Home / ಕಥೆ / ಕಿರು ಕಥೆ / ಕಲ್ಲಿನಲ್ಲಿ ಸಾಲಿಗ್ರಾಮ

ಕಲ್ಲಿನಲ್ಲಿ ಸಾಲಿಗ್ರಾಮ

ಒಬ್ಬ ವಯೋವೃದ್ಧ ತನ್ನ ಜೀವಮಾನದಲೆಲ್ಲಾ ಒಂದು ಕರಿಯ ಬೆಣಚು ಕಲ್ಲನ್ನು ತುಂಬಾ ಪ್ರೀತಿಸುತ್ತಿದ್ದ. ಅವನು ಅದನ್ನು ಸದಾ ಕಾಲವೂ ಕೈಯಲ್ಲಿಟ್ಟು ಕೊಂಡಿರುತ್ತಿದ್ದ. ಕೈಯಲ್ಲಿ ಕೆಲಸವಿದ್ದಾಗ ಅದನ್ನು ಬಾಯಿಯಲ್ಲಿ ಹಾಕಿಕೊಂಡು ದವಡೆಯಿಂದ ದವಡೆಗೆ ಬದಲಾಯಿಸುತ್ತಾ ತನ್ನ ನಿತ್ಯ ಕೆಲಸಗಳನ್ನು ಮುಗಿಸುತ್ತಿದ್ದ.

“ಲೋ? ಮುದುಕ ಏನು ತಂಬಾಕು ಮಲ್ಲುತ್ತಿರುವೆಯಾ?” ಎಂದು ಹಳ್ಳಿ ಜನರು ಕೇಳುತ್ತಿದ್ದರು.

ಮುದುಕ ಮಾತನಾಡದೆ ಸುಮ್ಮನಿರುತ್ತಿದ್ದ.

“ಯಾಕಪ್ಪ ಮಾತಾಡೋಲ್ಲ? ಏನು ಅಂತ ಸವಿ ತಿಂಡಿ ಬಾಯಲ್ಲಿ” ಎಂದು ಕೇಳುತ್ತಿದ್ದರು.

ಒಮೊಮ್ಮೆ ಮುದುಕ ಗಂಟೆಗಟ್ಟಲೆ ವೃಕ್ಷದ ಕೆಳಗೆ ತಪಸ್ವಿಯಂತೆ ಕುಳಿತು ಬಾಯಲ್ಲಿ ಬೆಣಚು ಕಲ್ಲಿಟ್ಟುಕೊಂಡು ಧ್ಯಾನ ಮಾಡುತ್ತಿದ್ದ.

ಒಬ್ಬ ಹಳ್ಳಿಯ ಯುವಕನಿಗೆ ಅತ್ಯಂತ ಕುತೂಹಲವಾಯಿತು. ಅವನು ಸ್ನೇಹದಿಂದ ಮೆಲ್ಲಗೆ ಮುದುಕನ ಹತ್ತಿರಬಂದು ಕುಶಲೋಪರಿ ಮಾತನಾಡಿ ಅವನ ಮನ ಒಲಿಸಿಕೊಂಡು ನಂತರ ಮುದುಕ ಸ್ವಲ್ಪ ಸಲಿಗೆಯಿಂದ ಮಾತನಾಡತೊಡಗಿದ.

ಮುದುಕನು ಮನ ಬಿಚ್ಚಿ ಮಾತನಾಡಲು “ನೀನು ಬೆಣಚು ಕಲ್ಲನ್ನು ಬಾಯಲ್ಲಿ ಇಟ್ಟುಕೊಂಡಿರುವ ಗುಟ್ಟೇನು?” ಎಂದು ಕೇಳಿದ ಹಳ್ಳಿಗ.

“ಗುಟ್ಟೇನು ಬಂತು?-ಅದು ನನ್ನ ಸಹಜ ಪೂಜೆ” ಎಂದ.

“ಇದೇನು ಬಾಯಲ್ಲಿ ಮಂತ್ರ ಹೇಳುತ್ತಾರೆ. ಕೇಳಿದ್ದೇನೆ. ಆದರೆ ಬಾಯಲ್ಲಿ ಬೆಣಚು ಕಲ್ಲಿಟ್ಟುಕೊಂಡು ಪೂಜಿಸುವವರನ್ನು ನೋಡಿಲ್ಲ” ಎಂದ.

ಪೂಜೆ ವ್ಯಕ್ತಿಗತ, ಒಬ್ಬರೊಬ್ಬರದು ಒಂದೊಂದು ವಿಧಾನ. ನೀನು ಕೈಯಲ್ಲಿ ಪೂಜೆ ಮಾಡಿದರೆ, ನಾನು ಬಾಯಲ್ಲಿ ಪೂಜೆ ಮಾಡುತ್ತೇನೆ, ಕೆಲವರು ಹೊಟ್ಟೆಯಿಂದ-ಹೀಗೆ ಹಲವು ಹತ್ತಾರು ವಿಧಾನ ಇರುತ್ತೆ.” ಎಂದ ಮುದುಕ.

“ಅದು ಸರಿ ಇದು ಯಾವ ರೀತಿಯ ಪೂಜೆ? ಯಾವ ದೇವರಿಗಾಗಿ?”

