Home / ಕವನ / ಕವಿತೆ / ಅಖಿಟೋಪ

ಅಖಿಟೋಪ

ಮೆಸಪೊಟೇಮಿಯಾದ ಒಬ್ಬ ರಾಜ
ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯಬೇಕೆಂದು
ಕೆತ್ತಿಸಿದ ತನ್ನ ಹೆಸರನ್ನು
ಹೆಸರು ಅಖಿಟೋಪನೆಂದು
ಹೆಬ್ಬಂಡೆಗಳ ಮೇಲೆ
ಮೃತ್ತಿಕೆಗಳ ಮೇಲೆ
ಮರದ ಕಾಂಡಗಳ ಮೇಲೆ
ಬರೆಸಿದ ಪಠ್ಯ ಪುಸ್ತಕಗಳಲ್ಲಿ
ಸೇರಿಸಿದ ಧರ್ಮಗ್ರ೦ಥಗಳಲ್ಲಿ
ಪೂಜಾರಿಗಳ ಮಂತ್ರಗಳಲ್ಲಿ
ಎಲ್ಲೆಲ್ಲು ಅಖಿಟೋಪ ಅಖಿಟೋಪ
ಎಷ್ಟೆಂದರವನ ಕೋಪ
ಕುದುರೆಗಳು ಕೆನೆಯುವುದೂ
ಕಪ್ಪೆಗಳು ವಟಗುಟ್ಟುವುದೂ
ಆದವು ಅಖಿಟೋಪ
ಅಖಿಟೋಪನೆಂದರ ಅಂದಿನ ಭಾಷೆಯಲ್ಲಿ
ಅನೇಕ ಸೂರ್ಯರ ತಾಪ-
ವೆಂದು ಅರ್ಥ

ಆದರೆ ಮೊಂಗೋಲರೆಂಬವರು
ಮಹಾ ನಿರ್ದಯರು
ಅವರು ಮಾಂಸ ಬೇಯಿಸದೆ ತಿನ್ನುತ್ತಿದ್ದರು
ಕಳ್ಳಿನ ಭಾಂಡಿ ಕುಡಿಯುತ್ತಿದ್ದರು
ಕುಡಿದು ಢರ್ರನೆ ತೇಗುತಿದ್ದರು
ದೊಡ್ಡದಾಗಿ ನಗುತಿದ್ದರು
ಅವರು ಚೀನಾ ದೇಶದಿಂದ
ಸಿಡಿಮದ್ದನ್ನು ತಂದರು
ಕುದುರೆಗಳ ಮೇಲೆ ಬಂದರು

ಸಂತೆಗೆಂದು ಹೋದ ದೋಣಿಗಳು
ಸಂಜೆಯಾದರೂ ಮರಳಲಿಲ್ಲ
ನಗರದ ಬಾಗಿಲುಗಳು
ಹೊತ್ತಿಗೆ ಮೊದಲೇ ಮುಚ್ಚಿದುವು
ದೀಪಗಳೂ ಆರಿದುವು
ಯಾವಾಗಲೂ ಹಾಡುತಿದ್ದವರು
ಯಾಕೆ ಹಾಡಲಿಲ್ಲ?
ಮತ್ತೆ ಬೆಳಗಾಯಿತು?
ವರ್ಷಗಳು ಉರುಳಿದುವೆ?
ಯಾರಾದರೂ ಸುದ್ದಿಯನು ತಂದರೆ?
ಮೆಸಪೊಟೇಮಿಯಾ!
ಹರಿವ ನೀರಿನಲಿ
ಕೆತ್ತಿರುವುದೆ ಚರಿತ್ರೆ?
ಹೇಳೀಗ ನಮ್ಮ ಮೆಚ್ಚಿನ ಅಖಿಟೋಪನೆಲ್ಲಿ?
ಎಲ್ಲಿ ಆ ಮಂತ್ರಗಳು
ಹೆಸರು ಬರೆಸಿದ ಗ್ರಂಥಗಳು
ಎಲ್ಲಿ ಕುದುರೆಗಳು ಎಲ್ಲಿ ಕಪ್ಪೆಗಳು
ಎಲ್ಲಿ ಆ ಹೆಬ್ಬಂಡೆ
ಸಿಡಿದ ನದಿ ದಂಡೆ
ಅನೇಕ ಸೂರ್ಯರ ತಾಪ
ಅಖಿಟೋಪ
ಯಾವ ಸಮುದ್ರದಲಿ ಬಿದ್ದ
ಹೇಳು ಮೆಸಪೊಟೇಮಿಯಾ
ಅಂಥ ಪತನಕ್ಕೆ
ಇಂಥ ಸಾಲುಗಳು ಸಾಕೆ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...