Home / ಕಥೆ / ಕಿರು ಕಥೆ / ಕಲ್ಲಿನಲ್ಲಿ ಸಾಲಿಗ್ರಾಮ

ಕಲ್ಲಿನಲ್ಲಿ ಸಾಲಿಗ್ರಾಮ

ಒಬ್ಬ ವಯೋವೃದ್ಧ ತನ್ನ ಜೀವಮಾನದಲೆಲ್ಲಾ ಒಂದು ಕರಿಯ ಬೆಣಚು ಕಲ್ಲನ್ನು ತುಂಬಾ ಪ್ರೀತಿಸುತ್ತಿದ್ದ. ಅವನು ಅದನ್ನು ಸದಾ ಕಾಲವೂ ಕೈಯಲ್ಲಿಟ್ಟು ಕೊಂಡಿರುತ್ತಿದ್ದ. ಕೈಯಲ್ಲಿ ಕೆಲಸವಿದ್ದಾಗ ಅದನ್ನು ಬಾಯಿಯಲ್ಲಿ ಹಾಕಿಕೊಂಡು ದವಡೆಯಿಂದ ದವಡೆಗೆ ಬದಲಾಯಿಸುತ್ತಾ ತನ್ನ ನಿತ್ಯ ಕೆಲಸಗಳನ್ನು ಮುಗಿಸುತ್ತಿದ್ದ.

“ಲೋ? ಮುದುಕ ಏನು ತಂಬಾಕು ಮಲ್ಲುತ್ತಿರುವೆಯಾ?” ಎಂದು ಹಳ್ಳಿ ಜನರು ಕೇಳುತ್ತಿದ್ದರು.

ಮುದುಕ ಮಾತನಾಡದೆ ಸುಮ್ಮನಿರುತ್ತಿದ್ದ.

“ಯಾಕಪ್ಪ ಮಾತಾಡೋಲ್ಲ? ಏನು ಅಂತ ಸವಿ ತಿಂಡಿ ಬಾಯಲ್ಲಿ” ಎಂದು ಕೇಳುತ್ತಿದ್ದರು.

ಒಮೊಮ್ಮೆ ಮುದುಕ ಗಂಟೆಗಟ್ಟಲೆ ವೃಕ್ಷದ ಕೆಳಗೆ ತಪಸ್ವಿಯಂತೆ ಕುಳಿತು ಬಾಯಲ್ಲಿ ಬೆಣಚು ಕಲ್ಲಿಟ್ಟುಕೊಂಡು ಧ್ಯಾನ ಮಾಡುತ್ತಿದ್ದ.

ಒಬ್ಬ ಹಳ್ಳಿಯ ಯುವಕನಿಗೆ ಅತ್ಯಂತ ಕುತೂಹಲವಾಯಿತು. ಅವನು ಸ್ನೇಹದಿಂದ ಮೆಲ್ಲಗೆ ಮುದುಕನ ಹತ್ತಿರಬಂದು ಕುಶಲೋಪರಿ ಮಾತನಾಡಿ ಅವನ ಮನ ಒಲಿಸಿಕೊಂಡು ನಂತರ ಮುದುಕ ಸ್ವಲ್ಪ ಸಲಿಗೆಯಿಂದ ಮಾತನಾಡತೊಡಗಿದ.

ಮುದುಕನು ಮನ ಬಿಚ್ಚಿ ಮಾತನಾಡಲು “ನೀನು ಬೆಣಚು ಕಲ್ಲನ್ನು ಬಾಯಲ್ಲಿ ಇಟ್ಟುಕೊಂಡಿರುವ ಗುಟ್ಟೇನು?” ಎಂದು ಕೇಳಿದ ಹಳ್ಳಿಗ.

“ಗುಟ್ಟೇನು ಬಂತು?-ಅದು ನನ್ನ ಸಹಜ ಪೂಜೆ” ಎಂದ.

“ಇದೇನು ಬಾಯಲ್ಲಿ ಮಂತ್ರ ಹೇಳುತ್ತಾರೆ. ಕೇಳಿದ್ದೇನೆ. ಆದರೆ ಬಾಯಲ್ಲಿ ಬೆಣಚು ಕಲ್ಲಿಟ್ಟುಕೊಂಡು ಪೂಜಿಸುವವರನ್ನು ನೋಡಿಲ್ಲ” ಎಂದ.

ಪೂಜೆ ವ್ಯಕ್ತಿಗತ, ಒಬ್ಬರೊಬ್ಬರದು ಒಂದೊಂದು ವಿಧಾನ. ನೀನು ಕೈಯಲ್ಲಿ ಪೂಜೆ ಮಾಡಿದರೆ, ನಾನು ಬಾಯಲ್ಲಿ ಪೂಜೆ ಮಾಡುತ್ತೇನೆ, ಕೆಲವರು ಹೊಟ್ಟೆಯಿಂದ-ಹೀಗೆ ಹಲವು ಹತ್ತಾರು ವಿಧಾನ ಇರುತ್ತೆ.” ಎಂದ ಮುದುಕ.

“ಅದು ಸರಿ ಇದು ಯಾವ ರೀತಿಯ ಪೂಜೆ? ಯಾವ ದೇವರಿಗಾಗಿ?”