“ಇದು ನನ್ನ ಸ್ವಂತ ದೈವ. ನನ್ನ ಕೈಯಲ್ಲಿ ಕೆತ್ತಲಾಗದ ದೈವಮೂರ್ತಿಯನ್ನು ನನ್ನ ಹಲ್ಲು ದವಡೆ ಕೆತ್ತುತ್ತಿದೆ”

“ಇದೇನು ಎಂಜಲು, ಉಗುಳು, ಬಾಯಿಯ ದುರ್ನಾತ, ಹಲ್ಲಿನ ಕಡೆತ ಇದೆಲಲ್ಲಾ ಪೂಜೆಯಾಗುತ್ತದೆಯೇ? ದೈವ ಒಪ್ಪುತ್ತಾನೆಯೇ?”

“ಉಳಿಯಿಂದ ಹೊಡಿಸಿಕೊಂಡು ಮೂರ್ತಿಮತ್ತಾಗುವ ದೈವಕ್ಕೆ ನಾನು ಬಾಯಲ್ಲಿಟ್ಟು ಚಪ್ಪರಿಸಿದಾಗಲೆಲ್ಲಾ ಮುತ್ತನಿತ್ತಂತೆ, ಅದು ನನ್ನ ಪ್ರೇಮ ಅಭಿವ್ಯಕ್ತಿ” ಎಂದ ಮುದುಕ.

“ನೀನು ಈ ರೀತಿಯ ಪೂಜೆಯಿಂದ ಏನನ್ನು ಸಾಧಿಸ ಹೊರಟಿರುವೆ?”

“ನನ್ನ ಬೆಣಚು ಕಲ್ಲು, ಹಲ್ಲುಗಳ ಮಧ್ಯೆ ಸಾಲಿಗ್ರಾಮದ ಸುಂದರ ಪರಿವರ್ತನೆಯಲ್ಲಿ ತೊಡಗಿದೆ. ಅಲ್ಲಿ ದೈವದ ಪ್ರತಿಬಿಂಬ ಮೂಡುತ್ತಿದೆ. ಇನ್ನೇನು ಸಾಧಿಸಲು ಇದೆ?” ಎಂದ ಮುದುಕ.

“ಏನೂ ಹಲ್ಲಿನ ಕೆಳಗೆ-ಬೆಣಚುಕಲ್ಲು ಸಾಲಿಗ್ರಾಮವಾಗುತ್ತಿದೆಯೆ?”

“ಹೌದು, ನದಿಯಲ್ಲಿ ನೀರು ಹರಿದು ಬೆಣಚುಕಲ್ಲಿನಲ್ಲಿ, ಚಿಪ್ಪಿನಲ್ಲಿ ಆಕಾರ ಮೂಡಿ ಸಾಲಿಗ್ರಾಮವಾಗುವುದಿಲ್ಲವೇ? ಹಾಗೆ ನನ್ನ ಬಾಯಲ್ಲಿ ಊರುವ ನನ್ನ ಲಾಲಾರಸೋಸ್ವಾದನೆಯಲ್ಲಿ ಸಾಲಿಗ್ರಾಮ ರೂಪುಗೊಳ್ಳುತ್ತಿದೆ. ಇದು ನನ್ನ ಪೂಜೆ. ಮಂತ್ರವಿಲ್ಲದೆ, ಮಾತಿಲ್ಲದೆ ದಿವ್ಯ ಮೌನ ಪೂಜೆ”- ಎಂದ ಮುದುಕ.

ಹಳ್ಳಿಯ ಯುವಕ ಬೆಚ್ಚಿದಂಗಾದ. ಝೆನ್ ಧ್ಯಾನದಲ್ಲಿರುವ ಮುದುಕನ ಅತಿವಿಚಿತ್ರದ ಪೂಜೆ ಅವನ ಒಳಕಣ್ಣನ್ನು ತೆರೆಯಿತು. ಝೆನ್‌ನನ್ನು ನಮ್ಮದಾಗಿಸಿ ಕೊಂಡಾಗ ಅದು ಕೊಡುವ ಸ್ವಾತಂತ್ರ್ಯ, ಯಾವ ರೀತಿಯ, ನೀತಿಯ, ಪಂಥ, ಪ್ರಕಾರಕ್ಕೆ ಶರಣಾಗದೆ ಬಾಯಿಯಷ್ಟು ಅಗಲ ಆಳದಲ್ಲೂ ದೈವ ಸೃಷ್ಟಿಯ ಯತ್ನ ಯುವಕನಿಗೆ ವಿಸ್ಮಯವ ತಂದಿತು. ವಿಸ್ಮಯೇ ಯೋಗ ಭೂಮಿಕಾ! ಎಂದು ತಿಳಿದ, ಝೆನ್‌ನಲ್ಲಿ ಅದೆಂತಹ ಮುಕ್ತತೆಯಿದೆ. ಜ್ಞಾನದ ಬಾಗಿಲಿಗೆ ಝೆನ್ ಅದೆಂತಹ ಅರಿವಿನ ಕೀಲಿಕೈ. ಯಾವುದೇ ಕಟ್ಟುಪಾಡು, ಕಂದಾಚಾರ, ಸಿದ್ದಾಂತ ಇಲ್ಲದೆ ಅನಂತಕ್ಕೆ ಕೊಂಡೊಯ್ಯುವ ಇದೆಂತಹ ಸಾಧನ” ಎಂದು ಯುವಕ ಮನದಟ್ಟು ಮಾಡಿಕೊಂಡ.
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...