Home / ಕವನ / ಕವಿತೆ / ಮುಂದೆ ಹೋಗಿ ಸ್ವಾಮಿ

ಮುಂದೆ ಹೋಗಿ ಸ್ವಾಮಿ

ನಿನ್ನೆ ಹಾಕಿದ್ದೆ ಓಟು
ಮತ್ತೆ ಬಂದಿರಿ ಇವತ್ತು!
ಏನು ಆಟವೆ ಸ್ವಾಮಿ ?
ಮುಂದೆ ಹೋಗಿ,
ಬೇಡುವುದಕ್ಕೂ ಒಂದು ಹೊತ್ತು ಗೊತ್ತಿಲ್ಲವೆ?
ನಗುತ್ತಿದ್ದಾರೆ ಎಲ್ಲ, ಮುಂದೆ ಹೋಗಿ.

ಅಲ್ಲಿ ಕಾರ್ಗಿಲ್ಲಿನಲ್ಲಿ ಉತ್ತರದೆತ್ತರದಲ್ಲಿ
ಯಜ್ಞ ನಡೆಯುತ್ತಿದೆ ಗೊತ್ತೆ ತಮಗೆ ?
ನಮ್ಮ ಹುಡುಗರ ಜೀವ ಆಜ್ಯಧಾರೆಯ ಹಾಗೆ
ಒಂದೆ ಸಮ ಸುರಿಯುತಿದೆ ಯುದ್ಧದುರಿಗೆ;
ಕಾದುವ ಹುಡುಗರ ತಂದೆ ತಾಯಿ ಹೆಂಡಿರ ದುಃಖ-
ಜ್ವಾಲೆ ಹಬ್ಬುತ್ತಿದೆ ಎಲ್ಲ ಕಡೆಗೆ.
ಇಂಥ ಹೊತ್ತಲ್ಲೂ ನಿಮ್ಮ ಆಟವೆ ನಿಮಗೆ!
ಬೇಡುವುದಕ್ಕೂ ಒಂದು ಹೊತ್ತು ಗೊತ್ತಿಲ್ಲವೆ ?
ಗೊತ್ತಾದ ಅವಧಿಗೆ ಮಾತ್ರ ಬನ್ನಿರಿ ತಾವು
ಕಂಡ ಕಂಡಾಗ ಅಲ್ಲ
ಮುಂದೆ ಹೋಗಿ.

ಕರುಳನಿರಿಯುವ ಚಳಿಯ ಇರುಳು, ಶಿಖರಗಳನ್ನು
ಏರುತ್ತ ಹೋರುತ್ತ,
ಬಂಕರಿನಲ್ಲಿ ಅಡಗಿ ಕೂತು
ಛಕ್ಕನೆ ಎದ್ದು
ಹೊಂಚಿ ಹೊಡೆಯುತ್ತ,
ಚುಕ್ಕಿಗಳ ಬಯಲಲ್ಲಿ
ಪತಾಕೆಯಂತೆ ಸೆಟೆದು
ತುಪಾಕಿ ಸಿಡಿಸುತ್ತ
ಅಂಗುಲ ಆಂಗುಲಕ್ಕೂ ಇಂಗುತಿದೆ ಜೀವಸಿರಿ;
ಆದರೂ ತಗ್ಗದೆ ಮೇಲಕ್ಕೆದ್ದಿದೆ ಉರಿ.
ಇಂಥ ಹೊತ್ತಲ್ಲೂ ಬರುತ್ತೀರಲ್ಲ ಹೀಗೆ!

ಸಾಕು ನಿಲ್ಲಿಸಿ ಶಂಖ, ಹಿಂದೆ ಕೇಳಿದ್ದೇ,
ಊದಬೇಡಿ ಮತ್ತೆ, ಮುಂದೆ ಹೋಗಿ
ಮುಂದೆ ಹೋಗಿ ಸ್ವಾಮಿ ಮುಂದೆ ಹೋಗಿ.

ಬೇಡ ಸ್ವಾಮೀ ನಿಮ್ಮ
ಚುನಾವಣೆಯ ಮಾತು,
ನಿಮ್ಮ ಯೋಗ್ಯತೆ ನಮಗೆ ಲಾಗಾಯ್ತಿನಿಂದಲೂ
ಚೆನ್ನಾಗಿ ಗೊತ್ತು;
ಶಾಕಿನಿ ಡಾಕಿನಿಯರ ರಕ್ತದಾಹಕ್ಕಾಗಿ
ಚೆನ್ನಾಗಿ ನಡೆದಿದ್ದ ರಥ ಉರುಳಿ ಬಿತ್ತು.
ಸರಿಯಾದ ಸಮಯಕ್ಕೆ ಹೊಂಚಿದ್ದ ಹುಲಿರಾಯ
ಬೇಲಿಯನ್ನೇ ಜಿಗಿದ
ಯುದ್ಧ ಬಂತು.
ಹೇಳಬೇಕೇ ತಮಗೆ ? ಎಲ್ಲ ಗೊತ್ತಲ್ಲ,
ಎಲ್ಲದರ ಹಿಂದೆ ತಾವೆ ಇದ್ದೀರಲ್ಲ ?
ಆದರೂ ಹೀಗೆ
ಹೊಸ ವೇಷ ಹಾಕಿ
ಬರಬಹುದೆ? ದಯಮಾಡಿ ಮುಂದೆ ಹೋಗಿ,
ಮುಂದೆ ಹೋಗಿ ಸ್ವಾಮಿ ಮುಂದೆ ಹೋಗಿ.

ಯಾರಿಗೆ ಚುನಾವಣೆ,
ಯಾತಕ್ಕೆ ಚುನಾವಣೆ?
ಪೆದ್ದು ಕುರಿಗಳ ಹಿಂಡ ಕಾಯಲಿಕ್ಕಾಗಿಯೇ ?
ಕೊಬ್ಬಿದ ತೋಳಗಳನ್ನು ಆಯಲಿಕ್ಕಾಗಿಯೇ ?
ಪಾರ್ಲಿಮೆಂಟ್ ಹಾಲಲ್ಲಿ
ಕುರ್ಚಿ ಮೈಕು ಹಿಡಿದು
ಕಾದಲಿಕ್ಕಾಗಿಯೇ?
ಕಾಯುವುದಿದ್ದರೆ ಹೋಗಿ ಗಡಿಗಳನ್ನು ಕಾಯಿರಿ,
ಕಾದುವುದಿದ್ದರೆ ಹೋಗಿ ವೈರಿ ಜೊತೆ ಕಾದಿರಿ.
ಚುನಾವಣೆಗೆ ನಿಮಗೆ ಹಕ್ಕು ಎಲ್ಲುಂಟು?
ಎರಡು ಸಾವಿರ ಕೋಟಿ ಯರ ಮನೆ ಗಂಟು ?
ಹೋಗಿ ಹೋಗಿ ಸ್ವಾಮಿ ಮುಂದೆ ಹೋಗಿ.
ಎಲ್ಲ ಸರಿಯಾದಾಗ, ಹೊತ್ತು ಗೊತ್ತು ತಿಳಿದು
ಮತ್ತೆ ಬಂದೀರಂತೆ
ಮುಂದೆ ಹೋಗಿ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...