Home / ಕವನ / ಕವಿತೆ / ಬಡತನ ಸಿರಿತನ

ಬಡತನ ಸಿರಿತನ


ಬಡತನ ಸಿರಿತನ
ಕಡೆತನ ಕುಳದಾವೇನ?
ಅದಕಂತ ತನನನ ಹಾಡೋಣ!
ಬಾಳನ್ನು ಬಂಗಾರ ಮಾಡೋಣ!
ಗೋಳೀನ ಸಂತೆಯ ಮರೆಯೋಣ!


ಸಾವು ನೋವಿನ ಸುಗ್ಗಿ
ಯಾವ ಬಾಳಿಗೆ ನುಗ್ಗಿ
ಕಣ್ಣೀರ ಕರೆವಂತೆ ಮಾಡಿಲ್ಲ?
`ಅಯ್ಯೋ’ ಎಂದಾರನು ನುಡಿಸಿಲ್ಲ?
ಮುಯ್ಯೆಯೆ ಇದು ಎಂದು ಅನಿಸಿಲ್ಲ?


ಅದು ಇಲ್ಲ; ಇದು ಇಲ್ಲ
ಬದುಕೀಗೆ ಬೆಲೆಯಿಲ್ಲ
ಎಂದಂದು ಕೂಡುವ ದಿನವಲ್ಲ!
ಮನುಜನ ಶಕ್ತಿಯ ಮೀರಿಲ್ಲ
ಸಾಹಸ ಜೀವಿಗೆ ಇದೆ ಬೆಲ್ಲ!


ಬಂದದ್ದು ಬರಲೆಂದು
ತಿಂದದ್ದೆ ಬಂತೆಂದು
ನಮ್ಮ ಹಾದಿಯ ನಾವು ಹಿಡಿಯೋಣ
ಚಂದ ಚಂದ್ರಾಮನ್ನ ನೋಡೋಣ
ಸುಂದರ ಸೃಷ್ಟಿಗೆ ಬಾಗೋಣ


ಅವರೇನು ಅಂದಾರು?
ಇವರೇನು ತಂದಾರು?
ಎಂದಂದು ಧ್ಯೇಯವ ಮರೆತೇವು?
ಹಾಳು ರಾಗವ ಮತ್ತೆ ಹಾಡೇವು?
ಬೀಳುವ ಭಾರಕೆ ಸಿಕ್ಕೇವು?


ಹಾರಿ ಹೋಗುವ ಹಕ್ಕಿ
ದೂರ ಕಾಣುವ ಚಿಕ್ಕಿ
ನಮ್ಮ ಜೀವನ ಸುಧೆಯ ಬೇಡ್ಯಾವು
ತಮ್ಮ ಬಾಳಿನ ಕತೆಯ ಹೇಳ್ಯಾವು
ಒಮ್ಮೆಗೆ ನಮ್ಮನ್ನೆ ಮರಸ್ಯಾವು


ಸುಖ ದುಃಖ ಸರಿ ಸಮ
ಬಾಳಿದು ಘಮ ಘಮ-
ವೆಂದೆಂಬ ಹೂವೆಂದು ತಿಳಿಯೋಣ!
ಅದರ ಸುವಾಸನೆ ಬೇಡೋಣ!
ಕಿತ್ತೂಮ್ಮೆ ತಲೆಯಲ್ಲಿ ಮುಡಿಯೋಣ!


ಕಾಳಗ ಗೀಳಗ
ಕಾಲಾನ ಕಾಲಾಗ
ಮೇಲೆ ಕೆಳಗೆಲ್ಲೆಲ್ಲೊ ನಡೆದಿರಲಿ
ಹೆಣ್ಗಂಡಿನನುರಾಗ ಚಿಮ್ಮಿರಲಿ
ಕಣ್ಣಿಗೆ ಹೊಸಯುಗ ಹುಟ್ಟಿರಲಿ


