Home / ಕವನ / ಕವಿತೆ / ವಿದ್ಯಾಲಯ

ವಿದ್ಯಾಲಯ

ಈ ವಿದ್ಯಾಲಯದುತ್ಸವ ಸಮಯದಿ
ಕಾಣಿಕೆಯಿದನೊಪ್ಪಿಸುವೆನು ವಿನಯದಿ
ಸವಿನೆನಪಿನ ಕಂಪಿಡಿದೀ ನುಡಿಯ
ಹಾಸುವೆ ನಾ ವಾಣಿಗೆ ನಡೆಮಡಿಯ.

ಅಲ್ಲಿ ಮೂಡಿತೀ ಕವಿಚೈತನ್ಯ
ಅದಕಾಯಿತು ಪರಭಾಷಾಸ್ತನ್ಯ
ನಾಡತಾಯಿ ನಿರ್ಬಲೆ ನಿರ್ದುಗ್ಧೆ
ಆಂಗ್ಲವಾಣಿ ವಿಜ್ಞಾನಸುದುಗ್ಧೆ
ತಾಯ ಮಗುವಿಗೀ ದಾದಿಯ ಹಾಲು
ನೀಡಿದನಿತುಂಡು ಬಳೆಯಿತು ಬಾಳು
ಪ್ರಾಣದಾತೆ ವಾತ್ಸಲ್ಯವಿಹೀನೆ
ವಾತ್ಸಲ್ಯಪೂರ್ಣೆಯೋ ಬಹುದೀನೆ
ಧಾತ್ರೀಮಾತೆಗಳಿಂತಿರೆ ಹಸುಳೆ
ಅಂತೂ ಬೆಳೆಯಿತು ಆ ಇರಕಿನೊಳೆ.

ಇಂತಾಯಿತು ಕವಿಬಾಲ್ಯಚಿಕಿತ್ಸೆ
ತಾನಾರೆನೆ ಆತ್ಮದ ವಿಚಿಕಿತ್ಸೆ
ಅಲ್ಲಿದ್ದೆನು ನಾ ವಿದೇಶಿಯಂತೆ
ಎನ್ನರಾರಿಲ್ಲಿ ಎಂಬುದೆ ಚಿಂತೆ
ಮನೆಗುಡಿಯಂಗಡಿ ಚೌಕಗಳಲ್ಲಿ
ಕಾಣದ ಕೇಳದ ನಡೆ ನುಡಿಯಿಲ್ಲಿ

ಮರದೊಳು ಸೊಗಸುವ ಬಂದಿಳಿಕೆಯ ತೆರ
ತೋರಿತು ವಿದ್ಯಾಶಾಲೆಯ ವಿವರ
ಋಷಿಕವಿಸಂತರ ತಪದಿಂ ಮೂಡಿದ
ಮನದ ಮೇಲೆ ಪರ ತಾಂಡವವಾಡಿದ.

ಸೊರಗಿದೆ ನೀ ವಿಧ್ವಂಸಕ ನೃತ್ಯಕೆ
ನಮ್ಮಹಮ್ಮ ಪುಡಿಮಾಡುವ ಕೃತ್ಯಕೆ.

ಭಾರತಸ್ವಾಂತನಿರ್ವಂಶತೆಗೆ
ಜ್ಞಾತವ್ಯಜ್ಞಾನದ ಖರ್ವತೆಗೆ
ಜನಶಿವಸಂಕಲ್ಪದ ಪರವಶತೆಗೆ
ಪರಾನುಕರಣದ ಸರ್ವತ್ರತೆಗೆ
ಎಡೆಯಾದೀ ವಿದ್ಯೆಯ ನೆಲೆವನೆಯೊಳು
ನಾನಿದ್ದೆನು ಮಲತಾಯಿಯ ಮಗನೊಲು.

ಕಿವಿಯಿದ್ದೂ ಮನವಿಲ್ಲದ ಬಗೆಗೆ
ಬರಿ ಸದ್ದಾದುವು ಪಾಠಗಳೆನಗೆ.

