Home / ಲೇಖನ / ಹಾಸ್ಯ / ಆತಿಥ್ಯ

ಆತಿಥ್ಯ

(ಹಳ್ಳಿ ಯೂರ ಸಭ್ಯಗೃಹಸ್ಥರೊಬ್ಬರ ಮನೆ; ಅತಿಥಿಗಳೊಬ್ಬರು ಮನೆಗೆ ಬರುವರು ಮನೆಯ ಯಜಮಾನನು ಗಡಬಡಿಸಿ ಎದ್ದು ನುಡಿಯುವನು)

“ಆಲಲ ರಾಯರ ಬರೋಣಾಯ್ತೇನು?…. ಬರಬೇಕ…. ಬರಬೇಕು. ಇದೇನಿದು ಬಡವರ ಮನೀಗೆ ಭಾಗೀರಥಿ ಬಂದಹಾಂಗ?…. ಇಲ್ಲೆ ,ಇಲ್ಲೆ ಮ್ಯಾಲೆ ಕೂಡ್ರಿ ರಾಯರಽ! ಎಲೋ… ಯಾರಾವರು….? ದಿಂಬೆಲ್ಲಿ ಅದನೋ….? ತಾ; ತಾ, ಲಗೂನಽ ತಾ! ಏನಪಾ… ಈ ಹುಡಗೋರು….! ಇಟ್ಟದ್ದು ಇಟ್ಟಲ್ಲಿ ಇರಗೊಡೂಹಾಂಗಽ ಇಲ್ಲ! ಕೂಡ್ರಿ ರಾಯರಽ ಕೂಡ್ರಿ….! ಹುಡುಗೂರ ಕಾಲಾಗ ಬ್ಯಾಸತ್ತು ಹೋಗಿನ್‌ ನೋಡ್ರಿ… ಅತು ಹಾಸಗೀ ಸುರಳೀಗೆ ನಂಬಿ ಕೂತುಗೊಳ್ರಿ! ಏನು ಚಹ ಆಗಬೇಕೊ, ಕಾಫಿಯೋ, ಹಾಲೊ….? ಏನುಬೇಕು ಹೇಳ್ರಿ! ಒಲ್ಲೇ ಅಂದ್ರ ಕೇಳೂಹಾಂಗಿಲ್ಲ… ಬಡವರ ಮನೀಗೆ ಬಂದು ಏನು ಹಾಂಗಽ ಹೋಗತೀರಾ? ನಾಳೆ ನಿಮ್ಮ ಮನೀ ಮುಂದ ನಾಲಗೀ ಕಿತ್ತಿಗೊಂಡು ಪ್ರಾಣಾ ಕೊಟ್ಟೇನು!”

“ಏ…! ಒಳಗ ಹೇಳೊ ರಾಯರಿಗೆ ಸ್ವಲ್ಪ ಸಜ್ಜಗೀ ಮಾಡಂತ ಹೇಳು….! ಮತ್ತ ಸಜ್ಜಗೀ ತುಪ್ಪದಾಗ ಕರೀಲಿಕ್ಕೆ ಹೇಳು….! ಇಲ್ಲದಿದ್ದರ ಏನ ಕೇಳತೀ ಅದು ಡೊಣಿಸಾಲ ಹೆಣ್ಣು! ನುಚ್ಚು ಕುದಿಸಿ ಇಟ್ಟೀತು…! ಸೀ ಸಜ್ಜಗೀ ಅಂತ ಹೇಳು ಮತ್ತೆ…! ಇಲ್ನೋಡು, ಒಮಗಿಲೆ ಓಡಬ್ಯಾಡ! ಕಿವಿ ಕಿತ್ತೇನು… ಪೂರಾ ಕೇಳಿಕೊಂಡು ಹೋಗು! ಬರೇ ಸೀ ಆದರ ನೆಟ್ಟಗಾಗೂದಿಲ್ಲ, ಸ್ಪಲ್ಪ ಅವಲಕ್ಕೀ ಒಗ್ಗರಣೀ ಹಾಕಲಿಕ್ಕೆ ಹೇಳು….! ಎಲೆಯಲ್ಲಾ! ಗೌಡರ ಹಿತ್ತಲಾಗಿಂದಽ ಕರೀಬೇವು ಇಸಗೊಂಡು ಬಾರೊ-ಅವಲಕ್ಕಿಗೆ-ಅವಲಕ್ಕಿ ಘಮಾ ಘಮಾ ಆಗಲಿ!…. ಚಹಾಕ್ಕ ಒಂದು ಬ್ಯಾರೆ ಎಸರಿಡಲಿಕ್ಕೆ ಹೇಳು ಸುಳ್ಳಽ ತಡಾ ಮಾಡಬ್ಯಾಡ್ರಿ!”

