Home / ಕಥೆ / ಜನಪದ / ಕೊರವಂಜಿಯ ಕಲೆ

ಕೊರವಂಜಿಯ ಕಲೆ

ಅಣ್ಣನ ಮಗಳನ್ನು ಅಕ್ಕರೆಯಿಂದ ಮಗನಿಗೆ ತೆಗೆದುಕೊಂಡು ಮದುವೆಮಾಡಿದ್ದಳು, ನೀಲಗಂಗಮ್ಮ. ಆದರೆ ಮಗನು ಮನೆಗೇ ಹತ್ತಲೊಲ್ಲನಾದನು. ಹೊರಗಿನಿಂದ ಹೊರಗೇ ಇರತೊಡಗಿದನು.

ಬಾಳೆಯ ಬನದಲ್ಲಿ ಮಗನು ಚಂಡಾಡುತ್ತಿರುವನೆಂಬ ಸುದ್ದಿ ಕೇಳಿ ತಾಯಿ ಅಲ್ಲಿಗೆ ಹೋಗಿ ಮಗನನ್ನು ಕೇಳಿಕೊಂಡಳು . “ನನ್ನ ಸೊಸೆ ಬಾಳೆಗಿಂತ ಚಲುವೆಯಾಗಿದ್ದಾಳೆ. ಒಂದು ಸಾರೆ ಮನೆಗೆ ಬಂದು ಮುಖ ತೋರಿಸು.”

“ಬಾಳೆಗಿಂತ ಚಲುವೆಯಾದರೆ ಭಾವಿಯಲ್ಲಿ ನುಗಿಸು. ಇಲ್ಲವೆ ಉಟ್ಟಬಟ್ಟಿ ಕಳಕೊಂಡು ತವರುಮನೆಗೆ ಕಳಿಸು.  ನಾನು ನನಗೆ ತಿಳಿದಂತೆ ವರ್ತಿಸುವೆನು” ಎಂಬುದು ಮಗನ ಮರುನುಡಿ.

ಇನ್ನೊಂದು ಸಾರೆ, ಮಗನು ನಿಂಬಿಯ ಬನದಲ್ಲಿ ಚೆಂಡಾಡುತ್ತಿದ್ದಾನೆಂದು ಕೇಳಿ ಅಲ್ಲಿಗೆ ಹೋಗಿ . “ನಿಂಬೆಗಿಂತ ನನ್ನ ಸೊಸೆ ಚೆಲುವೆಯಾಗಿದ್ದಾಳೆ ಒಂದೇ ಸಲ ಮನೆಗೆ ಬಂದು ಮೊಗದೋರು” ಎಂದು ಅಂಗಲಾಚಿದಳು.

ಕಟ್ಟಿಗೆ ಮುರಿದು ಕೈಗೆ ಕೊಟ್ಟಂತೆ ಮಗನು ಮರುನುಡಿದನು . “ನಿಂಬೆಗಿಂತ ಚೆಲುವೆಯಾಗಿದ್ದರೆ ಆಕೆಯನ್ನು ಬಾವಿಗೆ ನೂಕು. ಇಲ್ಲವೆ ಕಟ್ಟಿದ ಕರಿಮಣಿಯನ್ನು ಹರಕೊಂಡು ತವರುಮನೆಗೆ ಹಚ್ಚಗೊಡು.  ನಾನು ನನಗೆ ತಿಳಿದಂತೆ ಮಾಡುವೆನು.”

ತಾಯಿ ನಿರಾಶಳಾಗಿ ಮನೆಗೆ ಬಂದು ಸೊಸೆಗೆ ಹೇಳಿದಳು . “ಅಣ್ಣನ ಮಗಳೆಂದು ಹೆಮ್ಮೆಯಿಂದ ನಿನ್ನನ್ನು ತಂದುಕೊಂಡರೆ ಮಗನು ಮಾತೇ ಕೇಳದಾಗಿದ್ದಾನೆ. ಸೊಸೆಮುದ್ದೇ, ಹೋಗಿ ಬಿಡವ್ವ ನಿನ್ನ ತವರುಮನೆಗೆ.”

