Home / ಕವನ / ಕವಿತೆ / ವಿದ್ಯಾಲಯ

ವಿದ್ಯಾಲಯ

ಈ ವಿದ್ಯಾಲಯದುತ್ಸವ ಸಮಯದಿ
ಕಾಣಿಕೆಯಿದನೊಪ್ಪಿಸುವೆನು ವಿನಯದಿ
ಸವಿನೆನಪಿನ ಕಂಪಿಡಿದೀ ನುಡಿಯ
ಹಾಸುವೆ ನಾ ವಾಣಿಗೆ ನಡೆಮಡಿಯ.

ಅಲ್ಲಿ ಮೂಡಿತೀ ಕವಿಚೈತನ್ಯ
ಅದಕಾಯಿತು ಪರಭಾಷಾಸ್ತನ್ಯ
ನಾಡತಾಯಿ ನಿರ್ಬಲೆ ನಿರ್ದುಗ್ಧೆ
ಆಂಗ್ಲವಾಣಿ ವಿಜ್ಞಾನಸುದುಗ್ಧೆ
ತಾಯ ಮಗುವಿಗೀ ದಾದಿಯ ಹಾಲು
ನೀಡಿದನಿತುಂಡು ಬಳೆಯಿತು ಬಾಳು
ಪ್ರಾಣದಾತೆ ವಾತ್ಸಲ್ಯವಿಹೀನೆ
ವಾತ್ಸಲ್ಯಪೂರ್ಣೆಯೋ ಬಹುದೀನೆ
ಧಾತ್ರೀಮಾತೆಗಳಿಂತಿರೆ ಹಸುಳೆ
ಅಂತೂ ಬೆಳೆಯಿತು ಆ ಇರಕಿನೊಳೆ.

ಇಂತಾಯಿತು ಕವಿಬಾಲ್ಯಚಿಕಿತ್ಸೆ
ತಾನಾರೆನೆ ಆತ್ಮದ ವಿಚಿಕಿತ್ಸೆ
ಅಲ್ಲಿದ್ದೆನು ನಾ ವಿದೇಶಿಯಂತೆ
ಎನ್ನರಾರಿಲ್ಲಿ ಎಂಬುದೆ ಚಿಂತೆ
ಮನೆಗುಡಿಯಂಗಡಿ ಚೌಕಗಳಲ್ಲಿ
ಕಾಣದ ಕೇಳದ ನಡೆ ನುಡಿಯಿಲ್ಲಿ

ಮರದೊಳು ಸೊಗಸುವ ಬಂದಿಳಿಕೆಯ ತೆರ
ತೋರಿತು ವಿದ್ಯಾಶಾಲೆಯ ವಿವರ
ಋಷಿಕವಿಸಂತರ ತಪದಿಂ ಮೂಡಿದ
ಮನದ ಮೇಲೆ ಪರ ತಾಂಡವವಾಡಿದ.

ಸೊರಗಿದೆ ನೀ ವಿಧ್ವಂಸಕ ನೃತ್ಯಕೆ
ನಮ್ಮಹಮ್ಮ ಪುಡಿಮಾಡುವ ಕೃತ್ಯಕೆ.

ಭಾರತಸ್ವಾಂತನಿರ್ವಂಶತೆಗೆ
ಜ್ಞಾತವ್ಯಜ್ಞಾನದ ಖರ್ವತೆಗೆ
ಜನಶಿವಸಂಕಲ್ಪದ ಪರವಶತೆಗೆ
ಪರಾನುಕರಣದ ಸರ್ವತ್ರತೆಗೆ
ಎಡೆಯಾದೀ ವಿದ್ಯೆಯ ನೆಲೆವನೆಯೊಳು
ನಾನಿದ್ದೆನು ಮಲತಾಯಿಯ ಮಗನೊಲು.

ಕಿವಿಯಿದ್ದೂ ಮನವಿಲ್ಲದ ಬಗೆಗೆ
ಬರಿ ಸದ್ದಾದುವು ಪಾಠಗಳೆನಗೆ.

