Home / ಕವನ / ಕವಿತೆ / ಬೆಳೆದು ಬಂದ ಬಯಕೆ

ಬೆಳೆದು ಬಂದ ಬಯಕೆ

ದಿವಸ ದಿವಸ ಕಳೆದು ಇಂದು ವರುಷ ತುಂಬಿ ನಿಂತಿದೆ
ನೂರು ನೋವನೆಣಿಸಿ ಗುಣಿಸಿ ಮನಕೆ ಮಂಕು ಕವಿದಿದೆ
ಹಗಲು ಇರುಳು ನೆನವೆ ಬುತ್ತಿ
ಹೃದಯದೊರತೆಯಲ್ಲ ಬತ್ತಿ
ದೇಹವೆಲ್ಲ ಕರಗಿ ಸೊರಗಿ ಬಾಳು ಬೇಸರೆನಿಸಿದೆ.
ಜೀವ ಮೌನ ತಾಳಿದೆ.
ಇಂದು ನಗುವೆ ಇಲ್ಲವಾಯ್ತು
ಮೌನ ಭಾರದಿಂದ ಸೋತು
ದೇಹ ಭೂಮಿಗಿಳಿದಿದೆ
ಧೂಳಿಯಲ್ಲಿ ನರಳಿದೆ;
ನನ್ನ ಸುತ್ತು ಮುತ್ತಲೇನು
ಮುಖವನೆತ್ತಿ ನೋಡಲೇನು
ಚಣ ಚಣಕೂ ಕರುಳ ಕೆಣಕಿ ಕಣ್ಣಿರಿಯುವ ಕತ್ತಲೆ
ಅದರ ಕುಣಿತ ಬತ್ತಲೆ!
ದುಃಖ ಅತಿಥಿಯಂತೆ ಬಂದು
ಮನೆಯ ಹೊಸ್ತಿಲಾಚೆ ನಿಂದು
ನನ್ನ ಕೂಗಿ ಕರೆದರೆ
ಬಾಗಿಲನ್ನು ಬಡಿದರೆ
ಕರುಣೆ ಇಲ್ಲದವರ ತೆರದಿ ಅದಕೆ ಬೇಡವೆನ್ನಲೆ?
ನನ್ನತನವ ಮರೆಯಲೆ?
ತಾಳ್ಮೆ ಬಾನ ಬಿತ್ತರ
ಹಿಮಾಲಯಕು ಎತ್ತರ
ಅದರ ಪೂರ್ವ ಪುಣ್ಯವೇನೊ
ಸೌಭಾಗ್ಯದ ಚಿಹ್ನೆಯೇನೊ
ಹೃದಯದಾಳದಲ್ಲಿ ಮೌನ ಗರ್ಭಧರಿಸಿದಂತಿದೆ.
ಬೆಳಕಿಗಾಗಿ ತಪಿಸಿದೆ.
ನನ್ನ ಎದೆಯ ಮೂಡಲಲ್ಲಿ
ಕನಸು ಮನಸು ಕೂಡುವಲ್ಲಿ
ಇಂದು ಇಲ್ಲವಾದರೂ
ಮುಂದೆ ಒಮ್ಮೆಯಾದರೂ
ಹಾಲು ಹಣ್ಣು ಹೂವು ಜೇನು ಹೊತ್ತು ಬರನೆ ಚಂದಿರ
ಕಣ್-ಮನಕೂ ಸುಂದರ!
ಪೂರ್ಣಕಲಾ ಪುಣ್ಯಮಾಯಿ
ಬೆಳುದಿಂಗಳ ಹಾಲ ತಾಯಿ
ಇರುಳ ಜೋಗುಳನ್ನು ಹಾಡಿ
ಕಣ್ಣು ತುಂಬುವಂತೆ ನೋಡಿ
ಈ ಚಂದ್ರಮ ಈ ಸಂಭ್ರಮ-ನಿನಗೆ ಇರಲಿ ಎನ್ನಳೆ?
ಉಡಿಯ ತೆರೆದ ಕರೆಯಳೆ!
*****
Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...