“ಯಾರು ಅಣ್ಣ, ಯಾರು ತಮ್ಮ? ತಾಯಿ ಯಾರು ತಂದೆ ಯಾರು?  ಅಣ್ಣನ ಮದುವೆ ಹೆಂಡಿರಾರು ಅತ್ತೆ? ತವರು ಮನೆಗೆ ಹೋಗಲಾರೆ ಒಂದು, ಹೊನ್ನು ಖರ್ಚುಮಾಡಿ ಮದುವೆ ಮಾಡಿದಿ; ಈಗ ಎರಡು ಹೊನ್ನು ಖರ್ಚುಮಾಡಿ ನನಗೆ ಕೊರವಂಜಿ ಬುಟ್ಟಿ ಕೊಂಡುಕೊಡು. ಅತ್ತೇ, ಗಂಡನನ್ನು ನೋಡಿ ಬರುವೆ. ಆತನ ರಂಡೆಯನ್ನು ನೋಡಿ ಬರುವೆ” ಎಂದಳು ಸೂಸೆ.

ಹೊರಮೈಗೆ ಮುತ್ತು ಹಚ್ಚಿ, ಒಳಮೈಗ ಮಾಣಿಕಹಚ್ಚಿ ಕೋದ ಬುಟ್ಟಿಯನ್ನು ಅತ್ತೆ ಆ ಕೂಡಲೇ ತಂದಿಟ್ಟಳು. ಸೊಸೆಯು ಅದನ್ನು ತಲೆಯಮೇಲೆ ಹೊತ್ತು ಕಾಲಲ್ಲಿ ಚೆಪ್ಪಲಿ ಮೆಟ್ಟಿಕೊಂಡು ತನ್ನ ರಾಯರಿರುವ ರಾಜಪಟ್ಟಣದ ದಾರಿ ಕೇಳುತ್ತ ನಡೆದಳು –

“ದನ ಕಾಯುವ ಅಣ್ಣಗಳಿರಾ, ದನಕಾಯುವ ತಮ್ಮಗಳಿರಾ, ನಮ್ಮ ರಾಯರಿರುವ ರಾಜಪಟ್ಟಣದ ದಾರಿಯಾವುದು?”

ದನಗಾಹಿಗಳು ಹೇಳಿಕೊಟ್ಟರು – “ಬಾಳೆ ಬನದ ಬಲಕ್ಕೆ ನಿಂಬೆ ಬನದ ಎಡಕ್ಕೆ ನಾಗಸಂಪಿಗೆಯ ನಡುವೆ ಹಸಿರು ಸೀರೆಯುಟ್ಟು, ಹಸಿರು ಕುಪ್ಪಸ ತೊಟ್ಟು, ಹಸಿರು ಸೆರಗ ಮರೆಮಾಡಿಕೊಂಡು ಎದುರು ಬರುತ್ತಿರುವ ತನ್ನಂಥ ಹರದಿಯರನ್ನು ಬಲಗೊಂಡಳು.  ಅದರಂತೆ ಕೆಂಪುಸೀರೆಯುಟ್ಟು, ಕೆಂಪು ಕುಪ್ಪಸ ತೊಟ್ಟು, ಕೆಂಪು ಸೆರಗು ಮರೆಮಾಡಿಕೊಂಡು ಎದುರು ಬರುತ್ತಿರುವ ಹರದಿಯರನ್ನೂ ಬಲಗೊಂಡಳು. ಬೀದಿಯಲ್ಲಿ ಸಾಗಿದ ಆನೆಗಳ ಮುಂದೆ, ಆನೆಮರಿಗಳ ಮುಂದೆ, ಆನೆಯನ್ನೇರುವ ಚದುರಮನ್ನೆಯರ ಮಗಳು ರಾಜಬೀದಿಯಲ್ಲಿ ಹೊರಟಳು.  ಒಂಟೆಗಳ ಮುಂದೆ, ಒಂಟೆಗಳನ್ನೇರುವ ಭಂಟಮನ್ನೆಯರ ಮಗಳು ರಾಜಬೀದಿಯಲ್ಲಿ ಸಾಗಿದಳು.

