Home / ಲೇಖನ / ಹಾಸ್ಯ / ಆತಿಥ್ಯ

ಆತಿಥ್ಯ

(ಹಳ್ಳಿ ಯೂರ ಸಭ್ಯಗೃಹಸ್ಥರೊಬ್ಬರ ಮನೆ; ಅತಿಥಿಗಳೊಬ್ಬರು ಮನೆಗೆ ಬರುವರು ಮನೆಯ ಯಜಮಾನನು ಗಡಬಡಿಸಿ ಎದ್ದು ನುಡಿಯುವನು)

“ಆಲಲ ರಾಯರ ಬರೋಣಾಯ್ತೇನು?…. ಬರಬೇಕ…. ಬರಬೇಕು. ಇದೇನಿದು ಬಡವರ ಮನೀಗೆ ಭಾಗೀರಥಿ ಬಂದಹಾಂಗ?…. ಇಲ್ಲೆ ,ಇಲ್ಲೆ ಮ್ಯಾಲೆ ಕೂಡ್ರಿ ರಾಯರಽ! ಎಲೋ… ಯಾರಾವರು….? ದಿಂಬೆಲ್ಲಿ ಅದನೋ….? ತಾ; ತಾ, ಲಗೂನಽ ತಾ! ಏನಪಾ… ಈ ಹುಡಗೋರು….! ಇಟ್ಟದ್ದು ಇಟ್ಟಲ್ಲಿ ಇರಗೊಡೂಹಾಂಗಽ ಇಲ್ಲ! ಕೂಡ್ರಿ ರಾಯರಽ ಕೂಡ್ರಿ….! ಹುಡುಗೂರ ಕಾಲಾಗ ಬ್ಯಾಸತ್ತು ಹೋಗಿನ್‌ ನೋಡ್ರಿ… ಅತು ಹಾಸಗೀ ಸುರಳೀಗೆ ನಂಬಿ ಕೂತುಗೊಳ್ರಿ! ಏನು ಚಹ ಆಗಬೇಕೊ, ಕಾಫಿಯೋ, ಹಾಲೊ….? ಏನುಬೇಕು ಹೇಳ್ರಿ! ಒಲ್ಲೇ ಅಂದ್ರ ಕೇಳೂಹಾಂಗಿಲ್ಲ… ಬಡವರ ಮನೀಗೆ ಬಂದು ಏನು ಹಾಂಗಽ ಹೋಗತೀರಾ? ನಾಳೆ ನಿಮ್ಮ ಮನೀ ಮುಂದ ನಾಲಗೀ ಕಿತ್ತಿಗೊಂಡು ಪ್ರಾಣಾ ಕೊಟ್ಟೇನು!”

“ಏ…! ಒಳಗ ಹೇಳೊ ರಾಯರಿಗೆ ಸ್ವಲ್ಪ ಸಜ್ಜಗೀ ಮಾಡಂತ ಹೇಳು….! ಮತ್ತ ಸಜ್ಜಗೀ ತುಪ್ಪದಾಗ ಕರೀಲಿಕ್ಕೆ ಹೇಳು….! ಇಲ್ಲದಿದ್ದರ ಏನ ಕೇಳತೀ ಅದು ಡೊಣಿಸಾಲ ಹೆಣ್ಣು! ನುಚ್ಚು ಕುದಿಸಿ ಇಟ್ಟೀತು…! ಸೀ ಸಜ್ಜಗೀ ಅಂತ ಹೇಳು ಮತ್ತೆ…! ಇಲ್ನೋಡು, ಒಮಗಿಲೆ ಓಡಬ್ಯಾಡ! ಕಿವಿ ಕಿತ್ತೇನು… ಪೂರಾ ಕೇಳಿಕೊಂಡು ಹೋಗು! ಬರೇ ಸೀ ಆದರ ನೆಟ್ಟಗಾಗೂದಿಲ್ಲ, ಸ್ಪಲ್ಪ ಅವಲಕ್ಕೀ ಒಗ್ಗರಣೀ ಹಾಕಲಿಕ್ಕೆ ಹೇಳು….! ಎಲೆಯಲ್ಲಾ! ಗೌಡರ ಹಿತ್ತಲಾಗಿಂದಽ ಕರೀಬೇವು ಇಸಗೊಂಡು ಬಾರೊ-ಅವಲಕ್ಕಿಗೆ-ಅವಲಕ್ಕಿ ಘಮಾ ಘಮಾ ಆಗಲಿ!…. ಚಹಾಕ್ಕ ಒಂದು ಬ್ಯಾರೆ ಎಸರಿಡಲಿಕ್ಕೆ ಹೇಳು ಸುಳ್ಳಽ ತಡಾ ಮಾಡಬ್ಯಾಡ್ರಿ!”