ಶಾಂತಿಗೀಂತಿಯ ಮಂತ್ರ
ಕ್ರಾಂತೀಗೆ ಅತ್ತಂತ್ರ-
ಅಂತಂಬೋರೀ ಕಡೆ ಕಣ್ತೆರೀಲಿ
ಭ್ರಾಂತಿಯ ಹೆಣವನ್ನು ಹೂಳಿಡಲಿ
ಯಂತ್ರಕೆ ಕೊನೆಗೊಮ್ಮೆ ಶರಣೆನ್ನಲಿ

೧೦
ಮಾನವ ದಾನವ
ನಾಗಿಹ ಕಾಲವ
ಕಣ್ಣಾರ ಕಂಡೆವು ಈ ದಿನದಿ
ಮುನ್ನೇನೋ ಎಂತೆಂಬ ಎದೆಗುಽದಿ
ಕೈಚಾಚಿ ನಿಂತಿದೆ ಕ್ರೂರವಿಧಿ

೧೧
ಗೆಜ್ಜೆ ಕಾಲಿನ ಹೆಜ್ಜಿ
ವಜ್ಚೇನ ನೀ ಹುಚ್ಚಿ
ತ್ರಾಂ ತಥ ಥೈ ಥೈ! ಅಂತಿರಲಿ
ತಾಳಕ ಸರಿ ಹೆಜ್ಜಿ ಬೀಳ್ತಿರಲಿ
ಬಾಳಿನ ಸಿರಿ ಸುಗ್ಗಿ ಸುರಿದಿರಲಿ

೧೨
ಗಂಡನ ಕಣ್ಣಿಗೆ
ಹೆಂಡತಿ ಹೊನ್ನಾಗೆ
ಕಹಿಯೆಲ್ಲ ಸಿಹಿಯಾಗಿ ರುಚಿಸೀತು!
ಬೆಂಡು ಬೆತ್ತಾಸವ ಮರೆಸೀತು
ಕೆಂಡವು ತಣ್ಣಗೆ ಅನಿಸೀತು

೧೩
ಬಾಳೋಣ ನಗನಗತಾ
ಗೋಳನು ಚಿಮ್ಮುತಾ
ಚೆಂದ ಚೆಂದದ ಕತೆಯ ಹೇಳುತ್ತ!
ನೊಂದವರ ಪಾಡೀಗೆ ಮರುಗುತ್ತ!
ನಂದನವನವನ್ನು ಕಾಣುತ್ತ!

೧೪
ಮಾಡಿ ಬಾಳಿನ ಸುಗ್ಗಿ
ನೋಡಿ ಜೀವನ ಹಿಗ್ಗಿ
ಮುಂದೆಯೂ ಬಾಳೋಣ ಸುಖದಿಂದ
ಎಂದಾದರೇನಂತೆ ಜಗ ಚಂದ
ಹಿಂದಕೆ ಸರಿ ಬೇಡ ನೀನಿಂದ

೧೫
ಹೆಣ್ಣಿನ ಹೊನ್ನಿನ
ಮಣ್ಣಿನ ನಿಜವನ್ನ
ತಿಳಿದವರುಂಟೇನು ಜಗದಲ್ಲಿ?
ಕಳವಳವಾಯಿತೆ ಮನದಲ್ಲಿ?
ಹೆಣ್ಣಿಂದೆ ಜಗವಲ್ಲೆ ಹುಚಮಲ್ಲಿ!

೧೬
ಏನಿದ್ದರೇನಂತೆ
ಸಾಕು ಜೀವನ ಚಿಂತೆ-
ಕಯ್ಯಾಗ ಕೈಕೊಡು ನನ ಭಂಗಾರ
ಮೈಯ್ಯಾಗ ಮೈ ನೆಡಲದು ಶೃಂಗಾರ
ಆ ಬಾಳೆ ನಿಜವಾಗಿ ಬಹು ಸುಂದರ

೧೭
ಬಡತನ ಸಿರಿತನ
ಕಡೆತನಕುಳದಾವೇನ?
ಅದಕಂತ ತನನನ ಹಾಡೋಣ!
ಮುದವನ್ನೆ ಎಲ್ಲೆಡೆ ಚಿಮ್ಮೋಣ
ಹದವರಿತು ಕುಣಿಕುಣಿದು ದಣಿಯೋಣ
*****
ಬೆಂಗಳೂರು : ೧೯೪೩

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...