
೧
ತಾಯ್-ತನದ ಕರುಣೆಯೇ ಸಕಲ ಸೌಭಾಗ್ಯವೇ
ನಿನ್ನ ನುಡಿಗೂ ಇಂದು ಮೌನ ಬಂತೆ!
ಎದೆಯ ಸೆರಗನು ಹೊದಿಸಿ ಕಣ್ಣ ಬೆಳಕನು ಹರಿಸಿ
ಹಾಲ ಕುಡಿಸಿದ ಪುಣ್ಯ ಬರಿದಾಯಿತೆ!
೨
ಹೃದಯ ವೀಣೆಯ ತಂತಿ ಚಟಚಟನೆ ಹರಿದಂತೆ
ಕರುಳ ಬಳ್ಳಿಯೆ ಹರಿದು ಚೂರು ಚೂರು;
ಯಾವ ಪಾಪದ ಶಾಪ ಬಂದು ಬಡಿದಿಹುದಿಂದು
ಅಳಲ ಒರತೆಯ ತುಂಬ ಕಣ್ಣ ನೀರು.
೩
ಈಸು ದಿನ ಹಂಬಲದಿ ತುಂಬಿದುಡಿಯಲಿ ತೂಗಿ
ಈಗ ಬರಿಯುಡಿ ಹಿಡಿದು ಹಾಡಬಹುದೆ?
ಈ ಮೌನದಾಳವೋ ಬಹು ಗುಂಭ ಗಂಭೀರ
ಅದರ ತಳಕೂ ಮುಳುಗಿ ಏಳಬಹುದೆ?
೪
ತೀರ್ಥ ಕ್ಷೇತ್ರಗಳಂತೆ-ಬರಿಯ ಗಜಿಬಿಜೆ ಸಂತೆ
ನಿನ್ನ ಹೃದಯದಲಿಹುದು ದೈವಶಕ್ತಿ;
ಬರುವೆಯಾ ಕನಿಕರಿಸಿ ಹಾಲ ಹೊಳೆಯನು ಹರಿಸಿ
ನಿನ್ನ ನೆನಹಿನ ಫಲವೆ ಬಂಧಮುಕ್ತಿ.
೫
ನಿನ್ನ ಹೆಸರೇ ನನಗೆ ಬೆಂಗಾವಲಾಗಿರಲಿ
ಜನ್ಮ ಜನ್ಮಾಂತರದಿ ಬಂದು ಕಾಯಿ;
ಪ್ರೀತಿ ಆಶೀರ್ವಾದ ಪುಣ್ಯವೊಂದೇ ಸಾಕು
ಜೀವ ರಕ್ಷೆಯ ನೀಡಿ ಹರಸು ತಾಯಿ.
*****
















