Home / ಕವನ / ಅನುವಾದ / ಬ್ಲೆನ್‌ಹೀಮ್ ಕದನ

ಬ್ಲೆನ್‌ಹೀಮ್ ಕದನ

ಬೇಸಗೆಯಲಿ ಸಂಜೆಯಾಯಿತು; ಕೆಲಸವ
ಮುತ್ತಜ್ಜ ತೀರಿಸಿಕೊಂಡ.
ಹಟ್ಟಿಯ ಬಾಗಿಲ ಬಳಿಯಲಿ ನೋಡುತ
ಹೊಂಬಿಸಿಲಲಿ ಕುಳಿತುಕೊಂಡ.
ಅಲ್ಲಿಯೆ ಹಸುರಮೇಲಾಡುತಲಿದ್ದಳು
ಅಜ್ಜನ ಮುದ್ದಿನ ಪುಟ್ಟ ಮೊಮ್ಮಗಳು.
ಕಂಡಳು ಕೂಗಿಕೊಂಡಣ್ಣನು ಬರುವುದ
ಆಡುತ, ಹೊಳೆಯಂಚಿನಿಂದ
ದಪ್ಪಗೆ, ದುಂಡಗೆ, ಏನನೊ ಒಂದನು
ಉರುಳಿಸಿಕೊಂಡವ ತಂದ.
ದಪ್ಪಗೆ, ನುಣ್ಣಗೆ, ದುಂಡಗೆ ಇರುವುದು,
ಅಜ್ಜ ಇದೇನೆಂದು ಕೇಳಲು ಬಂದ.
ಅಜ್ಜ ತೆಗೆದುಕೊಂಡ ಕೈಗದ, ಹುಡುಗನು
ನಿಂತ ಹತ್ತಿರ ಕಿವಿಗೊಟ್ಟು.
ನೋಡಿ, ಆ ಮುದುಕನು ತಲೆಯನಲ್ಲಾಡಿಸಿ,
ಮರುಗುತ ನಿಟ್ಟುಸಿರಿಟ್ಟು,
ಪಾಪ, ಇದಾರದೋ ತಲೆಯೋಡು-ಯಾವನೊ
ಬಿದ್ದವನಾ ದೊಡ್ಡ ಜಯದಲಿ ಎಂದ.
ಎಷ್ಟೋ ನೋಡಿರುವೆನು ನಮ್ಮ ತೋಟದಲೆಲ್ಲ,
ಬಿಸುಡುವೆನೊಕ್ಕಡೆಗಿಕ್ಕಿ.
ಉಳುತ ಹೋದಾಗೆಲ್ಲ ಮೇಲಕೆ ಬರುವುವು
ನೇಗಿಲ ಕುಳದಲಿ ಸಿಕ್ಕಿ.
ಸಾವಿರಗಟ್ಟಳೆ ಜನಗಳು ಕೊಲೆಯಾಗಿ
ಬಿದ್ದವರಾ ದೊಡ್ಡ ಜಯದಲಿ ಎಂದ.
ಆ ಕಥೆ ಏನದು? ನಮಗೆಲ್ಲ ಹೇಳಜ್ಜ ,
ಎಂದನು ಪುಟ್ಟ ಮೊಮ್ಮಗನು.
ಅಚ್ಚರಿ ಕಾಯುತ, ಅರಳಿದ ಕಣ್ಣೆತ್ತಿ
ನಿಂದಳು ಪುಟ್ಟ ಮೊಮ್ಮಗಳು.
ಯುದ್ಧದ ಕಥೆಯೇನು ನಮಗೆಲ್ಲ ಹೇಳಜ್ಜ
ಏತಕೆ ಕಾದಾಡಿದರೊ ಅದ ಹೇಳು.
ಮುತ್ತಜ್ಜ ಹೇಳಿದ – ಇಂಗ್ಲಿಷರಿರುವರೆ,
ಮುರಿದರು ಫ್ರೆಂಚರ ಪಡೆಯ.
