Home / ಕವನ / ಕವಿತೆ / ಸ್ವಾತಂತ್ರ್ಯ ಬಂದಿದೆ

ಸ್ವಾತಂತ್ರ್ಯ ಬಂದಿದೆ

ನಮಗೆ ಸ್ವಾತಂತ್ರ್ಯ ಬಂದಿದೆ ಸ್ವಾಮೀ ನಮಗೆ ಸ್ವಾತಂತ್ರ್ಯ ಬಂದಿದೆ,
ನಮ್ಮ ಹಡೆದ ತಂದೆ ತಾಯಿಗಳ ಕಾಲಿಂದೊದೆಯಲು
ನಮ್ಮ ತಿದ್ದಿ ಬೆಳೆಸಿದ ಗುರು ಹಿರಿಯರನೂ ಅಲ್ಲಗಳೆಯಲು
ಆಡಳಿತದಾಡುಂಬೊಲದಲ್ಲಿ ಬೇಲಿ ಎದ್ದು ಹೊಲ ಮೇಯಲು
ಜನಸೇವಾ ಭವನಗಳಲ್ಲಿ ಇಲಿ ಹೆಗ್ಗಣಗಳು ಕೊಬ್ಬಲು
ಕುರಿಮಂದಿಯ ಕರಾರಿಲ್ಲದೆ ತಿಂಬ ತೋಳಗಳು ಬೆಳೆಯಲು
ದೀನ ದಲಿತರ ಹೆಸರು ಕೂಗಿಕೂಗಿ ದಬ್ಬಾಳಿಕೆಯ ಬಸಿರುಬ್ಬಿಸಲು

ನಮ್ಮ ಹೂದೋಟಗಳಲ್ಲಿ ಮುಳ್ಳುಕಂಟಿಗಳ ಧಾರಾಳ ಬೆಳೆಸಲು
ನಮ್ಮ ಮನೆಯಂಗಳಗಳಲ್ಲೆ ತಿಪ್ಪೆಯೊಟ್ಟಿಕೊಳ್ಳಲು
ಪೂರ್ವ ಶಿಖಿಯ ಕತ್ತರಿಸಲು ಪಾಶ್ಚಾತ್ಯ ಕಸಿಯ ತಲೆತುಂಬಾ
ಸಿಕ್ಕಾಪಟ್ಟೆ ಬೆಳೆಸಲು ಸ್ವಾತಂತ್ರ್ಯ ಬಂದಿದೆ.

ಬೇಕು ಬೇಕಾದವರ ಬೇಕಾದೆಡೆಗಳಲ್ಲಿ ತುಂಬಿಸಿಕೊಳ್ಳಲು
ಬೇಡಾದವರ ಆಗದವರ ಮೇಲೆಲ್ಲಾ ರೊಚ್ಚೆ ಚಿಮ್ಮಿಸಲು
ದುಡಿದು ತಿಂಬವರ ಒಡಲ ತುಳಿದು ನಮ್ಮ ಬೊಜ್ಜು ಬೇಕಾದಂತೆ
ಬೆಳೆಸಲು ಸ್ವಾತಂತ್ರ್ಯ ಬಂದಿದೆ

ಕುಡಿದು ಬೇಕಾದಷ್ಟು ಬೀದಿಯಲ್ಲಿ ಹೊರಳಾಡಿ ಸ್ವರ್ಗಕಾಣಲು
ಮಾತುಗಳೊಲೆಯ ಮೇಲೆ ಸ್ವಾರ್ಥದಡಿಗೆ ಬೇಯಿಸಿಕೊಳ್ಳಲು
ಬುದ್ದಿ ಶಕ್ತಿ, ಯೋಗ್ಯತೆ, ಗುಣಗಳನ್ನು
ಹೆಣಮಾಡಿ ಹೂಳಿಡಲು
ಗೂಂಡಾ ಗುಂಪುಗಾರಿಕೆ, ಹಣಗಳನ್ನು ಸಿಂಹಾಸನಕ್ಕೇರಿಸಲು
ಕೆಳಬಿದ್ದವರನೆಬ್ಬಿಸುವ ನೆಪದಲ್ಲಿ ಎದ್ದವರ ಹೊಡೆದು ಬೀಳಿಸಲು
ಸ್ವಾತಂತ್ರ್ಯ ಬಂದಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...