Home / ಕವನ / ಕವಿತೆ / ಉಯಿಲು

ಉಯಿಲು

ಕೊಡಬೇಡವೋ ಶಿವನೆ!
ಕೂಸು ಮುದ್ದ
ಲೋಕವೆಲ್ಲಾ ಬಂಜೆ ಅಂದ್ರೂ ಪರವಾಗಿಲ್ಲ
ತೀರಿ ಹೋಗಲಿ ನಮ್ಮ ತಲೆಗೆ ಎಲ್ಲಾ!

ಅವರು ಇವರು ಯಾರ ಮಾತು ಏಕೆ ?
ಅಪ್ಪ ಯಾರೋ ಗೊತ್ತಿಲ್ಲ
ಸಾಯೋತನಕ ಅಮ್ಮನನ್ನಾದರು ನೋಡಿಕೊಂಡಿರುವ
ಭಾಗ್ಯವೂ ನಮಗಿಲ್ಲ; ಕಾರಣ ನಾವು ದನಗಳು.

ಎಲ್ಲೋ ಹುಟ್ಟಿ
ಎಲ್ಲೆಲ್ಲೋ ಯಾರು ಯಾರಿಗೋ ದಾಸರಾಗಿ ಜೀವತೇದು
ಹೇಗೋ ಕಂತೆ ಒಗೆದು ಹೋಗುವ
ಪರ್ದೇಸಿ ಬದುಕು ಯಾರಿಗೆ ಬೇಕ್ರಿ ?

ಹುಟ್ಟಿನಿಂದಲೇ ಶುರು
ನಮ್ಮ ಗೋಳು ಬಾಳು
ತಲೆ-ಕಾಲು, ಬೆನ್ನು-ಬಾಲ, ಅಚ್ಚೆ-ಮಚ್ಚೆ, ಸುಳಿ-ಮೂಳೆ
ನಂಬಿಕೆಗೆ ತಕ್ಕನಾಗಿ ಇದ್ದರೆ ಮಾತ್ರ ಲೇಸು!

ಆರೈಕೆ ಮನಸ್ಸಿದ್ದಂಗೆ
ತಾಯಿ ಹಾಲು ರುಚಿಗೆ ಮಾತ್ರ
ಮೈಗತ್ತುತ್ತೋ ಇಲ್ಲವೋ ಹಾಕಿದ ಕಸಕಡ್ಡಿ ತಿಂದು
ಜೀವ ಹೊರೆಯಬೇಕು.

ಹಲ್ಲು ಮೂಡಿರದಿದ್ದರೂ ಮರುಕ ತೋರಿಸರು
ತುಸುವೇ ಬನಿಯಾಗಿದ್ದರು ಸಾಕು
ಎಲ್ಲಾ ತರದ ನೊಗಗಳು ಹೆಗಲಿಗೇರುತ್ವೆ
ಬಿದ್ದು ಹೋಗೋ ತನಕ ಇದು ಸಾಗೇ ಇರುತ್ತೆ.

ಬೇನೆ-ಬೇಸರಿಕೆ, ಸುಸ್ತು-ಸಂಕಟ
ದಾಹ, ಹಸಿವು ಏರು ಇಳಿವು ಲೆಕ್ಕಕ್ಕಿಲ್ಲ
ಭಾವನಿಕೆಗೆ ಅರ್ಹವಾಗಲು, ಪ್ರೀತಿ ವಿಶ್ವಾಸ
ಪಡೆಯಲು
ನಾವೇನು ಮನುಷ್ಯರೇನು ?

ದುಡ್ಡಿನಾಸೆಗೋ… ಷೋಕಿಗೋ…
ಇಲ್ಲ! ನಮ್ಮ ಕ್ಷಮತೆ ಕಡ್ಡಿಯಷ್ಟು ಕಡಿಮೆಯಾದರೂ
ಸಂತೆ, ಜಾತ್ರೆಗೆ ಅಟ್ಟಿಕೊಂಡು ಹೋಗಿ
ತೋಚಿದ ಬೆಲೆಗೆ ತೂರಿ ಬಿಡುವರು.

ಯಾರು ಇಟ್ಟುಕೊಳ್ಳರು ನಮ್ಮನ್ನ ಕೊನೆತನಕ
ಉದ್ದಕ್ಕೂ ಮಾರುತ್ತಾ ನಡೆವರು
ಆಯ್ಕೆಗೆ ಎಲ್ಲಿದೆ ಸ್ವಾತಂತ್ರ್ಯ ?
ಅನುಭವಿಸುವುದನ್ನು ಬಿಟ್ಟು.

ಬರಬಾರದ್ದೇನಾದರು ಬಂದೋ…
ಬರ್ಬರ ದುಡಿಮೆಯಲಿ ಘಾತ ಸಂಭವಿಸಿಯೋ…
ವ್ಯರ್ಥ! ಹೊರೆಯೆನಿಸಿದರೆ
ತಿನ್ನುವ ಜನರಿಗೆ ಕೊಟ್ಟು ಮನೆಮಂದಿಗೆಲ್ಲಾ ಕೆರ
ಹೊಲಿಸಿಕೊಳ್ಳುವರು.

ಇವರಲ್ಲಿ ಸತ್ತರೆಂತಿಟ್ಟುಕೊಳ್ಳಿ,
ಎಲ್ಲರೂ ಸೇರುವರು, ಇನ್ನಿಲ್ಲದ ನೇಮ ನಡೆಸುವರು
ತೊಳೆದು, ಸಿಂಗರಿಸಿ ಹೂಳುವರು, ಸುಡುವರು
ಪೂಜೆ ಮಾಡುವರು ಆಗಲೂ… ಅನಂತರವು…
ಭಯದಿಂದ.

ನಾವು ಸತ್ತರೆ ಬಹಳ ಜನ
ಬಿಸಾಕಿ ಬರುವರು ಬಯಲಲ್ಲಿ
ಪ್ರಾಣಿ, ಪಕ್ಷಿಗೆ ಆಹಾರ ಮಾಡಿ
ನಾವು ಬದುಕಿನಲಿ ಸಾವಿನಲಿ ಉಪಯುಕ್ತರು
ಆದರೂ ನಮಗೀ ಗತಿ ನೋಡಿ!

ಬಯಲ ಮಹಾಮನೆ ಕಟುಕರಂಗಡಿಯಲಿ
ಕೊರಡು, ಮಚ್ಚುಗಳ ಉನ್ಮತ್ತ ನರ್ತನಕೆ
ನವರಂಗವಾಗುವೆವು ನಾವು
ತುಂಡು, ತುಂಡಾಗಿ ರವಾನೆಯಾಗುವೆವು
ಬೇಯಲಿಕೆ
ಪದಾರ್ಥವಾಗಿ.

ಕೊಡಬೇಡವೋ ಶಿವನೇ! ಕೂಸು ಮುದ್ದ
ನಮ್ಮ ಕುಲ ಹುಟ್ಟೋದು ಬೇಡ
ಈ ಸಾವು ಸಾಯೋದು ಬೇಡ
ತೀರಿ ಹೋಗಲಿ ನಮ್ಮ ತಲೆಗೆ… ಎಲ್ಲಾ!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...