“ಕಾಲಲ್ಲಿ ಕಂಚಿನಪಿಲ್ಲೆ, ಕಿವಿಯಲ್ಲಿ ಹಿತ್ತಾಳೆಯ ಓಲೆ, ಸರಪಳಿ ಗಂಟಿಸರದಾಳಿ ಧರಿಸಿದ ನೀನು ಯಾವನಾಡಿನ ಕೊರವೆ” ಎಂದು ಕೇಳಿದನು ಒಬ್ಬ ತರುಣ.

“ನಾನು ಈ ನಾಡ ಕೊರವಿಯೂ ಅಲ್ಲ ; ಆ ನಾಡ ಕೊರವಿಯೂ ಅಲ್ಲ.  ದೇವಲೋಕದ ಕೊರವೆ. ಜಾಣ, ನಾನು ದೇವರು ಹೇಳುತ್ತೇನೆ ಕೇಳು-ಸೂಳೆಯರು ನಿನ್ನನ್ನು ಮೋಡಿಮಾಡಿ ಹೊಡೆಯುತ್ತಾರೆ” ಎ೦ದಳು ಕೊರವಿ.

“ಮಡದಿಯನ್ನು ಬಿಟ್ಟು ಹನ್ನೆರಡುವರುಷ ಆಯ್ತು ಕೊರವೀ. ಮಡದಿಯನ್ನು ಕೂಡಿಸು. ಕೈಮುಗಿಯುತ್ತೇನೆ ; ನಿನ್ನ ಕಾಲು ಬೀಳುತ್ತೇನೆ. ಅಷ್ಟು ಮಾಡಿದರೆ ನಿನ್ನನ್ನು ಕರೆತಂದು ಸೀರೆ ಕುಪ್ಪಸ ಉಡುಗೊರೆ ಕೊಡುತ್ತೇನೆ” ಎಂದನು ಆ ಜಾಣ.

“ನನ್ನ ಕಾಲ ಬೀಳುವುದಕ್ಕೆ, ನನ್ನ ಕೈಮುಗಿಯುವುದಕ್ಕೆ ಯಾರಿಗೆ ಯಾವ ತಪ್ಪು ಮಾಡಿರುವಿರಿ ಮಾರಾಯರೇ?  ಹೋಗೋಣ ನಡೆಯಿರಿ” ಎಂದು
ಕೊರವಿ ನುಡಿದು, ಆತನ ದಿಗಿಲನ್ನೆಲ್ಲ ಬಯಲು ಮಾಡಿದಳು.

ಗಂಡಹೆಂಡಿರು ಕೂಡಿಕೊಂಡು ಸಡಗರದಿಂದ ತಮ್ಮೂರ ಹಾದಿ ಹಿಡಿದರು. ಹಿ೦ದೆ ಆ ರಂಡಿ – ಸೂಳೆ ಬೆನ್ನುಹತ್ತಿದ್ದನ್ನು ಕಂಡು, ಆಕೆಯನ್ನು ಹಿಂದಕ್ಕೆ ಹೊಡೆದು ಹಾಕಿದರು.

“ಆರು ವರುಷ ತಿರುಗಿ ಅರಸನನ್ನು ತಂದಿದ್ದೇನೆ ಅತ್ತೇ, ಹೊರಗಡೆ ಬಾ.  ನಿನ್ನ ಮಗನನ್ನು ಒಳಗಡೆ ಕರೆದುಕೋ” ಎಂದು ಸೊಸೆಯು ಕೂಗಿದಾಗ ಅತ್ತೆಗಾದ ಆನಂದಕ್ಕೆ ಅಳತೆಯಿದೆಯೆ?
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್