Home / ಕವನ / ಕವಿತೆ / ಬೇರುಗಳು

ಬೇರುಗಳು

ಈಗಷ್ಟೆ ಪತ್ರ ಬಂತು
ಮಿ. ಪ್ಯಾಟ್ರಿಕ್‌ನ ಬರವಣಿಗೆ
ಕತ್ತೆ ಕಾಲು ನಾಯಿಕಾಲು ಆನೆಕಾಲು
ಎಲ್ಲಿಂದ ಓದುವುದು ಎಲ್ಲಿ ನಿಲ್ಲಿಸುವುದು – ಛೇ-
ಅರ್ಥವಾಗುವುದೇ ಇಲ್ಲ ಬೇಗ ಅಮೆರಿಕದವ
ಮಾತುಗಳು ಸ್ಪಷ್ಟ ಸಾಕಷ್ಟು ಮಾತನಾಡಬಹುದು
ಜೋಕ್ಸು ಮಾತುಕತೆಗಳೇನೇ ಇರಲಿ ದೊಡ್ಡ ಬಾಯಿಯವ

ಬರೆದಿದ್ದಾನೆ
೫೦ ಡಿಗ್ರಿ ಬಿಸಿಲಿನ ಹೊಡೆತಕ್ಕೂ
ತೆಂಗಿನ ಮರ ಬೆಳೆದುನಿಂತಿದೆ ಆಕಾಶದೆತ್ತರ
ಹಣ್ಣುಗಳು ಬಿಡುತಿವೆ ಪಪಾಯಿ ಗಿಡದಲಿ
ಸೊಂಪಾಗಿ ಹಬ್ಬಿದೆ ಮಲ್ಲಿಗೆ ಬಳ್ಳಿ
ಅದೇಕೋ ಮುನಿಸಿಕೊಂಡಿದೆ ಮಾವಿನಗಿಡ
ಮೇಲೆಳುತ್ತಲೇ ಇಲ್ಲ ಸಲಹೆ ಏನಾದರೂ….
ಸ್ಯಾಂಡಲ್‌ವುಡ್ ಆನೆಗಳ ಹಿಂಡು
ಹೆಂಡತಿಗೆ ಕೊಟ್ಟ ಬಿಂದಿ ಪೊಟ್ಟಣ
ರೇಶ್ಮೆ ಸೀರೆ ನಿಮ್ಮೂರಿಗೆ ಏಳೆಯುತ್ತವೆ.
ಜೊತೆಗೆ ಕಳಿಸಿದ್ದಾನೆ ಇವುಗಳೆಲ್ಲದರ ಫೋಟೋ.

ಭಾವಪರವಶಳಾಗಿ ಹೃದಯ ತುಂಬಿತು
ವಿದೇಶಕ್ಕೆ ಹೊರಟ ಅಂದು
ನೆಲದಿಂದ ಹೆಜ್ಜೆ ಕೀಳುವಾಗ
ನೆಲ-ಜಲದ ಋಣ ನೆನಪಿಗಿರಲೆಂದು
ಬೊಗಸೆ ಮಣ್ಣು ನಾಲ್ಕಾರು ಬೇರುಗಳು
ನನ್ನೊಂದಿಗಿರಲೆಂದು ನೀರಿನಲ್ಲೆದ್ದೆದ್ದಿ ಒಯ್ದಿದ್ದೆ

ಕಿಡಕಿಯಾಚೆ ಸೊಂಪಾದ ಗಿಡಬಳ್ಳಿಗಳು
ಕೈತೋಟದ ತುಂಬ ಹೂವುಗಳು
ವರ್ಷಗಳುರುಳುರುಳಿ ಬೆಳೆಯತೊಡಗಿದವು
ಮನೆಗೆ ಹೊಸದಾಗಿ ಬರುತ್ತಿರುವ
ಮಿ. ಪ್ಯಾಟ್ರಿಕ್‌ನಿಗೆ ಹಸಿರು ಹಸ್ತಾಂತರಿಸಿ
ಇವು ನಮ್ಮ ಮಕ್ಕಳೆಂದು ಹೇಳಿ ಬಂದಾಗಿತ್ತು.

ಮತ್ತೆ ಮುಂದುವರೆಸಿದ್ದಾನೆ-
ಹಾಲೆಂಡಿನ ಫರ್ಟಿಲೈಸರ್
ಅಮೆರಿಕದ ಇನ್‌ಸೆಕ್ಟಿಸೈಡ್
ಫಿಲಿಪೈನಿನ ಗಾರ್ಡನರ್
ಇಲ್ಲಿಯ ಡಿಸ್ಟಿಲ್ಡ್ ವಾಟರ್
ನಿಮ್ಮ ಬೇರುಗಳು ಇನ್ನೂ ಇನ್ನೂ ನೆಲದಾಳಕ್ಕಿಳಿಯುತ್ತಿವೆ
ಟೊಂಗೆಗಳೆಲ್ಲ ದಿಕ್ಕು ದಿಕ್ಕಿಗೂ ಚಾಚಿ
ಕೊಡುತಿವೆ ಚಿಗುರು ಹೂವು ಕಾಯಿ ಹಣ್ಣು
ಸುಂದರ ಅತೀ ಸುಂದರ

ಈ ನೆಲದ ಮಣ್ಣು ಬೇರು ಆ ನೆಲದ ನೀರು ಗಾಳಿ
ಬಾಯಿಪಾಠವಾಗಿ ಹೋಗಿದೆ ಪತ್ರ
ದೂರದೇಶಕೆ ಹೊರಡುವ ಮಕ್ಕಳಿಗೂ
ಭಾರವಾದರೂ ಇರಲೆಂದು
ಬೊಗಸೆಮಣ್ಣು ನಾಲ್ಕಾರು ಬೇರು ಕಳಿಸಿಬಿಡುತ್ತೇನೆ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...