ಎಲ್ಲ ಅಪರಿಚಿತ ಎಲ್ಲ ನವೀನ!
ಇಲ್ಲದಿರಲಿಲ್ಲವಿಲ್ಲಿ ಸುಮಾನ.
ಶಾಲೆಯೊಳಾತ್ಮಕೆ ಸ್ವಪ್ನದ ಮೌನ
ಪುಸ್ತಕಭಾಂಡಾಗಾರದಿ ಧ್ಯಾನ
ಹುಲ್ಲುಗಾವಲಿನ ಹೂತ ಮರಗಳ
ಎಲೆಗಳು ಬಿಡಿಸುವ ಬಾನ ಬಿಂದುಗಳ
ಲೆಕ್ಕದೊಳಾಯಿತು ನನ್ನಾಸಕ್ತಿ
ಪ್ರಕೃತಿಯೊಳಾಯಿತು ರಸದಭಿವ್ಯಕ್ತಿ.

ಬಗೆದಂತಪ್ಪುದಲಾ ಜಡಲೋಕ
ಅದರಿಂ ಭಾವುಕಗಲ್ಲಿಯೆ ನಾಕ.
ಸ್ವದೇಶನಿರ್ಮಿತದೀ ಪರದೇಶದಿ
ಕೆಳೆಪಡೆದೆನು ನಾನಿವುಗಳ ಸನಿಯದಿ.

ಕೊಟ್ಟಷ್ಟನೆ ಮರಳಿಯು ಪಡೆವೀಪರಿ-
ಸೊಗದಿಂದಾತ್ಮದ ವೃದ್ಧಿಯೇಪರಿ?
ಚೇತನದಿಂ ಚೇತನದುಜ್ಜೀವನ
ಜೀವಿಯಿಂದ ಜೀವನದುತ್ತೇಜನ.
ತನ್ನನು ತಾನೇ ಮರೆಹೊಗುವಾಟಕೆ
ಬೇಸತ್ತೆನು ನಾ ಬಯಲಿನ ಬೇಟಕೆ.
ಮನವರಿಯುವ ನುಡಿ ಎದೆಮೆಚ್ಚುವ ನಡೆ
ಶುದ್ಧಾಂತರ್ಯದೊಳಿರವಿನ ಬಿಡುಗಡೆ
ನುಡಿಗೆ ಬರದ ಬಯಕೆಗಳಿಗೆ ಸಾಕ್ಷಿ
ಕಾಣೆ ಬರದ ಕನಸನೋಡುವಕ್ಷಿ
ಪರಸ್ಪರಾಶ್ರಯವಿಂತಾಗುವ ನೆಲೆ
ಈ ಜಗವೆಮ್ಮದು ನೋಡೆನ್ನುವ ಕೆಳೆ
ಈ ತೆರ ಸಾಧರ್ಮ್ಯದ ಸೌಹೃದಕೆ
ಕಾಲದೊಳೆನಗಾಯಿತು ಹಂಬಲಿಕೆ.

ಆವನೆಲದೊಳೆನ್ನಾತ್ಮದ ಬೇರು
ಮನದೀ ಬೆಳೆಗೆ ಕೃಷೀವಲರಾರು
ಅರಿವರದಾರೀ ಬಾಳಿನ ಬೆಲೆಯ
ಕುದುರಿಸುವವರೀ ಜೀವದ ಕಳೆಯ?-
ಈ ತರ ಕಾತರಗೊಂಡಿರೆ ಜೀವ
ಸಂಸ್ಕೃತವಿತ್ತಿತು ಮಮತೆಯ ತಾವ.