“ಎಲೊ-ಅಳಮಾರೀಗಂಡೇ! ಗಂಡಸಽ ನೀನು?…. ‘ಸಕ್ರಿಲ್ಲಾ-ಚಹಾ ಇಲ್ಲಾ-’ ಹೇಳಲಿಕ್ಕೆ ಬಂದಾನ ಅತುಗೋತ….! ಹೋಗು ಓಡು ಜಲ್‌ದಿ…, ಚೆನಬಸಪ್ಪನ ಅಂಗಡಿಗೆ ಹೋಗು, ನಾ ಹೇಳಿನಿ ಅಂತ ಹೇಳು! ಅತಗೋತಾಽ ತಿರಿಗಿ ಬರಬ್ಯಾಡ! ಕಾಲು ಮುರದೀನು, ಹಾಂಗ ಹೀಂಗ ಅಂತ ಚೆನಬಸಪ್ಪ ಅದಽ ಮಾತು ಹಚ್ಚಾನು…., ರಾಯರು ಬಂದು ಕೂತಾರಂತ ಹೇಳು, ಇಲ್ನೋಡು…. ಹಂಗಽ ನಾಲ್ಕು ಅಡಕಿ ಒಂದ್ನಾಲ್ಕು ಲವಂಗ, ಒಂದು ಕಾಚಿನ ಹಳ್ಳು ಕೊಡಂತ ಹೇಳು-ಚೆನಬಸಪ್ಪಗ… ಲಗೂ ಬಾ, ಬಿಸಲಾಯ್ತು….!

“ಏನಂತಾರೋ ಒಳಗ….? ತುಪ್ಪಿಲ್ಲಂತ….? ಇಷ್ಟೊತ್ತು ಏನು ಮಾಡತಿದ್ಲು….! ಹೇಳಲಿಕ್ಕೇನಾಗಿತ್ತು-ಹುಣ್ಣಾಗಿತ್ತೇನು ಬಾಯಿಗೆ….? ತುಪ್ಪ ತೀರಿಹೋಯ್ತೇನು? ಇದಽ, ಇಂದ ಇನ್ನೂ ಮಂಗಳವಾರ… ಶನಿವಾರ ಸಂತೀ ದಿನ ಮೂರು ಸೇರು ಬೆಣ್ಣೆ ತಂದಿತ್ತು….; ಏನು ಎರಕೋತಾಳೋ ಏನೊ ತುಪ್ಪದಲೆ! ಎಷ್ಟು ತಂದರೂ ಈಡಽ ಆಗೋದಿಲ್ಲ…! ಹೋಗೋ ದಾಮೂ; ಕುಲಕರ್ಣ್ಯಾರ ಮನ್ಯಾಗ ತುಪ್ಪಾ ಇಸಗೊಂಡು ಬಾ… ಸಂತೀ ದಿವಸ ಕೊಡತೀವಂತ್‌ ಹೇಳು! ಕೂಡ್ರಿ ರಾಯರಽ ತಡಾ ಅತ್ಯು! ಹತ್ತ ನಿಮಿಷದಾಗಽ ಚಹಾ ಆಗತದ…; ಎಂದೂ ಬಾರದವರು. ಹಂಗಽ ಕಳಿಸೂದು ನಮ್ಮ ಧರ್ಮಽ?

“ಏನದೂ….? ಗುರೂಗುರೂ ಸಪ್ಪಳ್ಯಾತರದು? ಸಜ್ಜಗೀ ಒಡೀತಾರ….? ಬೇಶ್‌ ಬೇಶ್‌ ಇದ್ದರಿಂಥಾ ಹೆಣ್ಣು ಇರಬೇಕು….; ಲಗೂ ಆಗಲೀ ಅಂತ ಹೇಳು. ರಾಯರು ಹಸದಿದ್ದರು….”

(ಒತ್ತಾಯದ ಕೆಮ್ಮನ್ನು ತಂದುಕೊಂಡು ಖೇಕರಿಸಿ ಉಗಳಲೆಂದು ಹೊರಗೆ ಹೋದ ರಾಯರು ಮೊಚ್ಚೆಯ ಪರಿವೆಯಿಲ್ಲದೆ ಊರಿನ ವರೆಗೆ ಓಡಿ ಬಿಟ್ಟರು.)
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...