಧನೆಯಿಲ್ಲ
ಯಾರೂ… ತಾವೇ ಬಂದು ಬೀಳರು
ನನ್ನ ಮಡಿಲಿಗೆ
ಬಹಳ ಬದುಕಲರಿಯದವರು; ಧೀರರು ವಿನಃ.

ಶರಣು!
ಸತ್ತು ಬದುಕುವ ಗೆದ್ದವರಿಗೆ
ನಾನು, ಈಗ… ಆಗ… ಯಾವಾಗ ಬೇಕಾದರೂ…
ಯಾವರೂಪದಲ್ಲಾದರೂ…
ಬಂದೆರಗಬಹುದು; ಮುಗಿಸಬಹುದು.
ಸತ್ಯವಿದನು ತಿಳಿದೂ… ತಿಳಿದೂ
ಏನು ನಿಲ್ಲಿಸದೆ ಎಲ್ಲವನು ಮಾಮೂಲಾಗಿ
ಮುಂದುವರಿಸುವ
ಜೀವ ವಿಶೇಷರಿಗೆ.

ಹುಟ್ಹುಟ್ಟಿ ಬರುವ
ಜೀವದಲೆ ಎಲೆಗಳು ಬಾಳಿ
ಹಣ್ಣಾಗಿ ಉದುರಬೇಕು
ಚಿಗುರಾಗಿ ಮೂಡಬೇಕು; ಬೆಳೆಯಬೇಕು
ಬಾಳೆಂಬ ತೇರು ತರು ಹೊಸ ಹೊಸದಾಗಿ
ಸಿಂಗಾರಗೊಳಬೇಕು
ಅರ್ಥಪೂರ್ಣವಾಗಬೇಕು.

ಇದು ನ್ಯಾಯ! ಸರ್ವ ಸಮ್ಮತ !
ಜಗದಲಿ ಶ್ರೇಷ್ಠ, ಕನಿಷ್ಠ ಪ್ರಶ್ನೆಯೇ ಅಸಂಗತ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್