ಆ ತಾಯ್ನೆಲದೊಳು ತಳವೂರಿತು ಮನ
ಅಲ್ಲಿ ದೊರೆಯಿತೆನಗೊಬ್ಬನ ಕೆಳೆತನ
ಸರಳಹೃದಯ ಸಹೃದಯ ಮೇಧಾವಿ
ಧ್ಯೇಯೋಪಜೀವಿ ಸಹಾನುಭಾವಿ
ವಿದ್ಯಾವಿಪ್ಲವದಾ ಶಾಲೆಯೊಳು
ನನಗಾಯ್ತೀ ನೇಹವೆ ಹರಿಗೋಲು
ಮುಂದಿನ ಕತೆಯೀ ದೋಣಿಯ ಬಿನದ
ಗುರುಸಾನ್ನಿಧ್ಯದ ಕ್ಷೇಮದೀಪದ
ಬೆಳಕೊಳು ಹದುಳದ ಹರ್ಷವ ತಳೆದು
ಹೊರನಾಡೆನ್ನುವ ಶಂಕೆಯ ಕಳೆದು
ತನ್ನತನದಿ ಹೀನಾಯವೆಣಿಸದೆ
ಮಿಕ್ಕುದರೊಳು ವಿಶ್ವಾಸವಳಿಯದೆ
ಅನ್ಯದೇಶ್ಯರಾನಂದವನೆಂತು
ಗಳಿಸಿಹರೆಂಬ ಕುತೂಹಲವಾಂತು
ಎಂತಾವಲೆದೆವು ಭಾವಲೋಕದಿ
ಚಿತ್ತಚಮತ್ಕೃತವಪ್ಪಾಲೋಕದಿ!

ಸಂಜೆ ರಂಜಿಸಿರೆ ರಂಗಿನ ಬೆಳಕೊಳು
ನಮ್ಮೊಳಗನೆ ಅದು ಬಿಂಬಿಸುತಿರುವೊಲು
ಹಾರ್ಡಿಯ ಕತೆಗಳ ಸುಂದರಿಯರಿಗೆ
ಪರಿವೇಷವಿದೋ ಎನೆ ಬಾನ್‌ತೊಳಗೆ
ಸಂಘದ ಕೊನೆ ಕಿರುಮನೆಯೊಳು ಕುಳಿತು
ನಾವೆಲ್ಲಿಹೆ ವೆಂಬುವನೇ ಮರೆತು
ಮಾತಿಲ್ಲದ ಮಾತೊಳು ನುಡಿದಾಡಿ
ಇರುಳಿಗಾಗೆ ಬಲು ಚುಕ್ಕಿಯ ಮೋಡಿ
ಮನವಲ್ಲುಳಿಸುತ ಸುಯ್ದಗಲಿದ ಪರಿ

ಮರುಕೂಟವೆ ದಿನದಾದಿಯೆಂದ ಪರಿ
ಈ ಭಾವದಾವಿ ಹನಿಯೊಡೆದ ಪರಿ
ನುಡಿಯಲೆಯಿಡುತಾ ರಸ ಹರಿದ ಪರಿ
ಈ ಝರಿ ಮತ್ತೊಬ್ಬನ ಸೆಳೆದ ಪರಿ
ಈ ಸಂಗಮ ಹಿರಿ ಹೊನಲಾದ ಪರಿ
ಈ ತೆರ ನಮ್ಮೀ ಸ್ನೇಹತ್ರಿವೇಣಿಯ
ಮರ್ಮರದಂತಿರುವೆನ್ನಯ ವಾಣಿಯ
ಪ್ರಥಮೋದ್ಗಮ ಚರಿತೆಯ ಮಧುರಸ್ಮೃತಿ
ಈ ಶಾಲೆಗೆ ನಾನರ್ಪಿಸುವ ಸ್ತುತಿ.

ನೆಲೆಯಾಗಲಿ ಸರಸತಿಗೀಶಾಲೆ
ಸುತರಿಡಲೀಕೆಗೆ ಸುಯಶೋಮಾಲೆ
ಈಕೆಗಳಿಯಲೀ ಪರಾಭಿಭೂತಿ
ಹೊರಹೊಮ್ಮಲಿ ಸ್ವಾಂತಾತ್ಮವಿಭೂತಿ
ಹೊಳೆ ಹೊಳೆಸುತ ಸದ್ವಿದ್ಯಾರುಚಿಗಳ
ನಮ್ಮೀ ಶಾಲೆಯ ಗುರುಶಿಷ್ಯರುಗಳ
ತೇಜವಾಗೆ ಪರಚಿತ್ತಗ್ರಸಿಷ್ಣು
ಹರಸಲಿದನು ಶ್ರೀ ವಿಕ್ರಮ ವಿಷ್ಣು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...