Home / ಕವನ / ಕವಿತೆ / ಕುಚೇಲ!

ಕುಚೇಲ!

ಭಾಮಿನಿ

ಶ್ರೀರಮಾ ರಮಣೈಕ ಭಕ್ತನೆ!
ಚಾರು ಚರಿತ! ಕುಚೇಲ! ನಿನ್ನಯ-
ಸಾರ ಗುಣ ಗಣ ಯುಕ್ತ ಭಕ್ತಿಯ-
ನೆಂತು ಬಣ್ಣಿಪೆನು?

ವಾರಿಜೋದರ ದೇಹದಾ ನಿಜ
ಸಾರದಾಲಿಂಗನೆಯನಾ೦ತಿಹ
ಚಾರು ಸುಮನೋಹರ ಶರೀರವ-
ನೆಂತು ಚಿತ್ರಿಪೆನು? ೧

ಸಾದರದಿ ನೀನೆಲೆ ಸುದಾಮನೆ!
ಮಾಧವನ ಭವನಾಂತರುಲದಿ
ಹೋದ ಹೊತ್ತಿನ ಗಣನೆಯಿಲ್ಲದೆ,
ಹರಿಯ ಸರಿಸದಲಿ

ಮೋದದಲಿ ಮಾತಾಡುತಾಡುತ,
ಸೋದರರ ತೆರದಲ್ಲಿ ವಿಹರಿಸಿ,
ಸಾಧಿಸಿದ ಚಿತ್ರವದು ಮಾಸದು
ಹೃದಯ ಭಿತ್ತಿಯಲಿ. ೨

ಬಡತನದ ಕಡು ದುಗುಡದಿಂದಲಿ
ಸೆಡೆದು ಬಡವಾಗಿರುವ ಒಡಲದು
ಸಡಗರದಿ ಮಾಧವನು ಕೋಮಲ
ಮಸೃಣ ಕರತಳದಿ

ಕೊಡುವ ಅಂಗಸ್ಪರ್ಶ ಸುಖದಲಿ
ಪಡೆಯದೇ ರೋಮಾಂಚವನು ತಾ-
ನಡಿಗಡಿಗೆ ಪೇಳೀಗ ಭಕ್ತ ಸು-
ದಾಮ! ನನ್ನೊಡನೆ. ೩

ಕೆಲವು ಮನೆಯನು ತಿರಿದು ತಂದಿಹ,
ಅಳಿಲ ಸೇವೆಯ ಮಳಲಿನ೦ತಿಹ,
ಒಲುಮೆಯೊಲವಿನ ಕಾಣಿಕೆಯನವ-
ಲಕ್ಕಿಯನು ಮುದದಿ

ಲಲನೆಯಾ ‘ಕ್ಷುತ್‌ ಕ್ಷಾಮೆ’ ಯಿತ್ತಳು
ಸಲಿಗೆಯಲಿ ನಿನಗೆಂದು, ಕೃಷ್ಣನ
ಲಲಿತ ಸಂದರ್ಶನದಿ ಕಾಣಿಕೆ.
ಗೊಡಲು ಭಕ್ತಿಯಲಿ. ೪

ಅದನು ಹೆದರುತ ತ೦ದು, ಕೃಷ್ಣನ
ಪದತಲದೊಳರ್ಪಿಸದೆ, ಸುಮ್ಮನೆ
ಒದವಿದಾ ಸ೦ಕೋಚ ಭಾವದಿ
ಬಾಗಿ ನಿ೦ದಿರಲು,

ಸದಯ ಹೃದಯನು ಮಾಧವನು ನಿಜ
ಸದಮಲಾಂತಃಕರಣದಿಂದಲಿ
ಸೊದೆಯ ಸುರಿಸುವ ಸರಸ ವಚನವ-
ನಿಂತು ಪೇಳಿದನು:- ೫

“ಸಾಕು ಮನದನುತಾಪ, ಮಿತ್ರನೆ!
ಈ ಕಡೆಗೆ ನೀಡೆನಗೆ, ಮನದಲಿ
`ಕಾಕು ಬುದ್ಧಿಯ ಬಿಟ್ಟು, ಭಕ್ತಿಯ
ಕಾಣ್ಮೆಯನ್ನೀಗ.

ಏಕೆ ಸಂಶಯ? ಭಕ್ತ ಜನರು ವಿ-
ವೇಕದಿ೦ದಲಿ ಕೊಟ್ಟ ಪತ್ರವು,
ಆ ಕುಸುಮ, ಫಲ, ತೋಯ ತೃಪ್ತಿಯ-
ನೆಸಗುವುದು ನನಗೆ. ೬

“ಧನಿಕರರ್ಪಿಪ ವಿವಿಧ ವಸ್ತುಗ-
ಳನಿತರೊಳು ನನಗಿರದು ತೃಪ್ತಿಯು;
ಜನಕೆ ತೋರಿಪ ಹೊರಗಿನಾಡ೦-
ಬರೆದಿ ಫಲವೇನು?

ಮನವೊಲಿದು ಸಂಸ್ತುತಿಸಿ, ಸುರಿಯಿಪ
ಮನವ ಕರಗಿಪ ನಯನ ವಾರಿಯು
ನನಗೆ ಮನೆಯದು, ಭಕ್ತರಿಗೆ ನಾ-
ನೊಲಿವೆ; ಸತ್ಯವಿದು!” ೭

ಎಂದ ಮಾತನು ಕೇಳುತತ್ಯಾ-
ನಂದದಲಿ ನೀನಂದು ಶ್ರೀಗೋ-
ವಿಂದನಡಿದಾವರೆಗೆ ಪೊಡಮಡು-
ತಧಿಕ ಭಕ್ತಿಯಲಿ,

“ಇಂದಿರಾ ಮಂದಿರನೆ! ಭಕ್ತರ
ಬಂಧು ನೀಡುವೆ ನಿನಗೆ ನಾನಿಂ-
ದಂದದಲಿಯವಲಕ್ಕಿ ಬಡವನ
ಭಕ್ತಿ ಕಾಣಿಕೆಯ. ೮

“ಒ೦ದಿ ನೀನಿದರನ್ನು, ನನ್ನನು
ಮುಂದೆ ಕೃಪೆಯಲಿ ಸಲಹು. ಬೇಡುವೆ,”
ನೆಂದು ಕಂಠದೊಳುಣ್ಮೆ ಗದ್ಗದ
ದನಿಯು, ನಯನದಲಿ

ಸಂದಿರಲು ಸಂತಸದ ಕ೦ಬನಿ,
ನಿಂದಿರಲು ರೋಮಾಂಚ ದೇಹದಿ,
ಮುಂದೆಯವಲಕ್ಕಿಯನು ಬಿಚ್ಚಿದೆ.
ಧನ್ಯ ನೀನಿಂದು! ೯
*****
೧೯೩೩

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...