ಎಲ್ಲ ಅಪರಿಚಿತ ಎಲ್ಲ ನವೀನ!
ಇಲ್ಲದಿರಲಿಲ್ಲವಿಲ್ಲಿ ಸುಮಾನ.
ಶಾಲೆಯೊಳಾತ್ಮಕೆ ಸ್ವಪ್ನದ ಮೌನ
ಪುಸ್ತಕಭಾಂಡಾಗಾರದಿ ಧ್ಯಾನ
ಹುಲ್ಲುಗಾವಲಿನ ಹೂತ ಮರಗಳ
ಎಲೆಗಳು ಬಿಡಿಸುವ ಬಾನ ಬಿಂದುಗಳ
ಲೆಕ್ಕದೊಳಾಯಿತು ನನ್ನಾಸಕ್ತಿ
ಪ್ರಕೃತಿಯೊಳಾಯಿತು ರಸದಭಿವ್ಯಕ್ತಿ.

ಬಗೆದಂತಪ್ಪುದಲಾ ಜಡಲೋಕ
ಅದರಿಂ ಭಾವುಕಗಲ್ಲಿಯೆ ನಾಕ.
ಸ್ವದೇಶನಿರ್ಮಿತದೀ ಪರದೇಶದಿ
ಕೆಳೆಪಡೆದೆನು ನಾನಿವುಗಳ ಸನಿಯದಿ.

ಕೊಟ್ಟಷ್ಟನೆ ಮರಳಿಯು ಪಡೆವೀಪರಿ-
ಸೊಗದಿಂದಾತ್ಮದ ವೃದ್ಧಿಯೇಪರಿ?
ಚೇತನದಿಂ ಚೇತನದುಜ್ಜೀವನ
ಜೀವಿಯಿಂದ ಜೀವನದುತ್ತೇಜನ.
ತನ್ನನು ತಾನೇ ಮರೆಹೊಗುವಾಟಕೆ
ಬೇಸತ್ತೆನು ನಾ ಬಯಲಿನ ಬೇಟಕೆ.
ಮನವರಿಯುವ ನುಡಿ ಎದೆಮೆಚ್ಚುವ ನಡೆ
ಶುದ್ಧಾಂತರ್ಯದೊಳಿರವಿನ ಬಿಡುಗಡೆ
ನುಡಿಗೆ ಬರದ ಬಯಕೆಗಳಿಗೆ ಸಾಕ್ಷಿ
ಕಾಣೆ ಬರದ ಕನಸನೋಡುವಕ್ಷಿ
ಪರಸ್ಪರಾಶ್ರಯವಿಂತಾಗುವ ನೆಲೆ
ಈ ಜಗವೆಮ್ಮದು ನೋಡೆನ್ನುವ ಕೆಳೆ
ಈ ತೆರ ಸಾಧರ್ಮ್ಯದ ಸೌಹೃದಕೆ
ಕಾಲದೊಳೆನಗಾಯಿತು ಹಂಬಲಿಕೆ.

ಆವನೆಲದೊಳೆನ್ನಾತ್ಮದ ಬೇರು
ಮನದೀ ಬೆಳೆಗೆ ಕೃಷೀವಲರಾರು
ಅರಿವರದಾರೀ ಬಾಳಿನ ಬೆಲೆಯ
ಕುದುರಿಸುವವರೀ ಜೀವದ ಕಳೆಯ?-
ಈ ತರ ಕಾತರಗೊಂಡಿರೆ ಜೀವ
ಸಂಸ್ಕೃತವಿತ್ತಿತು ಮಮತೆಯ ತಾವ.

