Home / ಲೇಖನ / ಹಾಸ್ಯ / ಕಾಣದ ಕೈ

ಕಾಣದ ಕೈ

ಕತೆಗಾರರು ಯಶಸ್ವಿ ಪತ್ರಿಕಾ ಲೇಖಕರಾಗರೆಂದು ಯಾರೋ ನುಡಿದ ನೆನಪಿದೆ. ಅದರಲ್ಲಿ ಸತ್ಯವಿದ್ದಿರಬೇಕು.

ನಾನು ಕತೆಗಾರನಂತೆ. ಹಾಗೆಂದು ಜನರು ಹೇಳುವರು. ಜನರು ಒಗ್ಗಟ್ಟಾಗಿ ಇಟ್ಟ ಹೆಸರು, ತೊಟ್ಟಿಲಿನಲ್ಲಿ ತಂದೆ-ತಾಯ್ಗಳು ಇರಿಸಿದ ಹೆಸರಿಗಿಂತ ಬಲವುಳ್ಳುದು. “ಜನಾಭಿಪ್ರಾಯ” ವೆನ್ನುತ್ತಲೇ- ನೀವದನ್ನು ವಿರೋಧಿಸಲಾರಿರಿ.

ಕತೆಗಾರನಾಗಿಯೂ ನಾನು “ಜ್ಞಾನಸಿಂಧು” ಪತ್ರಿಕಾಲಯದಲ್ಲಿ ಪರಿಚಯವುಳ್ಳವನು. “ಸುಬಾವ್, ಐ. ಸಿ. ಎಸ್. ಇವರ ವಿವಾಹದ ಕುರಿತು ನಿಮಗೆ ತಿಳಿದುದೆಲ್ಲವನ್ನೂ ವಿವರಿಸಿ, ನಮ್ಮ ಪತ್ರಿಕೆಗೊಂದು ಬಾತ್ಮಿ ಬರೆದು ಬಿಡಿ!” ಎಂದು ಸಂಪಾದಕರು ವಿನಂತಿಸಿದರು.

ಲೇಖನಿಯನ್ನೆ, ‘ಕರಿಮಣಿ’ ಎಂಬ ನೂತನ ಶಾಯಿ ಕುಪ್ಪಿಯಲ್ಲಿ ಮುಳುಗಿಸಿ, ಬರೆಯಲಾರಂಭಿಸಿದೆ.

” ಎಸ್ , ಇವರ ಮುಖವು ದುಷ್ಯಂತನ ತೇಜವನ್ನು ಪಡೆದು, ಆ ಅಭಿನವ ಶಾಕುಂತಲೆಯ ಪೂರ್ಣಿಮಾಚಂದ್ರ ಸದೃಶವಾದ..”

“ಕ್ಷಮಿಸಿರಿ; ನೀವೂ ಕೇಳುವ ಆ ಅಭಿನವ ಶಕುಂತಲೆ (ವಧು) ಯು ಮುಖಕ್ಕೆ ನೀಲಗಿರಿ ಅಥವಾ ಬಾಬಾಬುಡನ್ ಗಿರಿ-ಅಥವಾ ಇನ್ಯಾವದಾದರೂ ಗಿರಿಯ ಸ್ನೋವನ್ನು ತಿಕ್ಕಿರಬಹುದು. ಆಕೆಯ ಮುಖದ ಮೇಲೆ ಕಲೆಗಳಿರಲಿಲ್ಲ!” ಎಂದರು ಸಂಪಾದಕರು.

‘ಪೂರ್ಣಿಮಾಚಂದ್ರ’ನೆಂಬುದನ್ನು ಅಳಿಸಿದೆ. ಆ ಮೇಲೆ ಕೆನೆಹಾಲಿನಂತೆ ಶುಭ್ರವಾದ ಮೊಗಕ್ಕೆದುರಾಗಿ ಆ ಮಂಟಪದಲ್ಲಿ ಶೋಭಿಸುತ್ತಿತ್ತು. ಶೋಕಭಾರದಿಂದ, ಕಂದಿದ ತಾವರೆಯಂತ, ವಧುವಿನ ಮಾತೃವು, ಕಣ್ವನಂತೆ ತೇಜಪುಂಜವಾದ ಶರೀರಕಾಂತಿಯುಳ್ಳ…” ಈ ರೀತಿಯಾಗಿ ಬರೆದೆ. ಮುಕ್ಕಾಲು ತಾಂವು ಬರೆದೆ. ಬರೆದು ಮುಗಿಸಬೇಕಾದರೆ ಏಳು ಕಾಗದಗಳಲ್ಲಿ ತಿದ್ದಿದೆ. ಎಂಟನೆ ಪ್ರತಿಯನ್ನು ಶುದ್ಧವಾಗಿ ಬರೆದು, ಸಂಪಾದಕರ ಕೈಗೆ ಒಪ್ಪಿಸಿದೆ. ಪತ್ರಿಕಾ ವ್ಯವಸಾಯವು ನಿಜವಾಗಿಯೂ ನಾವೆಣಿಸಿದಷ್ಟು ಸುಲಭವಲ್ಲ.

