Home / ಕವನ / ಕವಿತೆ / ನರಸಿಯ ಪರಿಸೆ

ನರಸಿಯ ಪರಿಸೆ

ಹದಿನಾಲ್ಕು ಹರೆಯದ ನರಸಿ ಬಲು ಚೆಲುವೆ
ಮುದವಾಗುತಿದೆ ಇವಳ ನಡೆ ನುಡಿಯ ನೋಡೆ
ಹರುಕು ಕಂಚುಕ ತೊಟ್ಟು ಮಲಿನಾಂಬರವುಟ್ಟು
ಉಡುಗುವಳು ವರ್ತನೆಯ ಮನೆಗಳೊಳು ಕಸವ

ಮುಕುರವೇತಕೆ ಇವಳ ಮೂಗೆ ಸಂಪಿಗೆ ಮೊಗ್ಗು
ಪೊಳೆವ ಕಂಗಳ ತುಂಬಿ ತುಳುಕುತಿದೆ ಹಿಗ್ಗು
ಚೆಲ್ವ ಪಣೆಯೊಳು ಬಿದ್ದು ಅಲುಗಾಡುತಿವೆ ಕುರುಳು
ರಸಿಕತೆಯು ಚಿಮ್ಮುತಿದೆ ಇವಳ ಮಾತಿನೊಳು

ತೊಳೆಯುವಳು ಮುಸುರೆಗಳ ಥಳಥಳನೆ ಕ್ಷಣದಿ
ಓಡುವಳು ಮತ್ತೊಂದು ಮನೆಗಿವಳು ಮುದದಿ
ಬೆಳಸುವಳು ಗೆಳೆತನವ ಹುಡುಗರೊಳು ಬೆರೆತು
ದುಡಿತದೊಳಗಿದ್ದರೂ ದುಗುಡವನು ಮರೆತು

ಬಾರದಿರಲೊಂದು ದಿನ ಮನೆಗೆಲಸಕಿವಳು
ಮೀರಿದಳೆ? ಆಜ್ಞೆಯನು ಎನುತ ದುಡುಕಿದೆನು
ಬರಲಿಲ್ಲವಿಂದೇಕೆ ಮನೆಗೆಲಸಕೆಲೆ ನರಸಿ,
ತಿರುದು ತಿಂಬುವ ನಿನಗೆ ಜಂಬವೇ ಮೂಳಿ!

ಹಿಡಿಯುವೆನು ನಾ ನಿನ್ನ ಕೂಲಿಯೊಳಗೊಂದಾಣೆ
ಬಿಡಿಸುವೆನು ನೀನಿನ್ನು ಬೇಕಿಲ್ಲ ನಡಿ ಎಂದೆ
ಸಿಟ್ಟಾಗ ಬೇಡಮ್ಮ ತಾಸು ತಡವಾಯ್ತು
ಹಿಟ್ಟಿನಾರತಿ ಹೊತ್ತು ಗುಡಿಗೆ ಹೋಗಿದ್ದೆ

ಬೀರಪ್ಪ ಹೊರಟಿದ್ದ, ತೇರು ನೋಡಲು ಹೋದೆ
ಎಲೆ ಪೂಜೆ ಕಟ್ಟಿದರು ತಡವಾಯಿತಲ್ಲಿ
ಎಡೆಯನಿಟ್ಟವು ಎಲ್ಲ ಸ್ವಾಮಿಗೊಂದೊಂದಾಗಿ
ನೆನೆಯಕ್ಕಿ ತಂಬಿಟ್ಟು ಕಾಯಿ ಬಾಳೇಹಣ್ಣು

ಉಡಿಯೊಳಗೆ ಮಡಗಿದ್ದ ಚೂರು ಕೊಬ್ಬರಿಯೊಂದು
ತೆಗೆದುಕೊಟ್ಟಳು ನನಗೆ ಪರಸಾದವೆಂದು
ತೇರಿನೊಳು ಬೀರಪ್ಪಗಾರತಿಯ ಬೆಳಗಿದರು
ಹೊಂಬಾಳೆ ದವನಗಳ ನಾವು ಸೂರಿದೆವು

ತೇರು ಕದಲಿಸುವಾಗ ಭೋರೆಂದು ವುರಿಮೆಗಳು
ಕುಣಿಕುಣಿದು ಜನರೆಲ್ಲ ಕೇಕೆ ಹಾಕಿದರು
ನಾಗಮ್ಮ ಕರಿಯಮ್ಮ ಸಿತ್ತಮ್ಮ ಸಿರಿಯಮ್ಮ
ಪದಗಳನು ಹಾಡಿದರು ಏನೇಳಲಮ್ಮ!

ಹೊರಟಿಲ್ಲವೇನಮ್ಮ ನೀನಿನ್ನು ಪರಿಸೆಗೆ
ತರಿಸಮ್ಮ ಕಾಯೊಂದ ಇರಲಿ ದಿನಗೆಲಸ
ಬಾರಮ್ಮ ಸ್ವಾಮಿಯ ತೇರ ನೋಡಮ್ಮ
ಊರೂರೆ ಬಂದಿಹುದು ನೀನಿಲ್ಲೆ ಇರುವೆ

ತೊಡಿಸಮ್ಮ ಪರಿಸೆಯೊಳು ನನ ಕೈಗೆ ಬಳೆಗಳನು
ಕೊಡಿಸಮ್ಮ ಮಕ್ಕಳಿಗೆ ಗೊಂಬೆಗಳನೆಂದಳು
ಆಗಿಲ್ಲವೇ ನರಸಿ ಮದುವೆ ನಿನಗೆಂದರೆ
ಸೆರಗ ಬಾಯಿಗೆ ಮುಚ್ಚಿ ಸಿರಬಾಗಿ ನಗುವಳು

ಮದುವೆಯೊಳಗಿನ ತತ್ವ ಗೊತ್ತಿಲ್ಲ ಪಸುಳೆಗೆ
ನಿಸ್ಪೃಹದ ಮನಸಿನೊಳು ನಲಿದಾಡುತಿಹಳು
ಇರಲಿರಲಿ ನರಸೀ ಮದುವೆಯಂತಿರಲಿ
ಬೀರಪ್ಪನಾ ಪರಿಸೆ ಬಂಗಾರವಾದೀತು

ನಿನ್ನ ಜೀವನ ಬೆಳಸು ಬೆಳೆಯುತಿರಲಿಂತೆ
ನಿನ್ನ ರಸಿಕತೆ ಬೆಳಗಿ ಬೆಳಗುತಿರಲಿಂತೆ
ನಿನ್ನ ದುಡಿತವು ಜನಕೆ ಸಲ್ಲುತಿರಲಿಂತೆ
ನಿನ್ನ ಪರಿಸೆಯ ಕುಣಿತ ಕುಣಿಯುತಿರಲಿಂತೆ

ಬಂಧನದಿ ಸಿಲುಕಿದಾ ಬಾಳಿನನುಭವಕಿಂತ
ಎಳೆತನದ ಕುಣಿತವೇ ಜನಕಜೆಗೆ ಹಿತವು
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...