ಏತಕೆ ಕಾದಾಡಿದರೊ ಅದ ನಾ ಬೇರೆ
ಕಾಣೆನು ಚೆನ್ನಾಗಿ ಅಡಿಯ.
ಆದರೆ ಯಾರನೆ ಕೇಳವರೆಲ್ಲರು
ಲೋಕಪ್ರಸಿದ್ದಿಯ ಜಯವೆಂಬರೆಂದ.
ನಮ್ಮಯ್ಯ ಗುಡಿಸಲ ಮಾಡಿಕೊಂಡಿದ್ದನು
ಆ ಹೊಳೆಯಂಚಿನನಾಗ,
ಸೂರೆ ಹೊಡೆದು ಬೀಡ ನೆಲಸಮ ಸುಟ್ಟರು;
ತಲೆಯ ತಪ್ಪಿಸಿಕೊಂಡು ಬೇಗ
ಹೆಂಡತಿ ಮಕ್ಕಳ ಕಟ್ಟಿಕೊಂಡೋಡಿದ
ನಿಂತಲ್ಲಿ ನಿಲ್ಲದೆ ನೆಲೆಗಾಣದಲೆದ.
ಬೆಂಕಿಯ, ಕತ್ತಿಯ ಬಾಯಿಗೆ ಬಲಿಯಾಗಿ
ದೇಶವೆ ಹಾಳಾಯಿತೆಲ್ಲ.
ತುಂಬುಬಸಿರಿಯರು, ಹಾಲುಮಕ್ಕಳು ಸತ್ತ
ಲೆಕ್ಕವ ದೇವರೆ ಬಲ್ಲ
ಅದರಂತಹುದೆಷ್ಟೊ ಆಗಲೇಬೇಕಲ್ಲ
ಲೋಕಪ್ರಸಿದ್ಧಿಯ ಜಯದಲಿ ಎಂದ.
ನೋಡಲುಬಾರದು ಎಂಬರು ಘೋರವ
ಗೆದ್ದ ಮೇಲಾರಣದಲ್ಲಿ,
ಸಾವಿರಗಟ್ಟಳೆ ಹೆಣಗಳು ಕೊಳೆಯುತ
ಬಿಸಿಲಲಿ ಬಿದ್ದಿದ್ದುವಲ್ಲಿ.
ಆದರಂತಹುದೆಷ್ಟೊ ಆಗಲೇಬೇಕಲ್ಲ
ಲೋಕಪ್ರಸಿದ್ದಿಯ ಜಯದಲಿ ಎಂದ.
ದೇಶವೆ ಹೊಗಳಿತು ಗೆದ್ದ ನಾಯಕರನು,
ಸುರಿದುವು ಹೂವು ಮಳೆಗಳು-
ಛೀ ತೆಗೆ, ಏನದು, ಬಲುಕೆಟ್ಟ ಕೆಲಸವು!
ಎಂದಳು ಪುಟ್ಟ ಮೊಮ್ಮಗಳು.
ಅಲ್ಲವೆ, ಅಲ್ಲವೆ, ಪುಟ್ಟ ಹುಡುಗಿ. ಕೇಳು.
ಲೋಕಪ್ರಸಿದ್ಧಿಯ ಜಯವದು ಎಂದ.
ಎಲ್ಲರು ಹೊಗಳಿದರಾ ದೊಡ್ಡ ಯುದ್ಧವ
ಗೆದ್ದವರನು ಶೂರರನ್ನು-
ಒಳ್ಳೆಯದದರಿಂದ ಕಡೆಗಾದುದೇನಜ್ಜ?
ಎಂದನು ಪುಟ್ಟ ಮೊಮ್ಮಗನು.
ಅದ ನಾನು ಬಲ್ಲೆನೆ? ಯಾರನೆ ಕೇಳದು
ಲೋಕಪ್ರಸಿದ್ಧಿಯ ಜಯವೆಂಬರೆಂದ.
*****
SOUTHEY (1774 -1843) : After Blenheim
Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...