“ಇದು ನನ್ನ ಸ್ವಂತ ದೈವ. ನನ್ನ ಕೈಯಲ್ಲಿ ಕೆತ್ತಲಾಗದ ದೈವಮೂರ್ತಿಯನ್ನು ನನ್ನ ಹಲ್ಲು ದವಡೆ ಕೆತ್ತುತ್ತಿದೆ”

“ಇದೇನು ಎಂಜಲು, ಉಗುಳು, ಬಾಯಿಯ ದುರ್ನಾತ, ಹಲ್ಲಿನ ಕಡೆತ ಇದೆಲಲ್ಲಾ ಪೂಜೆಯಾಗುತ್ತದೆಯೇ? ದೈವ ಒಪ್ಪುತ್ತಾನೆಯೇ?”

“ಉಳಿಯಿಂದ ಹೊಡಿಸಿಕೊಂಡು ಮೂರ್ತಿಮತ್ತಾಗುವ ದೈವಕ್ಕೆ ನಾನು ಬಾಯಲ್ಲಿಟ್ಟು ಚಪ್ಪರಿಸಿದಾಗಲೆಲ್ಲಾ ಮುತ್ತನಿತ್ತಂತೆ, ಅದು ನನ್ನ ಪ್ರೇಮ ಅಭಿವ್ಯಕ್ತಿ” ಎಂದ ಮುದುಕ.

“ನೀನು ಈ ರೀತಿಯ ಪೂಜೆಯಿಂದ ಏನನ್ನು ಸಾಧಿಸ ಹೊರಟಿರುವೆ?”

“ನನ್ನ ಬೆಣಚು ಕಲ್ಲು, ಹಲ್ಲುಗಳ ಮಧ್ಯೆ ಸಾಲಿಗ್ರಾಮದ ಸುಂದರ ಪರಿವರ್ತನೆಯಲ್ಲಿ ತೊಡಗಿದೆ. ಅಲ್ಲಿ ದೈವದ ಪ್ರತಿಬಿಂಬ ಮೂಡುತ್ತಿದೆ. ಇನ್ನೇನು ಸಾಧಿಸಲು ಇದೆ?” ಎಂದ ಮುದುಕ.

“ಏನೂ ಹಲ್ಲಿನ ಕೆಳಗೆ-ಬೆಣಚುಕಲ್ಲು ಸಾಲಿಗ್ರಾಮವಾಗುತ್ತಿದೆಯೆ?”

“ಹೌದು, ನದಿಯಲ್ಲಿ ನೀರು ಹರಿದು ಬೆಣಚುಕಲ್ಲಿನಲ್ಲಿ, ಚಿಪ್ಪಿನಲ್ಲಿ ಆಕಾರ ಮೂಡಿ ಸಾಲಿಗ್ರಾಮವಾಗುವುದಿಲ್ಲವೇ? ಹಾಗೆ ನನ್ನ ಬಾಯಲ್ಲಿ ಊರುವ ನನ್ನ ಲಾಲಾರಸೋಸ್ವಾದನೆಯಲ್ಲಿ ಸಾಲಿಗ್ರಾಮ ರೂಪುಗೊಳ್ಳುತ್ತಿದೆ. ಇದು ನನ್ನ ಪೂಜೆ. ಮಂತ್ರವಿಲ್ಲದೆ, ಮಾತಿಲ್ಲದೆ ದಿವ್ಯ ಮೌನ ಪೂಜೆ”- ಎಂದ ಮುದುಕ.

ಹಳ್ಳಿಯ ಯುವಕ ಬೆಚ್ಚಿದಂಗಾದ. ಝೆನ್ ಧ್ಯಾನದಲ್ಲಿರುವ ಮುದುಕನ ಅತಿವಿಚಿತ್ರದ ಪೂಜೆ ಅವನ ಒಳಕಣ್ಣನ್ನು ತೆರೆಯಿತು. ಝೆನ್‌ನನ್ನು ನಮ್ಮದಾಗಿಸಿ ಕೊಂಡಾಗ ಅದು ಕೊಡುವ ಸ್ವಾತಂತ್ರ್ಯ, ಯಾವ ರೀತಿಯ, ನೀತಿಯ, ಪಂಥ, ಪ್ರಕಾರಕ್ಕೆ ಶರಣಾಗದೆ ಬಾಯಿಯಷ್ಟು ಅಗಲ ಆಳದಲ್ಲೂ ದೈವ ಸೃಷ್ಟಿಯ ಯತ್ನ ಯುವಕನಿಗೆ ವಿಸ್ಮಯವ ತಂದಿತು. ವಿಸ್ಮಯೇ ಯೋಗ ಭೂಮಿಕಾ! ಎಂದು ತಿಳಿದ, ಝೆನ್‌ನಲ್ಲಿ ಅದೆಂತಹ ಮುಕ್ತತೆಯಿದೆ. ಜ್ಞಾನದ ಬಾಗಿಲಿಗೆ ಝೆನ್ ಅದೆಂತಹ ಅರಿವಿನ ಕೀಲಿಕೈ. ಯಾವುದೇ ಕಟ್ಟುಪಾಡು, ಕಂದಾಚಾರ, ಸಿದ್ದಾಂತ ಇಲ್ಲದೆ ಅನಂತಕ್ಕೆ ಕೊಂಡೊಯ್ಯುವ ಇದೆಂತಹ ಸಾಧನ” ಎಂದು ಯುವಕ ಮನದಟ್ಟು ಮಾಡಿಕೊಂಡ.
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...