Home / ಲೇಖನ / ಇತರೆ / ಗೆಳೆತನದ ಅಳತೆ

ಗೆಳೆತನದ ಅಳತೆ

ಅದನ್ನು ಅಳೆಯಬಹುದೇ? ಅದು ಒಂದು ಫೌಂಟನ್ ಪೇನಿಗಿಂತ ಉದ್ದವಿಲ್ಲವೆನ್ನುವವರಿವರು. ರಂಗಪ್ಪನೂ ವಾಸುವೂ ಗೆಳೆಯರು. ಅವರ ಗೆಳೆತನವೆಂದರೆ ಊರಲ್ಲೆಲ್ಲ ಹೆಸರಾದುದು. ಇಬ್ಬರೂ ದಿನದ ಇಪ್ಪತ್ತನಾಲ್ಕು ತಾಸುಗಳಲ್ಲಿಯೂ ಒಟ್ಟಿಗೆ ಇರುವರು. ಒಂದು ದಿನ ವಾಸುವಿಗೆ ರಂಗಪ್ಪನ ಮನೆಯಲ್ಲಿ ಊಟವಾದರೆ, ಮತ್ತೊಂದು ದಿನ ರಂಗಪ್ಪನಿಗೆ ವಾಸುವಿನ ಮನೆಯಲ್ಲಿ. ಇವರ ಸ್ನೇಹವು ಊರಲ್ಲಿ ನಿಜಕ್ಕೂ ಗಾದೆಯ ಮಾತಾಗಿ ಹೋಗಿದೆ.

ಒಂದು ದಿನ ವಾಸುವು ರಂಗಪ್ಪನಿಗೆ ಮೇರಿಪಿಕ್ ಫರ್ಡಳ ಚಿತ್ರವಿರುವ ಒಂದು ಪೋಸ್ಟ್ ಕಾರ್ಡನ್ನು ಪ್ರೇಮದಿಂದ, “ಬೇಡದೆ ಕೊಡಲು”, ರಂಗಪ್ಪನ ಪ್ರೇಮವು ಇಮ್ಮಡಿಯಾಗಿ ಉಕ್ಕಿ, “ವಾಸೂ-ನಮ್ಮ ಸ್ನೇಹವು ಜನ್ಮ ಜನ್ಮಕ್ಕೂ ಕಡಿದುಹೋಗಲಾರದು!” ಎಂದನು.

“ನವು ಮುಂದೆ ಎಲ್ಲಿಯಾದರೂ ಹುಳುಗಳಾಗಿ ಹುಟ್ಟಿದರೂ ಒಟ್ಟಿಗೇ ಹುಟ್ಟಿ-ಗೆಳೆತನದಿಂದಲೇ ಇರಬೇಕು!” ಎಂದನು ವಾಸು.

ಇಬ್ಬರೂ ಹೆಚ್ಚಿಗೇನೂ ಮಾತಾಡಲಾರದಾದರು, ಪ್ರೇಮದಿಂದ ಇಬ್ಬರ ಎದೆಗಳೂ ಉಬ್ಬಿ, ಉಸಿರಿಗೇ ಸ್ಥಳವಿರಲಿಲ್ಲ, ಕಂಠಗಳು ಪೂರ್ಣವಾಗಿದ್ದುವು.

ರಂಗಪ್ಪನ ಮನೆಯ ಆಸ್ತಿಯ ಲೆಕ್ಕಗಳನ್ನಿಡುವ ಕರಣೀಕನು ರಾಜಪ್ಪ. ಅವನಿಗೆ ರಂಗಪ್ಪನ ತಂದೆಯಿಂದ, ರಂಗಪ್ಪನಿಂದ, ರಂಗಪ್ಪನ ಸಂಬಂಧಿಕರಿಂದ, ಅತ್ತ ಇತ್ತ ಹೋಗುವಾಗ ತನ್ನನ್ನು ಪರಿಚಯದ ನಗುವಿನಿಂದ ಸನ್ಮಾನಿಸಿದವರಿಂದ ಸಾಲ ಬೇಡುವ ಅಭ್ಯಾಸ. ಅವನು ರಂಗಪ್ಪನ ತಂದೆಯಿಂದ ಪಡೆದ “ಅಡ್ವಾನ್ಸು”, ಅವನನ್ನು ಇನ್ನು ಮೂರು ವರ್ಷಗಳ ತನಕ ದುಡಿದು ಸಲ್ಲಿಸಬೇಕಾದ ಋಣಕಂಭಕ್ಕೆ ಬಂಧಿಸಿತ್ತು. ಅದರ ಮೇಲೆ ಅವನು ಮಾಡುತಿದ್ದುದೆಲ್ಲ “ಸಾಲ”. ರಂಗಪ್ಪನಿಗೆ ಅವನು ಕೊಡಬೇಕಾಗಿದ್ದುದು ಹನ್ನೆರಡಾಣೆಗಳು!

