Home / ಕವನ / ಕವಿತೆ / ಚೈತನ್ಯ ಚಿಮ್ಮಿದಾಗ

ಚೈತನ್ಯ ಚಿಮ್ಮಿದಾಗ

ಎಲ್ಲಿಂದ ಬರ್ತೀಯೊ ಯಾವ ಗಳಿಗೆ ಬರ್ತೀಯೊ
ಯಾವ್ಮಾತ್ನಾಗೆ ಹೊಳಿತಿಯೊ ತಿಳಿಯದಲ್ಲಾ
ಹೊರಗೆಲ್ಲ ಹುಡುಕಿದ್ದೆ ಹುಡುಹುಡುಕಿ ದಣಿದಿದ್ದೆ
ಯಾವಾಗ್ಲೋ ಒಳಬಂದು ಕುಂತಿಯಲ್ಲಾ ||೧||

ಹೆಣದಾಗೆ ಚೈತನ್ಯ ಮೈತುಂಬಿ ನಿಂತಂಗೆ
ತುಂಬ್ಕೊಂಡೆ ಬಂದಿತ್ತು ಯಾವ್ದೋ ಶಕ್ತಿ
ಬರಡಾದ ಭೂಮಿಗೆ ಸ್ವರ್ಗಾನೆ ಇಳಿದಿತ್ತು
ಮಂತ್ರ ಹಾಕಿದಂತೆ ಯಾವ್ದೋ ಯುಕ್ತಿ ||೨ ||

ಮರುಭೂಮ್ಯಾಗೆ ಚಿಲುಮೆದ್ದು ಚಿಮ್ದಂಗೆ ಮ್ಯಾಲಕ್ಕೆ
ಎಲ್ಲಿತ್ತೊ ಒಳಸೆಲೆ ಕಾಣ್ಲೆ ಇಲ್ಲ
ಒಣಗಿದ್ದ ಮರದಾಗೆ ಒಮ್ಮಿಂದೊಮ್ಗೆ ಹಸಿರು
ಉಸಿರಾಡಿ ಉಡಿಯಾಗೆ ತುಂಬಿತಲ್ಲ ||೩||

ಆಲಸ್ಯ ಅಡಗ್ಹೋತು ಭಯವೆಲ್ಲ ಕಡೆಗಾಯ್ತು
ಕೋಪ ತಾಪವೆಲ್ಲ ತಣ್ಣಗಾಯ್ತು
ನಿದ್ದೆಲ್ಲ ಎಚ್ರಾತು ಎಚ್ರಾನೆ ಮುದ್ದಾಯ್ತು
ಕಲ್ಲಾಗೆ ಕಣ್ಣೀರು ಬಂದಂಗಾಯ್ತು ||೪||

ಒಬ್ಬನೆ ಇದ್ದವಗೆ ನೂರ್ ಜನ ಬಲಬಂತು
ನಾನೊಬ್ನೆ ಅಲ್ಲಂತ ಧೈರ್ಯ ಬಂತು
ರಾತ್ರೆಲ್ಲ ಬೆಳಕಾತು ಹಗಲೆಲ್ಲ ಬಯಲಾತು
ಹುಚ್ಚೆದ್ದು ಕುಣಿವಂಥ ಸ್ಫೂರ್ತಿ ಬಂತು ||೫||

ನೆಲದಲ್ಲಿ ನಿಂತವ್ಗೆ ಗಗನದ್ಹೂ ಸಿಕ್ಕಿತ್ತು
ಆಳಕ್ಕೆ ಬೇರುಗಳು ಹಬ್ಬಿದ್ದವು
ಒಳಗೆಲ್ಲಾ ಬೆಳೆದಂತೆ ಕೊಂಬೆಗಳು ಬೆಳೆದಿದ್ದು
ವಿಶ್ವಾನೆ ಹಬ್ಬಿದಂತೆ ಚಾಚಿದ್ದವು ||೬||

ಕಷ್ಟಗಳ ಗುಡ್ಡಗಳು ಬಿಳಿ ಮೋಡಗಳಾದವು
ಚಿಂತೆಲ್ಲ ಸಂತೆಲ್ಲ ಬಯಲಾಯಿತು
ದುಃಖಾದ ನೀರಲ್ಲು ಸುಖ ತುಂಬಿ ಕಣ್ಣೀರು
ಸಂಕಟದ ನೋವೆಲ್ಲ ಸಯವಾಯಿತು ||೭||

ನಂಗೊತ್ತು ಈ ಸೊಗಸು ಒಂದೇ ಕ್ಷಣಂಬೋದು
ಜೀವಾ ಹಿಡಿಯಾಕೊಂದೆ ಬೊಗಸೆ ಸಾಕು
ವಿಷಯ ಸಾಗರದಾಗ ಈಜಾಡ್ತಾ ಸಾಗಿದ್ರು
ಒಂದೆ ಹನಿ ಅಮೃತಾವು ಸಾಕೆ ಸಾಕು ||೮||

ಭೂಮಿ ಸೀಮೀ ಬಿಟ್ಟು ಬರಿ ಬಾನು ಬೇಕಿಲ್ಲ
ಬಾನ್ನ್ಯಾಗೆ ಸ್ವರ್ಗಾನೆ ಇರವೊಲ್ದ್ಯಾಕೆ
ಆಕಾಶ್ದಾಗ ಹಾರ್ವಂಥ ಹಕ್ಕೀನೆ ಆಗ್ಬೇಕೆ
ಮಣ್ಣಾಗಿನ ಮಣಿಯಾಗಿ ಇರಬಾರ್ದ್ಯೇಕೆ ||೯||
***

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...