Home / ಲೇಖನ / ಇತರೆ / ಆತ್ಮ ಸೌಂದರ್ಯ

ಆತ್ಮ ಸೌಂದರ್ಯ

ಪ್ರಿಯ ಸಖಿ,
ಇಂದು ನಾವು ಬಹಿರಂಗದ ಆಡಂಬರ, ಡಾಂಭಿಕತೆ, ಸೋಗಿನ ಸುಳಿಗೆ ಸಿಲುಕಿ ನಿಜವಾದ ಆತ್ಮಸೌಂದರ್ಯವನ್ನು ಮರೆತುಬಿಟ್ಟದ್ದೇವೆ. ಪಂಡಿತರತ್ನ ಎರ್ತೂರು ಶಾಂತಿರಾಜ ಶಾಸ್ತ್ರಿಯವರು ತಮ್ಮ ಒಂದು ಹಾಡಿನಲ್ಲಿ
ಅರಿಯಲಿಲ್ಲವಲ್ಲ
ಆತ್ಮನ ಮರೆತು ಕೆಟ್ಟರೆಲ್ಲಾ
ಹೊರಗಣ ಸೋಗೆಯ
ತಿಂದೊಳಗಿನ
ರಸದಿರವನರಿಯದಿಹ ಕುರಿಯಂತೆಲ್ಲಾ
ಎಂದಿದ್ದಾರೆ. ಕುರಿ ಸೋಗೆಯನ್ನು ಜಗಿದು ಉಗಿಯುತ್ತದೆ. ಅದಕ್ಕೆ ಆ ಗರಿಯೊಳಗಿನ ರಸದ ಅರಿವು ಇರುವುದೇ ಇಲ್ಲ. ಹಾಗೇ ನಾವು ಆತ್ಮದ ಔನ್ನತ್ಯವನ್ನು ಮರೆತು ಹೊರಗಿನ ಆಡಂಬರಕ್ಕೆ ಮನಸೋತು ಹೋಗಿದ್ದೇವೆ ಎನ್ನುತ್ತಾರೆ.

ನಮ್ಮ ಎಲ್ಲ ಧರ್ಮಗಳೂ ಆತ್ಮೋದ್ಧಾರಕ್ಕೆ ಹೆಚ್ಚಿನ ಮಹತ್ವ ನೀಡಿವೆ. ಬಹಿರಂಗ ಶುದ್ಧಿಗಿಂತಾ ಅಂತರಂಗ ಶುದ್ಧಿಯೇ ಮುಖ್ಯವಾದುದು. ದೇವರಿಗಾಗಿ ಕೋರಿಕೆಗೆ ಗಂಟೆಗಟ್ಟಲೆ ಪೂಜೆ, ಜಪ, ತಪ, ಧ್ಯಾನಗಳನ್ನು ಮಾಡಿಯೂ ಮನಸ್ಸನ್ನು ಕೇಂದ್ರೀಕರಿಸಲಾಗದ ಮೇಲೆ ಅಂತಹಾ ಪೂಜೆ, ಧ್ಯಾನಗಳಿಂದ ಪ್ರಯೋಜನವೇನು? ದೇಹವನ್ನು ನಾನಾ ವಿಧವಾದ ವಸ್ತ್ರ, ಆಭರಣ, ಪ್ರಸಾಧನಗಳಿಂದ ಸಿಂಗರಿಸಿ ಅದನ್ನೇ ನಾವು ಸೌಂದರ್ಯವೆಂದುಕೊಂಡು ಬೀಗುತ್ತೇವೆ. ಆದರೆ ನಿಜವಾದ ಆತ್ಮ ಸೌಂದರ್ಯಕ್ಕೆ ಇಂತಹ ಯಾವುದೇ ಆಡಂಬರವೂ ಬೇಡ.

ಹಾಗಾದರೆ ಸಖೀ ಈ ಆತ್ಮಸೌಂದರ್ಯವೆಂದರೆ ಏನು? ಅದನ್ನು ವೃದ್ಧಿಸಿಕೊಳ್ಳುವುದು ಹೇಗೆ? ನಾವು ಒಳ್ಳೆಯದೆಂದು ನಂಬಿರುವ ತತ್ವಗಳು, ಮೌಲ್ಯಗಳು, ಗುಣಗಳು ಇವುಗಳ ಅಳವಡಿಕೆಯೇ ಆತ್ಮದ ಸಿಂಗಾರದೊಡವೆಗಳು. ಒಳ್ಳೆಯದನ್ನು ಕುರಿತು ಆಲೋಚಿಸುವ, ಒಳ್ಳೆಯದನ್ನು ಮಾಡುವ, ಒಳ್ಳೆಯ ರೀತಿಯಲ್ಲಿ ನಡೆಯುವ ಬದುಕಿಗೆ ಯಾವ ಸೋಗೂ ಬೇಕಿಲ್ಲ. ಇಂದಿನ ಬದುಕಿನ ಅಧೋಗತಿಗೆ ಕಾರಣವೇ ನಾವು. ಆತ್ಮವನ್ನು ನಿರ್ಲಕ್ಷಿಸಿರುವುದು ಬುದ್ಧಿಪ್ರಧಾನವಾದ, ವ್ಯಾವಹಾರಿಕ ಬದುಕೇ ನಮಗಿಂದು ಮಹತ್ವದ್ದಾಗಿರುವುದರಿಂದಲೇ ನಮ್ಮ ಸುತ್ತಲೂ ಅನಾಚಾರ ಹೆಚ್ಚಾಗಿ ಶಾಂತಿ ನೆಮ್ಮದಿಗಳು ಕಾಣೆಯಾಗಿವೆ.

ನಿಜವಾದ ಆತ್ಮಸೌಂದರ್ಯದ ಬಗೆಗೆ ಮನುಜ ತಿಳಿದುಕೊಂಡು ಎಚ್ಚೆತ್ತು ಆಡಂಬರದ ಹಾದಿಯನ್ನು ಬಿಟ್ಟು ಸತ್ಯದ ಹಾದಿಯಲ್ಲಿ ನಡೆಯತೊಡಗಿದಾಗ ನಿಜವಾಗಿ ನಾವು ‘ಆತ್ಮ’ ಹೊಂದಿದವರಾಗುತ್ತೇವೆ. ಇಂತಹ ಶಾಶ್ವತವಾದ ಆತ್ಮ ಸೌಂದರ್ಯವನ್ನು ಪಡೆಯುವೆಡೆಗೆ ಹಂತಹಂತವಾಗಿಯಾದರೂ ಸರಿ ನಾವು ಹೆಜ್ಜೆ ಹಾಕೋಣ. ಅಲ್ಲವೇ ಸಖೀ?
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...