Home / ಕವನ / ಕವಿತೆ / ಉಯಿಲು

ಉಯಿಲು

ಕೊಡಬೇಡವೋ ಶಿವನೆ!
ಕೂಸು ಮುದ್ದ
ಲೋಕವೆಲ್ಲಾ ಬಂಜೆ ಅಂದ್ರೂ ಪರವಾಗಿಲ್ಲ
ತೀರಿ ಹೋಗಲಿ ನಮ್ಮ ತಲೆಗೆ ಎಲ್ಲಾ!

ಅವರು ಇವರು ಯಾರ ಮಾತು ಏಕೆ ?
ಅಪ್ಪ ಯಾರೋ ಗೊತ್ತಿಲ್ಲ
ಸಾಯೋತನಕ ಅಮ್ಮನನ್ನಾದರು ನೋಡಿಕೊಂಡಿರುವ
ಭಾಗ್ಯವೂ ನಮಗಿಲ್ಲ; ಕಾರಣ ನಾವು ದನಗಳು.

ಎಲ್ಲೋ ಹುಟ್ಟಿ
ಎಲ್ಲೆಲ್ಲೋ ಯಾರು ಯಾರಿಗೋ ದಾಸರಾಗಿ ಜೀವತೇದು
ಹೇಗೋ ಕಂತೆ ಒಗೆದು ಹೋಗುವ
ಪರ್ದೇಸಿ ಬದುಕು ಯಾರಿಗೆ ಬೇಕ್ರಿ ?

ಹುಟ್ಟಿನಿಂದಲೇ ಶುರು
ನಮ್ಮ ಗೋಳು ಬಾಳು
ತಲೆ-ಕಾಲು, ಬೆನ್ನು-ಬಾಲ, ಅಚ್ಚೆ-ಮಚ್ಚೆ, ಸುಳಿ-ಮೂಳೆ
ನಂಬಿಕೆಗೆ ತಕ್ಕನಾಗಿ ಇದ್ದರೆ ಮಾತ್ರ ಲೇಸು!

ಆರೈಕೆ ಮನಸ್ಸಿದ್ದಂಗೆ
ತಾಯಿ ಹಾಲು ರುಚಿಗೆ ಮಾತ್ರ
ಮೈಗತ್ತುತ್ತೋ ಇಲ್ಲವೋ ಹಾಕಿದ ಕಸಕಡ್ಡಿ ತಿಂದು
ಜೀವ ಹೊರೆಯಬೇಕು.

ಹಲ್ಲು ಮೂಡಿರದಿದ್ದರೂ ಮರುಕ ತೋರಿಸರು
ತುಸುವೇ ಬನಿಯಾಗಿದ್ದರು ಸಾಕು
ಎಲ್ಲಾ ತರದ ನೊಗಗಳು ಹೆಗಲಿಗೇರುತ್ವೆ
ಬಿದ್ದು ಹೋಗೋ ತನಕ ಇದು ಸಾಗೇ ಇರುತ್ತೆ.

ಬೇನೆ-ಬೇಸರಿಕೆ, ಸುಸ್ತು-ಸಂಕಟ
ದಾಹ, ಹಸಿವು ಏರು ಇಳಿವು ಲೆಕ್ಕಕ್ಕಿಲ್ಲ
ಭಾವನಿಕೆಗೆ ಅರ್ಹವಾಗಲು, ಪ್ರೀತಿ ವಿಶ್ವಾಸ
ಪಡೆಯಲು
ನಾವೇನು ಮನುಷ್ಯರೇನು ?

ದುಡ್ಡಿನಾಸೆಗೋ… ಷೋಕಿಗೋ…
ಇಲ್ಲ! ನಮ್ಮ ಕ್ಷಮತೆ ಕಡ್ಡಿಯಷ್ಟು ಕಡಿಮೆಯಾದರೂ
ಸಂತೆ, ಜಾತ್ರೆಗೆ ಅಟ್ಟಿಕೊಂಡು ಹೋಗಿ
ತೋಚಿದ ಬೆಲೆಗೆ ತೂರಿ ಬಿಡುವರು.

ಯಾರು ಇಟ್ಟುಕೊಳ್ಳರು ನಮ್ಮನ್ನ ಕೊನೆತನಕ
ಉದ್ದಕ್ಕೂ ಮಾರುತ್ತಾ ನಡೆವರು
ಆಯ್ಕೆಗೆ ಎಲ್ಲಿದೆ ಸ್ವಾತಂತ್ರ್ಯ ?
ಅನುಭವಿಸುವುದನ್ನು ಬಿಟ್ಟು.

ಬರಬಾರದ್ದೇನಾದರು ಬಂದೋ…
ಬರ್ಬರ ದುಡಿಮೆಯಲಿ ಘಾತ ಸಂಭವಿಸಿಯೋ…
ವ್ಯರ್ಥ! ಹೊರೆಯೆನಿಸಿದರೆ
ತಿನ್ನುವ ಜನರಿಗೆ ಕೊಟ್ಟು ಮನೆಮಂದಿಗೆಲ್ಲಾ ಕೆರ
ಹೊಲಿಸಿಕೊಳ್ಳುವರು.

ಇವರಲ್ಲಿ ಸತ್ತರೆಂತಿಟ್ಟುಕೊಳ್ಳಿ,
ಎಲ್ಲರೂ ಸೇರುವರು, ಇನ್ನಿಲ್ಲದ ನೇಮ ನಡೆಸುವರು
ತೊಳೆದು, ಸಿಂಗರಿಸಿ ಹೂಳುವರು, ಸುಡುವರು
ಪೂಜೆ ಮಾಡುವರು ಆಗಲೂ… ಅನಂತರವು…
ಭಯದಿಂದ.

ನಾವು ಸತ್ತರೆ ಬಹಳ ಜನ
ಬಿಸಾಕಿ ಬರುವರು ಬಯಲಲ್ಲಿ
ಪ್ರಾಣಿ, ಪಕ್ಷಿಗೆ ಆಹಾರ ಮಾಡಿ
ನಾವು ಬದುಕಿನಲಿ ಸಾವಿನಲಿ ಉಪಯುಕ್ತರು
ಆದರೂ ನಮಗೀ ಗತಿ ನೋಡಿ!

ಬಯಲ ಮಹಾಮನೆ ಕಟುಕರಂಗಡಿಯಲಿ
ಕೊರಡು, ಮಚ್ಚುಗಳ ಉನ್ಮತ್ತ ನರ್ತನಕೆ
ನವರಂಗವಾಗುವೆವು ನಾವು
ತುಂಡು, ತುಂಡಾಗಿ ರವಾನೆಯಾಗುವೆವು
ಬೇಯಲಿಕೆ
ಪದಾರ್ಥವಾಗಿ.

ಕೊಡಬೇಡವೋ ಶಿವನೇ! ಕೂಸು ಮುದ್ದ
ನಮ್ಮ ಕುಲ ಹುಟ್ಟೋದು ಬೇಡ
ಈ ಸಾವು ಸಾಯೋದು ಬೇಡ
ತೀರಿ ಹೋಗಲಿ ನಮ್ಮ ತಲೆಗೆ… ಎಲ್ಲಾ!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...