Home / ಲೇಖನ / ಇತರೆ / ಕೊಳಕರ್ಯಾರು

ಕೊಳಕರ್ಯಾರು

ಚಿತ್ರ: ಗರ್ಡ್ ಆಲ್ಟಮನ್
ಚಿತ್ರ: ಗರ್ಡ್ ಆಲ್ಟಮನ್

ಪ್ರಿಯ ಸಖಿ,
ಬಸ್ಸಿನ ಎರಡು ಸೀಟುಗಳ ಜಾಗದಲ್ಲಿ ಒಂದು ಸೀಟಿನಲ್ಲಿ ಇವಳು ಕುಳಿತಿದ್ದಾಳೆ. ಪಕ್ಕದಲ್ಲಿ ಯಾರೂ ಬಂದು ಕುಳಿತುಕೊಳ್ಳದಿದ್ದರೆ ಸಾಕು ಎಂದು ಯೋಚಿಸುತ್ತಾ, ಮತ್ತಷ್ಟು ವಿಶಾಲವಾಗಿ ಕುಳಿತುಕೊಳ್ಳುತ್ತಾಳೆ. ಅಷ್ಟರಲ್ಲಿ ತನ್ನಪ್ಪನೊಡನೆ ಬಸ್ಸು ಹತ್ತಿ ಬಂದ ೧೦-೧೨ ವರ್ಷದ ಹಳ್ಳಿ ಹುಡುಗ ತನ್ನಪ್ಪ ಕೂತ ಜಾಗದಲ್ಲಿ ಸ್ಥಳವಿರದೇ ಇವಳ ಪಕ್ಕದಲ್ಲಿ ಕೂತಾಗ ಇವಳು ಮನಸ್ಸಿನಲ್ಲೇ ಸಿಡಿಮಿಡಿಗುಟ್ಟುತ್ತಲೇ ಬದಿಗೆ ಸರಿದು ಕುಳಿತುಕೊಳ್ಳುತ್ತಾಳೆ. ಆ ಹುಡುಗನ ಕೊಳೆಯಾದ ಬಟ್ಟೆಗಳು, ಹರಳೆಣ್ಣೆ ಮೆತ್ತಿದ ತಲೆ, ಗಲೀಜು ಚೀಲಗಳನ್ನು ಕಂಡು ಮತ್ತಷ್ಟು ಮುದುಡಿ ಆ ಹುಡುಗನಿಗೆ ತಾಕದಂತೆ ಕುಳಿತುಕೊಳ್ಳುತ್ತಾಳೆ. ಬಸ್ಸುಸಾಗಿದಂತೆಲ್ಲಾ ತನ್ನ ಬ್ಯಾಗಿನಿಂದ ಬಿಸ್ಕತ್ತು. ಹಣ್ಣು, ಕುರಕಲನ್ನು ತಾನೊಬ್ಬಳೇ ನಿಧಾನಕ್ಕೆ ಮೇಯುತ್ತಾಳೆ. ಪಕ್ಕದಲ್ಲಿದ್ದ ಹುಡುಗನ ಆಸೆಗಣ್ಣನ್ನು ಕಂಡೇ ಇಲ್ಲವೆಂಬಂತೆ ಕಿಟಕಿಗೆ ಮುಖಮಾಡಿ ಕುಳಿತುಕೊಳ್ಳುತ್ತಾಳೆ. ಬಸ್ಸಿನ ವೇಗಕ್ಕೋ, ವಯೋ ಸಹಜವಾಗಿಯೋ ಹುಡುಗನಿಗೆ ಈಗ ತೂಕಡಿಕೆ ಪ್ರಾರಂಭವಾಗಿದೆ. ಇವಳು ಎಷ್ಟೇ ಬದಿಗೆ ಸರಿದು ಕುಳಿತುಕೊಳ್ಳುತ್ತಿದ್ದರೂ ಹುಡುಗ ಅವಳ ತೋಳಿನ ಮೇಲೆ ತನಗರಿವಿಲ್ಲದೇ ವರಗುತ್ತಿದ್ದಾನೆ. ಹುಡುಗನ ಎಣ್ಣೆ ತಲೆ ತನ್ನ ಬಟ್ಟೆಯನ್ನೆಲ್ಲಾ ಗಲೀಜು ಮಾಡುತ್ತಿದೆಯಲ್ಲಾ ಎಂದವಳಗೆ ಕೋಪ, ಸಿಡಿಮಿಡಿ. ಕೆಲಬಾರಿ ಅವನ ತಲೆಯನ್ನು ಪಕ್ಕಕ್ಕೆ ನೂಕಿದರೂ ಆ ಕ್ಷಣಕ್ಕೆ ಹುಡುಗ ನೆಟ್ಟಗೆ ಕುಳಿತರೂ ಮತ್ತೆ ಇವಳ ಮೇಲೇ ತೂಕಡಿಸುತ್ತಾನೆ!

