Home / ಕವನ / ಅನುವಾದ / ಹಾಗೆ ಆಗಬಹುದಿತ್ತು ಸಮುದ್ರವೇ

ಹಾಗೆ ಆಗಬಹುದಿತ್ತು ಸಮುದ್ರವೇ

ಕಡಲ ಉಪ್ಪು ನೀರಿನಲ್ಲುರುಳುರುಳಿ ಒರಟಾದ ಕಲ್ಲಿನಂತೆ,
ಅಪಳಿಸುವ ಅಲೆಗೆ ಎದೆಯೊಡ್ಡಿ, ಬಂದೇ ಬರುವ
ಚಳಿಗೆ ಮಳೆ ಗಾಳಿ ಬಿಸಿಲಿಗೆ ಸಾಕ್ಷಿಯಾಗಿ
ಕಾಲದ ಕಟ್ಟು ಮೀರಿದ ಬಂಡೆಗಲ್ಲಿನಂತೆ
ಸಹಜವಾಗಿ ಇದ್ದುಬಿಡಬಹುದಾಗಿತ್ತು. ಹಾಗೆ ಆಗಲಿಲ್ಲ.

ತನ್ನ ಕುರಿತು, ಪರರ ಕುರಿತು,
ಕ್ಷಣಕ್ಕೊಂದು ರೂಪತಾಳಿ ಜಾರಿ ಹೋಗುವ
ಬದುಕನ್ನು ಕುರಿತು ಚಿಂತೆಯನ್ನು ಹೊದ್ದುಕೊಂಡೆ.
ಬಡಿಯಲೋ ಕೊಲ್ಲಲೋ ಕೈಯೆತ್ತುವ ಮುನ್ನ
ತುಯ್ಯಲಾಡುವ ಮನದವನಾದೆ.

ಬೆಕ್ಕು ಸುಳಿದಂತೆ ಲೋಕದಲ್ಲಿ ಸುಳಿವ
ಕೆಡುಕನ್ನು ಕಣ್ಣಾರೆ ಕಾಣಲು ಬಯಸಿದೆ.
ಜಗದ ಯಂತ್ರದ ಚಲನೆ ತಟ್ಟನೆ
ನಿಲ್ಲಿಸುವ ಸನ್ನೆ ಗೋಲು ಎಲ್ಲೆಂದು ತಡುಕಿದೆ.

ಕ್ಷಣದರ್ಧದಲ್ಲಿ ಲೋಕದೆಲ್ಲ ಸಂಭವಗಳು ಛಿದ್ರವಾಗುವವು
ಎಂದರಿತು ನನ್ನದೇ ಹಾದಿ ಮಾಡಿಕೊಂಡು
ನಾನು ಸಾಗಿದ್ದೆ. ನನ್ನ ಮನಸ್ಸು
ತನ್ನ ಸೆಳೆವ ಮತ್ತೊಂದು ಹಾದಿಯಲ್ಲಿ ನಡೆದಿತ್ತು.

ನಿರ್ಧರಿಸುವ ಮನಸ್ಸು, ನಿರ್ವಚನಗೊಂಡ ಮನಸ್ಸು
ಎರಡನ್ನೂ ಕತ್ತರಿಸಿ ಬೇರೆ ಮಾಡುವ ಚೂರಿ
ಬೇಕಾಗಿತ್ತೋ ಏನೋ. ನಿನ್ನ ಸಿಡಿಲಕ್ಷರಗಳು
ಕಿಕ್ಕಿರಿದ ಗ್ರಂಥವಲ್ಲ, ಬೇರೆಯದೇ ಪುಸ್ತಕ
ಬೇಕಾಗಿತ್ತು ನನಗೆ. ಆದರೂ ಬೇಸರವಿಲ್ಲ.
ನಿನ್ನ ಹಾಡು ಅಂತರಾಳದ ಗಂಟುಗಳ ತೊಡಕು ಸಡಿಲಿಸುವುದು
ಈ ಕ್ಷಣದ ನಿನ್ನ ಆರ್‍ಭಟ ನಕ್ಷತ್ರಗಳ ಮುಟ್ಟುವುದು.
*****
ಮೂಲ: ಯೂಜೀನ್ ಮಾಂಟೇಲ್ / Eugenio Montale

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್