Home / ಕವನ / ಕವಿತೆ / ಇಲ್ಲ

ಇಲ್ಲ

ಅಂಗಿಯೊಳ ಅಂಗಿಯಲ್ಲಡಗಿರುವ ಇವನು
ಒಂದೊಂದೇ ಪದರ ಕಳಚಿ
ತನ್ನ ಬೆಳ್ಳುಳ್ಳಿ ಮುಖವನ್ನು ತೋರಿಸಲಿಲ್ಲ
ಅಥವಾ ಬಿಚ್ಚೀ ಬಿಚ್ಚೀ ಉಳ್ಳಾಗಡ್ಡೆಯಂತೆ
ಬಟ್ಟ ಬಯಲಾಗಲಿಲ್ಲ
ಬರೀ ಕಲ್ಲು ಕೆಸರುಗಳೇ ತುಂಬಿದ
ಸರೋವರದ ತಳದಲ್ಲಿ ರತ್ನ ಮುತ್ತುಗಳು
ಹೊಳೆಯಲೆ ಇಲ್ಲ
ಕತ್ತರಿ ಕೋಲುಗಳಿಗೆ ಸಿಕ್ಕಿ ಮೋಟಾದ
ಇವನ ಜೀವವೃಕ್ಷಕ್ಕೆ
ಚೈತನ್ಯದ ಕೊಂಬೆರೆಂಬೆಗಳೊಡೆಯಲೆ ಇಲ್ಲ
ಚೆಲುವಿನೆಲೆ ಹೂ ಹಣ್ಣುರಸ ಚಿಮ್ಮಲೇ ಇಲ್ಲ
ಆ ಹೂಗಳಿಗೆರಗುವ ದುಂಬಿಗಳಿಲ್ಲ
ಆ ಹಣ್ಣ ಕುಕ್ಕಿ ಸವಿಯೀಂಟುವ ಹಕ್ಕಿಗಳಿಲ್ಲ
ಆ ಕೊಂಬೆಗಳಲ್ಲಿ ಗೂಡು ಕಟ್ಟಿ ಕಲಕಲನಾದ ಹೊಮ್ಮಲೆ ಇಲ
ಕತ್ತಲ ಮೆತ್ತಿದೀ ಚಿತ್ರದಾಗಸದಲ್ಲಿ
ಚಿತ್ತಾರ ತಾರಗೆಗಳು ಮಿನುಗಲೆ ಇಲ್ಲ
ತಂಗದಿರ ಚಂದಿರನು ಆಡಲೆ ಇಲ್ಲ
ಬಲವಂತ ಬಾಯಿ ಹೊಲಿದ ಮೌನದಿಂದ
ಹಿಗ್ಗಿನ ಹಾಡೊಂದೂ ಸೆಲೆಯೊಡೆಯಲಿಲ್ಲ
ಮುಖ ಮುಚ್ಚಿದ ಮಬ್ಬು ಮೋಡದಂಚಿಗೆ
ತಿಳಿನಗೆಯ ತೆರೆಮಿಂಚು ಸುಳಿಯಲೆ ಇಲ್ಲ
ಬಗೆ ಮೊಗ್ಗು ಗಾಳಿಗೆದೆಯೊಡ್ಡಲರಳಲೆ ಇಲ್ಲ
ನುಸಿವಿಡಿದ ಮತಿಯಲ್ಲಿ ಚಿಕ್ಕೆ ಮೊಗ್ಗೆಯ ಸಾಲು
ಥಳಥಳಿಸಿ ಕಸವನ್ನು ಕಳೆಯಲೆ ಇಲ್ಲ
ಕುಳಿತು ಕೈಕಾಲು ಸೇದಿಹೋದ ಇವನ ನಡೆ
ನೂರಾರು ನರ್ತನ ಲೀಲೆಗಳ ಮೆರೆಯಲಿಲ್ಲ
ಮನಸಿನೊಳ ಮಂದಾರ ತಳ ಬಿಟ್ಟು ಮೇಲೆ ಬಂದು
ನೀರ ಮೇಲಲೆಗಳನು ಚುಂಬಿಸಲೆ ಇಲ್ಲ
ಬೆಳೆಯುತ್ತಲೇ ಬರದಾದ ಕೊರಡು ಕೈಗಳು
ಯಾವ ಕೋಮಲತೆಯನೂ ತಬ್ಬಲಿಲ್ಲ ತಬ್ಬಿ ಉಬ್ಬಲಿಲ್ಲ
ಹಿಮದಂಥ ಬಿಗಿದ ತುಟಿಯು
ಯಾವ ಮಧುವನು ಹೀರಿ ಸವಿಯಲೆ ಇಲ್ಲ
ಬರೀ ಕರಿಮೋಡವಾದಿವನ ಒಡಲಿಂದ
ಹೆಪ್ಪಮುರಿವ ಹೆಬ್ಬಯಕೆ ಧಾರೆಯಾಗಿಳಿಯಲೆ ಇಲ್ಲ
ಇಳಿದರೂ ಯಾವ ಬೀಜವೂ ಬಾಯ್ದೆರೆದು ಮೃತ್ಯುವನಣಕಿಸಲಿಲ್ಲ
ಮರುಭೂಮಿಯ ಒಣಮರಳಿನಲ್ಲಿ
ಯಾವ ಹಸಿಮಣ್ಣು ಉಸಿರಾಡಿ ಚಿಗುರಲೆ ಇಲ್ಲ
ಅಲೆದಾಡಿದರೂ ಯಾವ ಕಣ್ಣಬಟ್ಟಲೂ ತುಂಬಿ ಹನಿಸಲೆ ಇಲ್ಲ
ಯಾವ ಗಂಟಲು ತುಂಬಿ ತಿನಿಸಲೆ ಇಲ್ಲ
ಯಾವ ಹಕ್ಕಿಯು ಹಾಡಿ ಹರಸಲೆ ಇಲ್ಲ
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...