ಈ ಫಜೀತಿಯೇ ಬೇಡ ಎಂದುಕೊಂಡವಳು ಮುಂದೆ ಯಾವುದೋ ಊರಿನಲ್ಲಿ ಮುಂದಿನ ಸೀಟು ಖಾಲಿಯಾದಾಗ ಎದ್ದು ಮುಂದಿನ ಸೀಟಿಗೆ ಹೋಗಿ ಕುಳಿತು ನೆಮ್ಮದಿಯಿಂದ ನಿಟ್ಟುಸಿರು ಬಿಡುತ್ತಾಳೆ. ಕಿಟಕಿಯಿಂದ ದೃಷ್ಟಿ ಹಾಯಿಸಿ ಕುಳಿತವಳಿಗೆ ಪಕ್ಕದಲ್ಲೇ ಅಕ್ಕ ಎಂಬ ಧ್ವನಿ ಕೇಳಿದಾಗ ಆ ಕೊಳಕ ಇಲ್ಲಿಗೂ ಬಂದನೇ ಎಂದು ನಿದ್ದೆ ಬಂದವಳಂತೆ ಗಟ್ಟಿಯಾಗಿ ಕಣ್ಣು ಮುಚ್ಚುತ್ತಾಳೆ. ಸ್ವಲ್ಪ ಹೊತ್ತಿನ ನಂತರ ಇವಳ ಕೈಯನ್ನು ಅಲುಗಿಸಿದ್ದರ ಅರಿವಾಗಿ ಮೈಯಿಡೀ ಉರಿದಂತಾಗಿ ಕೋಪದಿಂದ ಕೆಂಗಣ್ಣು ಮಾಡಿ, ಬೈಯಲು ಬಾಯಿ ತೆರೆಯುವಷ್ಟರಲ್ಲಿ ಹುಡುಗನ ಕೈಯಲ್ಲಿ ತನ್ನ ಪರ್ಸನ್ನು ಕಂಡು ತಣ್ಣಗಾಗುತ್ತಾಳೆ.

ಹುಡುಗ ಅವಳ ಕೈಗೆ ಪರ್ಸು ನೀಡಿ, ನಿಮ್ಮ ಬ್ಯಾಗಿಂದ ಕೆಳಗೆ ಬಿದ್ದಿತ್ತೇನೋ ಅಕ್ಕ ತಗೊಳ್ಳಿ ಎಂದಾಗ ಪರ್ಸು ತೆಗೆದುಕೊಳ್ಳಲು ಹೋದ ಇವಳ ಕೈ ನಡುಗುತ್ತದೆ.

ನಾಚಿಕೆಯಿಂದ ತಲೆ ಎತ್ತಲೂ ಸಾಧ್ಯವಾಗುವುದಿಲ್ಲ. ಪರ್ಸು ತೆಗೆದು ನೋಡಿದವಳಿಗೆ ನೂರರ ನೋಟುಗಳು ತಣ್ಣಗೆ ಮಲಗಿರುವುದು ಕಂಡಾಗ ಸಮಾಧಾನವಾದರೂ ಎದೆಯೊಳಗೆಲ್ಲಾ ಏನೋ ಕಸಿವಿಸಿ, ಸಂಕಟ. ಆ ಕೊಳಕು ಹುಡುಗ ತನ್ನ ಪ್ರಾಮಾಣಿಕತೆಯಿಂದ ಎತ್ತರೆತ್ತರಕ್ಕೆ ಏರಿ ನಿಂತಂತೆ. ತಾನು ಅವನ ಬಾಹ್ಯ ಕೊಳಕನ್ನು ಕೆಲಹೊತ್ತು ಸಹಿಸಲಾಗದೇ ಕುಬ್ಜಳಾಗುತ್ತಾ ಹೋಗಿ ಅವನ ಕಾಲಕಸವಾದಂತೆ. ಮನಃಪಟಲದಲ್ಲಿ ಚಿತ್ರ ಮೂಡಿಬಂದಾಗ, ಅವನಿಗೆ ಥ್ಯಾಂಕ್ಸ್ ಹೇಳಲೂ ತಾನು ಅರ್ಹಳಲ್ಲ ಎನ್ನಿಸಿ ಪಶ್ಚಾತ್ತಾಪದಿಂದ ತಲೆತಗ್ಗಿಸುತ್ತಾಳೆ. ಸಖಿ, ಕೊಳಕರ್ಯಾರು? ಎಂದು ತಿಳಿಯಲಿಲ್ಲವೇ? ಬಾಹ್ಯದಲ್ಲಿ ಎಷ್ಟೇ ಸ್ವಚ್ಚವಾಗಿದ್ದರೂ ಇಂತಹ ಅಂತರಂಗದ ಕೊಳಕುಗಳಿದ್ದಾಗ ವ್ಯಕ್ತಿ ಕುಬ್ಜನಾಗಿಬಿಡುವುದು ಸಹಜ ತಾನೇ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...