“ಎಲೊ-ಅಳಮಾರೀಗಂಡೇ! ಗಂಡಸಽ ನೀನು?…. ‘ಸಕ್ರಿಲ್ಲಾ-ಚಹಾ ಇಲ್ಲಾ-’ ಹೇಳಲಿಕ್ಕೆ ಬಂದಾನ ಅತುಗೋತ….! ಹೋಗು ಓಡು ಜಲ್‌ದಿ…, ಚೆನಬಸಪ್ಪನ ಅಂಗಡಿಗೆ ಹೋಗು, ನಾ ಹೇಳಿನಿ ಅಂತ ಹೇಳು! ಅತಗೋತಾಽ ತಿರಿಗಿ ಬರಬ್ಯಾಡ! ಕಾಲು ಮುರದೀನು, ಹಾಂಗ ಹೀಂಗ ಅಂತ ಚೆನಬಸಪ್ಪ ಅದಽ ಮಾತು ಹಚ್ಚಾನು…., ರಾಯರು ಬಂದು ಕೂತಾರಂತ ಹೇಳು, ಇಲ್ನೋಡು…. ಹಂಗಽ ನಾಲ್ಕು ಅಡಕಿ ಒಂದ್ನಾಲ್ಕು ಲವಂಗ, ಒಂದು ಕಾಚಿನ ಹಳ್ಳು ಕೊಡಂತ ಹೇಳು-ಚೆನಬಸಪ್ಪಗ… ಲಗೂ ಬಾ, ಬಿಸಲಾಯ್ತು….!

“ಏನಂತಾರೋ ಒಳಗ….? ತುಪ್ಪಿಲ್ಲಂತ….? ಇಷ್ಟೊತ್ತು ಏನು ಮಾಡತಿದ್ಲು….! ಹೇಳಲಿಕ್ಕೇನಾಗಿತ್ತು-ಹುಣ್ಣಾಗಿತ್ತೇನು ಬಾಯಿಗೆ….? ತುಪ್ಪ ತೀರಿಹೋಯ್ತೇನು? ಇದಽ, ಇಂದ ಇನ್ನೂ ಮಂಗಳವಾರ… ಶನಿವಾರ ಸಂತೀ ದಿನ ಮೂರು ಸೇರು ಬೆಣ್ಣೆ ತಂದಿತ್ತು….; ಏನು ಎರಕೋತಾಳೋ ಏನೊ ತುಪ್ಪದಲೆ! ಎಷ್ಟು ತಂದರೂ ಈಡಽ ಆಗೋದಿಲ್ಲ…! ಹೋಗೋ ದಾಮೂ; ಕುಲಕರ್ಣ್ಯಾರ ಮನ್ಯಾಗ ತುಪ್ಪಾ ಇಸಗೊಂಡು ಬಾ… ಸಂತೀ ದಿವಸ ಕೊಡತೀವಂತ್‌ ಹೇಳು! ಕೂಡ್ರಿ ರಾಯರಽ ತಡಾ ಅತ್ಯು! ಹತ್ತ ನಿಮಿಷದಾಗಽ ಚಹಾ ಆಗತದ…; ಎಂದೂ ಬಾರದವರು. ಹಂಗಽ ಕಳಿಸೂದು ನಮ್ಮ ಧರ್ಮಽ?

“ಏನದೂ….? ಗುರೂಗುರೂ ಸಪ್ಪಳ್ಯಾತರದು? ಸಜ್ಜಗೀ ಒಡೀತಾರ….? ಬೇಶ್‌ ಬೇಶ್‌ ಇದ್ದರಿಂಥಾ ಹೆಣ್ಣು ಇರಬೇಕು….; ಲಗೂ ಆಗಲೀ ಅಂತ ಹೇಳು. ರಾಯರು ಹಸದಿದ್ದರು….”

(ಒತ್ತಾಯದ ಕೆಮ್ಮನ್ನು ತಂದುಕೊಂಡು ಖೇಕರಿಸಿ ಉಗಳಲೆಂದು ಹೊರಗೆ ಹೋದ ರಾಯರು ಮೊಚ್ಚೆಯ ಪರಿವೆಯಿಲ್ಲದೆ ಊರಿನ ವರೆಗೆ ಓಡಿ ಬಿಟ್ಟರು.)
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...