Home / ಕಥೆ / ಜನಪದ / ಉದ್ದನ್ನವರ ಮುಂದೆ ಕೀರ್ತನ

ಉದ್ದನ್ನವರ ಮುಂದೆ ಕೀರ್ತನ

‘ಊರಿಗೆ ಬಂದ ಪ್ರಖ್ಯಾತ ಕೀರ್ತನಕಾರನೊಬ್ಬನ ಕೀರ್ತನ ಮಾಡಿಸಬೇಕೆಂದು, ಪ್ರಮುಖರು ಎತ್ತುಗಡೆ ನಡೆಯಿಸಿದರು. ಕೀರ್ತನಕಾರನು ಮೊದಲೇ ಸೂಚಿಸಿದಂತೆ ಶ್ರೋತೃವೃಂದಲ್ಲಿ ಕುಳಿತ ಗಿಡ್ಡಗಿಡ್ಡ ಜನರನ್ನೆಲ್ಲ ಎಬ್ಬಿಸಿ ಕಳಿಸಲಾಗಿತ್ತು. ಕುಳಿತವರೆಲ್ಲರೂ ಉದ್ದನ್ನವರೇ ಆಗಿದ್ದಾರೆಂಬ ಭರವಸೆಯಾದ ಬಳಿಕ ಕೀರ್ತನಕಾರನು ತನ್ನ ಅಮೋಘವಾಣಿಯಿಂದ ಕೀರ್ತನ ಹೇಳಲು ಪ್ರಾರಂಭಿಸಿದನು.

ಸ್ತೋತ್ರವಾಯಿತು. ಉಪೋದ್ಘಾತ ಮುಗಿಯಿತು. ಮುಖ್ಯಕಥೆ ಮುಗುಳಿ ಮುಂದುವರೆಯಿತು. ಅಷ್ಟರಲ್ಲಿ ಸಂದರ್ಭಾನುಸಾರವಾಗಿ ಒಂದು ಅಡ್ಡಕತೆಯನ್ನು ಹೇಳುವದಕ್ಕೆ ಮೊದಲು ಮಾಡಿದನು ಕೀರ್ತನಕಾರನು. ಅದು ಏನೆಂದರೆ –

“ಒಮ್ಮೆ ತಿಪ್ಪೆಯಲ್ಲಿ ಬಿದ್ದ ಪತ್ರಾವಳಿಗೂ ಮಣ್ಣು ಹೆಂಟೆಗೂ ಮಾತುಕತೆ ನಡೆಯಿತು. ಪತ್ರಾವಳಿ ಅಂದಿತು – “ಹೆಂಟೆಣ್ಣ, ಮಳೆಗಾಲ ಆರಂಭವಾಗುವಂತೆ ತೋರುತ್ತದೆ. ಗಾಳಿ-ಮಳೆಗಳು ನಾಮುಂದೆ ನಾಮುಂದೆ ಎನ್ನುತ್ತ ಮೈ ಮೇಲೆ ದಾಳಿ ಮಾಡುವವು. ಅಂಥ ಸಂದರ್ಭದಲ್ಲಿ ನಾವು ಬದುಕುವ ಬಗೆಯೇನು? ಗಾಳಿ ಬಿರುಸಾಗಿ ಬೀಸಿದರೆ ನಾನು ಹಾರಿಹೋಗುತ್ತೇನೆ ಎಲ್ಲಿಯೋ. ಮರಮಳೆಹೊಡೆಯ ಹತ್ತಿದರೆ ನೀನು ಕರಗಿಹೋಗುತ್ತೀ. ಏನು ಉಪಾಯ ಇದಕ್ಕೆ?”

ಅಷ್ಟರಲ್ಲಿ ಶ್ರೋತೃವೃಂದದಿಂದ ಒಂದು ಮಾತು ಕೇಳಿಬಂದಿತು – ಗಾಳಿ ಮಳೆ ಎರಡೂ ಏಕಕಾಲಕ್ಕೆ ಕೂಡಿಕೊಂಡು ಬಂದರೆ ಹೇಗೆ ಮಾಡುವುದು?

ಆ ಅಡ್ಡ ಪ್ರಶ್ನೆಯನ್ನು ಕೇಳಿ ಕೀರ್ತನಕಾರನಿಗೆ ದಿಗಿಲಾಯಿತು. ಕಕ್ಕಾವಿಕ್ಕಿಯೇ ಆಗಿ ನಿಂತನು. ಊರ ಪ್ರಮುಖರನ್ನು ಹತ್ತಿರ ಕರೆದು ಕಿವಿಯಲ್ಲಿ ಹೇಳಿದನು – “ಶ್ರೋತೃವರ್ಗದಲ್ಲಿ ಇನ್ನೊಬ್ಬ ಗಿಡ್ಡನು ಉಳಿದುಕೊಂಡಿದ್ದಾನೆ. ಅವನನ್ನು ಎಬ್ಬಿಸಿ ಕಳಿಸಿರಿ. ಇಲ್ಲದಿದ್ದರೆ ಕೀರ್ತನೆ ಮುಂದೆ ಸಾಗುವದಿಲ್ಲ.”

ಜನರಲ್ಲಿ ಕಣ್ಣುತಪ್ಪಿಸಿ ಕುಳಿತ ಆ ಗಿಡ್ಡನನ್ನು ಎಬ್ಬಿಸಿ ಕಳಿಸಿದ ಬಳಿಕ, ಕೀರ್ತನವು ತಡೆಯಿಲ್ಲದೆ ಸಾಗತೊಡಗಿತು. ಉದ್ದನ್ನವರ ಮುಂದೆಯೇ ಅವನ
ಕೀರ್ತನ. ಯಾಕಂದರೆ – ಉದ್ದನ್ನವರಿಗೆ ಬುದ್ಧಿ ಕಡಿಮೆಯಂತೆ.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...