ದ್ವಂದ್ವಯುದ್ಧದ ಜಗವಿದು,-ಇಬ್ಬರು ಜಟ್ಟಿಗಳು ಕೂಡಿ
ಒಬ್ಬರೊಬ್ಬರ ಸಾವಿಗಾಗಿ ಸಮರದಲ್ಲಿ ಹೋರಾಡುತಿಹರು.
ಗೆದ್ದವನೇ ಎದ್ದ. ಬಿದ್ದವನೇ ಬಿದ್ದ.
ಗೆದ್ದವನ ಕುಲಕೋಟಿಯೆಲ್ಲ ಉದ್ಧಾರವಾಯ್ತು.
ಬಿದ್ದವನಿಗೆ ಇದ್ದುಬಿದ್ದವರು,-ಗತಿಗೆಟ್ಟಿರು ಇದ್ದುಬಿದ್ದಲ್ಲಿ,
ಇಬ್ಬರ ಸೋಲು-ಗೆಲವು ತೂಗುವವು ಮೂಲೋಕದ ದೈವವನ್ನು.
ಜಟ್ಟಿಗಳು ಮಾನವರಲ್ಲ, -ಪ್ರಮೇಯಗಳೆರಡು, ಎರಡು ತತ್ವಗಳು!
ಹದ್ದನ್ನು ಹದ್ದು ಕಾದಿದಂತೆ ಬೆನ್ನಟ್ಟುವವು ವಾಯುಲೋಕದಲ್ಲಿ.
ಹೋರಾಡುವವು ವಾರಿಧಿಯಲ್ಲಿ,-ತಿಮಿಂಗಿಲವು ತಿಮಿಂಗಿಲದೊಡನೆಯಂತೆ.
ಈ ಕಲ್ಪನೆಗಳ ಕಾದಾಟಕ್ಕೆ ಕಂಪಿಸಿತ್ತು ಜಗವೆಲ್ಲ,
ರಕ್ತದ ಕಾಲುವೆ ಹರಿಯಿತು, ಕೋಟಿ ನಾರಿಯರ ಕುಂಕುಮವಳಿಸಿತು,
ಆದರೆ ಮುಗಿದಿಲ್ಲ ತತ್ವಗಳ ತುಮುಲ ಯುದ್ಧ!
ಕಲ್ಪನೆಗಳಾವವು ಗೊತ್ತೆ?
ಇದ್ದುದೇ ಇರಬೇಕೆಂಬ ಗೊಂದಲ, ಹೊಸದೊಂದು ಬರಬೇಕೆಂಬ ಹಂಬಲ;
ಶ್ರೀಮಂತರದಿರಬೇಕೆಂಬ ಕಸಿವು, ಶ್ರೀಮ೦ತರು ಸಾಯಬೇಕೆಂಬ ಹಸಿವು,
ಸಾಮ್ರಾಜ್ಯದ ಮಬ್ಬು, ಸ್ವಾತಂತ್ರ್ಯದ ಉಬ್ಬು;
ಬಿಳಿದೊಗಲಿನ ಕುಣಿತಕ್ಕೆ ಕರಿದೊಗಲು ಮಣಿದಿರಬೇಕೆಂಬಾಸೆ,
ಕರಿಬಿಳಿದರ ಭೇದವನಳಿಸಿಬಿಡಬೇಕೆಂಬ ಭಾಷೆ;
ಉಳಿದವರ ಸುಖವೆಲ್ಲ ನನ್ನ ಸುಖಕ್ಕೆ ಬರಿ ಸವುದೆಯೆಂಬ ಭಾವ,
ವಿಶ್ವದ ಸುಖವೇ ವ್ಯಕ್ತಿಯ ಸುಖವೆನಿಸಬೇಕೆಂಬ ಹೇವ;
ಬಡವರ ಬಾಳ್ವೆಯನ್ನು ಹಿಂಡಿ ಹಿಪ್ಪಿಯಾಗಿಸುವ ನೀತಿ,
ಹಣವಿದ್ದವರ ಹೆಣ ಕೆಡವಬೇಕೆಂಬ ರೀತಿ,-
ಉಯ್ಯಾಲೆಯಾಡುವದು ಜಗೆತ್ತು, ಶಕ್ತಿಗಳೆರಡು ಜೀಕುವಲ್ಲಿ,
ಸ್ನೇಹತಂತುಗಳು ಹರಿದವು, ಮಣಿಯು ಕಳಚಿ ಬಿತ್ತು,
ಉರುಳಿ ಬೀಳುವದೆ ಮರವು? ಹೊರಳಿ ಹೋಗುವದೆ ಜಗತ್ತು?
*****









