ಭಾಮಿನಿ
ಶ್ರೀರಮಾ ರಮಣೈಕ ಭಕ್ತನೆ!
ಚಾರು ಚರಿತ! ಕುಚೇಲ! ನಿನ್ನಯ-
ಸಾರ ಗುಣ ಗಣ ಯುಕ್ತ ಭಕ್ತಿಯ-
ನೆಂತು ಬಣ್ಣಿಪೆನು?
ವಾರಿಜೋದರ ದೇಹದಾ ನಿಜ
ಸಾರದಾಲಿಂಗನೆಯನಾ೦ತಿಹ
ಚಾರು ಸುಮನೋಹರ ಶರೀರವ-
ನೆಂತು ಚಿತ್ರಿಪೆನು? ೧
ಸಾದರದಿ ನೀನೆಲೆ ಸುದಾಮನೆ!
ಮಾಧವನ ಭವನಾಂತರುಲದಿ
ಹೋದ ಹೊತ್ತಿನ ಗಣನೆಯಿಲ್ಲದೆ,
ಹರಿಯ ಸರಿಸದಲಿ
ಮೋದದಲಿ ಮಾತಾಡುತಾಡುತ,
ಸೋದರರ ತೆರದಲ್ಲಿ ವಿಹರಿಸಿ,
ಸಾಧಿಸಿದ ಚಿತ್ರವದು ಮಾಸದು
ಹೃದಯ ಭಿತ್ತಿಯಲಿ. ೨
ಬಡತನದ ಕಡು ದುಗುಡದಿಂದಲಿ
ಸೆಡೆದು ಬಡವಾಗಿರುವ ಒಡಲದು
ಸಡಗರದಿ ಮಾಧವನು ಕೋಮಲ
ಮಸೃಣ ಕರತಳದಿ
ಕೊಡುವ ಅಂಗಸ್ಪರ್ಶ ಸುಖದಲಿ
ಪಡೆಯದೇ ರೋಮಾಂಚವನು ತಾ-
ನಡಿಗಡಿಗೆ ಪೇಳೀಗ ಭಕ್ತ ಸು-
ದಾಮ! ನನ್ನೊಡನೆ. ೩
ಕೆಲವು ಮನೆಯನು ತಿರಿದು ತಂದಿಹ,
ಅಳಿಲ ಸೇವೆಯ ಮಳಲಿನ೦ತಿಹ,
ಒಲುಮೆಯೊಲವಿನ ಕಾಣಿಕೆಯನವ-
ಲಕ್ಕಿಯನು ಮುದದಿ
ಲಲನೆಯಾ ‘ಕ್ಷುತ್ ಕ್ಷಾಮೆ’ ಯಿತ್ತಳು
ಸಲಿಗೆಯಲಿ ನಿನಗೆಂದು, ಕೃಷ್ಣನ
ಲಲಿತ ಸಂದರ್ಶನದಿ ಕಾಣಿಕೆ.
ಗೊಡಲು ಭಕ್ತಿಯಲಿ. ೪
ಅದನು ಹೆದರುತ ತ೦ದು, ಕೃಷ್ಣನ
ಪದತಲದೊಳರ್ಪಿಸದೆ, ಸುಮ್ಮನೆ
ಒದವಿದಾ ಸ೦ಕೋಚ ಭಾವದಿ
ಬಾಗಿ ನಿ೦ದಿರಲು,
ಸದಯ ಹೃದಯನು ಮಾಧವನು ನಿಜ
ಸದಮಲಾಂತಃಕರಣದಿಂದಲಿ
ಸೊದೆಯ ಸುರಿಸುವ ಸರಸ ವಚನವ-
ನಿಂತು ಪೇಳಿದನು:- ೫
“ಸಾಕು ಮನದನುತಾಪ, ಮಿತ್ರನೆ!
ಈ ಕಡೆಗೆ ನೀಡೆನಗೆ, ಮನದಲಿ
`ಕಾಕು ಬುದ್ಧಿಯ ಬಿಟ್ಟು, ಭಕ್ತಿಯ
ಕಾಣ್ಮೆಯನ್ನೀಗ.
ಏಕೆ ಸಂಶಯ? ಭಕ್ತ ಜನರು ವಿ-
ವೇಕದಿ೦ದಲಿ ಕೊಟ್ಟ ಪತ್ರವು,
ಆ ಕುಸುಮ, ಫಲ, ತೋಯ ತೃಪ್ತಿಯ-
ನೆಸಗುವುದು ನನಗೆ. ೬
“ಧನಿಕರರ್ಪಿಪ ವಿವಿಧ ವಸ್ತುಗ-
ಳನಿತರೊಳು ನನಗಿರದು ತೃಪ್ತಿಯು;
ಜನಕೆ ತೋರಿಪ ಹೊರಗಿನಾಡ೦-
ಬರೆದಿ ಫಲವೇನು?
ಮನವೊಲಿದು ಸಂಸ್ತುತಿಸಿ, ಸುರಿಯಿಪ
ಮನವ ಕರಗಿಪ ನಯನ ವಾರಿಯು
ನನಗೆ ಮನೆಯದು, ಭಕ್ತರಿಗೆ ನಾ-
ನೊಲಿವೆ; ಸತ್ಯವಿದು!” ೭
ಎಂದ ಮಾತನು ಕೇಳುತತ್ಯಾ-
ನಂದದಲಿ ನೀನಂದು ಶ್ರೀಗೋ-
ವಿಂದನಡಿದಾವರೆಗೆ ಪೊಡಮಡು-
ತಧಿಕ ಭಕ್ತಿಯಲಿ,
“ಇಂದಿರಾ ಮಂದಿರನೆ! ಭಕ್ತರ
ಬಂಧು ನೀಡುವೆ ನಿನಗೆ ನಾನಿಂ-
ದಂದದಲಿಯವಲಕ್ಕಿ ಬಡವನ
ಭಕ್ತಿ ಕಾಣಿಕೆಯ. ೮
“ಒ೦ದಿ ನೀನಿದರನ್ನು, ನನ್ನನು
ಮುಂದೆ ಕೃಪೆಯಲಿ ಸಲಹು. ಬೇಡುವೆ,”
ನೆಂದು ಕಂಠದೊಳುಣ್ಮೆ ಗದ್ಗದ
ದನಿಯು, ನಯನದಲಿ
ಸಂದಿರಲು ಸಂತಸದ ಕ೦ಬನಿ,
ನಿಂದಿರಲು ರೋಮಾಂಚ ದೇಹದಿ,
ಮುಂದೆಯವಲಕ್ಕಿಯನು ಬಿಚ್ಚಿದೆ.
ಧನ್ಯ ನೀನಿಂದು! ೯
*****
೧೯೩೩








