Home / ಕವನ / ಕವಿತೆ / ಸ್ತ್ರಾಂಬೋಲಿ

ಸ್ತ್ರಾಂಬೋಲಿ

ಕಾಲು ಚಾಚಿ ಕುಳಿತಿಹುದಿಟಲಿ ಭೂಮಧ್ಯ ಸಮುದ್ರದ ನಡುವೆ
ಸಿಸಲಿಯೊಡನೆ ಕದನವೆಸಗಿ ಪಾದಧೂಲಿಯನದಣಕೆರಚುವಂತೆ:
ಇಟಲಿಯ ಹೆಬ್ಬೊಟ್ಟಿನುಗುರಿನ ಹೊಗರ ನೋಡು! ಶೋಭಿಸುತಿಹವು ಪುರಗಳಲ್ಲಿ

ನಿಡಿದಾದ ಪರ್ವತಾವಳಿಯನೇರಲು ಹವಣಿಸುವ ಸಾಹಸಿಗಳಂತೆ
ಮತ್ತೆ ನಿದ್ರಿಸುತಿಹವು ಕೆಲವು ಹೊಳೆದು ಬೆಂಗದಿರನ ಹೊಂಬೆಳಕಿನಲ್ಲಿ.
ಸಿಸಿಲಿಯ ದಂಡೆಗುಂಟ ಹರವಿಹುದು ಮೆಸಿನಾನಗರವು ತನ್ನ ಚೆಲುವನ್ನೆಲ್ಲ.

ದಾಟುತೀ ನೀರಿನೊತ್ತನು ಮುನ್ನಡೆಯೆ ಕಂಡಿತಾಗ ಸಮುದ್ರ
ನೀಲಗನ್ನಡಿಯಂತೆ: ತೆರೆಯಿಲ್ಲ, ಸುಳಿಯಿಲ್ಲ!
ಅಖಂಡವಾಗಿ ನಿದ್ರಿಸುತಿತ್ತು ನಭೋಮಂಡಲದ ಪಡಿನೆಳಲಾಗಿ,
ಬಿಂಬಿಸಿತು ನಿರಾಳವಾದ ಶಾಂತಿಯನು: ಬರುತಿರಲಲ್ಲಿ
ದಾರಿಯಲಿ ನೀನವಿತು ಕುಳಿತಿದ್ದೆ ಸ್ತ್ರಾ೦ಬೋಲಿ!

ಮುಚ್ಚಿತ್ತು ಕರ್ಮೋಡ ಕೆಂಡವನುಗುಳ್ವ ನಿನ್ನ ರುದ್ರಮುಖವ.
ಜ್ವಾಲಾಮುಖಿಯೆ! ನಿನ್ನ ಶಿಖಿಯಡಗಿತ್ತು, ನಿಂತ ಹೊಗೆಮೋಡದಲಿ:
ಜಾರಿತ್ತು ನಿನ್ನ ಮೈಮೇಲೆ ಗಂಧಕದ ರಸ,-ಹೆಪ್ಪುಗಟ್ಟಿ ಹಸಿರಾಗುತ್ತ:
ಆರಿತ್ತು ನಿನ್ನೆದೆಯ ಮೇಲೆ ಕಬ್ಬಿಣದ ಕಸ,-ಕಾಡಿಗೆಯ ಕಪ್ಪಿನಂತೆ.
ನೆಲದ ಬಸಿರನು ಬಗೆದು ನೀ ಕಿತ್ತು ತಂದಿರುವ ಮಣ್ಣಿನ ಬಣ್ಣ
ಹರವಿತ್ತು ತಿಳಿನೀಲಿಯಾಗಿ ನಿನ್ನ೦ಗಾಂಗಳ ಮೇಲೆ:
ಪಾರಿಜಾತವ ತರಲು ವಾರಿಧಿಯ ದಾಟಿ ಮುನ್ನಡೆದ ಹಸುಳರನು
ಹೆದರಿಸಲೆನಲು ಮುಸುಕನು ಹೊತ್ತು ಕುಳಿತಿರುವೆ ಮುದಿ ರಾಕ್ಷಸನಂತೆ,-ಸ್ತ್ರಾಂಬೋಲಿ!