ಸಂಪಾದಕರು ಅದನ್ನು ಕೈಗೆ ತೆಗೆದುಕೊಂಡು, ತಮ್ಮ ದೃಷ್ಟಿ ಹೊರಳಿಸಿ, ನಗುತ್ತ ನನಗೆ ವಿದಾಯವಿತ್ತರು. ಬರೆಹಗಾರರನ್ನು ಪರೀಕ್ಷಿಸುವುದೇ ಈ ಸಂಪಾದಕರುಗಳ ದುರ್ಬುದ್ಧಿ -ನಾನು ಮಾತ್ರ ಜಯಶೀಲನಾದೆನಲ್ಲವೇ- ಎಂಬ ಸಂತೋಷದಿಂದ ತೆರಳಿದೆ.

ತಾ. ೧೭-೩-೧೯೩೪ರ ‘ಜ್ಞಾನಸಿಂಧು’ವನ್ನು ತೆರೆದು ನೋಡಿದಾಗ, ನಾನು ಬರೆದುಕೊಟ್ಟ ಮುಕ್ಕಾಲು ತಾಂವು ಬರಹವು ಐದು ಪಂಕ್ತಿಗಳಲ್ಲಿ ಈ ಕೆಳಗಿನಂತೆ ರೂಪಾಂತರ ಹೊಂದಿ ಪ್ರಕಟವಾಗಿತ್ತು:-

“ಐ. ಸಿ. ಎಸ್. ದುಷ್ಯಂತತೇಜ, ಇವರು ಅಭಿನವ ಶಾಕುಂತಲೆ ಎಂಬ ಕನೆಹಾಲಿನವಳನ್ನು ಶೇಕದಾರ್ ಕಂದಿತಾವರ್ ಮತ್ತು ಕಣ್ವನಾಥ ಎಂಬವರ ಸಮಕ್ಷಮ, ಇದೇ ಕಳೆದ ತಾ. ೧೪ರಲ್ಲಿ ವಿವಾಹವಾದರು. ನಮ್ಮ ಜಿಲ್ಲೆಯಲ್ಲಿ ನಡೆದ ಈ ಏಳನೆಯ ಅಂತರ್ಜಾತೀಯ ವಿವಾಹವು ಇತರರೆಲ್ಲರಿಗೆ ಆದರ್ಶವಗಿದೆ!”

ಇದು ಯಾರ ಕೈಯಾಗಿರಬಹುದು?-ಯಾರು ಒಲ್ಲ! ಕಾಣದ ಕೈ!

“ಕತೆಗಾರರು ಪತ್ರಿಕಾವ್ಯವಸಾಯವನ್ನು ತಿಳಿಯದುದಷ್ಟೆ – ಪತ್ರಿಕಾ ವ್ಯವಸಾಯಿಗಳು ಕಥಾಲೇಖನವನ್ನು ಅರಿಯರು. ದಯಮಾಡಿ ನೀವು ಕಳೆದ ಸಂಚಿಕೆಯಲ್ಲಿ ಪ್ರಕಟಸಿದ ಆ ಭಯಂಕರ ವಾರ್ತೆಯನ್ನು ತಿದ್ದು ಬಿಡಿರಿ” ಎಂದು ಸಂಪಾದಕರಿಗೆ ಪತ್ರ ಬರೆದರೆ, ಉತ್ತರವೂ ಇಲ್ಲ, ತಿದ್ದುಪಡಿ ಪ್ರಕಟವಾದುದೂ ಇಲ್ಲ.

ಬಹುಶಃ “ಸಂಪಾದಕರ ತೀರ್ಮಾನವೇ ಕೊನೆಯದು.”

ಆಶ್ಚರ್ಯವೆಂದರೆ-ದುಷ್ಯಂತ ತೇಜ ಐ. ಸಿ. ಎಸ್. ಎಂಬವನೊಬ್ಬನು ಅಭಿನವ ಶಕುಂತಲೆ ನಾಮಾಂಕಿತ ಕೆನೆ ಹಾಲಿ ಎಂಬ ಗ್ರಾಮಸ್ಥಳನ್ನು ಶೇಕದಾರ್ ಕಂದಿತಾವರ್ ಮತ್ತು ಕಣ್ವನಾಥ ಎಂಬ ಹೆಸರಿನ ಮಹನೀಯರ ಸಮಕ್ಷಮ ವಿವಾಹವಾದುದು ನಿಜವೆಂದು,- ನಮೂರಿನ ಜನರೆಲ್ಲರೂ ಇಂದಿಗೂ ನಂಬಿರುವರು!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...