ಭೂಮಿಯೊಡನೆ ಕಾಲ ಕೂಡ
ತಿರುಗಿ ಮರುಳಿ ಬರುತಿದೆ.
ನಿನ್ನ ಧರ್ಮ ನಿನ್ನ ಮರ್ಮ
ತಿಳಿಯುವುದೇ ಮರೆತಿದೆ.
ಪರಸ್ಪರರ ತಪ್ಪು ಕಂಡು
ಒಪ್ಪ ಹಾರಿ ಹೋಗಿದೆ.
ಬಾ ಜಯಂತಿ, ಹೋ ಜಯಂತಿ
ಹಳೆಯ ಲೆಕ್ಕ ಸಾಗಿದೆ.
ಪಕ್ಷ ಭೇದ ನೀತಿಯಿಂದ
ಜನ ಅತಂತ್ರವಾಗಿದೆ.
ಆದರ್ಶದ ವಾದವೆಲ್ಲ
ಗಾಳಿ ಮಂತ್ರವಾಗಿದೆ.
ನಿನ್ನ ತೂಕ ನಿನ್ನ ತಾಳ್ಮೆ
ನಿನ್ನೆಚ್ಚರ ಯಾರಿಗೆ ?
ಗುತಿಕೆಯಿಂದ ಎಳೆಯುತಿಹರು
ಹೊಸ ಹೊಸ ಹೊಸ ದಾರಿಗೆ.
ಸತ್ಯವನ್ನು ಎಲ್ಲೊ ಬಿಟ್ಟು
ಆಗ್ರಹವನೆ ಹಿಡಿದಿದೆ.
ಎಡವಿದಲ್ಲೆ ಮತ್ತೆಡಹುತ
ಪ್ರಗತಿ ಎತ್ತೊ ನಡೆದಿದೆ.
ಸತ್ಯ-ಕರ್ಮ-ಚಂದ್ರ-ಗಂಧ
ತ೦ದೆ ನೀನು ಜಗದಲಿ.
ಪ್ರೇಮದ ನವಪುತ್ತಳಿಯನೆ
ನೀ ತಾಯೀ ಯುಗದಲಿ.
ಭಾರತೀಯ ಕಂದ ನೀನು
ಪಾರತಂತ್ರ್ಯದುರಿಯಲಿ.
ಉದಯವಾದೆ ಸದ್ದಿಲ್ಲದೆ
ಆ ಸುದಾಮ ಪುರಿಯಲಿ.
ರಾಣಿ ರಾಜ್ಯ ಮನೋ ರಾಜ್ಯ
ಮಟಾಮಾಯವಾಗಿರೆ.
ಸ್ವಾತಂತ್ರ್ಯದ ಘೋಷದಲ್ಲಿ
ದಿಗ್ ಬಂಧನ ಸಾಗಿರೆ.
ಖಂಡ ಖಂಡಗಳಲಿ ಬಲಿಯೆ
ಪುಂಡತನವ ನಡೆಸಿದೆ.
ಖಂಡಿತದಲಿ ಕಂಡ ಸತ್ಯ
ನಿನ್ನ ಹುಚ್ಚ ಬಿಡಿಸಿದೆ.
ಅಬಲರನ್ನೆ ಪ್ರಬಲರೆದುರ-
-ಹಿಂಸೆಯಿಂದ ನಿಲಿಸಿದೆ.
ಮತ್ತೆ ಮತ್ತೆ ಸತ್ಯ ನುಡಿದು
ಮತ್ತರ ಮನ ಒಲಿಸಿದೆ.
ಭ್ರಾಂತರಲ್ಲಿ ಶ್ರಾಂತರಲ್ಲಿ
ಕ್ರಾಂತಿ ತಂದೆ ಮೋಹನಾ.
ಸೇವೆಗೊಂದು ಕಾಂತಿ ತಂದೆ
ಅದಕೆ ಆದೆ ವಾಹನಾ.
ನಡೆಯ ನುಡಿಯ ಮಾಟದಿಂದ
ಚರಿತೆಗೆ ಅಚ್ಚಿರಿಸಿದೆ.
ಶರಣರಿಗೋ ಮರಣವಿಲ್ಲ
ಜನರನು ಎಚ್ಚರಿಸಿದೆ.
ಪ್ರತಿ ಜಯಂತಿ ವೈಜಯಂತಿ
ನವಮಾನವನುದಯಕೆ
ಆಹ್ವಾನವು ದಾನವಿಸಿದೆ
ಮಾನವ ಸದುಹೃದಯಕೆ.
*****