ಹಳ್ಳಿಯನು ಕಟ್ಟಿ ಗಿರಣಿಯೊಂದನು ಹೂಡಿಹನು ನಿನ್ನಡಿಯಲ್ಲಿ ಮಾನವನು
ಅನುದಿನವು ನೀನುಗುಳ್ವ ಲಾಳರಸವ ಲೆಕ್ಕಿಸದೆ,
ನಿನ್ನ ಪ್ರಳಯಾಗ್ನಿಯಲಿ ಬೆಂದುಬಿಡಬಹುದೆಂಬುದನು ನೆನೆದು ಸಹ!
ಕಾಯಿಲೆಯಿರಲು, ಕೆಂಗಿಡಿಗಳನುಗುಳಲು ನೀನು, ನಿನ್ನಾ ವಾಂತಿಭೇದಿಯಿಂದ
ಅಣಿಗೊಳಿಸುವನು ತನಗೆಂದು ಹಲವೌಷಧಿಗಳನು.
ಸುಮ್ಮನಿಹೆ ನೀನು ಮೂಗುಮುರಿದು, ವ್ಯಂಗ್ಯವಾದ ನಗೆಯೊಂದ ನಕ್ಕು!
ಹೇಸಿಗೆಯ ತಿನ್ನಲು ಬಂದ ನಾಯಿಯನು
ಬೀಸಿ ಹೊಡೆದರೇನು ಬಿರುದು ಬಂತೆ?

ರೋಮರಾಜ್ಯದ ತಲೆ ತಗ್ಗಿತು, ಸಿಸಿಲಿಯ ಸುಸಿಲು ತಲೆಕೆಳಗಾಯಿತು:
ಬೇರೊಂದು ರಾಜ್ಯವೆದ್ದಿರುವದಿಂದಿಟಲಿಯಲ್ಲಿ.
ಬೇರೆ ನೌಕೆಗಳಾಳುತಿಹವಿಂದು ಸಪ್ತಸಮುದ್ರಗಳನ್ನು!
ನೀ ಮಾತ್ರ ನಿಂತಿರುವೆ-ಧೂಮಧಾಮವಾಗಿ,
ಭೂಮಧ್ಯಸಮುದ್ರದ ದೀಪಸ್ತಂಭವಾಗಿ!
ಹೊಗೆ ಬಿಡುತಿರುವೆ ಎಂದಿನಂತೆ: ರಾಜ್ಯಗಳಳಿದರೇನು,
ಉದ್ಬುದ್ಧವಿರಲೇನು,-ಮತ್ತೆ ನೆಲಸಮವಾದರೇನು,-
ಎಲ್ಲ ಸಮವೆನುತಿರುವೆ! ಎಂದಿನೊಲು ಸುರಿಸುತ್ತ
ಕಡಲ ಮಡಿಲಲಿ ನಿನ್ನ ಕಾರೊಡಲ ಕೆಂಡವನು!

ನಿನ್ನ ತಲೆಮೇಲೆ ನಿಂತಿಹನು ನೋಡು ಪಡುವಣಕೆ ನಡೆದ ಸೂರ್ಯ:
ನೀನು ಜ್ವಾಲಾಮುಖಿ,-ಅವನು ಜ್ವಾಲೆಯ ಜಗತ್ತು!
ಅವನ ಸ್ವಯಂಪ್ರಶಾಶಕ್ಕೆ ತಾಕಿಲ್ಲವಿನ್ನೂ ಹೊಗೆ:
ಅಚ್ಚಳಿಯದಿದೆಯಿಂದಿಗೂ ಆವನ ನಗೆ.
ನೀನು ಕಾಲದಷ್ಟು ಹಳಬನಾದರೆ ಅವನು ಪ್ರಾಣಕ್ಕಿಂತ ಪ್ರಾಚೀನನಹುದು-.
ಕಳೆಯುವದಿದು ಸ್ತ್ರಾಂಬೂಲಿ ಹಳ್ಳಿ,-ಇಲ್ಲದಿರಲು ನಿನ್ನ ಬೆಂಕಿಯ ಮಳೆ.
ಸೂರ್ಯನು ತಣ್ಣಗಾಗಲು,-ಮುಳುಗುವದು ಮೂಜಗವೆಲ್ಲ!
*****

Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...