ರಂಗಪ್ಪನು ಆ ಹನ್ನೆರಡು ಆಣೆಗಳಿಗಾಗಿ ಹನ್ನೆರಡು ಯುಗ (ತಿಂಗಳು; – ತಿಂಗಳನ್ನು ರಂಗಪ್ಪನು, ತನ್ನನ್ನಾರಾದರೂ ದುಃಖಗೊಟ್ಟು ಪೀಡಿಸಿದರೆ ‘ಯುಗ’ವೆಂದು ನಾಮಕರಣ ಮಾಡುವನು.) ಪೇಚಾಡಿದನು. ಕೊನೆಗೆ, ಉಪಾಯಗಾಣದೆ, ರಾಜಪ್ಪನಿಗೆ ಬುದ್ಧಿಗಲಿಸಬೇಕೆಂದು, ಆತನ “ವಾಟರ್
ಮೇನ್” ಪೇನನ್ನು ಮೆಲ್ಲನೆ ಎತ್ತಿಬಿಟ್ಟನು.

“ಭದ್ರವಾಗಿಡು!” ಎನ್ನುತ್ತ ರ೦ಗಪ್ಪನು, ಅದನ್ನು ವಾಸುವಿನ ಕೈಯಲ್ಲಿ ಕೊಟ್ಟನು. ಗೆಳೆತನದ ಪ್ರಕಾಶವೆಲ್ಲವೂ ವಾಸುವಿನ ಮುಖದ ಮೇಲೆ ಮಿನುಗಿತು.

‘ಹಣದ ತಗಾದೆ’ ಎನ್ನುತ್ತಿರಲ್ಲ- ಅದು ಹೇಗೆ ಉಂಟಾಗುತ್ತದೆ ಎಂಬುದನ್ನು ಹೇಳುವುದು ತೀರ ಅನಾವಶ್ಯಕ. ನೀವೆಲ್ಲರೂ ಅದನ್ನು ಚೆನ್ನಾಗಿ ಬಲ್ಲಿರಿ; ಅನುಭವಿಸಿರುವಿರಿ. ಹೋಟೇಲಿನ ರಾಮಣ್ಣನು ವಾಸುವನ್ನು ಒಂದು ದಿನ ಹಣಕ್ಕಾಗಿ ಪೀಡಿಸಲು ವಾಸುವ ದಿಕ್ಕುಗೆಟ್ಟು, ಆ ಫೌಂಟನ್ ಪೇನನ್ನು ರಾಮನಾಯಕನೆಂಬಲ್ಲಿ ಒಂದು ರೂಪಾಯಿಗೆ ಒತ್ತೆ ಇಟ್ಟು, ಸಂಕಷ್ಟದಿಂದ ಪಾರಾದನು. ಅಂದೇ, ರಂಗಪ್ಪನು ಬಂದು, “ವಾಸೂ, ಆ ಫೌಂಟೆನ್‍ಪೇನ್ ಎಲ್ಲಿದೆ?” ಎಂದನು.

ಇಂತಹ ಸ್ಥಿತಿಯಲ್ಲಿ ನೀವೇನು ಮಾಡುವಿರಿ?

“ಮಿತ್ರಾ!”-ವಾಸುವಿನ ಕಂಠವು ಗದ್ಗದಿತವಾಯಿತು, “ಮಿತ್ರಾ! ಹೇಳಿದರೆ ನೀನು ನಂಬುವಿಯೋ ಇಲ್ಲವೋ! ಕೊಡಿ ಯಾಲಬೈಲಿನ ಆ ದೊಡ್ಡ ಹಳ್ಳದ ಮೇಲಿನ ಸಂಕವಿಲ್ಲವೇ? ನಿನ್ನೆ ಅದರ ಮೇಲೆ ನಿಂತು ಬಾಗಿ, ನೀರನ್ನು ನೋಡುತಿದ್ದಾಗ….. ‘ಕ್ಲಿಪ್ಪು’ ಸಿಕ್ಕಿಸಿರಲಿಲ್ಲ ಮಿತ್ರಾ… ಅಯ್ಯೋ ದೇವ… ನೀರಿಗೆ ಬಿದ್ದುದನ್ನು ಒಂದು ತಾಸು ಹುಡುಕಿದರೂ ಸಿಕ್ಕಲಿಲ್ಲ!” ಮಂದಾರ ಪುಷ್ಪವನ್ನು ಕಳಕೊಂಡ ಬಕಾವಲಿಯ ಚರ್ಯೆಗಿಂತಲೂ ಕರುಣಾಜನಕ ವಾದ ಚರ್ಯೆಯು ವಾಸುವಿನದು!

ರಂಗಪ್ಪನು ತನ್ನ ಕಿಸೆಯಿಂದ ಫೌಂಟನ್‌ಪೇನನ್ನು ವಾಸುವಿನ ಮುಂದೆ ಹಿಡಿದು ಸ್ಥಿರದೃಷ್ಟಿಯಿಂದ ಅವನನ್ನು ನೋಡುತ್ತ – “ದೇವರು ದೊಡ್ಡವನು; ಮಹಾ ಜಲಧಿಯಿಂದ ಇದನ್ನುದ್ಧರಿಸಿದನು, ರಾಮನಾಯಕನ ಕೈಯಿಂದ ಇದು ನನಗೆ ಸಿಕ್ಕಿತು. ನನ್ನ ಗೆಳೆತನದ ಬೆಲೆ ತಿಳಿಯಿತೇ?”

ವಾಸುವು ಮೌನ!

“ಒಂದು ರೂಪಾಯಿ!”
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...