ಆ ತಾಯ್ನೆಲದೊಳು ತಳವೂರಿತು ಮನ
ಅಲ್ಲಿ ದೊರೆಯಿತೆನಗೊಬ್ಬನ ಕೆಳೆತನ
ಸರಳಹೃದಯ ಸಹೃದಯ ಮೇಧಾವಿ
ಧ್ಯೇಯೋಪಜೀವಿ ಸಹಾನುಭಾವಿ
ವಿದ್ಯಾವಿಪ್ಲವದಾ ಶಾಲೆಯೊಳು
ನನಗಾಯ್ತೀ ನೇಹವೆ ಹರಿಗೋಲು
ಮುಂದಿನ ಕತೆಯೀ ದೋಣಿಯ ಬಿನದ
ಗುರುಸಾನ್ನಿಧ್ಯದ ಕ್ಷೇಮದೀಪದ
ಬೆಳಕೊಳು ಹದುಳದ ಹರ್ಷವ ತಳೆದು
ಹೊರನಾಡೆನ್ನುವ ಶಂಕೆಯ ಕಳೆದು
ತನ್ನತನದಿ ಹೀನಾಯವೆಣಿಸದೆ
ಮಿಕ್ಕುದರೊಳು ವಿಶ್ವಾಸವಳಿಯದೆ
ಅನ್ಯದೇಶ್ಯರಾನಂದವನೆಂತು
ಗಳಿಸಿಹರೆಂಬ ಕುತೂಹಲವಾಂತು
ಎಂತಾವಲೆದೆವು ಭಾವಲೋಕದಿ
ಚಿತ್ತಚಮತ್ಕೃತವಪ್ಪಾಲೋಕದಿ!

ಸಂಜೆ ರಂಜಿಸಿರೆ ರಂಗಿನ ಬೆಳಕೊಳು
ನಮ್ಮೊಳಗನೆ ಅದು ಬಿಂಬಿಸುತಿರುವೊಲು
ಹಾರ್ಡಿಯ ಕತೆಗಳ ಸುಂದರಿಯರಿಗೆ
ಪರಿವೇಷವಿದೋ ಎನೆ ಬಾನ್‌ತೊಳಗೆ
ಸಂಘದ ಕೊನೆ ಕಿರುಮನೆಯೊಳು ಕುಳಿತು
ನಾವೆಲ್ಲಿಹೆ ವೆಂಬುವನೇ ಮರೆತು
ಮಾತಿಲ್ಲದ ಮಾತೊಳು ನುಡಿದಾಡಿ
ಇರುಳಿಗಾಗೆ ಬಲು ಚುಕ್ಕಿಯ ಮೋಡಿ
ಮನವಲ್ಲುಳಿಸುತ ಸುಯ್ದಗಲಿದ ಪರಿ

ಮರುಕೂಟವೆ ದಿನದಾದಿಯೆಂದ ಪರಿ
ಈ ಭಾವದಾವಿ ಹನಿಯೊಡೆದ ಪರಿ
ನುಡಿಯಲೆಯಿಡುತಾ ರಸ ಹರಿದ ಪರಿ
ಈ ಝರಿ ಮತ್ತೊಬ್ಬನ ಸೆಳೆದ ಪರಿ
ಈ ಸಂಗಮ ಹಿರಿ ಹೊನಲಾದ ಪರಿ
ಈ ತೆರ ನಮ್ಮೀ ಸ್ನೇಹತ್ರಿವೇಣಿಯ
ಮರ್ಮರದಂತಿರುವೆನ್ನಯ ವಾಣಿಯ
ಪ್ರಥಮೋದ್ಗಮ ಚರಿತೆಯ ಮಧುರಸ್ಮೃತಿ
ಈ ಶಾಲೆಗೆ ನಾನರ್ಪಿಸುವ ಸ್ತುತಿ.

ನೆಲೆಯಾಗಲಿ ಸರಸತಿಗೀಶಾಲೆ
ಸುತರಿಡಲೀಕೆಗೆ ಸುಯಶೋಮಾಲೆ
ಈಕೆಗಳಿಯಲೀ ಪರಾಭಿಭೂತಿ
ಹೊರಹೊಮ್ಮಲಿ ಸ್ವಾಂತಾತ್ಮವಿಭೂತಿ
ಹೊಳೆ ಹೊಳೆಸುತ ಸದ್ವಿದ್ಯಾರುಚಿಗಳ
ನಮ್ಮೀ ಶಾಲೆಯ ಗುರುಶಿಷ್ಯರುಗಳ
ತೇಜವಾಗೆ ಪರಚಿತ್ತಗ್ರಸಿಷ್ಣು
ಹರಸಲಿದನು ಶ್ರೀ ವಿಕ್ರಮ ವಿಷ್ಣು.
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...